Advertisement

ಅಕ್ರಮ ಹಣ ಸಾಗಾಟ ಪ್ರಕರಣ: ಆ.2ಕ್ಕೆ ಡಿ.ಕೆ.ಶಿವಕುಮಾರ್‌ ಜಾಮೀನು ಅರ್ಜಿ ತೀರ್ಪು

09:52 PM Jul 30, 2022 | Team Udayavani |

ನವದೆಹಲಿ: ಅಕ್ರಮ ಹಣ ಸಾಗಾಟ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿ ಕುರಿತ ತೀರ್ಪು ಆ.2ರಂದು ಪ್ರಕಟವಾಗಲಿದೆ. ದೆಹಲಿ ಕೋರ್ಟ್‌ ಈ ಬಗ್ಗೆ ತೀರ್ಪು ನೀಡಲಿದೆ.

Advertisement

ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣ ಸಂಬಂಧ ವಿಚಾರಣೆ ನಡೆದಿದ್ದು, ಜಾಮೀನು ನೀಡಬೇಕೆಂದು ಡಿ.ಕೆ.ಶಿವಕುಮಾರ್‌, ಉದ್ಯಮಿ ಸಚಿನ್‌ ನಾರಾಯಣ್‌, ಶರ್ಮಾ ಟ್ರಾವೆಲ್ಸ್‌ನ ಮಾಲೀಕ ಸುನೀಲ್‌ಕುಮಾರ್‌ ಶರ್ಮಾ, ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಮತ್ತು ರಾಜೇಂದ್ರ ಎನ್‌ ವಿಶೇಷ ಕೋರ್ಟ್‌ ಮೊರೆ ಹೋಗಿದ್ದಾರೆ.

ಡಿಕೆಶಿ ಪರ ಹಾಜರಾಗಿದ್ದ ವಕೀಲ ದಯಾನ್‌ ಕೃಷ್ಣನ್‌ ಅವರು, ತಮ್ಮ ಕಕ್ಷಿದಾರರಿಗೆ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಜಾಮೀನು ನೀಡಬೇಕು. ಜತೆಗೆ, ಸದ್ಯ ಇವರು ಕೇವಲ ಶಾಸಕರಾಗಿದ್ದಾರೆ.

ಹೀಗಾಗಿ, ಯಾವುದೇ ಸಾಕ್ಷ್ಯವನ್ನು ತಿರುಚಲು ಸಾಧ್ಯವಿಲ್ಲ ಎಂದು ಮನವಿ ಮಾಡಿದರು. ಅಲ್ಲದೆ, ಈಗಾಗಲೇ ಜಾರಿ ನಿರ್ದೇಶನಾಲಯ ಪ್ರಕರಣ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿರುವುದರಿಂದ ಜಾಮೀನು ನೀಡಲು ಯಾವುದೇ ಅಡ್ಡಿ ಇಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ಆದರೆ, ಜಾರಿ ನಿರ್ದೇಶನಾಲಯದ ಪರ ಹಾಜರಿದ್ದ ವಕೀಲರು, ಡಿಕೆಶಿ ಮತ್ತು ಇತರರಿಗೆ ಜಾಮೀನು ನೀಡದಂತೆ ಮನವಿ ಮಾಡಿದರು. ಇವರ ವಿರುದ್ಧದ ಆರೋಪವು ಅತ್ಯಂತ ಗಂಭೀರವಾಗಿದೆ. ಸಮಾಜದಲ್ಲಿ ಇವರು ಪ್ರಭಾವ ಬೀರುವ ಶಕ್ತಿಯುಳ್ಳವರಾಗಿದ್ದಾರೆ ಎಂದರು.

Advertisement

ವಾದ-ಪ್ರತಿವಾದ ಆಲಿಸಿದ ಕೋರ್ಟ್‌, ಆ.2ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತು. ಅಂದು ಎಲ್ಲ ಆರೋಪಿಗಳು ಕೋರ್ಟ್‌ನಲ್ಲಿ ಹಾಜರಿರಬೇಕು ಎಂದೂ ಆದೇಶ ನೀಡಿತು.

ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಡಿಕೆಶಿ ಅರ್ಜಿ
ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿದ ಆರೋಪದಲ್ಲಿ ತಮ್ಮ ವಿರುದ್ದ ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆದಾಯ ಮೀರಿ ಆಸ್ತಿ ಸಂಪಾದಿಸಿದ ಆರೋಪದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಆಪ್ತರ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ಸಂಬಂಧ 2020ರಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next