Advertisement

Illegal Immigration: ರಬ್ಬರ್‌ ಎಸ್ಟೇಟ್‌ಗಳು ಶಂಕಿತ ಬಾಂಗ್ಲಾದೇಶಿಗರ ಭದ್ರ ನೆಲೆ?

03:22 AM Oct 24, 2024 | Team Udayavani |

ಕಾರ್ಕಳ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಹಚ್ಚುತ್ತಿರುವ ಕಾರ್ಯ ಚುರುಕಾಗಿದೆ. ಈ ನಡುವೆ ಉಭಯ ಜಿಲ್ಲೆಗಳ ವಿವಿಧ ಕ್ಷೇತ್ರಗಳಲ್ಲಿ ಇನ್ನಷ್ಟು ಮಂದಿ ಶಂಕಿತ ಬಾಂಗ್ಲಾದೇಶಿಯರು ವಾಸವಿರುವ ಶಂಕೆ ವ್ಯಕ್ತವಾಗಿದೆ.

Advertisement

ಸಾವಿರಾರು ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ಉಭಯ ಜಿಲ್ಲೆಗಳ ರಬ್ಬರ್‌ ತೋಟಗಳಲ್ಲಿ ಉಳಿದುಕೊಂಡಿರುವ ಸಾಧ್ಯತೆಯಿದೆ. ಅದರಲ್ಲೂ ಕೊಡಗು, ದ.ಕ. ಗಡಿಭಾಗದ ಕಡಮಕಲ್ಲು, ಕೂಜುಮಲೆ ಸಹಿತ ವಿವಿಧ ಭಾಗಗಳ ರಬ್ಬರ್‌ ಎಸ್ಟೇಟ್‌ನಲ್ಲಿ ನೂರಾರು ಮಂದಿ ವಲಸೆ ಕಾರ್ಮಿಕರಿದ್ದು, ಇವರಲ್ಲಿ ಬಾಂಗ್ಲಾದೇಶಿಯರೂ ಇರುವ ಸಾಧ್ಯತೆ ಎದೆ ಇನ್ನಲಾಗಿದೆ.

ಕೊಡಗು ಮತ್ತು ದ.ಕ. ಜಿಲ್ಲೆಯ ಗಡಿಭಾಗದ ಕಡಮಕಲ್ಲು-ಕೂಜುಮಲೆ ಎಸ್ಟೇಟ್‌ಗಳನ್ನು ಕೇರಳದ ಕಂಪೆನಿಗಳು ನಡೆಸುತ್ತಿವೆ. ಇಲ್ಲಿನ ರಬ್ಬರ್‌ ತೋಟಗಳಲ್ಲಿ ಅಸ್ಸಾಂ, ಛತ್ತಿಸ್‌ಗಡ, ಒಡಿಶಾ, ಝಾರ್ಖಂಡ್‌ ರಾಜ್ಯಗಳಿಗೆ ಸೇರಿದ 650ಕ್ಕೂ ಅಧಿಕ ಕಾರ್ಮಿಕರಿದ್ದಾರೆ. 1902ರಲ್ಲಿ ಅರಣ್ಯ ಇಲಾಖೆಯಿಂದ 99 ವರ್ಷಗಳ ಲೀಸಿಗೆ ಪಡೆಯಲಾಗಿತ್ತು. ಇಲ್ಲಿನ ಕಾರ್ಮಿಕರ ಪೈಕಿ 200ರಷ್ಟು ಮಕ್ಕಳೇ ಆಗಿದ್ದಾರೆ. ಇವರು ಶಿಕ್ಷಣ ವಂಚಿತರಾಗಿದ್ದಾರೆ ಎನ್ನಲಾಗಿದೆ.

ಇತ್ತ ರಬ್ಬರ್‌ ತೋಟ, ಅತ್ತ ಕಾಫಿ ತೋಟ
ಈ ಭಾಗ ಪಶ್ಚಿಮ ಘಟ್ಟದ ವನ್ಯ ಧಾಮ ವ್ಯಾಪ್ತಿಯಲ್ಲಿದೆ. ನಕ್ಸಲರ ಚಟುವಟಿಕೆಯ ವ್ಯಾಪ್ತಿ ಯಲ್ಲಿದೆ. ಈ ಸ್ಥಳ ಅಡಗು ತಾಣವಾಗಿದ್ದು, ಭಯೋತ್ಪಾದಕ ಚಟು ವಟಿಕೆಗಳು ಇಲ್ಲಿ ಅವಕಾಶ ಸಿಗುವ ಸಂಭವ ಹೆಚ್ಚು. ಇದರ ಇನ್ನೊಂದು ಮಗ್ಗುಲು ಕೊಡಗು ಪ್ರದೇಶವಾಗಿದೆ. ಇಲ್ಲಿನ ಕಾಫಿ ಎಸ್ಟೇಟ್‌ಗಳಲ್ಲೂ ವಲಸೆ ಕಾರ್ಮಿಕರು ಬೃಹತ್‌ ಪ್ರಮಾಣದಲ್ಲಿದ್ದಾರೆ.

ಮೇಲ್ನೋಟಕ್ಕೆ ಅಸ್ಸಾಂನವರು
ಉಭಯ ಜಿಲ್ಲೆ ತೀವ್ರ ಕಾರ್ಮಿಕರ ಕೊರತೆ ಎದುರಿಸುತಿದ್ದು, ಇಲ್ಲಿನ ರಬ್ಬರ್‌ ತೋಟ ಸಹಿತ ಇತರ ನಿರ್ಮಾಣ ಕ್ಷೇತ್ರಗಳಲ್ಲಿ ಅಸ್ಸಾಂ, ಒಡಿಶಾ, ಪಶ್ಚಿಮ ಬಂಗಾಲದಂತಹ ದೂರದ ರಾಜ್ಯಗಳಿಂದ ವಲಸೆಗಾರರ ಒಳಹರಿವು ಕಂಡುಬರುತ್ತಿದೆ. ಅವರು ಈ ಭಾಗದಲ್ಲಿ ಕೂಲಿ ಕೆಲಸ ಮಾಡಲು ನೆಲೆಸಿದ್ದಾರೆ. ಆದಾಗ್ಯೂ ಅಸ್ಸಾಂನವರು ಎಂದು ಹೇಳಿಕೊಳ್ಳುವ ಈ ವಲಸಿಗರಲ್ಲಿ ಹೆಚ್ಚಿನವರು ಬಾಂಗ್ಲಾದೇಶದಿಂದ ಅಕ್ರಮ ವಲಸಿಗರಾ ಗಿರಬಹುದು ಎಂಬ ಶಂಕೆ ಇದೆ.

Advertisement

ಅಪರಾಧ ಪ್ರಕರಣಗಳಲ್ಲಿ ಭಾಗಿ
ಅಸ್ಸಾಮಿ ಕಾರ್ಮಿಕರು ಅಕ್ರಮ ಗೋಮಾಂಸ ವ್ಯಾಪಾರ, ಕಳ್ಳತನ, ದರೋಡೆ, ಮಾದಕ ವಸ್ತು ಮಾರಾಟ, ಅತ್ಯಾಚಾರ ಮತ್ತು ಹಲ್ಲೆ ಮುಂತಾದ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಕರಣಗಳೂ ದಾಖಲಾಗಿವೆ.

ವ್ಯವಸ್ಥಿತ ಜಾಲ ಸಕ್ರಿಯ
ಕುತೂಹಲಕಾರಿ ಸಂಗತಿಯೆಂದರೆ ಹೀಗೆ ವಲಸೆ ಬಂದು ಅಕ್ರಮವಾಗಿ ನೆಲೆಸಿರುವ ಹೆಚ್ಚಿನ ಕಾರ್ಮಿಕರು ಆಧಾರ್‌ ಕಾರ್ಡ್‌ ಹೊಂದಿದ್ದಾರೆ. ಇದಕ್ಕೆಂದು ಸ್ಥಳಿಯ ದಲ್ಲಾಳಿಗಳು, ಏಜೆಂಟರಿದ್ದಾರೆ. ಅಸ್ಸಾಮಿ ಕಾರ್ಮಿಕರು ಎಂಬ ನೆಪದಲ್ಲಿ ಬಾಂಗ್ಲಾದೇಶಿಯರನ್ನು ಜಿಲ್ಲೆಗೆ ಸೇರಿಸಿಕೊಳ್ಳಲಾಗುತ್ತಿದೆ. ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಒದಗಿಸುವ ದೊಡ್ಡ ಜಾಲವಿರುವ ಸಂಶಯವೂ ಇದ್ದು, ಇದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ಅಕ್ರಮವಾಗಿ ಅಂತಾರಾಷ್ಟ್ರೀಯ ಗಡಿ ದಾಟಿ ಬಾಂಗ್ಲಾದೇಶಿ ಕಾರ್ಮಿಕರನ್ನು ಕರೆತರುವಾಗ 10ರಿಂದ 15 ಕಾರ್ಮಿಕ ತಂಡವು ಒಮ್ಮೆಗೆ ಗಡಿ ದಾಟುತ್ತದೆ. ಅವರು ಭಾರತಕ್ಕೆ ಬಂದ ಬಳಿಕ ಏಜೆಂಟ್‌ಗಳು ಅವರಿಗೆ ಆಧಾರ್‌ ಕಾರ್ಡ್‌ಗಳನ್ನು ನೀಡುತ್ತಾರೆ. ಕಾರ್ಡ್‌ ಒಂದಕ್ಕೆ 5ರಿಂದ 6 ಸಾವಿರ ವಸೂಲಿ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ಚಟುವಟಿಕೆ
ಪ್ರಾರಂಭದಲ್ಲಿ ಈ ವಲಸೆ ಕಾರ್ಮಿಕರು ಪ್ರಾಥಮಿಕವಾಗಿ ಜಿಲ್ಲೆಯ ರಬ್ಬರ್‌ ತೋಟ, ರಬ್ಬರ್‌ ಎಸ್ಟೇಟ್‌, ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರೆ. ಇನ್ನು ಮಲೆನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಕಾರ್ಮಿಕ ಪಾತ್ರಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಕ್ರಮೇಣ ಇವರು ತಮ್ಮ ಚಟುವಟಿಕೆಗಳನ್ನು ವೈವಿಧ್ಯಗೊಳಿಸಿದ್ದಾರೆ. ಕೃಷಿ, ವ್ಯಾಪಾರ, ನಿರ್ಮಾಣ, ಹೋಮ್‌ಸ್ಟೇಗಳು, ರೆಸಾರ್ಟ್‌ಗಳಲ್ಲಿ, ರೂಂ ಬಾಯ್‌, ಸ್ಥಳೀಯ ಹೊಟೇಲುಗಳಲ್ಲಿ ಬಾಣಸಿಗರು, ಸಪ್ಲಾಯರ್‌ಗಳಂತಹ ಕೆಲಸಗಳಿಗೂ ತಮ್ಮನ್ನು ವಿಸ್ತರಿಸಿಕೊಂಡಿದ್ದಾರೆ.

“ಕೂಜುಮಲೆ – ಕಡಮಕಲ್ಲು ಪ್ರದೇಶ ಸಹಿತ ಜಿಲ್ಲೆಯಲ್ಲಿ ವಾಸವಿರುವ ವಲಸೆ ಕಾರ್ಮಿಕರ ದಾಖಲೆ ಪರಿಶೀಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.”
– ಯತೀಶ್‌ ಎನ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ದಕ್ಷಿಣ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next