Advertisement

ಅಕ್ರಮ ಗೋ ಸಾಗಾಟಕ್ಕೆ ತಡೆ: ನಗ, ನಗದು ಕಾಣೆ ಆರೋಪ: ಮಜ್ಜಾರು ಕ್ಷೇತ್ರಕ್ಕೆ ದೂರು

12:03 AM Nov 09, 2022 | Team Udayavani |

ಕಡಬ: ಕೆಲವು ದಿನಗಳ ಹಿಂದೆ ಕೋಡಿಂಬಾಳದ ಮುರಚೆಡವು ಬಳಿ ಜಾನುವಾರು ಸಾಗಿಸುತ್ತಿದ್ದ ನಮ್ಮ ವಾಹನವನ್ನು ತಡೆದ ಬಜರಂಗದಳ ಕಾರ್ಯಕರ್ತರು ನಮ್ಮ ಚಿನ್ನದ ಚೈನ್‌ ಹಾಗೂ ನಗದು ಅಪಹರಿಸಿದ್ದಾರೆ ಎಂದು ಜಾನುವಾರು ಸಾಗಿಸುತ್ತಿದ್ದವರು ಕೋಡಿಂಬಾಳದ ಮಜ್ಜಾರು ಕಾರಣಿಕ ಕ್ಷೇತ್ರಕ್ಕೆ ದೂರು ನೀಡಿರುವ ಘಟನೆ ನಡೆದಿದೆ.

Advertisement

ಏನೆಕಲ್ಲು ನಿವಾಸಿಗಳಾದ ಸುಧೀರ್‌ ಹಾಗೂ ಬೆಳಿಯಪ್ಪ ಅವರು ಅಕ್ರಮವಾಗಿ ಪಿಕಪ್‌ ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಕಡಬದ ವಿಹಿಂಪ ಹಾಗೂ ಬಜರಂಗದಳ ಕಾರ್ಯಕರ್ತರು ತಡೆಯೊಡ್ಡಿ ಆರೋಪಿಗಳು ಹಾಗೂ ಜಾನುವಾರು ಇದ್ದ ವಾಹನವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು. ಘಟನೆಯ ಸಂದರ್ಭ ಜಾನುವಾರು ಸಾಗಾಟದಾರರೊಬ್ಬರ ಚಿನ್ನದ ಚೈನು ಹಾಗೂ ಹಣ ಕಾಣೆಯಾಗಿದ್ದು, ಅದನ್ನು ಕಡಬ ಪ್ರಖಂಡ ವಿಹಿಂಪ ಕಾರ್ಯದರ್ಶಿ ಪ್ರಮೋದ್‌ ರೈ ನಂದುಗುರಿ, ಗೋ ರಕ್ಷಾ ಪ್ರಮುಖ್‌ ಜಯಂತ ಕಲ್ಲುಗುಡ್ಡೆ, ಬಜರಂಗದಳದ ರಕ್ಷಿತ್‌ ಕೇಪು, ಸಂತೋಷ್‌ ದೋಳ, ತೀರ್ಥೇಶ್‌ ಮೀನಾಡಿ ಕದ್ದಿದ್ದಾರೆ ಎಂದು ಕೋಡಿಂಬಾಳದ ಮಜ್ಜಾರು ಕಾರಣಿಕ ಕ್ಷೇತ್ರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಕ್ಷೇತ್ರದಲ್ಲಿ ಕ್ಷೇತ್ರದ ಅಧ್ಯಕ್ಷ ಪ್ರಸಾದ ಕೆದಿಲಾಯ ಅವರ ನೇತೃತ್ವದಲ್ಲಿ ದೂರು ವಿಚಾರಣೆ ನಡೆಸಲಾಯಿತು.

ಆರೋಪ ನಿರಾಕರಣೆ
ವಿಚಾರಣೆಗೆ ಹಾಜರಾಗಿದ್ದ ಬಜರಂಗದಳ ಕಾರ್ಯಕರ್ತರು ದೂರುದಾರರ ಆರೋಪವನ್ನು ನಿರಾಕರಿಸಿ ನಾವು ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದು ನಿಜ. ಆದರೆ ಚಿನ್ನ, ಹಣ ಕದ್ದಿಲ್ಲ, ಅದನ್ನು ನೋಡಿಯೂ ಇಲ್ಲ, ಆ ಬಗ್ಗೆ ನೀವು ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಮಾಡಿಕೊಳ್ಳಲು ನಮ್ಮದೇನು ಅಭ್ಯಂತವಿಲ್ಲ. ಆದರೆ ನೀವು ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಹಿಂಸಾತ್ಮಾಕ ರೀತಿಯಲ್ಲಿ ಸಾಗಿಸುತ್ತಿದ್ದರೂ ಒಪ್ಪಿಕೊಳ್ಳದೆ, ಜಾನುವಾರನ್ನು ತಂಗಿಯ ಮನೆಗೆ ಸಾಕಲು ಕೊಂಡೊಯ್ಯುತ್ತಿರುವುದಾಗಿ ಸುಳ್ಳು ಹೇಳಿದ್ದೀರಿ. ಅದನ್ನೇ ದೈವದ ಸಾನಿಧ್ಯದ ಎದುರು ಹೇಳುವಂತೆ ಕೇಳಿಕೊಂಡರು. ಆ ಸಂದರ್ಭದಲ್ಲಿ ಜಾನುವಾರು ಸಾಗಿಸಿದವರ ಪೈಕಿ ಸುಧೀರ್‌ ಅವರು ತನ್ನ ತಪ್ಪನ್ನು ಒಪ್ಪಿಕೊಂಡು ಘಟನೆಯ ವೇಳೆ ನಾವು ತಂಗಿಯ ಮನೆಗೆ ಜಾನುವಾರು ಸಾಗಿಸುತ್ತಿದ್ದುದು ಎಂದು ಸುಳ್ಳು ಹೇಳಿದ್ದೇವೆ. ನಾವು ವ್ಯಕ್ತಿಯೋರ್ವರಿಗೆ ಕೊಡುವುದಕ್ಕಾಗಿ ಜಾನುವಾರು ಸಾಗಿಸುತ್ತಿದ್ದುದಾಗಿ ಹೇಳಿ ಮುಂದೆ ಅಕ್ರಮ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುವುದಿಲ್ಲ ಎಂದು ಕ್ಷಮೆ ಯಾಚಿಸಿದರು.

ಆ ಬಳಿಕ ಚಿನ್ನ ಮತ್ತು ಹಣ ಕಾಣೆಯಾಗಿರುವ ಬಗ್ಗೆ ರಾಜನ್‌ ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಮಜ್ಜಾರು ಕ್ಷೇತ್ರದ ಪ್ರಮುಖರಾದ ಸುದರ್ಶನ ಗೌಡ, ಮಾಧವ ಕೋಲ್ಪೆ, ರಘುರಾಮ ನಾೖಕ್‌ ಕುಕ್ಕೆರೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next