Advertisement

ಆದಿವಾಸಿಗಳ ನಿರ್ಲಕ್ಷಿಸಿದ್ದ ಕಾಂಗ್ರೆಸ್‌: ಪ್ರಧಾನಿ ಮೋದಿ ಆರೋಪ

08:32 PM Nov 15, 2021 | Team Udayavani |

ಭೋಪಾಲ್‌/ರಾಂಚಿ:”ಹಲವು ಶತಮಾನಗಳಿಂದಲೂ ಬುಡಕಟ್ಟು ಸಮುದಾಯ ಭಾರತೀಯ ಸಂಸ್ಕೃತಿಗೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ವನವಾಸದ ಸಂದರ್ಭದಲ್ಲಿ ಭಗವಾನ್‌ ಶ್ರೀರಾಮನಿಗೂ ಆದಿವಾಸಿಗಳು ಸ್ಫೂರ್ತಿಯಾಗಿದ್ದರು. ಆದರೆ, ದೇಶದಲ್ಲಿ ಆಡಳಿತ ನಡೆಸಿದ ಹಿಂದಿನ ಸರ್ಕಾರಗಳು ಆದಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದವು.

Advertisement

ಹೀಗೆಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದ್ದಾರೆ. ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ಸೋಮವಾರ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್‌ “ಜನಜಾತೀಯ ಗೌರವ್‌ ದಿವಸ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ಹಿಂದಿನ ಸರ್ಕಾರಗಳು ಬುಡಕಟ್ಟು ಸಮುದಾಯಕ್ಕೆ ಆದ್ಯತೆಯನ್ನೇ ನೀಡಲಿಲ್ಲ. ದೇಶದ ಶೇ.10ರಷ್ಟು ಜನಸಂಖ್ಯೆಯನ್ನೇ ನಿರ್ಲಕ್ಷಿಸಿದವು ಎಂದೂ ಮೋದಿ ಕಿಡಿಕಾರಿದ್ದಾರೆ. ಪ್ರಸ್ತುತ ಬುಡಕಟ್ಟು ಜನಾಂಗವೂ ದೇಶದ ಅಭಿವೃದ್ಧಿಯ ಪಾಲುದಾರರಾಗಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಜಾರಿ ಮಾಡಿರುವ ವಿವಿಧ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ, ಗಾಂಧಿ ಜಯಂತಿ, ಸರ್ದಾರ್‌ ಪಟೇಲ್‌ ಜಯಂತಿ, ಅಂಬೇಡ್ಕರ್‌ ಜಯಂತಿ ಮಾದರಿಯಲ್ಲಿಯೇ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ಪ್ರತಿ ನ.15 ಅನ್ನು “ಜನಜಾತೀಯ ಗೌರವ್‌ ದಿವಸ್‌’ ಎಂದು ಆಚರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ ಮೋದಿ.

ಇದಕ್ಕೂ ಮುನ್ನ, ಜಾರ್ಖಂಡ್‌ನ‌ ರಾಂಚಿಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿರ್ಸಾ ಮುಂಡಾ ಸ್ಮರಣಾರ್ಥ ಮ್ಯೂಸಿಯಂ ಉದ್ಘಾಟಿಸಿದ ಮೋದಿ, “ಬಿರ್ಸಾ ಅವರು ನಮ್ಮ ಮನಸ್ಸಿನಲ್ಲಿ ದೇವರ ಸ್ಥಾನದಲ್ಲಿದ್ದಾರೆ’ ಎಂದಿದ್ದಾರೆ. ಭಾರತದ ಬುಡಕಟ್ಟು ಸಮಾಜದ ಅಸ್ಮಿತೆಯನ್ನೇ ಅಳಿಸಲು ಹೊರಟಿದ್ದ ಸಿದ್ಧಾಂತದ ವಿರುದ್ಧ ಬಿರ್ಸಾ ಮುಂಡಾ ಹೋರಾಡಿದ್ದರು ಎಂದೂ ಹೇಳಿದ್ದಾರೆ.

ಇದನ್ನೂ ಓದಿ:ಅನಿಲ್ ದೇಶ್ ಮುಖ್ ಗೆ 14 ದಿನಗಳ ನ್ಯಾಯಾಂಗ ಬಂಧನ

Advertisement

ಮೊಮ್ಮಗನಿಂದ ಚಾಲನೆ:
ಇದೇ ವೇಳೆ, ಮಂಗಳವಾರ ದೆಹಲಿಯಲ್ಲಿ ನಡೆಯಲಿರುವ ಆದಿ ಮಹೋತ್ಸವವನ್ನು ಬಿರ್ಸಾ ಮುಂಡಾ ಅವರ ಮೊಮ್ಮಗ ಸುಖ್‌ರಾಮ್‌ ಮುಂಡಾ ಉದ್ಘಾಟಿಸಲಿದ್ದಾರೆ. ಬುಡಕಟ್ಟು ಕಲೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ಪ್ರದರ್ಶಿಸುವ ರಾಷ್ಟ್ರೀಯ ಉತ್ಸವ ಇದಾಗಿದೆ.

ಪೂರ್ವಾಂಚಲ ಎಕ್ಸ್‌ಪ್ರಸ್‌ವೇ ಲೋಕಾರ್ಪಣೆ
ಉತ್ತರಪ್ರದೇಶದ ರಾಜಧಾನಿ ಲಕ್ನೋ ಮತ್ತು ಗಾಜಿಪುರದ ನಡುವೆ ಸಂಪರ್ಕ ಕಲ್ಪಿಸುವ ಹೊಸ ಪೂರ್ವಾಂಚಲ ಎಕ್ಸ್‌ಪ್ರಸ್‌ವೇಯನ್ನು ಮಂಗಳವಾರ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಸ್‌ಯು-30 ಎಂಕೆಐ, ಜಾಗುವಾರ್‌, ಮಿರಾಜ್‌ 2000 ಯುದ್ಧವಿಮಾನಗಳ ಅದ್ಧೂರಿ ಏರ್‌ಶೋ ನಡೆಸಲು ನಿರ್ಧರಿಸಲಾಗಿದೆ.

ಪದ್ಮಶ್ರೀ ತುಳಸಿ ಗೌಡರ ಪ್ರಸ್ತಾಪ
ಭೋಪಾಲ್‌ನ ಕಾರ್ಯಕ್ರಮದಲ್ಲಿ ಕರ್ನಾಟಕದ ಪರಿಸರ ಹೋರಾಟಗಾರ್ತಿ, ಬುಡಕಟ್ಟು ಸಮುದಾಯದ ತುಳಸಿ ಗೌಡ(72) ಅವರನ್ನೂ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಪದ್ಮ ಪ್ರಶಸ್ತಿ ಸ್ವೀಕರಿಸಲು ಬರಿಗಾಲಲ್ಲಿ ಬಂದ ಬುಡಕಟ್ಟು ಸಾಧಕರನ್ನು ನೋಡಿದಾಗ ನನಗೆ ಕಣ್ತುಂಬಿ ಬಂತು ಎಂದು ಮೋದಿ ಹೇಳಿದ್ದಾರೆ.

ಅತ್ಯಾಧುನಿಕ ರೈಲು ನಿಲ್ದಾಣ ಲೋಕಾರ್ಪಣೆ
ಭೋಪಾಲ್‌ನಲ್ಲಿ ನವೀಕೃತಗೊಂಡ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಈ ಹಿಂದೆ ಹಬೀಬ್‌ಗಂಜ್‌ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ರೈಲು ನಿಲ್ದಾಣಕ್ಕೆ ಇತ್ತೀಚೆಗೆ ಗೋಂಡಾ ಸಾಮ್ರಾಜ್ಯದ ರಾಣಿ ಕಮಲಾಪತಿ ಅವರ ಹೆಸರನ್ನು ಇಡಲಾಗಿತ್ತು. ಏರ್‌ಪೋರ್ಟ್‌ ಮಾದರಿ ಸೌಲಭ್ಯಗಳನ್ನು ಈ ಅತ್ಯಾಧುನಿಕ ರೈಲು ನಿಲ್ದಾಣ ಒಳಗೊಂಡಿದ್ದು, ಆಧುನಿಕ ಶೌಚಾಲಯ, ಗುಣಮಟ್ಟದ ಆಹಾರ, ಹೋಟೆಲ್‌, ಆಸ್ಪತ್ರೆ, ಸ್ಮಾರ್ಟ್‌ ಪಾರ್ಕಿಂಗ್‌, ಎಲ್ಲ ಪ್ಲಾಟ್‌ಫಾರಂಗೂ ಕನೆಕ್ಟಿವಿಟಿ ಮತ್ತಿತರ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next