Advertisement

ನೀರು ಕೊಡದಿದ್ದರೆ ಜಾಗ ಖಾಲಿ ಮಾಡಿ

06:38 PM Sep 21, 2022 | Team Udayavani |

ರಾಣಿಬೆನ್ನೂರ: ನಗರದಲ್ಲಿ ಅಂದಾಜು 116 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ 24×7 ನಿರಂತರ ನೀರು ಯೋಜನೆಯಡಿ ಹಲವು ವಾರ್ಡ್‌ಗಳಲ್ಲಿ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ನಗರಸಭಾ ಸದಸ್ಯರು ಪಕ್ಷಭೇದ ಮರೆತು 24×7 ಯೋಜನೆಯ ನೀರು ಪೂರೈಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಮಂಗಳವಾರ ನಗರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನೀರು ಯೋಜನೆಯ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಕೆಲವೆಡೆ ನಳ ಸಂಪರ್ಕ ಜೋಡಣೆ ಮಾಡಿಲ್ಲ. ಸೋರುವಿಕೆ ಬಂದ್‌ ಮಾಡಿಸಿಲ್ಲ. 5 ವಾರ್ಡ್‌ಗಳಲ್ಲಿ ಇನ್ನೂ ನೀರು ಪೂರೈಕೆಯಾಗುತ್ತಿಲ್ಲ. ಹೀಗಾದರೆ ನಗರದ ನಾಗರಿಕರಿಗೆ ನಾವು ಏನು ಉತ್ತರಿಸಬೇಕು? ನೀರು ಕೊಡಲಾಗದಿದ್ದರೆ ಹೊರಟು ಹೋಗಿ ಎಂದು ನಗರಸಭಾ ಸದಸ್ಯರು ಅಧಿಕಾರಿಗಳ
ವಿರುದ್ಧ ಕಿಡಿಕಾರಿದರು.

ಅಧಿಕಾರಿಗಳಿಗೆ ರಾಣಿಬೆನ್ನೂರಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ವಾರ್ಡ್‌ಗಳ ಸದಸ್ಯರು ಯಾರೆಂಬುದೇ ತಿಳಿದಿಲ್ಲ. ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನೂ ಕೆಲವು ವಾರ್ಡ್‌ಗಳಲ್ಲಿ ನಳ ಜೋಡಣೆಯಾಗಿಲ್ಲ. ರಿಪೇರಿ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಿರಂತರ ನೀರಿನ ಬಗ್ಗೆ ಅಧಿಕಾರಿಗಳು ನಾಗರಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

ಈ ಯೋಜನೆಯಿಂದ ನಗರದ ಬಹುತೇಕ ರಸ್ತೆ, ಗಟಾರುಗಳು ಹಾಳಾಗಿದ್ದು, ಈವರೆಗೂ ಸರಿಯಾಗಿ ರಿಪೇರಿ ಮಾಡಿಲ್ಲ. 35 ವಾರ್ಡುಗಳಿಗೆ ನಿರಂತರವಾಗಿ ದಿನದ 24 ಗಂಟೆಗಳ ಕಾಲ ನೀರು ಪೂರೈಕೆ ಮಾಡುವವರೆಗೂ ಯಾವುದೇ ರೀತಿಯ ನೀರಿನ ಬಿಲ್‌ ಗ್ರಾಹಕರಿಗೆ ಕೊಡಬಾರದು ಎಂದು ಸದಸ್ಯರು ಸೂಚಿಸಿದರು. ಈಗಾಗಲೇ ಈ ನೀರು ಯೋಜನೆಯ ಕಾಮಗಾರಿ 300 ಕಿಮೀಗೆ ತಲುಪಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಒಳ ಚರಂಡಿ 167 ಕಿಮೀ ಮುಗಿದಿದ್ದು, ನೀರಿನ ಕಾಮಗಾರಿಯ ಕಿಮೀ ನಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ ಎಂದು ಸದಸ್ಯರು ಆರೋಪಿಸಿದರು.

ಕ್ರಿಯಾಯೋಜನೆಯಂತೆ ಹೆಚ್ಚುವರಿ ಹಾಗೂ ಉಳಿದ 4 ಕೋಟಿ ರೂ.ಅನ್ನು ನಗರಸಭೆಯವರು ಪಾವತಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈ ಬಗ್ಗೆ ನೀರು ಸರಬರಾಜು ಅಧಿಕಾರಿಗಳು ನಗರಸಭೆ ಆಡಳಿತ ಮಂಡಳಿಯವರ ಮಂಜೂರಾತಿ ಪಡೆದಿಲ್ಲ. ಹೀಗಾಗಿ, 4 ಕೋಟಿ ರೂ. ಪಾವತಿಸುವುದಿಲ್ಲ. ಈ ರೀತಿಯ ನಿರ್ಲಕ್ಷ್ಯಕ್ಕೆ ನಗರ ಸಭೆ ಸದಸ್ಯರು ಹಾಗೂ ನಾಗರಿಕರನ್ನು ಅಧಿಕಾರಿಗಳು ದೂಷಿಸಬಾರದು ಎಂದು ತಿಳಿಸಿದರು.

Advertisement

ಡಿಪಿಆರ್‌ನಲ್ಲಿ ಸೂಚಿಸಿದಂತೆ ಮೊದಲು ನಳ ಸಂಪರ್ಕ ಜೋಡಣೆ ಮಾಡಬೇಕು. ಈಗಾಗಲೇ 22 ಸಾವಿರ ನಳ ಸಂಪರ್ಕ ಜೋಡಣೆ ಮಾಡಿದ್ದು, ಉಳಿದವುಗಳ ಜೋಡಣೆಗೆ ಹೊಸ ಡಿಪಿಆರ್‌ ಮಾಡಬೇಕು. 32, 33, 34, 35 ಹಾಗೂ 27 ನೇ ವಾರ್ಡಿನಲ್ಲಿ ತುರ್ತಾಗಿ ನೀರು ಸರಬರಾಜು ಮಾಡಬೇಕು. ಈ ಹಿಂದಿನ 35 ಜನ ನೀರು ಸರಬರಾಜು ಸಿಬ್ಬಂದಿಯನ್ನು ನೀರು ನಿರ್ವಹಣೆಗಾಗಿ ಬಳಸಿಕೊಳ್ಳಬೇಕು. ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ನಿರಂತರ ನೀರು ಸರಬರಾಜು ಮಾಡದಿದ್ದರೆ ನಗರಸಭೆ ವತಿಯಿಂದಲೇ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.

ನಗರದಲ್ಲಿ ಇರುವ ವಿದ್ಯುತ್‌ ದೀಪ ನಿರ್ವಹಣೆ ಮಾಡಲು ಪ್ರತಿ ತಿಂಗಳು 4 ಲಕ್ಷ ರೂ. ಪಾವತಿಸುತ್ತಿದ್ದು, ಪರಿಷ್ಕರಣೆ ಮಾಡಿದರೆ ತಿಂಗಳಿಗೆ 10 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಗುತ್ತಿಗೆದಾರರು ವಿದ್ಯುದ್ದೀಪ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ರಿಪೇರಿ ಮಾಡುತ್ತಿಲ್ಲ. ಹೊಸ ದೀಪಗಳನ್ನು ಅಳವಡಿಸುತ್ತಿಲ್ಲ. ಗುತ್ತಿಗೆದಾರರನ್ನು ಬದಲಾಯಿಸಿ ನಗರಸಭೆ ವತಿಯಿಂದಲೇ ನಿರ್ವಹಣೆ ಮಾಡಬೇಕೆಂದು ಸದಸ್ಯರು ಒತ್ತಾಯಿಸಿದರು.

6.26 ಕೋಟಿ ರೂ. ವೆಚ್ಚದ 92 ಕಾಮಗಾರಿಗಳಿಗೆ ಸಭೆ ಸರ್ವಾನುಮತದಿಂದ ಮಂಜೂರಾತಿ ನೀಡಿತು. ನಗರಸಭೆ ಸದಸ್ಯರಾದ ಪ್ರಕಾಶ ಬುರಡಿಕಟ್ಟಿ, ಪುಟ್ಟಪ್ಪ ಮರಿಯಮ್ಮನವರ, ಮಲ್ಲಿಕಾರ್ಜುನ ಅಂಗಡಿ, ನಿಂಗರಾಜ ಕೋಡಿಹಳ್ಳಿ, ಪ್ರಕಾಶ ಪೂಜಾರ, ಸಿದ್ದಪ್ಪ ಬಾಗಲವರ, ನಾಗರಾಜ ಪವಾರ, ಹುಚ್ಚಪ್ಪ ಮೆಡ್ಲೆರಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಪೌರಾಯುಕ್ತ ಉದಯಕುಮಾರ ಬಿ.ಟಿ. ಸೇರಿದಂತೆ ಅಧಿ ಕಾರಿಗಳು, ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next