Advertisement

ಅಧಿಕಾರಕ್ಕೆ ಬಂದ್ರೆ ಮಹಿಳೆಗೆ ಶೇ.33ರಷ್ಟು ಮೀಸಲಾತಿ; ಸಿದ್ದರಾಮಯ್ಯ

06:05 PM Jun 15, 2022 | Team Udayavani |

ದೊಡ್ಡಬಳ್ಳಾಪುರ: ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಬೆಸೆಂಟ್‌ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ನವಸಂಕಲ್ಪ ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಾಂಗ್ರೆಸ್‌ ಪಕ್ಷದಿಂದ ಜಾರಿಯಾಗಿತ್ತು.

ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಒದಗಿಸುವ 1996ರಲ್ಲಿ 74 ನೇ ತಿದ್ದುಪಡಿಯ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿಲ್ಲ. ಹಾಗಾಗಿ ಇಂದಿಗೂ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಪಕ್ಷ ಸಂಘಟನೆಗೆ ಸಹಕಾರಿ: ಸಂಕಲ್ಪ ಶಿಬಿರದ ನಿರ್ಣಯಗಳ ಮಾಹಿತಿ ನೀಡಿದ ಕೇಂದ್ರ ಮಾಜಿ ಸಚಿವ ಡಾ. ಎಂ.ವೀರಪ್ಪ ಮೊಯಿಲಿ, ನವ ಸಂಕಲ್ಪ ಚಿಂತನ ಶಿಬಿರ ಪಕ್ಷಕ್ಕೆ ಚೈತನ್ಯ ತುಂಬಿದ್ದು, ಮುಂದೆ ನಡೆಯಲಿರುವ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಸಂಘಟನೆಗೆ ಸಹಕಾರಿಯಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಸಂಕಲ್ಪ ಶಿಬಿರ ನಡೆಯಲಿದೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ವೈಫಲ್ಯ ಕುರಿತು ಈಗಾಗಲೇ ರಾಜ್ಯಮಟ್ಟದಲ್ಲಿ ಚರ್ಚೆಯಾಗಿದ್ದು, ಇದು
ಪಕ್ಷದ ಅಂತರಿಕ ವಿಚಾರವಾಗಿದೆ ಎಂದರು.

ಶಿಬಿರದಲ್ಲಿ 8 ವಿಷಯ ಸಮಿತಿಗಳನ್ನು ರಚಿಸಲಾಗಿದ್ದು, ಒಂದೊಂದು ಸಮಿತಿಗೆ ಒಬ್ಬರು ಅಧ್ಯಕ್ಷರು ಹಾಗೂ ಸಂಯೋಜ ಕರನ್ನು ನೇಮಿಸಲಾಗಿತ್ತು. ಸಮಿತಿಗಳ ವರದಿ ಕ್ರೂಡೀಕರಿಸಿ ಸಮಗ್ರ ವರದಿಯನ್ನ ಮೂರು ನಾಲ್ಕು ದಿನಗಳಲ್ಲಿ ರಾಜ್ಯ ನಾಯಕರಿಗೆ ತಲುಪಿಸಲಾಗುವುದು. ಪಕ್ಷದ ಬಲವರ್ಧನೆ ಹಾಗೂ ಜನಪರ ಕಾರ್ಯಗಳ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.

Advertisement

ವೃಷಭಾವತಿ ನದಿ ಯೋಜನೆ ಮೀನಮೇಷ: ಭೂಮಿ ಕಳೆದುಕೊಂಡ ಯುವಕರಿಗೆ ಉದ್ಯೋಗ ನೀಡಬೇಕು. ಸೂಕ್ತ ತರಬೇತಿಗಳನ್ನು ನೀಡಬೇಕು. ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪಡೆಯವ ಸಿಇಟಿ ದುರ್ಬಲಗೊಳಿ ಸಲಾಗುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವಂತಾಗಬೇಕು. ರೈತರು ಎದುರಿ ಸುತ್ತಿರುವ ಸವಾಲುಗಳು ಕುರಿಂತೆ ಎತ್ತಿನಹೊಳೆ ಯೋಜನೆ ವಿಳಂಬವಾಗುತ್ತಿದ್ದು, ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಇರುವ ತೊಡಕು ಸರಿಪಡಿಸಬೇಕಿದೆ.

ವೃಷಭಾವತಿ ನದಿ ಯೋಜನೆ ಮೀನಮೇಷ ಎಣಿಸುತ್ತಿರುವುದು ಖಂಡನೀಯ. ರೈತರ ಹೈನುಗಾರಿಕೆಗೆ ಪ್ರೋತ್ಸಾಹ ಧನ, ಎಲ್ಲಾ ವರ್ಗದ ರೈತರಿಂದ ರಾಗಿ ಖರೀದಿ, ಬೆಳೆ ನಷ್ಟ ಪರಿಹಾರ ಹೆಚ್ಚಳ, ಪಿಎಂ ಕಿಸಾನ್‌ ಸಹಾಯಧನ ಹೆಚ್ಚಳ, ಸಹಕಾರಿ ವ್ಯವಸ್ಥೆ ಬಲಪಡುಸುವಂತೆ ಒತ್ತಾಯಿಸಲಾಗುತ್ತಿದೆ ಎಂದರು.

ಸರ್ಕಾರದ ವೈಫಲ್ಯದ ಬಗ್ಗೆ ಹೋರಾಟ: ಮಹಿಳಾ ಸಬಲೀಕರಣ ಕುರಿತಂತೆ, ಮಹಿಳಾ ಲಿಂಗ ತಾರತಮ್ಯ ಅಸಮಾನತೆ ಹೋಗಬೇಕು. ಆಶಾ ಕಾರ್ಯಕರ್ತೆಯರಿಗೆ ಉದ್ಯೋಗ ಭದ್ರತೆ, ಮಹಿಳೆಯರ ಸ್ವಾವಲಂಭನೆಗೆ ಪೂರಕ ಕಾರ್ಯಕ್ರಮ ರೂಪಿಸಬೇಕಿದೆ. ಹಿಂದುಳಿದ ವರ್ಗ, ಪ.ಜಾತಿ, ಪಂಗಡಗಳಿಗೆ ಸಾಮಾಜಿಕ ನ್ಯಾಯ ದೊರಕಬೇಕು. ಮುಂದೆ ನಮ್ಮ ಸರ್ಕಾರ ಬಂದಾಗ ಈ ಯೋಜನೆ ಜಾರಿಗೆ ತರಲಾಗುವುದು. ಈಗ ಸರ್ಕಾರದ ವೈಫಲ್ಯದ ಬಗ್ಗೆ ಹೋರಾಟ ನಡೆಸಲಾಗುವುದು ಎಂದರು.

ಗುಂಪು ಚರ್ಚೆಗಳಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಶಾಸಕ ಟಿ.ವೆಂಕಟರಮಣಯ್ಯ, ಶರತ್‌ ಬಚ್ಚೇಗೌಡ, ಮಾಜಿ ಸಚಿವ ಅಂಜನಾಮೂರ್ತಿ, ಮಾಜಿ ಶಾಸಕ ವೆಂಕಟಸ್ವಾಮಿ, ಕೆಪಿಸಿಸಿ ಸದಸ್ಯ ಜಿ. ಲಕ್ಷ್ಮೀಪತಿ, ಮುಖಂಡ ಚೆಲುವರಾಜು, ವಿ.ಮಂಜುನಾಥ್‌, ಕೆ.ಆರ್‌.ನಾಗೇಶ್‌, ಲೋಕೇಶ್‌, ಮುನಿ ನರಸಿಂಹಯ್ಯ, ಚೇತನ ಗೌಡ, ವಿ.ಪ್ರಸಾದ್‌, ತಿರುವರಂಗ ನಾರಾಯಣ ಸ್ವಾಮಿ, ಕಮಲಾಕ್ಷಿ ರಾಜಣ್ಣ, ರೇವತಿ ಅನಂತರಾಮ್‌ ಹಾಗೂ ಮತ್ತಿತರರು ಇದ್ದರು.

ಗೆದ್ದ ಎತ್ತಿನ ಬಾಲ ಹಿಡಿಯುವ ಜೆಡಿಎಸ್‌
ಜೆಡಿಎಸ್‌ ಪಕ್ಷದವರು ಗೆದ್ದೆತ್ತಿನ ಬಾಲ ಹಿಡಿಯುವವರು. ಅವರ ಬಗ್ಗೆ ಹುಷಾರಾಗಿರಬೇಕು. ಜನವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯದಲ್ಲಿ ಜಾತಿ ಧರ್ಮಗಳ ಮಧ್ಯ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೂಗೆಯಬೇಕು. ಕಾಂಗ್ರೆಸ್‌ ಆಡಳಿತದ ಸರ್ಕಾರದಲ್ಲಿ ರೂಪಿಸಿದ ಜನಕಲ್ಯಾಣ ಕಾರ್ಯ ಕ್ರಮ, ಅದಕ್ಕಾಗಿ ಬಿಡುಗಡೆ ಮಾಡಿದ ಅನುದಾನ, ವ್ಯಯಿಸಿದ ಖರ್ಚುಗಳ ಮಾಹಿತಿ ನೀಡಿ ಕಾರ್ಯಕರ್ತರು ಜನರಿಗೆ ಕಾಂಗ್ರೆಸ್‌ ಸಾಧನೆ ಮುಟ್ಟಿಸ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next