ಕುಂದಾಪುರ: ನಾಡ ದೋಣಿ ಮೀನುಗಾರರಿಗೆ ಸೀಮೆಎಣ್ಣೆ ಇನ್ನೂ ಸಿಗದ ಕಾರಣ ಆಕ್ರೋಶ ವ್ಯಕ್ತವಾಗಿದ್ದು, ಮುಂದಿನ 20 ದಿನದೊಳಗೆ 7 ಸಾವಿರ ಕಿಲೋ ಲೀ. ಸೀಮೆಎಣ್ಣೆ ಪೂರೈಸದಿದ್ದರೆ ನೋಟಾ ಅಭಿಯಾನ ಕೈಗೊಳ್ಳುವುದಾಗಿ ಗಂಗೊಳ್ಳಿ ವಲಯದ ನಾಡದೋಣಿ ಮೀನುಗಾರ ಸಂಘ ಎಚ್ಚರಿಸಿದೆ.
ಕಳೆದ ತಿಂಗಳು ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಎಲ್ಲ ಸಚಿವರು, ಸಂಸದರು, ಶಾಸಕರಿಗೂ ನಮ್ಮ ಅಹವಾಲು ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾರಿಂದಲೂ ಕೇಂದ್ರಕ್ಕೆ ಒತ್ತಡ ಹೇರಿ ಅಗತ್ಯ ಸೀಮೆಎಣ್ಣೆ ಬಿಡುಗೊಳಿಸಲು ಸಾಧ್ಯವಾಗಿಲ್ಲ. ಮುಂದಿನ 20 ದಿನದೊಳಗೆ ಕನಿಷ್ಠ 7 ಸಾವಿರ ಕಿಲೋ ಲೀ. ಸೀಮೆಎಣ್ಣೆಯನ್ನು ಪೂರೈಸದಿದ್ದರೆ ಗಂಗೊಳ್ಳಿಯ ನಾಡದೋಣಿ ಮೀನುಗಾರರು ಸಂಕಲ್ಪ ಸಾಧನ ಸಭೆಯ ತೀರ್ಮಾನದಂತೆ ನೋಟಾ ಅಭಿಯಾನವನ್ನು ಆರಂಭಿಸಲಿದ್ದಾರೆ. ಅದಕ್ಕೂ ಮೊದಲು ಕರಾವಳಿ ಜಿಲ್ಲೆಗಳ ಎಲ್ಲ ಶಾಸಕರಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು. ಅಭಿಯಾನವನ್ನು ಕರಾವಳಿಯ 3 ಜಿಲ್ಲೆಗಳಿಗೂ ವಿಸ್ತರಿಸಿ ಮೀನುಗಾರರನ್ನು ಒಗ್ಗೂಡಿಸಿ, ಹೋರಾಟ ನಡೆಸಲಾಗುವುದು ಎಂದು ಗಂಗೊಳ್ಳಿ ವಲಯದ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ್ ಖಾರ್ವಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಉದಯವಾಣಿ ವರದಿ
ಸಕಾಲದಲ್ಲಿ ಸೀಮೆಎಣ್ಣೆ ಪೂರೈಕೆ ಮಾಡದಿರುವ ಬಗ್ಗೆ, ಇದರಿಂದ ಉತ್ತಮ ಸೀಸನ್ ಇದ್ದರೂ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದಿರುವ ಕುರಿತಂತೆ “ಉದಯವಾಣಿ’ಯು ನಿರಂತರವಾಗಿ ವಿಶೇಷ ವರದಿ ಪ್ರಕಟಿಸಿತ್ತು.