Advertisement

T20 World Cup ಗೆದ್ದ ಟೀಮ್ ಇಂಡಿಯಾ; ವ್ಯೂಹದೊಳಗೆ ಸಿಲುಕಿ ಸೋತ ದಕ್ಷಿಣ ಆಫ್ರಿಕಾ

11:37 PM Jun 29, 2024 | Team Udayavani |

ಬಾರ್ಬಡೋಸ್ : ಇಲ್ಲಿನ ಬ್ರಿಡ್ಜ್‌ಟೌನ್ ಕೆನ್ಸಿಂಗ್ಟನ್ ಓವಲ್ ನಲ್ಲಿ ನಡೆದ T 20 ವಿಶ್ವಕಪ್ ಫೈನಲ್ ಅತ್ಯಂತ ರೋಮಾಂಚನಕಾರಿಯಾಗಿ ಸಾಗಿದ ರೋಚಕ ಹಣಾಹಣಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಗೆಲ್ಲಬಹುದಾದ ಪಂದ್ಯ ಕಳೆದುಕೊಂಡ ದಕ್ಷಿಣ ಆಫ್ರಿಕಾ ಮತ್ತೆ ಚೋಕರ್ಸ್ ಪಟ್ಟ ತನ್ನದಾಗಿಸಿಕೊಂಡಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭಿಕ ಆಘಾತ ಅನುಭವಿಸಿತು. 4 ರನ್ ಗಳಿಸಿದ್ದ ರೀಜಾ ಹೆಂಡ್ರಿಕ್ಸ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. 4 ರನ್ ಗಳಿಸಿದ್ದ ನಾಯಕ ಐಡೆನ್ ಮಾರ್ಕ್ರಾಮ್ ಅವರು ಅರ್ಷದೀಪ್ ಸಿಂಗ್ ಎಸೆದ ಚೆಂಡನ್ನು ವಿಕೆಟ್ ಕೀಪರ್ ಪಂತ್ ಕೈಗಿತ್ತು ನಿರ್ಗಮಿಸಿದರು.

ತಾಳ್ಮೆಯ ಆಟವಾಡಿದ ಕ್ವಿಂಟನ್ ಡಿ ಕಾಕ್ 39(31 ಎಸೆತ) ರನ್ ಗಳಿಸಿದ್ದ ವೇಳೆ ಕ್ಯಾಚಿತ್ತು ನಿರ್ಗಮಿಸಿದರು. ಟ್ರಿಸ್ಟಾನ್ ಸ್ಟಬ್ಸ್ 31(21 ಎಸೆತ) ಅವರನ್ನು ಅಕ್ಷರ್ ಪಟೇಲ್ ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್ ಗೆ ಕಳುಹಿಸಿದರು.

ಅಬ್ಬರಿಸಿದ ಹೆನ್ರಿಚ್ ಕ್ಲಾಸೆನ್ 27 ಎಸೆತಗಳಲ್ಲಿ52 ರನ್ ಚಚ್ಚಿದರು 2 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಿದರು.

Advertisement

ಕೊನೆಯ ಓವರ್ ನಲ್ಲಿ ದಕ್ಷಿಣ ಆಫ್ರಿಕಾಕ್ಕೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಸಾಹಸಮಯ ಅಮೋಘ ಕ್ಯಾಚ್ ಪಡೆದರು.21 ರನ್ ಗಳಿಸಿದ್ದ ಮಿಲ್ಲರ್ ಪೆವಿಲಿಯನ್ ಗೆ ಮರಳಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು.ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು.ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. 8 ವಿಕೆಟ್ ನಷ್ಟಕ್ಕೆ 169 ರನ್ ಮಾತ್ರ ಗಳಿಸಿ ಸೋಲು ಅನುಭವಿಸಿತು.

ಬಿಗಿ ದಾಳಿ ನಡೆಸಿದ ಬುಮ್ರಾ ಪ್ರಮುಖ ಎರಡು ವಿಕೆಟ್ ಪಡೆದರು. ಕೊನೆಯ ಓವರ್ ನಿಯಂತ್ರಿಸಿ ಹಾರ್ದಿಕ್ ಪಾಂಡ್ಯಾ ಕೂಡ ಗೆಲುವಿನ ಹೀರೋ ಎನಿಸಿಕೊಂಡರು.

ಆಧಾರವಾದ ಕೊಹ್ಲಿ

ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕೊಹ್ಲಿ 76(59 ಎಸೆತ) ರನ್ ಗಳಿಸಿ ಸಮಯೋಚಿತ ಆಟವಾಡಿದರು. 34 ಕ್ಕೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ತಂಡಕ್ಕೆ ನೆರವಾದರು. ರೋಹಿತ್ ಶರ್ಮ 9, ಪಂತ್ ಶೂನ್ಯಕ್ಕೆ ಔಟಾದರೆ, ಸೂರ್ಯಕುಮಾರ್ ಯಾದವ್ 3 ರನ್ ಗೆ ಮರಳಿದರು. ಅಕ್ಷರ್ ಪಟೇಲ್ 47(31 ಎಸೆತ) ಗಳಿಸಿದ್ದ ವೇಳೆ ರನ್ ಔಟಾದರು. ಶಿವಂ ದುಬೆ 27(16 ಎಸೆತ) ಕೊಡುಗೆ ನೀಡಿದರು. ಹಾರ್ದಿಕ್ ಪಂದ್ಯ ಔಟಾಗದೆ 5 ರನ್ , ರವೀಂದ್ರ ಜಡೇಜ 2 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ನೋರ್ಟ್ಜೆ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರು. ಮಾರ್ಕೊ ಜಾನ್ಸೆನ್ ಮತ್ತು ರಬಾಡಾ ತಲಾ 1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next