Advertisement
ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಶನಿವಾರ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಮಾತನಾಡಿ, ನಮ್ಮಲ್ಲಿ ಪ್ರಾಮಾಣಿಕ ಕಾರ್ಯಕರ್ತರ ತಂಡ ಇದೆ. ನಮ್ಮ ಒಬ್ಬಬ್ಬ ಕಾರ್ಯಕರ್ತ ತಾನೇ ಶಾಸಕ ಎನ್ನುವ ರೀತಿ ಕೆಲಸ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರಿಬ್ಬರೂ ಒಂದಾಗಿದ್ದಾರೆ ಎಂಬ ಬಗ್ಗೆ ಗೊಂದಲ ನಮ್ಮ ಕಾರ್ಯಕರ್ತರಲ್ಲಿ ಇತ್ತು. ಆದರೆ ಅದರಿಂದ ಅವರಿಗೆ ಏನು ಪ್ರಯೋಜನವಾಗಿಲ್ಲ ಎಂದರು.
ಇವರ ಕಾಲದಲ್ಲಿ ಕೇವಲ 3 ರಿಂದ 4 ಗಂಟೆ ಕರೆಂಟ್ ಕೊಡ್ತಾ ಇದ್ರೂ ಈಗ ಉಚಿತ ಕರೆಂಟ್ ಕೊಡ್ತಾರಂತೆ ಎಂದು ಲೇವಡಿ ಮಾಡಿದರು. ಮಹಿಳೆಯರಿಗೆ 2 ಸಾವಿರ ಕೊಡುತ್ತೇವೆ ಎಂದು ಹೇಳಿ ಅತ್ತೆ – ಸೊಸೆಗೆ ಜಗಳ ಹಚ್ಚಿ ಹಾಕಿದ್ದಾರೆ. ಕುಟುಂಬ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಬಸ್ ಟಿಕೆಟ್ ಕೊಡುವುದಿಲ್ಲ ಎಂದು ಮಹಿಳೆಯರು ಗಲಾಟೆ ಮಾಡುತ್ತಿದ್ದಾರೆ. ಅಕ್ಕಿಯ ದುಡ್ಡನ್ನು ಕೇಂದ್ರ ಸರ್ಕಾರ ಕೊಡುತ್ತದೆ. ಇವರೇನು ಉಚಿತ ಕೊಡುವುದು. ಕಾಂಗ್ರೆಸ್ ನವರು ಆದಷ್ಟು ಬೇಗ ಗ್ಯಾರೆಂಟಿ ಕೊಡದಿದ್ದರೆ ಜನರು ಬೀದಿಗೆ ಇಳಿಯುತ್ತಾರೆ. ಬೇರೆಯವರ ಜೊತೆ ಜಗಳ ಮಾಡುವ ಬದಲು ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ರವರ ಜೊತೆ ಜಗಳ ಮಾಡಿ ಎಂದರು.
Related Articles
Advertisement
ಗೋ ಹತ್ಯೆ ನಿಷೇಧ ಮಾಡಿರುವುದನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಹಸುವಿಗೆ ನಾವು ತಾಯಿ ಸ್ಥಾನ ಕೊಡುತ್ತೇವೆ. ವೋಟ್ ಬ್ಯಾಂಕ್ ಗಾಗಿ ಹಸುಗಳನ್ನು ಕಡಿಯಲು ಅವಕಾಶ ಕೊಡುತ್ತಿದ್ದಾರೆ.ಅಕ್ರಮವಾಗಿ ಗೋಸಾಗಾಣಿಕೆ ನಡೆಯುತ್ತಿತ್ತು. ಅಂತವರನ್ನು ಹಿಡಿಯಲು ಪೊಲೀಸ್ ನವರಿಗೆ ಫ್ರೀ ಅವಕಾಶ ಮಾಡಿಕೊಟ್ಟಿದ್ದೆ. ಆದರೆ ಈಗ ಪೊಲೀಸರನ್ನು ಕರೆಸಿ ವಾರ್ನಿಂಗ್ ಮಾಡುತ್ತಾರೆ ಎಂದರು.
ಇನ್ನು ಮತಾಂತರ ನಿಷೇಧ ಕಾಯಿದೆ ವಾಪಾಸ್ ತೆಗೆಯುತ್ತೇವೆ ಎಂದು ಹೇಳಿದ್ದಾರೆ. ಸಂವಿಧಾನದಲ್ಲಿ ಅವಕಾಶ ಇದೆ. ಆದರೆ ಒತ್ತಾಯ ಮಾಡುವಂತಿಲ್ಲ. 30 ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಮಾಡಿಸಿದ್ದರು. ಕಾಂಗ್ರೆಸ್ ನವರು ಅಭಿವೃದ್ಧಿ ಯೋಜನೆಗಳನ್ನು ಮಾಡುವುದನ್ನು ಬಿಟ್ಟು ಹಿಂದೂ ಧರ್ಮದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಪಿಎಸ್ಐ ಸ್ಕ್ಯಾಮ್ ಬಗ್ಗೆ ಪ್ರಿಯಾಂಕಾ ಖರ್ಗೆ ಮಾತನಾಡುತ್ತಾರೆ. ಇದರ ಬಗ್ಗೆ ನಾನೇ ತನಿಖೆ ಮಾಡಿಸಿದ್ದು, RD ಪಾಟೀಲ್ ಇವರ ಮನೆಯಲ್ಲೆ ಇದ್ದವನು. ಪ್ರಿಯಾಂಕಾ ಖರ್ಗೆ ವಿಧಾನಸಭೆಯ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಳಿ ಚಾಲೆಂಜ್ ಮಾಡುತ್ತೇನೆ ನಿಮ್ಮದೇ ಸರ್ಕಾರ ಇದೆ ಅಲ್ವಾ ತನಿಖೆ ನೆಡೆಸಿ ಎಂದರು.
ಇನ್ನು ತಾಲೂಕಿನಲ್ಲಿ ಒಂದು ಸಾವಿರ ರಸ್ತೆಗಳನ್ನು ಮಾಡಿಸಿದ್ದೇನೆ. ಅವರ ಕಾಲದಲ್ಲಿ ಕೇವಲ ಎಸ್ ಸಿ ಎಸ್ ಟಿ ಕಾಲೋನಿಗೆ ಮಾತ್ರ ರಸ್ತೆ ಅಂದುಕೊಂಡಿದ್ದರು. ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕಾಲು ಸಂಕಕ್ಕಾಗಿ ನೂರು ಕೋಟಿ ಹಣ ನೀಡಿದ್ದೇವೆ. ನೂರು ಕಾಲು ಸಂಕಗಳು ನನ್ನ ಕ್ಷೇತ್ರದಲ್ಲಿ ಮಾಡಿಸಿದ್ದೇನೆ. ನನ್ನ ಗೆಲುವಿಗೆ ಪಕ್ಷದ ವಿವಿಧ ಮೋರ್ಚಾ ಗಳು ಕಾರ್ಯಕರ್ತರು ಶ್ರಮಿಸಿದ್ದಾರೆ. ಇಲ್ಲಿ ಎಂ ಎಲ್ ಎ ನಾನು, ಕಾನೂನು ಪ್ರಕಾರ ಕೆಲಸ ಮಾಡಬೇಕು ನಾನು ಇಲ್ಲಿ ಕೋಮು ದ್ವೇಷ ಮಾಡಲಿಲ್ಲ. ಎಲ್ಲಾ ಧರ್ಮದ ಜನರ ಕೆಲಸ ಮಾಡಿ ಕೊಟ್ಟಿದ್ದೇನೆ. ಅವರು ಒಂದು ಸಮುದಾಯದ ವಿರುದ್ಧ ಹೋಗುತ್ತಿದ್ದಾರೆ. ಆದರೆ ನನ್ನ ಕ್ಷೇತ್ರದ ಜನತೆ ಜೊತೆ ನಾನು ಇರುತ್ತೇನೆ ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ನಾನು ರಾಜಕಾರಣವನ್ನು ವೃತ್ತಿಯಾಗಿ ಮಾಡಿಲ್ಲ ವ್ರತವಾಗಿ ಸ್ವೀಕಾರ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ನವೀನ್ ಹೆದ್ದೂರು, ನಾಗರಾಜ್ ಶೆಟ್ಟಿ, ಬೇಗುವಳ್ಳಿ ಕವಿರಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.