ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ಥಿರತೆ ಪ್ರಯತ್ನ, ಕಾಂಗ್ರೆಸ್ ನಾಯಕರ ಬಹಿರಂಗ ಹೇಳಿಕೆಗಳು, ಬಿಜೆಪಿಯ ಆಪರೇಷನ್ ಕಮಲ ಯತ್ನದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಮೊದಲಿಗೆ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ, ಸಭೆಯಲ್ಲಿ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದರು. ಕಾಂಗ್ರೆಸ್ ಸಚಿವರು, ಶಾಸಕರು, ಮಾಜಿ ಸಚಿವರು ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಏನಾದರೂ ಸಮಸ್ಯೆ ಇದ್ದರೆ ನೇರವಾಗಿ ನನ್ನನ್ನು ಬಂದು ಕೇಳಬಹುದು. ಅದು ಬಿಟ್ಟು ಬಹಿರಂಗ ಹೇಳಿಕೆ ಕೊಟ್ಟರೆ ಸರ್ಕಾರದ ಬಗ್ಗೆ ಜನರಿಗೆ ಯಾವ ರೀತಿಯ ಸಂದೇಶ ಹೋಗುತ್ತದೆ. ನಾನೇನಾದರೂ ಮುಖ್ಯಮಂತ್ರಿ ಆಗಲೇ ಬೇಕು ಎಂದು ಯಾರ ಮನೆ ಬಾಗಿಲಿ ಗಾದರೂ ಹೋಗಿದ್ದೇನಾ? ಎಂದು ಪ್ರಶ್ನಿಸಿದರು ಎಂದು ಹೇಳಲಾಗಿದೆ.
ನನ್ನ ನೋವು ನನಗೇ ಗೊತ್ತು: ಬಳಿಕ, ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ನಾನು ಅನುಭವಿಸುತ್ತಿರುವ ನೋವು ನನಗೆ ಗೊತ್ತು. ಎಷ್ಟು ದಿನ ಅಂತ ನೋವು ಸಹಿಸಿಕೊಂಡಿರಲಿ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದದ್ದು ನಿಜ ಎಂದರು. ಒಂದು ಕಡೆ ಬಿಜೆಪಿ ಆಪರೇಷನ್, ದೀಪಾವಳಿ, ಹೊಸ ವರ್ಷ, ಸಂಕ್ರಾಂತಿಗೆ ಡೆಡ್ಲೈನ್ ಕೊಟ್ಟಾಯ್ತು, ಇದೀಗ ಫೆ.6ಕ್ಕೆ ಅದೆಂಥಧ್ದೋ ಕ್ರಾಂತಿಯಂತೆ. ಪ್ರತಿ ದಿನ ಮಾಧ್ಯಮಗಳಲ್ಲಿ ಸರ್ಕಾರಕ್ಕೆ ಡೆಡ್ಲೈನ್ ಅಂತ ಬಂದರೆ ಅಧಿಕಾರಿಗಳು ನಮ್ಮ ಮಾತು ಕೇಳ್ತಾರಾ? ನನ್ನ ನೋವು ಯಾರಿಗೆ ಹೇಳಿಕೊಳ್ಳಲಿ. ಇಷ್ಟಾದರೂ ನೋವನ್ನೆಲ್ಲಾ ಮರೆತು ನಾಡಿನ ಜನತೆಯ ಕಷ್ಟ ಬಗೆಹರಿಸಲು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ನಮ್ಮದೇ ಪಕ್ಷದ ಮುಖಂಡರು ಮುಖ್ಯಮಂತ್ರಿ ಕೈಗೆ ಸಿಗುತ್ತಿಲ್ಲ ಎಂದು ವಾಟ್ಸ್ ಆ್ಯಪ್ ಸಂದೇಶ ಕಳುಹಿ ಸುತ್ತಾರೆ. ವರ್ಗಾವಣೆಗಾಗಿ ಅರ್ಜಿ ತೆಗೆದುಕೊಂಡು ಬರುವವರಿಗೆ ನಾನು ಕೈಗೆ ಸಿಗಬೇಕಾ? ಎಂದ ಪ್ರಶ್ನಿಸಿದರು. ನಮ್ಮ ಮಿತ್ರ ಪಕ್ಷದ ಶಾಸಕರು ನನ್ನ ಮೇಲೆ ಒತ್ತಡ ತಂದು ಕೆಲವು ಆದೇಶಗಳನ್ನು ಮಾಡಿಕೊಳ್ಳು ತ್ತಿದ್ದಾರೆ. ಆದರೂ, ಬೆಂಗಳೂರಿನಲ್ಲಿ ಕೆಲಸವೇ ಆಗ್ತಿಲ್ಲ ಎಂದು ಒಬ್ಬರು ಶಾಸಕರು ಹೇಳಿದರು. ಒಂದು ಲಕ್ಷ ಕೋಟಿ ರೂ.ಗಳ ಕೆಲಸದ ಆದೇಶ ಆಗಿದೆ. 12 ವರ್ಷದಿಂದ ಆಗದ ಕೆಲಸ ಈಗ ಪ್ರಾರಂಭವಾಗಿದೆ. ಈಗ ಏನೂ ಆಗಿಲ್ಲ ಅಂತಾರೆ ಎಂದು ಸೋಮಶೇಖರ್ ಹೇಳಿಕೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಈಗಲೇ ಹಾಲು ಖರೀದಿ ಮಾಡಲು ಆಗುತ್ತಿಲ್ಲ. 1200 ಕೋಟಿ ರೂ.ಸಬ್ಸಿಡಿ ಬೇರೆ ಕೊಡಬೇಕು. ಹಾಲು ಹೆಚ್ಚಾಗಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಕುಡಿಯಲು ಕೊಡುತ್ತಿದ್ದೇವೆ. ಈಗ ಮತ್ತೆ ಪಶುಭಾಗ್ಯ ಕೊಡಿ ಎಂದು ಶಾಸಕರು ಕೇಳುತ್ತಿದ್ದಾರೆ ಎಂದು ಹಿಂದಿನ ಸರ್ಕಾರದ ಪಶುಭಾಗ್ಯ ಯೋಜನೆಗೂ ಬೇಸರ ವ್ಯಕ್ತಪಡಿಸಿದರು.