ಹಾನಗಲ್ಲ: ನಮ್ಮ ಅಧಿ ಕಾರಾವ ಧಿಯಲ್ಲಿ ಹಾನಗಲ್ಲ ಕ್ಷೇತ್ರಕ್ಕೆ 2400 ಕೋಟಿ ರೂ. ಕೊಟ್ಟಿದ್ದೇನೆ. ಆಗ ಎಷ್ಟು ಕೆಲಸ ಆಗಿವೆ ಎನ್ನುವುದನ್ನು ಜನ ಹೇಳುತ್ತಿದ್ದಾರೆ. ನಾನೂ ಲೆಕ್ಕ ಕೊಡಲು ಸಿದ್ಧ. ಸಿಎಂ ಬೊಮ್ಮಾಯಿ ಈ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎನ್ನುವುದನ್ನು ಹೇಳತೀರಾ? ಒಂದೇ ವೇದಿಕೆಗೆ ನೀವೂ ಬನ್ನಿ, ನಾನೂ ಬರ್ತಿàನಿ. ಜನರಿಗೆ ಸತ್ಯ ಗೊತ್ತಾಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಹಾನಗಲ್ಲ ಉಪ ಚುನಾವಣೆ ಹಿನ್ನೆಲೆಯಲ್ಲಿ ನರೇಗಲ್, ಆಡೂರು, ಅಕ್ಕಿಆಲೂರು ಮತ್ತು ಹಿರೂರು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು. 2018ರಲ್ಲಿ ಉಂಟಾದ ಪ್ರವಾಹದಿಂದ ಕಂಚಿನೆಗಳೂರು ಗ್ರಾಮದಲ್ಲಿ ಒಡ್ಡು ಒಡೆದು ಹೋಗಿ ಕೆರೆಗೆ ಹೋಗಬೇಕಿದ್ದ ನೀರು ನದಿ ಸೇರುತ್ತಿದೆ. 3ವರ್ಷ ಕಳೆದರೂ ಒಂದು ಒಡ್ಡು ಸರಿಪಡಿಸಲು ನಿಮ್ಮಿಂದ ಆಗಿಲ್ವಲ್ರಿ, ಸುಳ್ಳು ಹೇಳ್ಳೋಕೆ ನಾಚಿಕೆ ಆಗಲ್ವಾ? ಎಂದು ಕಿಡಿಕಾರಿದರು.
ಲಾಭದಲ್ಲಿದ್ದ ಸಂಗೂರು ಶುಗರ್ ಫ್ಯಾಕ್ಟರಿ ನಷ್ಟದ ಹಾದಿಗೆ ಹೋಗಿದ್ದು ಏಕೆ ಎನ್ನುವುದನ್ನು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೇಳಬೇಕು. ಕಾರ್ಖಾನೆ ದಿವಾಳಿ ಸಂಬಂಧ 1959ರ ಸಹಕಾರಿ ಕಾಯ್ದೆಯಡಿ ತನಿಖೆ ನಡೆದು, ಲೂಟಿ ಹೊಡೆದ 33ಲಕ್ಷ ರೂ.ಅನ್ನು ಮರು ಪಾವತಿ ಮಾಡಬೇಕು ಎಂದು ಆದೇಶ ನೀಡಿರುವುದನ್ನು ಮರೆತುಬಿಟ್ಟರಾ ಸಜ್ಜನರ್? ಎಂದು ಹರಿಹಾಯ್ದ ಸಿದ್ದರಾಮಯ್ಯ, ಫ್ಯಾಕ್ಟರಿ ಅಷ್ಟೇ ಅಲ್ಲದೇ, ಗೌರಾಪುರ ಗುಡ್ಡವನ್ನೂ ಸಹ ನುಂಗಿ ನೀರು ಕುಡಿದ ಶಿವರಾಜ ಸಜ್ಜನರ್ ಸಜ್ಜನ ಅಲ್ಲ, ದುರ್ಜನ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಇಂಥವರು ಗೆದ್ದರೆ ಅನುದಾನ ಸದ್ಬಳಕೆಯಾಗಲು ಸಾಧ್ಯವೇ? ಕ್ಷೇತ್ರ ಅಭಿವೃದ್ಧಿ ಹೊಂದುವುದು ಸಾಧ್ಯವೇ? ಇಂಥ ನುಂಗಣ್ಣರಿಂದ ಕ್ಷೇತ್ರ ಉಳಿಯುತ್ತಾ ಎಂದು ಪ್ರಶ್ನಿಸಿದರು.
ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟೋದು ಎಷ್ಟು ಸತ್ಯವೋ ಹಾನಗಲ್ಲ ಉಪ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಗೆಲ್ಲೋದು ಅಷ್ಟೇ ಸತ್ಯ. ಹಿಂದಿನ ಚುನಾವಣೆಯಲ್ಲಿ ಮಾನೆ ಸೋತರೂ ಮನೆ ಸೇರಲಿಲ್ಲ. ನಿರಂತರ ಜನರ ಕಷ್ಟ-ಸುಖಕ್ಕೆ ಸ್ಪಂದಿಸಿ, ಕೈಲಾದಷ್ಟು ಸಹಾಯ ಮಾಡಿದ್ದಾರೆ. ಈ ಉಪ ಚುನಾವಣೆ ನಿರೀಕ್ಷೆ ಮಾಡಿ ಅವರು ಜನರ ಸೇವೆ ಮಾಡದೇ, ಅದು ನನ್ನ ಧರ್ಮ, ಕರ್ತವ್ಯ ಎಂದು ನಮ್ರವಾಗಿ ತಿಳಿದು ಮಾಡಿದ್ದಾರೆ. ಅವರ ಮೇಲೆ ಯಾವ ಕಪ್ಪು ಚುಕ್ಕೆಯೂ ಇಲ್ಲ ಎಂದರು.
14ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ರಾಜ್ಯದ ತೆರಿಗೆ ಪಾಲು 38ಸಾವಿರ ಕೋಟಿ ರೂ. ಬರುತ್ತಿತ್ತು. ಈಗದು 20ಸಾವಿರ ಕೋಟಿ ರೂ.ಗೆ ಬಂದು ನಿಂತಿದೆ. ಕೇಂದ್ರದ ಸಹಾಯಧನ, ಜಿಎಸ್ಟಿ ಪರಿಹಾರ ಹಣ ಇವೆಲ್ಲ ಕಡಿಮೆಯಾಗಿ ರಾಜ್ಯಕ್ಕೆ ಕನಿಷ್ಟ 40ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಇದರ ಬಗ್ಗೆ ಒಮ್ಮೆಯಾದರೂ ಬಾಯಿಬಿಟ್ಟು ಮಾತನಾಡಿದ್ದಾರಾ? ಇವರ ಹೇಡಿತನದಿಂದ ಕೇಂದ್ರದ ಅನುದಾನ ಸಿಗದಂಥ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಜನರ ಸುಲಿಗೆ ಮಾಡುತ್ತಿದ್ದಾರೆ. ಎಲ್ಲ ಜೇಬಿಗೆ ಕೈ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ
ಮನೋಹರ ತಹಶೀಲ್ದಾರ್, ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿದರು.