Advertisement

ನನ್ನ ಕ್ಷೇತ್ರ ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ

03:45 AM Mar 09, 2017 | Harsha Rao |

ಜೆಡಿಎಸ್‌ನಲ್ಲಿ ಸ್ನೇಹಿತರಿದ್ದಾರೆ ನಿಜ. ಹಾಗಂತ ಆ ಪಕ್ಷ ಸೇರಲ್ಲ
ಜನತಾ ಪರಿವಾರದ ಕಾಲದಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಸತೀಶ್‌ ಜಾರಕಿಹೊಳಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಪ್ರಭಾವಿ ಮುಖಂಡ. ಸಿದ್ದರಾಮಯ್ಯ ಅಹಿಂದ ಹೋರಾಟ ನಡೆಸಿದಾಗಲೂ ಸಾಥ್‌ ನೀಡಿ ಅವರೊಂದಿಗೆ ಕಾಂಗ್ರೆಸ್‌ ಸೇರಿ ಸರ್ಕಾರ ರಚನೆ ನಂತರ ಸಚಿವ ಸ್ಥಾನವನ್ನೂ ಪಡೆದಿದ್ದರು. ನಂತರದ ದಿನಗಳಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಬೇಸರದಿಂದ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದು ಹೌದು. ಆ ಬಳಿಕ ಸಚಿವ ಸ್ಥಾನವನ್ನೂ ಕಳೆದುಕೊಂಡರು. ಇದೀಗ ಅವರ ಸಹೋದರ ರಮೇಶ್‌ ಜಾರಕಿಹೊಳಿ ಸಂಪುಟದಲ್ಲಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ಅವರ ಕುಟುಂಬದಲ್ಲಿ ಸಹೋದರರ ನಡುವೆಯೇ ರಾಜಕೀಯ ಜಿದ್ದಾಜಿದ್ದಿ ನಡೆದಿದೆ.  ಇತ್ತೀಚೆಗೆ ರಮೇಶ್‌ಜಾರಕಿಹೊಳಿ, ಲಖನ್‌ ಜಾರಕಿಹೊಳಿ ಪರವಾಗಿ ಸತೀಶ್‌ ಜಾರಕಿಹೊಳಿ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂದು ಬಹಿರಂಗವಾಗಿ ಘೋಷಿಸಿದರು. ಇದಕ್ಕೆ ಸತೀಶ್‌ ಜಾರಕಿಹೊಳಿ ತೀಕ್ಷ್ಣತಿರುಗೇಟು ಸಹ ನೀಡಿದರು. ಸತೀಶ್‌ ಹಾಗೂ ರಮೇಶ್‌ ನಡುವೆ ಜಿಲ್ಲಾ ರಾಜಕಾರಣದ ಮೇಲೆ ಹಿಡಿತ ಸಾಧಿಸುವ ಕಸರತ್ತು ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.  ಈ ಹಿನ್ನೆಲೆಯಲ್ಲಿ ಸತೀಶ್‌ ಜಾರಕಿಹೊಳಿ ಅವರೊಂದಿಗೆ “ಉದಯವಾಣಿ’ ನೇರಾ ನೇರಾ ಮಾತಿಗಿಳಿದಾಗ…

– ಸರ್‌, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನೀವು ಕ್ಷೇತ್ರ ಬದಲಾಯಿಸುತ್ತೀರಂತೆ? 
ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಈ ಬಗ್ಗೆ ಯಾಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ನಾನು ಈಗಾಗಲೇ ಶಾಸಕನಾಗಿರುವವನು. ಈ ಕ್ಷೇತ್ರ ಬಿಟ್ಟು ಬೇರೆ ಕಡೆಗೆ ಯಾಕೆ ಹೋಗಲಿ. ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ಕೊಡುತ್ತಾರೆ ಎಂಬ ನಂಬಿಕೆ ಇದೆ. ಯಮಕನಮರಡಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

– ಬೆಳಗಾವಿ ಜಿಲ್ಲೆ ಬಿಟ್ಟು ರಾಯಚೂರು ಜಿಲ್ಲೆ ಕಡೆ ಮುಖ ಮಾಡಿದ್ದೀರಂತ ಬೇರಾರು ಹೇಳಿದ್ದಲ್ಲ, ನಿಮ್ಮ ಸಹೋದರನೇ ಹೇಳಿದ್ದಾರಲ್ಲಾ ? 
ನನ್ನ ಕ್ಷೇತ್ರ ಬದಲಾಯಿಸಲು ಅವರು ಯಾರು? ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ಸಚಿವರು ಅವರ ಕೆಲಸ ಮಾಡಿದರೆ ಸಾಕು. ನನ್ನ ಕ್ಷೇತ್ರ ಬದಲಾವಣೆಯ ಬಗ್ಗೆ ಅವರು ಮಾತನಾಡುವ ಅಗತ್ಯವಿಲ್ಲ. ನನ್ನ ಬಗ್ಗೆ ಅವರೇಕೆ ಈ ರೀತಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲಾ. ನನ್ನ ಕ್ಷೇತ್ರದ ವಿಷಯದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಆದರೆ, ನಾನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ. ನಾನೇಕೆ ರಾಯಚೂರಿನಿಂದ ಸ್ಪರ್ಧಿಸಲಿ, ನನಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಸ್ತಿ ಇದೆ. ಹಾಗಂತ ನಾನು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೋದಿಕ್ಕೆ ಆಗೋದಿಲ್ಲ. 

– ರಾಯಚೂರಿನಲ್ಲಿ ಮನೆ ಕಟ್ಟಿಸುತ್ತಿದ್ದೀರಂತಲ್ಲಾ ?

Advertisement

ರಾಯಚೂರಿನಲ್ಲಿ ಕಟ್ಟಿಸುತ್ತಿರುವ ಮನೆ ನನ್ನದಲ್ಲ. ನನ್ನ ಅಳಿಯನದು. ನಮ್ಮ ಸಂಬಂಧಿಕರ ಮನೆ ಕಟ್ಟಿಸುವಲ್ಲಿಯೂ ನಾನು ಹೋಗಬಾರದಾ? ಮನೆ ಕಟ್ಟಿಸೋದು ವಾಸ ಇರೋಕೆ. ಮನೆ ಕಟ್ಟಿಸಿದಾಕ್ಷಣ ಅಲ್ಲಿಗೆ ರಾಜಕೀಯ ಮಾಡೋಕೆ ಹೋಗ್ತಿàವಿ ಅಂತಲ್ಲಾ. ಕ್ಷೇತ್ರ ಬದಲಾವಣೆ ವದಂತಿಗೂ ರಾಯಚೂರಿನಲ್ಲಿ ನಿರ್ಮಾಣವಾಗುತ್ತಿರುವ ನನ್ನ ಅಳಿಯನ ಮನೆಗೂ, ನಾನು ಕ್ಷೇತ್ರ ಬದಲಾವಣೆಗೂ ಯಾವುದೂ ಸಂಬಂಧ ಇಲ್ಲ. 

– ನಿಮ್ಮನ್ನ ಸಚಿವ ಸ್ಥಾನದಿಂದ ಸಿಎಂ ಯಾಕೆ ಬಿಟ್ಟರು, ನಿಮ್ಮ ಕುಟುಂಬದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಒಪ್ಪಂದ ಏನಾದ್ರೂ ಆಗಿತ್ತಾ ?
ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ. ನಾವು ಇಪ್ಪತ್ತು ವರ್ಷಗಳಿಂದಲೂ ಎಲ್ಲರೂ ಬೇರೆ ಬೇರೆಯಾಗಿಯೇ ಜೀವನ ನಡೆಸುತ್ತಿದ್ದೇವೆ. ರಾಜಕೀಯದಲ್ಲಿ ನನ್ನ ಸಿದ್ಧಾಂತವೇ ಬೇರೆ ರಮೇಶ್‌ ಸಿದ್ಧಾಂತವೇ ಬೇರೆ. ಮಂತ್ರಿ ಸ್ಥಾನದಿಂದ ನಾನೇ ಹೊರಗೆ ಬರಲು ನಿರ್ಧರಿಸಿದ್ದೆ. ಅದನ್ನು ಮುಖ್ಯಮಂತ್ರಿಗೆ ಮೊದಲೇ ಹೇಳಿದ್ದೆ. ಅವರು ತಡವಾಗಿ ನನ್ನನ್ನು ಸಂಪುಟದಿಂದ ಕೈ ಬಿಟ್ಟರು. 

– ನಿಮಗೆ ಸಮಾಜ ಕಲ್ಯಾಣ ಇಲಾಖೆ ಸಿಗಲಿಲ್ಲ ಅನ್ನೋ ಕಾರಣಕ್ಕೆ ನೀವು ಆಗ ಬೇಸರಗೊಂಡಿದ್ದಿರಿ ಅನ್ನೋ ಮಾತಿದೆಯಲ್ಲಾ ?
ನನಗೆ ಸಮಾಜ ಕಲ್ಯಾಣ ಇಲಾಖೆ ಮೇಲೆ ಆಸೆ ಇತ್ತು ನಿಜ. ಆದರೆ, ನಾನು ಮಂತ್ರಿಯಾಗಿ ಕೆಲಸ ಮಾಡುವುದಕ್ಕಿಂತ ಹೊರಗಿದ್ದು ಸಮಾಜ ಸೇವೆ ಮಾಡಬೇಕೆಂದು ಅಬಕಾರಿ ಇಲಾಖೆಯನ್ನೇ ಬಿಟ್ಟು ಹೊರ ಬಂದಿದ್ದೇನೆ. ನಾನು ಸಮಾಜದಲ್ಲಿ ಮೂಢ ನಂಬಿಕೆ ತೊಲಗಿಸಿ, ಸಮಾಜದಲ್ಲಿ ಸಮಾನತೆ ಬರಬೇಕೆಂದು ಹೋರಾಟ ಮಾಡುತ್ತಿದ್ದೇನೆ. ಅಲ್ಲದೇ ಕ್ರೀಡೆ ನನ್ನ ನೆಚ್ಚಿನ ಕ್ಷೇತ್ರ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು  ಕ್ರೀಡಾ ಚಟುವಟಿಕೆಗಳು ನಡೆಸಿದ್ದೇನೆ. ಈಗ ನಮ್ಮ ಆರ್ಥಿಕ ಶಕ್ತಿ ಇದ್ದಷ್ಟು ಕೆಲಸ ಮಾಡುತ್ತಿದ್ದೇನೆ. ಮಂತ್ರಿಯಾಗಿದ್ದರೆ ಸಾಕಷ್ಟು ನಿರ್ಬಂಧಗಳಿರುತ್ತವೆ. ಹೀಗಾಗಿಯೇ ನಾನು ಮಂತ್ರಿ ಸ್ಥಾನದಿಂದ ಹೊರಗೆ ಬಂದು ಸಮಾಜ ಸೇವೆ ಮಾಡುವಲ್ಲಿ ಹೆಚ್ಚಿನ ಪ್ರಮಾಣ ತೊಡಗಿಸಿಕೊಂಡಿದ್ದೇನೆ. 

– ನಿಮ್ಮ ಸರ್ಕಾರವೇ ಮೂಢ ನಂಬಿಕೆ ಕಾಯಿದೆ ತರೋದಕ್ಕೆ ಹಿಂದೇಟು ಹಾಕುತ್ತಿದೆಯಲ್ಲಾ ?
ಮೂಢನಂಬಿಕೆ ಹೋಗಲಾಡಿಸುವ ಮೊದಲು ಸರ್ಕಾರ ಎಲ್ಲ ವರ್ಗ ಹಾಗೂ ಸಮಾಜದವರೊಂದಿಗೆ ಮುಕ್ತ ಚರ್ಚೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿಗೆ ಹೇಳಿದ್ದೇನೆ. ಮೂಲಭೂತವಾದಿಗಳು ಅಪಪ್ರಚಾರ ಮಾಡುತ್ತಲೇ ಇರುತ್ತಾರೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಸಾರ್ವಜನಿಕ ಚರ್ಚೆ ನಡೆಸಿ. ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೊಳಿಸಬೇಕಿದೆ. 

– ನಿಮ್ಮ ಕುಟುಂಬ ರಾಜಕಾರಣದ ಗೊಂದಲದಲ್ಲಿ  ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರ ಎಂಇಎಸ್‌ಗೆ ಹೋಗುವಂತಾಯ್ತು ಅಂತಾರೆ ?
ಹಾಗೇನೂ ಇಲ್ಲ . ನಮ್ಮ ಬಳಿ ಕನ್ನಡಿಗ ಕಾರ್ಪೊರೇಟರ್‌ಗಳ ಸಂಖ್ಯೆ ಕಡಿಮೆ ಇತ್ತು. ಕೇವಲ 33 ಜನ ಇಟ್ಟುಕೊಂಡು ನಾವು ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದರೆ, ಮೂವರು ಶಾಸಕರು ಮತ್ತು ಇಬ್ಬರು ಸಂಸದರು ಕನ್ನಡಿಗರ ಪರವಾಗಿ ಮತ ಹಾಕಲು ಸಿದ್ಧರಿದ್ದೆವು. ಆದರೆ, ಅವರು ನಮ್ಮನ್ನ ಸಭೆಗೆ ಆಹ್ವಾನಿಸದೇ ಪ್ರತ್ಯೇಕವಾಗಿ ಸಭೆ ನಡೆಸಿ ಎಂಇಎಸ್‌ನವರಿಗೆ ಅಧಿಕಾರ ದೊರೆಯುವಂತೆ ಮಾಡಲು ಕಾರಣರಾದರು. 

– ನಿಮ್ಮ ಸಹೋದರರ ಮುಸುಕಿನ ಗುದ್ದಾಟದಿಂದ ಸಮನ್ವಯ ಇರದ ಕಾರಣವೇ ಹಾಗಾಯ್ತಲ್ಲ?
ಇಲ್ಲ. ಅವಕಾಶ ಇತ್ತು. ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲು ಒಂದು ತಿಂಗಳ ಮುಂಚಿತವಾಗಿ ಎಲ್ಲರನ್ನು ಕರೆದು ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ. ಈ ಪರಿಸ್ಥಿತಿ ಬರುತ್ತಿರಲಿಲ್ಲ. ಜಿಲ್ಲಾ ಉಸ್ತುವಾರಿ 
ಸಚಿವರಿಗೆ ಅನುಭವ ಕಡಿಮೆ. ಅವರು ಅನುಭವದಿಂದ ಎಲ್ಲವನ್ನು ಕಲಿಯಬೇಕು. ನಾವೂ ಎರಡು ಬಾರಿ ಮಂತ್ರಿಯಾಗಿ ಸಾಕಷ್ಟು ಪಾಠ ಕಲಿತಿದ್ದೇವೆ.  ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ. ಇದನ್ನು ರಾಜ್ಯ ನಾಯಕರು ಗಮನಿಸಿ ಸರಿಪಡಿಸಬೇಕು. ನಾವು ಅವರ ವಿರುದ್ಧ ದೂರು ನೀಡುವ ಅಗತ್ಯವಿಲ್ಲ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಅವರದೇ ಆದ ಸುದ್ದಿ ಮೂಲಗಳಿರುತ್ತವೆ. 

– ಬೆಳಗಾವಿ ಜಿಲ್ಲೆಯಲ್ಲಿ ಎಲ್ಲರೂ ಸಿಂಡಿಕೇಟ್‌ ರಾಜಕಾರಣ ಮಾಡ್ತೀರಂತಲ್ಲಾ ಹೌದಾ ?
ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಸಹಕಾರಿ ಸಂಘಗಳು, ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಇದ್ದಾರೆ. ಸಂಘದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಸಿಂಡಿಕೇಟ್‌ ರಾಜಕಾರಣ ಚಾಲ್ತಿಯಲ್ಲಿದೆ. ಮೊದಲಿನಿಂದಲೂ ಅದು ಜೀವಂತವಾಗಿದ್ದು, ಮುಂದೆಯೂ ಮುಂದುವರೆಯುತ್ತದೆ.ಹಾಗಂತ ಪಕ್ಷ ರಾಜಕಾರಣ ಅಂತ ಬಂದಾಗ ನಾವೆಲ್ಲರೂ ನಮ್ಮ ಪಕ್ಷಗಳಿಗೆ ನಿಷ್ಠರಾಗಿ ಕೆಲಸ ಮಾಡ್ತಿವಿ. 

– ಕಾಂಗ್ರೆಸ್‌ ಪಕ್ಷದಲ್ಲಿ ರಾಜಾಧ್ಯಕ್ಷರ ಬದಲಾವಣೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ನೀವೇನಂತೀರಿ ?
ಪರಮೇಶ್ವರ್‌ ಅವರು ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ್ದಾರೆ. ಅವರನ್ನು ಬದಲಾಯಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಅವರೇ ಮುಂದುವರೆಯಲಿ ಅಂತ ಕೆಲವರು ಹೇಳುತ್ತಿದ್ದಾರೆ. ನಮಗೆ ಯಾರೇ ಅಧ್ಯಕ್ಷರಾಗಿ ಬಂದರೂ  ನಾನು ಕೆಲಸ ಮಾಡುತ್ತೇನೆ. ಪರಮೇಶ್ವರ್‌ ಅವರನ್ನೇ ಮುಂದುವರೆಸಿ ಕೆಲಸ ಮಾಡಲು ಹೇಳಿದರೆ, ಅವರೊಂದಿಗೆ ಕೆಲಸ ಮಾಡಲು ಸಿದ್ಧನಿದ್ದೇನೆ. ಅಧ್ಯಕ್ಷರು ಯಾರೇ ಆಗಿರಲಿ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನ ಇಲ್ಲ.

– ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ನಿಮ್ಮ ಪ್ರಕಾರ ಯಾರು ಮುಖ್ಯಮಂತ್ರಿಯಾಗಬೇಕು? 
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡೋರು ಶಾಸಕರು, ಅಂತಿಮವಾಗಿ ಹೈ ಕಮಾಂಡ್‌, ರಾಜ್ಯದಲ್ಲಿ ಎಲ್ಲ ವರ್ಗದವರಿಗೂ ಅಧಿಕಾರ ಸಿಕ್ಕಿದೆ. ದಲಿತರಿಗೂ ಒಂದು ಬಾರಿ ಅಧಿಕಾರ ಸಿಗಬೇಕು ಅಂತ ಬಯಸೋನು ನಾನು. ಮುಂದಿನ ಬಾರಿ ದಲಿತ ಸಿಎಂಗೆ ಅವಕಾಶ ಕೊಡಲಿ.

– ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಸಿದರೆ, ಅವರು ಅಧಿಕಾರ ಬಿಟ್ಟು ಕೊಡ್ತಾರಾ ?
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕು ಅಂತ ಹೋರಾಟ ಮಾಡಿದವರಲ್ಲಿ ನಾನು ಒಬ್ಬ. ಅವರು ಈಗ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ನನಗೆ ಅವರ ಬಗ್ಗೆ ಯಾವುದೇ ಬೇಸರ ಇಲ್ಲ. ಈ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸಲಿ. ದಲಿತರಿಗೂ ಒಂದು ಬಾರಿ ಅವಕಾಶ ನೀಡಬೇಕು ಅನ್ನೋದು ನನ್ನ ಬಯಕೆ. 

– ಸರ್‌, ಡೈರಿ ಪ್ರಕರಣ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ನಿಜ ಹೇಳಿ,  ಹೈಕಮಾಂಡ್‌ಗೆ ಕಪ್ಪ ಕೊಡೋ ಪದ್ದತಿ  ಇದೆಯಾ ?
ಆ ಥರದ ವ್ಯವಸ್ಥೆ ಇದಿಯೋ ಇಲ್ಲವೋ ನನಗೆ ಗೊತ್ತಿಲ್ಲಾ. ನಾನು ಅಬಕಾರಿ ಸಚಿವನಾಗಿದ್ದರೂ ಯಾರಿಂದಲೂ ಒಂದು ಪೈಸೆ ಪಡೆದಿಲ್ಲ. ನನ್ನಿಂದಲೂ ಯಾರೂ ಪಾರ್ಟಿ ಫ‌ಂಡ್‌ ಅಂತ ಹಣ ಕೇಳಿಲ್ಲಾ. ಹೀಗಾಗಿ ಆ ವಿಷಯದ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಡೈರಿ ಪ್ರಕರಣದಿಂದ ಪಕ್ಷಕ್ಕೆ ಅಷ್ಟೊಂದು ಡ್ಯಾಮೇಜ್‌ ಏನ್‌ ಆಗಲ್ಲ. ಡೈರಿ ಎಲ್ಲ ಪಾರ್ಟಿಗಳಲ್ಲಿಯೂ ಇದೆ. ಹೀಗಾಗಿ ಜನ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲ್ಲ. ಚುನಾವಣೆ ಮೇಲೆ ಅದೇನು ಪರಿಣಾಮ ಬೀರುವುದಿಲ್ಲ. 

– ಬಿಜೆಪಿಯವರು ಮಿಷನ್‌ 150 ಅಂತಿದಾರಲ್ಲಾ. ನೀವು ಹೇಗೆ ಅಧಿಕಾರಕ್ಕೆ ಬರ್ತಿರಾ ?
ಯಡಿಯೂರಪ್ಪನವರು ಭ್ರಮೆಯಲ್ಲಿದ್ದಾರೆ. ಅವರು ಹೇಳಿದಷ್ಟು ಬಿಜೆಪಿಗೆ ಸೀಟು ಬರಲ್ಲಾ. ಈಗಿರುವುದಕ್ಕಿಂತ ಸ್ವಲ್ಪ ಜಾಸ್ತಿ ಸೀಟು ಬರಬಹುದು. ಆದರೆ, ಸರ್ಕಾರ ರಚಿಸುವಷ್ಟು ಸೀಟು ಅವರಿಗೆ ಬರೋದಿಲ್ಲ. ಜೆಡಿಎಸ್‌ನವರು ಅಧಿಕಾರ ಬಿಟ್ಟು ಕೊಡದ್ದಿದ್ದಾಗಲೇ ಅವರಿಗೆ ಬಹುಮತ ಸಿಕ್ಕಿರಲಿಲ್ಲಾ. ಈಗ ಅವರ ಪಕ್ಷದಲ್ಲಿ ಸಾಕಷ್ಟು ಗೊಂದಲಗಳಿವೆ. ಜನರು ಅವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದರೆ, ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀವಿ. 

– ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಟಾಳ್ಕರ್‌ ಅವರ ಮನೆ ಮೇಲೆ ಐಟಿ ದಾಳಿ ನಡೆದಿದ್ದರ ಹಿಂದೆ ನಿಮ್ಮ ಕೈವಾಡ ಇದೆಯಂತೆ ಹೌದಾ ?
 ಅವರ ಮನೆ ಮೇಲೆ ಐಟಿ ದಾಳಿ ನಾನೇಕೆ ಮಾಡಿಸಲಿ. ಈಗಾಗಲೇ ಯಾರು ದಾಳಿ ಮಾಡಿಸಿದ್ದರು. ಅವರೇ ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಆರೋಪ ಮಾಡಿದವರೂ ಪ್ರಕರಣ ದಾಖಲಿಸಿದ್ದಾರೆ. ಲಕ್ಷ್ಮೀ ಹೆಬ್ಟಾಳ್ಕರ್‌ ಅವರಿಗೂ ನನಗೂ ಯಾವುದೇ ಸಂಪರ್ಕ ಇಲ್ಲಾ. ರಮೇಶ್‌ ಜಾರಕಿಹೊಳಿ ಅವರ ಕೃಪೆಯಿಂದ ಅವರು ರಾಜಕೀಯಕ್ಕೆ ಬಂದಿದ್ದಾರೆ. ಮಹಿಳೆ ಎನ್ನುವ ಕಾರಣಕ್ಕೆ ನಾವೆಲ್ಲ ಅವರಿಗೆ ಸಪೋರ್ಟ್‌ ಮಾಡುತ್ತಿದ್ದೇವೆ. ನನ್ನ ವಿರುದ್ಧ ಯಾಕೆ ಅನಗತ್ಯ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ.   

ಸಂದರ್ಶನ : ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next