Advertisement

ಸಿಎಂ ಬದಲಾವಣೆ ಮಾಡಿದ್ರೆ ನೆಕ್ಸ್ಟ್ ಕ್ಯಾಂಡಿಡೇಟ್ ನಾನೇ’ : ಸಚಿವ ಉಮೇಶ ಕತ್ತಿ

06:00 PM Jul 19, 2021 | Team Udayavani |

ಬೆಳಗಾವಿ: ಸಿಎಂ ಬದಲಾವಣೆ ಮಾಡಿದ್ರೆ ನೆಕ್ಸ್ಟ್ ಕ್ಯಾಂಡಿಡೇಟ್ ನಾನೇ ಎಂದು ಆಹಾರ ಸಚಿವ ಉಮೇಶ ಕತ್ತಿ ಹೇಳಿದರು.

Advertisement

ನಗರದಲ್ಲಿಂದು ಮಾಧ್ಯಮಗಳ ಎದುರು ಮಾತನಾಡಿದ ಅವರು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದೇನೆ. ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಸಿಎಂ ಇದ್ದಾರೆ, ಒಳ್ಳೆಯ ಸರ್ಕಾರ ನಡೀತಿದೆ. ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ. ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

ಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಆದಾಗ ಆ ಬಗ್ಗೆ ವಿಚಾರ ಮಾಡ್ತೀನಿ,ಈಗ ಸಿಎಂ ಸ್ಥಾನ ಬದಲಾವಣೆ ಆದ್ರೆ ಉತ್ತರ ಕರ್ನಾಟಕಕ್ಕೆ ಕೊಡಬೇಕೆಂಬುದು ನಮ್ಮ ವಾದ. ಯಾರೇ ಸಿಎಂ ಆದರೂ ಅಖಂಡ ರಾಜ್ಯ ಆಳುವ ಸಿಎಂ ಇರಬೇಕು. ಸಿಎಂ ಹುದ್ದೆ ಖಾಲಿ ಆದ್ರೆ ನೆಕ್ಸ್ಟ್ ನಾನೇ ಇದೀನಿ. ಸಿಎಂ ಸ್ಥಾನ ಬದಲಾವಣೆ ಆದ್ರೆ ನಂದೇ ನಂಬರ್ ಇದೆ. ಪೀರಿಡ್‌ವೈಸ್, ಕಳಂಕರಹಿತ ಎಲ್ಕಾ ಅರ್ಹತೆ ಇರುವ ನಾನೇ ಕ್ಯಾಂಡಿಡೇಟ್ . ನಸೀಬ್ ಗಟ್ಟಿ ಇದ್ರೆ, ಹೈಕಮಾಂಡ್ ನಿರ್ಣಯ ಮಾಡಿದ್ರೆ ನಾನೇ ಸಿಎಂ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದೀನಿ ಎಂದರು.

ಹುಕ್ಕೇರಿ ಮತಕ್ಷೇತ್ರದ ಜನ ೮ ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು. ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ.ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿ ಇವೆ. ಯಾವುದೇ ರೀತಿಯ ಬ್ಲ್ಯಾಕ್ ಸ್ಪಾಟ್ ನನ್ನಲ್ಲಿ ಇಲ್ಲ, ಕಳಂಕರಹಿತ ವ್ಯಕ್ತಿತ್ವ ಇದೆ, ಅದರ ಜೊತೆ ಹುಕ್ಕೇರಿ ಜನರ ಆಶೀರ್ವಾದ ಇದೆ. ರಾಜ್ಯದ ಜನ ಆಶೀರ್ವದಿಸಿದರೆ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದ್ರೆ ನಾನು ಸಿಎಂ ಆಗುವ ಆಸೆ ಉಳ್ಳವನು.ಪಕ್ಷ ಮನಸ್ಸು ಮಾಡಿದ್ರೆ ರಾಜ್ಯದ ಸಿಎಂ ಆಗಬೇಕೆಂದು ಮನಸು ಮಾಡಿದ್ದೇನೆ. ಆದ್ರೆ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ, ಹೀಗಾಗಿ ಅದರ ಬಗ್ಗೆ ಚರ್ಚಿಸಲ್ಲ ಎಂದರು.

ಇನ್ನು ನಳಿನ್‌ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕತ್ತಿ, ಅವರು ತಮ್ಮ ಅನಿಸಿಕೆ ಹೇಳಿರಬಹುದು. ನಾನು ಅದನ್ನು ನೋಡಿಲ್ಲ, ನೋಡಿದ್ಮೇಲೆ ಪ್ರತಿಕ್ರಿಯಿಸುವೆ. ನಳಿನ್‌ಕುಮಾರ್ ಕಟೀಲ್ ತಮ್ಮ ಆಡಿಯೋ ಇಲ್ಲ ಅಂದಾಗ ನಾನೇನು ಪ್ರತಿಕ್ರಿಯೆ ನೀಡಲಿ ಎಂದು ಪ್ರಶ್ನಿಸಿದ ಅವರು ಆ ಆಡಿಯೋ ಯಾರು ಮಾಡಿದ್ದು ಮಾಧ್ಯಮಗಳು ಪ್ರಶ್ನಿಸಿದಾಗ ನೀವೆ ಮಾಡಿರಬಹುದು ಎಂದರು.

Advertisement

ಬೆಳಗಾವಿಯಲ್ಲಿ ನಾನು ಯಾವುದೇ ಸಭೆ ಮಾಡಿಲ್ಲ. ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನೀವೇ ಹೇಳ್ತಿದೀರಿ. ಯತ್ನಾಳ್ ಬೆಳಗಾವಿಗೆ ಬರ್ತಿರ್ತಾರೆ, ನಾನು ವಿಜಯಪುರಕ್ಕೆ ಹೋಗ್ತಿರ್ತೀನಿ. ಎಲ್ಲರೂ ಕೂಡಿ ಊಟ ಮಾಡಿದೀವಿ ಹೊರತು ನಾವು ಯಾವುದೇ ಸಭೆ ಮಾಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next