Advertisement

Congress ನವರ ಎಲ್ಲಾ ಬೈಗಳನ್ನು ನಾನು ಉಡುಗೊರೆಯಾಗಿ ಸ್ವೀಕರಿಸುತ್ತೇನೆ:PM Modi 

03:45 PM Apr 29, 2023 | Team Udayavani |

ಬೀದರ್ : ಅಂಬೇಡ್ಕರ್, ಸಾವರ್ಕರ್ ಅವರಂಥ ದೇಶದ ಮಹಾ ಪುರುಷರನ್ನು ನಿಂದಿಸಿದ್ದ ಕಾಂಗ್ರೆಸ್ ಈಗ ನನ್ನನ್ನೂ ಹಲವು ಬಾರಿ ನಿಂದಿಸುತ್ತ ಬಂದಿದೆ. ಆದರೆ, ಕಾಂಗ್ರೆಸ್ಸಿಗರ ಎಲ್ಲಾ ಬೈಗಳನ್ನು ನಾನು ಉಡುಗೊರೆಯಾಗಿ ಸ್ವೀಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ‘ಮೋದಿ ವಿಷದ ಹಾವು’ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವರ ಹುಟ್ಟೂರಿನ ನೆಲದಲ್ಲೇ ಎದುರೇಟು ನೀಡಿದ್ದಾರೆ.

Advertisement

ಹುಮನಾಬಾದ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಶನಿವಾರ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಡಾ. ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದೆ ವಾಗ್ದಾಳಿ ನಡೆಸಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರನ್ನು ಕಾಂಗ್ರೆಸ್ ನಾಯಕರು ರಾಕ್ಷಸ, ರಾಷ್ಟ್ರದ್ರೋಹಿ ಎಂದು ಅಪಮಾನಮಾಡಿದ್ದರು. ವೀರಸಾವರ್ಕರ್ ಅವರನ್ನೂ ಸಹ ಬಿಟ್ಟಿಲ್ಲ. ಈಗ ನನಗೆ ಅವರಂತೆ ಸಮ್ಮಾನ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ನನ್ನನ್ನು ಹೀಗೆ ನಿಂದಿಸುತ್ತಾ ಇರಲಿ, ನಾನು ನಿಮ್ಮೆಲ್ಲರ ಸೇವೆಯಲ್ಲಿ ನಿರತನಾಗಿರುತ್ತೇನೆ. ಜನರ ಆಶೀರ್ವಾದಿಂದ ಆ ಎಲ್ಲ ನಿಂದನೆಗಳು ಮಣ್ಣುಪಾಲು ಆಗಲಿವೆ. ಅವರೆಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳಲಿದೆ ಎಂದರು.

ಕಾಂಗ್ರೆಸ್ಸಿಗರು ನನ್ನನ್ನು ಬೈಯಲು ಪಟ್ಟಿಯೇ ಮಾಡಿದ್ದು, ಈವರೆಗೆ ದೊಡ್ಡ ದೊಡ್ಡ ನಾಯಕರು ನನಗೆ 91 ಬಾರಿ ವಿಧ ವಿಧವಾಗಿ ನಿಂದಿಸಿದ್ದಾರೆ. ಬೈಗಳಿಗಾಗಿ ಶಬ್ದಕೋಶದಲ್ಲಿ ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವ ಬದಲು, ಈ ಶ್ರಮವನ್ನು ಉತ್ತಮ ಆಡಳಿತ ಮತ್ತು ತಮ್ಮ ಕಾರ್ಯಕರ್ತರ ಉತ್ಸಾಹವವನ್ನು ಹೆಚ್ಚಿಸಲು ವಿನಿಯೋಗಿಸಿದ್ದರೆ, ಇಂದು ಕಾಂಗ್ರೆಸ್‌ಗೆ ಇಂಥ ದಯನೀಯ ಸ್ಥಿತಿ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ಬಡವರು ಮತ್ತು ದೇಶಕ್ಕಾಗಿ ಕೆಲಸ ಮಾಡುವಂಥವರಿಗೆ ಅಪಮಾನ ಮಾಡುವುದು ಕಾಂಗ್ರೆಸ್‌ನ ಇತಿಹಾಸ. ನನ್ನೊಬ್ಬನೇ ಮೇಲಷ್ಟೇ ದಾಳಿ ಆಗಿಲ್ಲ. ಈ ಹಿಂದೆ ಮೋದಿ ಚೋರ್, ಚೌಕಿದಾರ್ ಚೋರ ಮತ್ತು ಓಬಿಸಿ ಸಮಾಜದವರು ಚೋರ್ ಎಂದಿದ್ದ ಕಾಂಗ್ರೆಸ್ ಪಕ್ಷ ಈಗ ಲಿಂಗಾಯತರನ್ನು ಭ್ರಷ್ಟರು ಎಂದು ಅವಮಾನಿಸಿದ್ದಾರೆ. ಕರ್ನಾಟಕದಲ್ಲಿ ಈ ಹಿಂದೆ ನಿಂದಿಸಿದಾಗಲೆಲ್ಲ ಮತ್ತೊಮ್ಮೆ ಎದ್ದೇಳಲು ಆಗದಂಥ ಶಿಕ್ಷೆಯನ್ನು ಕನ್ನಡಿಗರು ಕೊಟ್ಟಿದ್ದಾರೆ. ಈಗ ಮತ್ತೆ ಕರ್ನಾಟಕದ ಜನ ಸ್ವಾಭಿಮಾನಕ್ಕೆ ಧಕ್ಕೆ ತರಲಾಗಿದ್ದು, ಮತದಾರರು ಇದಕ್ಕೆ ವೋಟ್‌ಗಳ ಮೂಲಕವೇ ಉತ್ತರ ನೀಡಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಸವೇಶ್ವರರ ಆಶಯ ಈಡೇರಿಸಲು ಬಿಜೆಪಿಗೆ ಮತನೀಡಿ

Advertisement

ವಿಜಯಪುರ : ಬಸವೇಶ್ವರ ಪ್ರೇರಣೆಯಿಂದಲೇ ನಾವು ನಮ್ಮ ಪ್ರಣಾಳಿಕೆಯಲ್ಲಿ ಕಾಯಕ, ದಾಸೋಹ ಮಾದರಿಯಲ್ಲಿ ಅನ್ನ, ಆಶ್ರಯ, ಅಕ್ಷರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಭವಿಷ್ಯದಲ್ಲೂ ಬಸವೇಶ್ವರ ಆಶಯ, ಆದರ್ಶದಂತೆ ಆಡಳಿತ ನಡೆಸಲು ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದರು.

ಶನಿವಾರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಜಯಪುರ ಜಿಲ್ಲೆಯ ಎಂಟು ಹಾಗೂ ಜಮಖಂಡಿ ವಿಧಾನಸಭೆ ಕ್ಷೇತ್ರಗಳ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಸವೇಶ್ವರ ಕರ್ಮಭೂಮಿ ಬೀದರ ಜಿಲ್ಲೆಯಲ್ಲಿ ಪ್ರಚಾರ ಇದೀಗ ಬಸವೇಶ್ವರ ಜನ್ಮಭೂಮಿಗೆ ಬಂದಿದ್ದೇನೆ. ಗರೀಬಿ ಹಟಾವೋ ಹೆಸರಿನಲ್ಲಿ ರೂಪಿಸಿದ ಅನೇಕ ಯೋಜನೆಗಳು ಬಡತವನ್ನು ಜೀವಂತ ಇರಿಸಿ ಭ್ರಷ್ಟಾಚಾರವನ್ನು ಕೊಡುಗೆಯಾಗಿ ನೀಡಿದ್ದೇ ಸಾಧನೆ. ಬಡವರ ಕಣ್ಣೀರು ಒರೆಸಲು, ಲೂಟಿ ತಡೆಯಲು ಕಾಂಗ್ರೆಸ್ ಆಡಳಿತದಲ್ಲಿ ಏನನ್ನೂ ಮಾಡಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರದಿಂದ 1 ರೂ. ನೀಡಿದರೆ ಅರ್ಹರನ್ನು ತಲುಪುವಲ್ಲಿ 15 ಪೈಸೆ ಆಗಿರುತ್ತಿತ್ತು. ಇಷ್ಟೊಂದು ಭಾರಿ ಪ್ರಮಾಣದ ಭ್ರಷ್ಟಚಾರ ನಡೆಯುತ್ತಿತ್ತು ಎಂಬುದನ್ನು ಅಂದಿನ ಕಾಂಗ್ರೆಸ್ ಪ್ರಧಾನಿಯೇ ಒಪ್ಪಿಕೊಂಡಿದ್ದರು. ಈಗ ಕೇಂದ್ರದಿಂದ ಬಿಡುಗಡೆಯಾಗುವ ಹಣ ಶೇಕಡಾ ನೂರಕ್ಕೆ ನೂರರಷ್ಟು ನೇರವಾಗಿ ಫಲಾನುಭವಿಗಳನ್ನು ತಲುಪಲಿದೆ. ಇದು ಬಿಜೆಪಿ ಪಾರದರ್ಶಕ ಆಡಳಿತಕ್ಕೆ ಸಾಕ್ಷಿ ಎಂದು ಬಿಜೆಪಿ ಸರ್ಕಾರಗಳ ಸಾಧನೆ ವಿವರಿಸಿದರು.

ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರು ರೈತರ ಸಾಲ ಮನ್ನಾ ಹೆಸರಲ್ಲಿ ವಂಚನೆ ನಡೆಯುತ್ತಿತ್ತು. ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ ಯೋಜನೆಯಿಂದ ಫಲಾಭವಿ ಬ್ಯಾಂಕ್ ಖಾತೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಪ್ರೋತ್ಸಾಹ ನೇರವಾಗಿ ಜಮೆ ಆಗುತ್ತಿದೆ ಎಂದರು.

ಪಂಚನದಿಗಳ ನಾಡು ವಿಜಯಪುರ ಜಿಲ್ಲೆಯ ನಗರದ ಜನತೆಯ ಒಳಿತಿಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿದೆ. ಇದರಿಂದಾಗಿ ನಾರಾಯಣಪುರ ಎಡದಂಡೆ ನಾಲೆ, ಮುಳವಾಡ ಏತ ನೀರಾವರಿ, ರೇವಣಸಿದ್ದೇಶ್ವರ ಯೋಜನೆ ಯೋಜನೆಗಳು ತ್ವರಿತಗತಿಯಲ್ಲಿ ಮುಗಿಯಲು ಸಹಕಾರಿ ಆಗಲಿದೆ.

ವಿಜಯಪುರ ಜಿಲ್ಲೆಯ 3 ಲಕ್ಷ ಕುಟುಂಬಗಳಿಗೆ ನಳ ಜಲ ಯೋಜನೆಯಿಂದ ಮನೆ ಬಾಗಿಲಿಗೆ ನೀರು ಹರಿಸಿದ್ದೇವೆ. ಆಯುಷ್ಮಾನ್ ಭಾರತ ಯೋಜನೆ ರೂಪಿಸಿ ದೇಶದ ಜನರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ. ಹೀಗೆ ಹತ್ತು ಹಲವು ಯೋಜನೆ ಮೂಲಕ ಡಬಲ್ ಎಂಜಿನ್ ಸರ್ಕಾರ ಜನರನ್ನು ತಲುಪಿದೆ ಎಂದು ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆ ವಿವರಿಸಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಸಕ್ತ ಚುನಾವಣೆ ಭವಿಷ್ಯದ ಕರ್ನಾಟಕ ಅಭಿವೃದ್ಧಿ ಎನಿಸಿದೆ. ಹೀಗಾಗಿ ರಾಜ್ಯದ ಜನರು ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಬಹುತೇಕ ಕಾಂಗ್ರೆಸ್ ಸ್ಪರ್ಧಿಗಳು, ನಾಯಕರು ಇದು ನನ್ನ ಕೊನೆ ಚುನಾವಣೆ ನನ್ನನ್ನು ಗೆಲ್ಲಿಸಿ ಎಂದು ಮತ ಬೇಡುವ ದುಸ್ಥಿತಿ ಎದುರಾಗಿದೆ ಎಂದು ಲೇವಡಿ ಮಾಡಿದರು.

ಪಕ್ಷದ ಕಾರ್ಯಕರ್ತರು ಜಿಲ್ಲೆಯ ಮನೆ ಮನೆಗೆ ತೆರಳಿ, ಮೋದಿ ದೆಹಲಿಯಿಂದ ವಿಜಯಪುರ ನಗರಕ್ಕೆ ಬಂದಿದ್ದರು. ನಿಮಗೆ ನಮಸ್ಕಾರ ತಿಳಿಸಿದ್ದಾರೆಂದು ಸಂದೇಶ ರವಾನಿಸಿ. ಜೊತೆಗೆ ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಿಳಿಸಿ ಮತಯಾಚನೆ ಮಾಡಿ ಎಂದು ಕರೆ ನೀಡಿದರು.

2018 ರಲ್ಲಿ ವಿಜಯಪುರ ಜಿಲ್ಲೆಗೆ ಆಗಮಿಸಿದ್ದೆ, ಇದೀಗ ಮತ್ತೆ ಬಂದಿದ್ದು, ನೀವು ಈ ಬಾರಿಯ ನಿರ್ಧಾರ ಬಿಜೆ ಸರ್ಕಾರ ಎಂಬುದನ್ನು ತಾವು ನಿರ್ಧರಿಸಿಯಾಗಿದೆ ಎಂದು ಕನ್ನಡದಲ್ಲಿ ಹೇಳುವ ಮೂಲಕ ಕಾರ್ಯಕರ್ತರ ಹರ್ಷೋದ್ಘಾರ ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಸಭೆಯ ವೇದಿಕೆ ಮೇಲೆ ಅವಳಿ ಜಿಲ್ಲೆಗಳ ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ. ಗದ್ದೀಗೌಡರ, ಮೇಲ್ಮನೆ ಸದಸ್ಯರಾದ ಪಿ.ಎಚ್.ಪೂಜಾರ, ಹನುಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ವಿಜುಗೌಡ ಪಾಟೀಲ, ಎಸ್.ಕೆ.ಬೆಳ್ಳುಬ್ಬಿ, ಜಮಖಂಡಿ ಅಭ್ಯರ್ಥಿ ಜಗದೀಶ ಕುಡಗುಂಟಿ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಸಂಜಯ ಪಾಟೀಲ ಕನಮಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next