Advertisement

ಹೈಟೆಕ್‌ ಮಾದರಿ ಗ್ರಂಥಾಲಯಕ್ಕೆ ಉದ್ಘಾಟನೆ ಭಾಗ್ಯ

09:29 AM Feb 28, 2023 | Team Udayavani |

ಕಾರ್ಕಳ: ಕಾರ್ಕಳ ಗಾಂಧಿ ಮೈದಾನದ ಬಳಿ 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಡಿಜಿಟಲ್‌ ಗ್ರಂಥಾಲಯಕ್ಕೆ ಉದ್ಘಾಟನೆ ಭಾಗ್ಯ ಲಭಿಸಿದೆ. ರಾಜ್ಯದಲ್ಲೆ ಅತೀ ಹೆಚ್ಚು ಪುಸ್ತಕ ಹೊಂದಿರುವ ಉಡುಪಿ ಜಿಲ್ಲಾ ಶಾಖಾ ಗ್ರಂಥಾಲಯದ ಶಾಖೆ ಎಂಬ ಹೆಗ್ಗಳಿಕೆಗೂ ಈ ಗ್ರಂಥಾಲಯ ಪಾತ್ರವಾಗಿದೆ. ಫೆ. 28ರಂದು ಡಿಜಿಟಲ್‌ ಗ್ರಂಥಾಲಯ ಲೋಕಾರ್ಪಣೆಯಾಗಲಿದೆ. ಈ ಸುಸಜ್ಜಿತ ಡಿಜಿಟಲ್‌ ಗ್ರಂಥಾಲಯ 2 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು.

Advertisement

ದೇಶವ್ಯಾಪಿ ಕೊರೊನಾ ವ್ಯಾಪಿಸಿಕೊಂಡ ಹಿನ್ನೆಲೆ, ಉಪ ಚುನಾವಣೆ ಇನ್ನಿತರ ಕಾರಣಗಳಿಂದ ಅದರ ಉದ್ಘಾಟನೆ ಆಗಿರಲಿಲ್ಲ. ಅನಂತರ ಉದ್ಘಾಟನೆಗೆ ಸಿದ್ಧವಾಗುವ ಹೊತ್ತಲ್ಲೇ ಕೊರೊನಾ 2ನೇ ಅಲೆ ಕಾಡಿತ್ತು. ಈಗ ವಿಘ್ನಗಳೆಲ್ಲ ದೂರವಾಗಿ ಉದ್ಘಾಟನೆಗೆ ಮುಹೂರ್ತ ಸಿದ್ಧಗೊಂಡಿದೆ. ಹೈಟೆಕ್‌ ಮಾದರಿಯಲ್ಲಿ ಡಿಜಿಟಲ್‌ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿದ್ದು, ಎರಡು ಮಹಡಿ ಹೊಂದಿದೆ. ಫ‌ರ್ನಿಚರ್‌ ವ್ಯವಸ್ಥೆ, ಡಿಜಿಟಲ್‌ ಕಂಪ್ಯೂಟರ್‌ ವ್ಯವಸ್ಥೆ ಸಹಿತ ಓದಿಗೆ ಎಲ್ಲ ರೀತಿಯಲ್ಲಿ ಅನುಕೂಲವಾಗುವ ರೀತಿ ಡಿಜಿಟಲ್‌ ಗ್ರಂಥಾಲಯ ಸಿದ್ಧಗೊಂಡಿದೆ.

ಟಿವಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಪುಸ್ತಕ, ನಿಯತಕಾಲಿಕೆಗಳನ್ನು ಓದುವವರ ಸಂಖ್ಯೆ ಗಣನೀಯ ಕುಸಿದಿರುವ ಹೊತ್ತಲ್ಲಿಯೂ ಇಲ್ಲಿನ ಗ್ರಂಥಾಲಯಕ್ಕೆ ಓದುಗರ ಕೊರತೆ ಕಡಿಮೆಯಾಗಿಲ್ಲ.

1994ರಲ್ಲಿ ಮೊಯ್ಲಿ ಉದ್ಘಾಟಿಸಿದ್ದರು

ಇಲ್ಲಿ ಈಗಿರುವುದು ತೀರಾ ಹಳೆಯ ಗ್ರಂಥಾಲಯ. ಜಿಲ್ಲಾ ಗ್ರಂಥಾಲಯದ ಕಾರ್ಕಳ ಶಾಖೆಯಲ್ಲಿ ಈಗ ಬರೋಬ್ಬರಿ 60 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಈಗಿನ ಶಾಖಾ ಗ್ರಂಥಾಲಯವನ್ನು ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ಅನುದಾನ ಒದಗಿಸಿ 1994ರಲ್ಲಿ ಉದ್ಘಾಟಿಸಿದ್ದರು.

Advertisement

ಗ್ರಂಥಾಲಯವಷ್ಟೇ ಅಲ್ಲ

ನೂತನ ಕಟ್ಟಡವು 5,400 ಚದರ ಅಡಿ ವಿಸ್ತಾರವಿದೆ. ಅಂದಾಜು 50 ಸಾವಿರ ಪುಸ್ತಕಗಳಿವೆ. 18 ನಿಯತಕಾಲಿಕೆ, 24 ವಾರ ಪತ್ರಿಕೆ, ಹತ್ತು ದಿನಪತ್ರಿಕೆ ಓದುಗರಿಗೆ ಲಭ್ಯವಿವೆ. ಸುಮಾರು 8 ಸಾವಿರ ಓದುಗರಿದ್ದಾರೆ. ಒಂದು ಲಕ್ಷ ಡಿಜಿಟಲ್‌ ಓದುಗರಿದ್ದಾರೆ. ಪ್ರೊ| ರಾಮಚಂದ್ರ, ಶ್ರೀನಿವಾಸ ಪೈ ನೂರಾರು ಪುಸ್ತಗಳನ್ನು ನೀಡಿದ್ದಾರೆ. ದಿನಪತ್ರಿಕೆ, ಬೋಳ ದಾಮೋದರ್‌ ಕಾಮತ್‌ ಸಿಎಸ್‌ ಆರ್‌ ಫ‌ಂಡ್‌ನಿಂದ 6 ಕಂಪ್ಯೂಟರ್‌, ಗೋವಿಂದ ಪೈ, ಶುಭದ ರಾವ್‌. ನಿಯತಕಾಲಿಕೆ, ದಿನಪತ್ರಿಕೆ ನೀಡುತ್ತಿದ್ದಾರೆ. ಅನೇಕ ದಾನಿಗಳು ಪುಸ್ತಕ ಇನ್ನಿತರ ಕೊಡುಗೆಗಳನ್ನು ನೀಡಿದ್ದಾರೆ.

ಸಚಿವರಿಂದ ಕೋಟಿ ರೂ. ಅನುದಾನ

ಹಳೆ ಕಟ್ಟಡ ಶಿಥಿಲವಾದಾಗ ಸಚಿವ ವಿ. ಸುನಿಲ್‌ ಕುಮಾರ್‌ ಅವರು ನೂತನ ಕಟ್ಟಡಕ್ಕೆ 1 ಕೋಟಿ ರೂ. ಸರಕಾರದ ಅನುದಾನ ತರಿಸಿ ಸುಸಜ್ಜಿತ ಕಟ್ಟಡದ ಜತೆಗೆ ಡಿಜಿಟಲ್‌ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರಗಳ ಸೇರ್ಪಡೆ ಮಾಡಿದ್ದಾರೆ.

ಆಧುಕತೆಗೆ ತಕ್ಕಂತೆ ಸಿದ್ಧ 
ಜಾಲತಾಣಗಳಲ್ಲಿ ಪುಸ್ತಕ ಮತ್ತು ನಾನಾ ಮಾಹಿತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅನುಕೂಲ ಇರುವುದರಿಂದ ಅನೇಕರು ಇ-ಪುಸ್ತಕಗಳನ್ನೇ ಅವಲಂಬಿಸುತ್ತಿದ್ದಾರೆ. ಹೀಗಾಗಿ ಆಧುನಿಕತೆಗೆ ತಕ್ಕಂತೆ ಗ್ರಂಥಾಲಯ ಇಲ್ಲಿ ತೆರೆಯಲಾಗಿದೆ. ಪುಸ್ತಕ ಓದಿಗೂ ಅವಕಾಶವಿದೆ. ಕಾರಣಾಂತರಗಳಿಂದ ವಿಳಂಬವಾಗಿತ್ತು. ಈಗ ಉದ್ಘಾಟನೆ ಮಾಡಲಾಗುತ್ತಿದೆ.
-ವಿ. ಸುನಿಲ್‌ಕುಮಾರ್‌, ಸಚಿವ

ಸುದಿನ ವರದಿ
ನೂತನ ಕಟ್ಟಡ ನಿರ್ಮಾಣವಾಗಿದ್ದರೂ ಹಲವು ಕಾರಣಗಳಿಂದ ಉದ್ಘಾಟನೆ ಆಗಿರಲಿಲ್ಲ. ಹಳೆಯ ಈಗಿನ ಕಟ್ಟಡ ಪುಸ್ತಕಗಳಿಂದ ತುಂಬಿ ತುಳುಕುತ್ತಿದೆ. ಕಟ್ಟಡ ಶಿಥಿಲಗೊಳ್ಳುತ್ತ ಬರುತ್ತಿದ್ದು, ಮಳೆ ಬಂದಾಗ ನೀರು ಕಟ್ಟಡದೊಳಗೆ ಬಂದು ಪುಸ್ತಕ ಹಾನಿಯಾಗುತ್ತಿತ್ತು. ಈ ಬಗ್ಗೆ ಉದಯವಾಣಿ ಸುದಿನ ಅಗಸ್ಟ್‌ನಲ್ಲಿ ವಿಸ್ಕೃತ ವರದಿ ಪ್ರಕಟಿಸಿತ್ತು. ಅಂದು ವಿ. ಸುನಿಲ್‌ ಕುಮಾರ್‌ ಅವರು ಫ‌ರ್ನಿಚರ್‌ ವ್ಯವಸ್ಥೆ ಆದ ತತ್‌ಕ್ಷಣದಲ್ಲಿ ಲೋಕಾರ್ಪಣೆಗೊಳಿಸುವುದಾಗಿ ಹೇಳಿದ್ದರು.

ಗ್ರಂಥಾಲಯದ ಇತಿಹಾಸ

ಕಾರ್ಕಳದ ಮೊಟ್ಟಮೊದಲ ಸರಕಾರಿ ಗ್ರಂಥಾಲಯವು ಅನಂತಶಯನದಲ್ಲಿ 1956ರಲ್ಲಿ ಆರಂಭವಾಯಿತು. ಆಗಿನ ಭುವನೇಂದ್ರ ಕಾಲೇಜಿನ ಪ್ರೊ| ರಘುನಾಥ್‌ ಭಟ್‌ ಅದರ ಮೊದಲ ಗ್ರಂಥಪಾಲಕರಾಗಿ 6 ವರ್ಷ ಸೇವೆ ಸಲ್ಲಿಸಿದರು. ಮುಂದೆ ಸುದೀರ್ಘ‌ 36 ವರ್ಷ ಕೆ. ಗೋವಿಂದ ರಾವ್‌ ಅವರು ಸೇವೆ ಸಲ್ಲಿಸಿ ಗ್ರಂಥಾಲಯದ ಅಭಿವೃದ್ಧಿಗೆ ಕಾರಣವಾಗಿ ಅನೇಕ ಪ್ರಶಸ್ತಿಗಳನ್ನು ಪಡೆಯುವಂತಾಗುವುದರ ಜತೆಗೆ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಅವರು ಪಾತ್ರರಾದರು. ಗ್ರಂಥಾಲಯವು ಅನಂತಶಯನದಿಂದ ಟಾಟಾ ಗ್ಯಾರೇಜ್‌, ಅಲ್ಲಿಂದ ಆನೆಕೆರೆ, ಮುಂದೆ ಈಗಿನ ಗಾಂಧಿ ಮೈದಾನದ ಸಮೀಪ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಆಯಿತು.

ಇದನ್ನೂ ಓದಿ : ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚಳ

Advertisement

Udayavani is now on Telegram. Click here to join our channel and stay updated with the latest news.

Next