Advertisement

ಶೀಘ್ರವಾಗಿ ಏರ್‌ಪೋರ್ಟ್‌ ತಲುಪಲು ಹೊಸ ಮಾದರಿ: ಹೈಪರ್ ಲೂಪ್ ಎಂಬ ದುಬಾರಿ ಕನಸು

01:17 PM Oct 19, 2020 | Suhan S |

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತ್ವರಿತವಾಗಿ ತಲುಪಲು ಕಳೆದ ಹತ್ತು ವರ್ಷಗಳಲ್ಲಿ ಹತ್ತಾರು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಅನುಷ್ಠಾನಗೊಂಡಿರುವುದು ಒಂದೂ ಇಲ್ಲ. ಈಗಾಗಲೇ ಎರಡು-ಮೂರು ಪ್ರಾಜೆಕ್ಟ್ಗಳು ವಿವಿಧ ಹಂತ ಗಳಲ್ಲಿರುವಾಗಲೇ “ಹೈಪರ್‌ಲೂಪ್‌’ನ ಸಾಧ್ಯಾಸಾಧ್ಯತೆಗಳ ಅಧ್ಯಯನಕ್ಕೆ ನಿರ್ಧರಿಸಲಾಗಿದೆ. ಈ ಯೋಜನೆಯೂ ಹತ್ತರಲ್ಲಿ ಹನ್ನೊಂದು ಆಗಲಿದೆಯೇ? ಉಳಿದವುಗಳು ಕತೆ ಏನು? ತಜ್ಞರು ಹೇಳುವುದೇನು? ಇವೆಲ್ಲವುಗಳ ಸುತ್ತ ಒಂದು ನೋಟ…

Advertisement

ಇಡೀ ಬೆಂಗಳೂರಿನ ಅಭಿವೃದ್ಧಿಗಾಗಿ ಬಿಬಿಎಂಪಿ ಮೂರು ವರ್ಷಗಳಿಗೆ ಖರ್ಚು ಮಾಡುವ ಅಂದಾಜು ಮೊತ್ತ (ಬಜೆಟ್‌)ವನ್ನು ಒಂದೇ ಒಂದು ಮಾರ್ಗದ ಸಂಚಾರದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸುರಿಯಲಾಗುತ್ತಿದೆ. ಹಲವು ಕಾರಣಗಳಿಂದ ಆ ಯೋಜನೆಗಳು ಅನುಷ್ಠಾನ ಹಂತದಲ್ಲೇ ಕುಂಟುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೂಂದು ದುಬಾರಿ ಯೋಜನೆಯತ್ತ ಸರ್ಕಾರ ನೋಡುತ್ತಿದೆ. ಅದರ ಹೆಸರು- ಹೈಪರ್‌ಲೂಪ್‌.

ರಸ್ತೆಗಳ ಬದಿಯಲ್ಲಿಕಂಬಗಳನ್ನು ನಿರ್ಮಿಸಿ, ಅದರ ಮೇಲೆ ದೈತ್ಯ ಎಲೆಕ್ಟ್ರೋಮ್ಯಾಗ್ನೆಟಿಕ್‌ ಕೊಳವೆಗಳನ್ನು ಅಳವಡಿಸಿ ಅದರಲ್ಲಿ ಪಾಡ್‌ ಗಳನ್ನುಕಾರ್ಯಾಚರಣೆಮಾಡುವಯೋಜನೆ ಇದಾಗಿದೆ. ಈವರೆಗೆ ವಿಶ್ವದಲ್ಲಿ ಎಲ್ಲಿಯೂ ಈ ಪರಿಕಲ್ಪನೆ ಕಾರ್ಯರೂಪಕ್ಕೆ ಬಂದಿಲ್ಲ. ನಗರದಲ್ಲಿ ಇದರ ಸಾಧ್ಯಾಸಾಧ್ಯತೆಗಳ ಬಗ್ಗೆ ಅಧ್ಯಯನ ಕೈಗೆತ್ತಿಕೊಳ್ಳಲಾಗುತ್ತಿದೆ. ಇದನ್ನು ಅನುಷ್ಠಾನಗೊಳಿಸಲಿರುವ ವರ್ಜಿನ್‌ ಹೈಪರ್‌ ಲೂಪ್‌ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ಹೈಸ್ಪೀಡ್‌ ರೈಲಿಗಿಂತ ಇದರ ನಿರ್ಮಾಣ ಮತ್ತು ಕಾರ್ಯಾಚರಣೆ ವೆಚ್ಚ ತುಸು ಅಗ್ಗ. ನಗರದ ಹೃದಯಭಾಗದಿಂದಲೇ ಲೆಕ್ಕಹಾಕಿದರೂ 30-40 ಕಿ.ಮೀ. ದೂರದ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚು-ಕಡಿಮೆ ಅಂದಾಜು ಆರು ಸಾವಿರಕೋಟಿರೂ.ಬೇಕಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಆದರೆ, ಪ್ರಸ್ತುತ ಜಾಗತಿಕ ಮಹಾಮಾರಿ ಕೋವಿಡ್‌-19ರಿಂದ ಉಂಟಾದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಇಂತಹದ್ದೊಂದು ದುಬಾರಿ ಯೋಜನೆ ಬೇಕಿತ್ತಾ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಇದಕ್ಕೆ ಸಕಾರಣವೂ ಇದೆ. ಈಗಾಗಲೇ ಉಪನಗರ ರೈಲು ಯೋಜನೆಗೆ ಕೇಂದ್ರದ ಅನುಮೋದನೆ ದೊರಕಿದ್ದು,5,127 ಕೋಟಿ ವೆಚ್ಚದಲ್ಲಿ ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಬೆನ್ನಲ್ಲೇ56ಕಿ.ಮೀ.ಉದ್ದದ (ಹೊರವರ್ತುಲರಸ್ತೆ-ಹೆಬ್ಟಾಳ-ಕೆಐಎಎಲ್‌) 14,845 ಕೋಟಿ ವೆಚ್ಚದ “ನಮ್ಮ ಮೆಟ್ರೋ’ ಅದೇ ಸರ್ಕಾರದ ಅನುಮತಿಗಾಗಿ ಎದುರುನೋಡುತ್ತಿದೆ. ಈ ಮಧ್ಯೆ ಪೆರಿಫ‌ರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ಕೂಡ ಇದೇ ಅಂತಾರಾಷ್ಟ್ರೀಯವಿಮಾನನಿಲ್ದಾಣರಸ್ತೆಯಲ್ಲಿ ಬರುವ ವೆಂಕಟಾಲ ಬಳಿ ಹಾದುಹೋಗುತ್ತದೆ.

ನಿರ್ಮಾಣ ಹೊಣೆ ಕಂಪನಿಯದ್ದು?: ಹೈಪರ್‌ ಲೂಪ್‌ ಯೋಜನೆಗೆ ಸರ್ಕಾರ ಹಣ ಹೂಡಿಕೆ ಮಾಡುವುದಿಲ್ಲ. ಭೂಮಿ ಮತ್ತು ಅಗತ್ಯಸೌಲಭ್ಯಗಳ ಹೊಣೆ ಸರ್ಕಾರದ್ದಾಗಿರುತ್ತದೆ. ಉದ್ದೇಶಿತ ವರ್ಜಿನ್‌ ಹೈಪರ್‌ಲೂಪ್‌ ಕಂಪನಿ ಇತರೆ ಸಹಭಾಗಿತ್ವದಲ್ಲಿ ಇದರ ಅನುಷ್ಠಾನ ಮಾಡಲಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

Advertisement

“ಅದೇನೇ ಇರಲಿ, ಈ ರೀತಿಯ ಘೋಷಣೆಗಳು ದಿಕ್ಕುತಪ್ಪಿಸುವ ತಂತ್ರಗಳಾಗಿವೆ. ಇದೇ ಮಾರ್ಗದಲ್ಲಿ ಈ ಹಿಂದೆ ಮೊನೊ ರೈಲು, ಹೈಸ್ಪೀಡ್‌ ರೈಲು, ಉಕ್ಕಿನ ಸೇತುವೆಯಂತಹ ಯೋಜನೆಗಳೇ ಸಾಕ್ಷಿ. ಸರ್ಕಾರ ಇಂತಹ “ಆಕರ್ಷಕ ಯೋಜನೆ’ಗಳಿಗೆ ಮೊರೆಹೋಗದೆ, ವಾಸ್ತವವಾಗಿ ಸಾಧ್ಯವಿರುವ ಮತ್ತು ಜನರಿಗೂ ಕೈಗೆಟಕುವಂತಹ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬಹುದಾದ ಪರಿಣಾಮಕಾರಿ ಕಾರ್ಯಕ್ರಮಗಳಿಗೆ ಒತ್ತುನೀಡುವುದು ಸೂಕ್ತ. ಒಂದು ವೇಳೆ ಹೈಪರ್‌ಲೂಪ್‌ ಕಂಪನಿಯೇ ನಿರ್ಮಿಸಿದರೂ, ಅದರ ಪ್ರಯಾಣ ದರ ಸಾಮಾನ್ಯಜನರಿಗೆ ಕೈಗೆಟಕುವ ರೀತಿಯಲ್ಲಿ ಇರುತ್ತದೆ ಎಂಬುದು ಅನುಮಾನ’ ಎಂದು ರೈಲ್ವೆ ತಜ್ಞ ಸಂಜೀವ ದ್ಯಾಮಣ್ಣವರ ಹೇಳುತ್ತಾರೆ.

“ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ತಂದುಕೊಡು ವಲ್ಲಿಯೇ ನಮ್ಮ ಆಸಕ್ತಿ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಯಾಕೆಂದರೆ,ಕಂಡಿದ್ದೆಲ್ಲವನ್ನೂ ಮಾಡಲು ಹೋಗುತ್ತಿದ್ದೇವೆ. ಪರಿಣಾಮ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು “ಘೋಷಣೆಯ ಸರ್ಕಾರ’ಗಳಾಗುತ್ತಿವೆ. ಸಾರಿಗೆ ಮೂಲಸೌಕರ್ಯ ವಿಚಾರಕ್ಕೆ ಬಂದರೆ, ವಿಶ್ವದಲ್ಲಿ ಈಗಲೂ ಪ್ರಚಲಿತದಲ್ಲಿರುವುದುಮೆಟ್ರೋ, ಉಪನಗರ ರೈಲು, ರಸ್ತೆ ಸಾರಿಗೆ ಮಾತ್ರ. ಇದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ನಿರಂತರ ಸುಧಾರಣೆಕಾರ್ಯತಂತ್ರಗಳನ್ನು ರೂಪಿಸಬೇಕು’ ಎಂದು ನಗರ ತಜ್ಞ ಅಶ್ವಿ‌ನ್‌ ಮಹೇಶ್‌ ತಿಳಿಸುತ್ತಾರೆ.

ಬದಲಾಯ್ತಾ “ಆದ್ಯತೆ’?: ನಾಲ್ಕುಕಾರಿಡಾರ್‌ಗಳಲ್ಲಿ ನಿರ್ಮಾಣಗೊಳ್ಳಲಿರುವ ‌ ಉಪನಗರ ರೈಲು ಯೋಜನೆ ಅಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ- ಕೆಐಎಎಲ್‌- ದೇವನಹಳ್ಳಿ ಮಾರ್ಗ ಸರ್ಕಾರದ ‌ “ಆದ್ಯತಾ ಕಾರಿಡಾರ್‌’ ಆಗಿತ್ತು. ಆದರೆ, ಅನುಮೋದನೆ ದೊರೆಯುತ್ತಿದ್ದಂತೆ ಸರ್ಕಾರದ “ಆದ್ಯತೆ’ ಬದಲಾಗುತ್ತಿದೆ!

ಪ್ರಯಾಣಿಕರ‌ ಹಿತದೃಷ್ಟಿ ಹಾಗೂ ಹೋರಾಟಗಾರರ ಒತ್ತಾಯದ ಮೇರೆಗೆ ನಗರದ ಹೃದಯಭಾಗದಿಂದ ದೇವನಹಳ್ಳಿ ನಡುವೆ ಉಪನಗರ ರೈಲು ಮಾರ್ಗ ನಿರ್ಮಿಸಲು ಸರ್ಕಾರ ಈ ಹಿಂದೆ ಮನಸ್ಸು ಮಾಡಿತ್ತು. ಆದರೆ, ಈಗ ‌ ಹಿಂದಿನ ಉತ್ಸಾಹಕಾಣುತ್ತಿಲ್ಲ. ಮೂಲಗಳ ಪ್ರಕಾರ ಉದ್ದೇಶಿತ ‌ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ “ನಮ್ಮ ಮೆಟ್ರೋ’ ಯೋಜನೆಗೆ ಇನ್ನೂ ಹಸಿರು ನಿಶಾನೆ ದೊರಕಿಲ್ಲ. ಒಂದು ವೇಳೆ ಉಪನಗರ ರೈಲುಕೈಗೆತ್ತಿಕೊಂಡರೆ, ಮೆಟ್ರೋಗೆ ಹಿನ್ನೆಡೆ ಆಗಬಹುದು ಎಂಬ ಲೆಕ್ಕಾಚಾರ ‌ ಇದರ ಹಿಂದಿದೆ ಎನ್ನಲಾಗಿದೆ.

ವಿಮಾನ ನಿಲ್ದಾಣ ಮಾರ್ಗದಲ್ಲಿ ಹೆಚ್ಚು ವಾಹನದಟ್ಟಣೆ ಉಂಟಾಗುತ್ತಿದೆ. ಮತ್ತೂಂದೆಡೆ ವಿಮಾನ ನಿಲ್ದಾಣದ‌ಲ್ಲಿ 2ನೇ ಟರ್ಮಿನಲ್‌ ಮತ್ತು ರನ್‌ವೇ ನಿರ್ಮಾಣಗೊಳ್ಳುತ್ತಿದ್ದು, ಸಾಮರ್ಥ್ಯ ಆಗಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ‌ ನಿಲ್ದಾಣ ಮಾರ್ಗವನ್ನೇ ಆದ್ಯತಾ ಕಾರಿಡಾರ್‌ ಆಗಿ ಕೈಗೆತ್ತಿಕೊಳ್ಳಬೇಕು ಎಂದು ಸಿಟಿ ಜನ್‌ ಫಾರ್‌ ಸಿಟಿಜನ್‌ ಸಂಚಾಲಕ ರಾಜಕುಮಾರ್‌ ‌ದುಗ‌ರ್‌ ಒತ್ತಾಯಿಸುತ್ತಾರೆ. ಈಚೆಗೆ ಸಂಸ್ಥೆಯು ಸರ್ಕಾರದ ಮುಖ್ಯಕಾರ್ಯದ‌ರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರನ್ನೂ ಭೇಟಿ ಮಾಡಿ, ಮನವಿ ಸಲ್ಲಿಸಿದೆ.

ನಾಲ್ಕೂಕಾರಿಡಾರ್‌ಗಳನ್ನು ಆರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಇದರಲ್ಲಿ ಯಾವುದನ್ನು “ಆದ್ಯತಾ ಕಾರಿ ಡಾರ್‌’ ಆಗಿ ಕೈಗೆತ್ತಿಕೊಳ್ಳಬೇಕು ಎನ್ನುವುದು ಸರ್ಕಾರದ ಮಟ್ಟ ದಲಿ ತೀರ್ಮಾನ ಆಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಕೆ-ರೈಡ್‌ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪೆನಿ) ಅಧಿಕಾರಿಯೊಬ್ಬರು ತಿಳಿಸುತ್ತಾರೆ. “ಯೋಜನೆ ಅನುಷ್ಠಾನಕ್ಕೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಅಥ‌ವಾ ಭೂಮಿಯ ಸಮಸ್ಯೆ ಇಲ್ಲ. ಶೀಘ್ರದಲ್ಲೇ ಯೋಜನೆಕೈಗೆತ್ತಿಕೊಳ್ಳಲಾಗುವುದು’ ಎಂದು ಕೆ-ರೈಡ್‌ ಮುಖ್ಯಸ್ಥ ಅಮಿತ್‌ ಗರ್ಗ್‌ ತಿಳಿಸುತ್ತಾರೆ.

ವಾಹನ ಸವಾರರ ಪರದಾಟ : ಅಂದಹಾಗೆ, ಹೆಬ್ಟಾಳ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ನಡುವೆ “ಪೀಕ್‌ ಅವರ್‌’ನಲ್ಲಿ ಪ್ರತಿ ಗಂಟೆಗೆ 24ರಿಂದ 26 ಸಾವಿರ ವಾಹನಗಳು ಸಂಚರಿಸುತ್ತವೆ. ಆ ಮಾರ್ಗದಲ್ಲಿ ಸಂಚರಿಸುವ ಜನ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಸಂಚಾರದಟ್ಟಣೆ ತಗ್ಗಿಸಲು 2007 ಈವರೆಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಹಲವು ಯೋಜನೆಗಳ ಭರವಸೆ ನೀಡಿದೆ. ಅದರಲ್ಲಿ ಒಂದೇ ಒಂದು ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಪರಿಣಾಮ ಈಗಲೂ ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ಬಹುತೇಕ ಯೋಜನೆಗಳಹಿಂದೆಹಲವು ರೀತಿಯ ಲಾಬಿಗಳುಕೆಲಸ ಮಾಡುತ್ತವೆ. ಅದರಲ್ಲಿ ಮುಖ್ಯವಾಗಿ ಅಲ್ಪಾವಧಿಯಲ್ಲಿ ಎದ್ದುಕಾಣಬೇಕು ಎನ್ನುವುದಾಗಿರುತ್ತದೆ. ಸರ್ಕಾರ ಅಸ್ತಿತ್ವಕ್ಕೆ ಬಂದನಂತರ ಯಾವೊಂದು ಹೊಸ ಯೋಜನೆಗಳೂ ಘೋಷಣೆ ಆಗಿಲ್ಲ. ಈ ಮಧ್ಯೆ ನೆರೆ, ಕೋವಿಡ್ ಹಾವಳಿಯಿಂದ ಇನ್ನಷ್ಟು ನೇಪಥ್ಯಕ್ಕೆ ಸರಿದಂತಾಗಿದೆ. ಇಂತಹ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ ಹಿಂದಿನ ಸರ್ಕಾರ (ಬಿಜೆಪಿ ಸರ್ಕಾರ ಇತ್ತು)ದಲ್ಲಿ ಮುಂಬೈ-ಪುಣೆ ನಡುವೆ ನಿರ್ಮಿಸಲು ಘೋಷಣೆಯಾದ ಹೈಪರ್‌ಲೂಪ್‌ಯೋಜನೆ ಇಲ್ಲಿ “ಶಿಫ್ಟ್’ ಆಗಿದೆ ಎನ್ನಲಾಗಿದೆ.

 

ಭವಿಷ್ಯದ ಬೇಡಿಕೆ, ಅಭಿವೃದ್ಧಿಗೆ ಆದ್ಯತೆ :

  • ಬೆಂಗಳೂರನ್ನು ಅದರಲ್ಲೂಕೆಐಎಎಲ್‌ ನಿಲ್ದಾಣ ಮಾರ್ಗವನ್ನೇ ಆಯ್ಕೆ ಮಾಡಿದ್ದುಯಾಕೆ?

ಅತಿ ವೇಗವಾಗಿ ಹೊಂದುತ್ತಿರುವ ಬೆಳವಣಿಗೆ ಹಾಗೂ ಭವಿಷ್ಯದಲ್ಲಿ ಉಂಟಾಗಲಿರುವ ಬೇಡಿಕೆ. ಅಭಿವೃದ್ಧಿ ಹೊಂದಿದಂತೆ ಇಂಧನದ ಬೇಡಿಕೆಕೂಡ ಹೆಚ್ಚುತ್ತದೆ. ಹೈಪರ್‌ಲೂಪ್‌ನಲ್ಲಿ ಆ ಸಮಸ್ಯೆ ಇರುವುದಿಲ್ಲ. ವೇಗ, ಸುರಕ್ಷಿತ ವ್ಯವಸ್ಥೆ ಇದಾಗಿದ್ದು, ವೆಚ್ಚದ ದೃಷ್ಟಿಯಿಂದಲೂ ದುಬಾರಿ ಆಗುವುದಿಲ್ಲ.

  • ಈಗಾಗಲೇ ಉಪನಗರ ರೈಲು, ಮೆಟ್ರೋ ಬರುತ್ತಿದೆ. ಹೀಗಿರುವಾಗ, ಹೈಪರ್‌ ಲೂಪ್‌ ಅಪ್ರಸ್ತುತ ಎನಿಸುವುದಿಲ್ಲವೇ?

ಖಂಡಿತ ಇಲ್ಲ. ಉಳಿದೆಲ್ಲ ಮಾದರಿಗಳಿಗಿಂತ ಹೈಪರ್‌ ಲೂಪ್‌ ತುಂಬಾ ಭಿನ್ನವಾದದ್ದು. ಮಾರ್ಗಮಧ್ಯೆ ನಿಲುಗಡೆ,    ವರ್ಗಾವಣೆ, ಹವಾಮಾನ ವೈಪರೀತ್ಯ ಇದಾವುದರ ಅಡತಡೆ ಇದರಲ್ಲಿ ಇರುವುದಿಲ್ಲ. ಪರಿಸರ ಸ್ನೇಹಿ ಕೂಡ ಆಗಿದೆ. ಅಪಾಯಕಾರಿ ಕ್ರಾಸಿಂಗ್‌ ಮತ್ತಿತರ ಸಮಸ್ಯೆ ಇರುವುದಿಲ್ಲ. ಸಾಂಪ್ರದಾಯಿಕ ಮಾದರಿಗಳಿಗೆ ಜೋತುಬೀಳುವುದರಿಂದ ಪ್ರಯೋಜನ ಇಲ್ಲ. ಅದೇ ದಟ್ಟಣೆ ಮುಂದುವರಿಯುವುದರ ಜತೆಗೆ ಪ್ರಯಾಣಿಕರಿಗೂ ತೃಪ್ತಿದಾಯಕ ಸೇವೆ ನೀಡಲಾಗುವುದಿಲ್ಲ.

  • ವಿಮಾನ ನಿಲ್ದಾಣ ಮಾರ್ಗ ಈಗಾಗಲೇ ಸಾಕಷ್ಟು ಬೆಳೆದಿದೆ. ಭೂಮಿ ಎಲ್ಲಿಂದ ತರುತ್ತೀರಾ?

ಹೈಪರ್‌ಲೂಪ್‌ ವ್ಯವಸ್ಥೆಯು ಭಾರತೀಯ ಸ್ಥಿತಿಗತಿಗೆ ಹೇಳಿಮಾಡಿಸಿದ್ದಾಗಿದೆ. ಇದರ ನಿರ್ಮಾಣಕ್ಕೆ ಉಳಿದ ಮಾದರಿಗಳಿಗೆ ಹೋಲಿಸಿದರೆ, ಅತಿ ಕಡಿಮೆ ಭೂಮಿ ಬೇಕಾಗುತ್ತದೆ. ನಿರೀಕ್ಷಿತ ಬೇಡಿಕೆ ಇರುವುದರಿಂದ ಪ್ರಯಾಣ ದರದ ಹೊರೆಯೂ ಜನರ ಮೇಲೆ ಆಗುವುದಿಲ್ಲ.ಕೈಗೆಟಕುವ ದರದಲ್ಲಿ ಸೇವೆ ಲಭ್ಯವಾಗಲಿದೆ.

  • ಯಾವ ಮಾರ್ಗದಲ್ಲಿ ಸಾಧ್ಯಾಸಾಧ್ಯತೆಗಳ ಪರೀಕ್ಷೆ ನಡೆಸಲು ನಿರ್ಧರಿಸಿದ್ದೀರಾ?

ಈ ಬಗ್ಗೆ ಇನ್ನಷ್ಟೇ ತೀರ್ಮಾನ ಆಗಬೇಕಾಗಿದೆ. ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡಿ, ಅಧ್ಯಯನ ನಡೆಸಲಾಗುವುದು. ಪೂರಕ ವರದಿ ಬಂದನಂತರ ಮುಂದುವರಿಯುತ್ತೇವೆ. ( ರಯಾನ್‌ ಕೆಲ್ಲಿ, ವರ್ಜಿನ್‌ ಹೈಪರ್‌ ಲೂಪ್‌ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ)

 

 -ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next