Advertisement

ಬೈಕ್‌ ಟೋ ಮಾಡಿದಕ್ಕೆ ಹೈಡ್ರಾಮ

12:44 AM Sep 22, 2019 | Lakshmi GovindaRaju |

ಬೆಂಗಳೂರು: ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿದ್ದ ಬೈಕ್‌ ಅನ್ನು ಟೋಯಿಂಗ್‌ ಮಾಡಿದ್ದಕ್ಕೆ, ಟೋಯಿಂಗ್‌ ವಾಹನ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಕರ್ತವ್ಯದ ವೇಳೆ ಮದ್ಯ ಸೇವಿಸಿದ್ದಾರೆ ಎಂದು ಸುಳ್ಳು ಹಬ್ಬಿಸಿದ ಬೈಕ್‌ ಸವಾರ, ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ನೂರಾರು ಜನರನ್ನು ಸೇರಿಸಿ ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರ ದಟ್ಟಣೆಗೆ ಕಾರಣನಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

Advertisement

ಘಟನೆ ಸಂಬಂಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಮುಖ ಆರೋಪಿ ಯಶವಂತರಾವ್‌ ಹಾಗೂ ಇತರೆ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಮೂಲಗಳ ಪ್ರಕಾರ ಈಗಾಗಲೇ ಯಶವಂತರಾವ್‌ ಸೇರಿ ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ದಿನವಿಡೀ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುವ ಕಾರಣ, ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ. ಹೀಗಾಗಿ ಈ ರಸ್ತೆಯನ್ನು ಪರ್ಯಾಯ ಪಾರ್ಕಿಂಗ್‌ ಜೋನ್‌ ಎಂದು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿದೆ. ಪ್ರತಿನಿತ್ಯ ಹತ್ತಾರು ಪೊಲೀಸ್‌ ಸಿಬ್ಬಂದಿ ಈ ರಸ್ತೆಯಲ್ಲಿ ಟ್ರಾಫಿಕ್‌ ನಿಯಂತ್ರಿಸಲು ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಸಂಬಂಧ ಈ ರಸ್ತೆಯಲ್ಲಿ ಟೋಯಿಂಗ್‌ ವಾಹನಗಳು ಸದಾ ಸಂಚರಿಸಿ, ನಿಲುಗಡೆ ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಹೊತ್ತೂಯ್ಯುತ್ತವೆ.

ಏನಿದು ಘಟನೆ?: ಭಾನುವಾರ ಬೆಳಗ್ಗೆ ರಾಜಾಜಿನಗರ ಸಂಚಾರ ಠಾಣೆಯ ಎಎಸ್‌ಐ ಗಂಗಯ್ಯ ಟೋಯಿಂಗ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಟೋಯಿಂಗ್‌ ವಾಹನದ ಜತೆ ಹೋಗುವಾಗ ಧ್ವನಿವರ್ಧಕಗಳ ಮೂಲಕ ನೋಪಾರ್ಕಿಂಗ್‌ನಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೂ ಕೆಲವರು ವಾಹನಗಳನ್ನು ತೆರೆವುಗೊಳಿಸಿರಲಿಲ್ಲ.

ಈ ವೇಳೆ ಆರೋಪಿ ಯಶವಂತ್‌ ಬೈಕ್‌ ಅನ್ನು ಟೋಯಿಂಗ್‌ ಸಿಬ್ಬಂದಿ ವಾಹನಕ್ಕೆ ಹಾಕಿಕೊಂಡು ತೆಗೆದಿಕೊಂಡು ಹೇಗಿದ್ದರು. ಬಳಿಕ ಸ್ಥಳಕ್ಕೆ ಬಂದ ಆರೋಪಿ ದಂಡ ಕಟ್ಟಿದ್ದಾನೆ. ನಂತರ ಅನಗತ್ಯವಾಗಿ ಟೋಯಿಂಗ್‌ ಸಿಬ್ಬಂದಿ ಮತ್ತು ಸಂಚಾರ ಪೊಲೀಸರ ಜತೆ ವಾಗ್ವಾದ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಟೋಯಿಂಗ್‌ ವಾಹನ ಚಾಲಕ ಹಾಗೂ ಸಂಚಾರ ಅಧಿಕಾರಿ ಮದ್ಯ ಸೇವಿಸಿದ್ದಾರೆ ಎಂದು ಜೋರಾಗಿ ಕೂಗಾಡಿದ್ದಾನೆ. ಈತನ ಕೂಗಾಟದಿಂದ ಸುಮಾರು 400ಕ್ಕೂ ಅಧಿಕ ಸಾರ್ವಜನಿಕರು ರಾಜ್‌ಕುಮಾರ್‌ ರಸ್ತೆಯಲ್ಲಿ ಜಮಾಯಿಸಿದ್ದಾರೆ.

Advertisement

ವಾಹನಗಳನ್ನು ಅಡ್ಡಗಟ್ಟಿದ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದೆ. ಇದರಿಂದ ಆಕ್ರೋಶಗೊಂಡ ಸಂಚಾರ ಪೊಲೀಸರು, ಅನಗತ್ಯವಾಗಿ ಜಗಳ ತೆಗೆದು ಕರ್ತವ್ಯಕ್ಕೆ ಅಡ್ಡಿಪಡಿಸುವುದು ಬೇಡ, ಸ್ಥಳದಿಂದ ಹೊರಡಿ ಎಂದು ಸೂಚಿಸಿದ್ದಾರೆ. ಆದರೂ, ಆರೋಪಿ ಕೆಲ ಸಾರ್ವಜನಿಕರ ಜತೆ ಸೇರಿಕೊಂಡು ವಾಗ್ವಾದ ನಡೆಸಿದ್ದು, ಟೋಯಿಂಗ್‌ ವಾಹನವನ್ನು ಜಖಂಗೊಳಿಸಿದ್ದಾನೆ. ಇದನ್ನು ತಡೆಯಲು ಬಂದ ಎಎಸ್‌ಐ ಗಂಗಯ್ಯ ಅವರ ಕೈಬೆರಳನ್ನು ಆರೋಪಿ ಮುರಿದಿದ್ದಾನೆ.

ಹಾಲ್ಕೋಮೀಟರ್‌ ತರಿಸಿ:
ಗಲಾಟೆ ವಿಚಾರ ತಿಳಿದ ರಾಜಾಜಿನಗರ ಠಾಣೆ ಇನ್‌ಸ್ಪೆಕ್ಟರ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ, ಆರೋಪಿ ಹಾಗೂ ಇತರೆ ಕಿಡಿಗೇಡಿಗಳು ಟೋಯಿಂಗ್‌ ವಾಹನ ಚಾಲಕ ಮತ್ತು ಸಂಚಾರ ಪೊಲೀಸ್‌ ಅಧಿಕಾರಿಯನ್ನು ಆಲ್ಕೋಮೀಟರ್‌ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಒಪ್ಪಿದ ಇನ್‌ಸ್ಪೆಕ್ಟರ್‌, ಆಲ್ಕೋಮೀಟರ್‌ ತರಿಸಿ ನಾಲ್ಕು ಬಾರಿ ಸಾರ್ವಜನಿಕರ ಸಮ್ಮುಖದಲ್ಲೇ ಪರೀಕ್ಷೆಗೆ ಒಳಪಡಿಸಿದ್ದು, ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿಲ್ಲ. ಆದರೂ, ಆರೋಪಿ ವಾಹನಗಳ ದಾಖಲೆ ತೋರಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾನೆ. ಕೊನೆಗೆ ಸ್ಥಳಕ್ಕೆ ಬಂದ ರಾಜಾಜಿನಗರ ಕಾನೂನು ಸುವ್ಯವಸ್ಥೆ ಠಾಣಾಧಿಕಾರಿ, ಎಸಿಪಿ ಹಾಗೂ ಸಂಚಾರ ವಿಭಾಗದ ಎಸಿಪಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಒಂದೂವರೆ ಗಂಟೆ ಸಂಚಾರ ದಟ್ಟಣೆ: ಆರೋಪಿ ಯಶವಂತ ರಾವ್‌ ಮತ್ತು ಇತರೆ ಕಿಡಿಗೇಡಿಗಳ ಕೃತ್ಯದಿಂದ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಪರಿಣಾಮ, ನವರಂಗ್‌ ಸಿಗ್ನಲ್‌ನಿಂದ ರಾಜಾಜಿನಗರದ ಓರಾಯಾನ್‌ ಮಾಲ್‌ವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಈ ವೇಳೆ ಕೆಲ ಬೈಕ್‌ ಸವಾರರು ಪರ್ಯಾಯ ಮಾರ್ಗಗಳ ಮೂಲಕ ತೆರಳಿದರು. ಆ್ಯಂಬುಲೆನ್ಸ್‌ಗಳಿಗೂ ಸಂಚಾರ ಪೊಲೀಸರೇ ಪರ್ಯಾಯ ಮಾರ್ಗ ಸೂಚಿಸಿ ಕಳುಹಿಸಿದರು.

ವಿಡಿಯೋ ವೈರಲ್‌: ಈ ಘಟನೆಯನ್ನು ಮೊಬೈಲ್‌ ಮೂಲಕ ಚಿತ್ರೀಕರಿಸಿಕೊಂಡಿರುವ ಕೆಲ ವ್ಯಕ್ತಿಗಳು ಅವುಗಳನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೂಲಕ ಹರಿಬಿಟ್ಟು; “ಸಂಚಾರ ಪೊಲೀಸರ ದರ್ಪ, ದೌರ್ಜನ್ಯಗಳು ಪದೇ ಪದೆ ಸಾಬೀತಾಗುತ್ತಿವೆ’ ಎಂದು ಆರೋಪಿಸಿದ್ದು, ಇದು ಎಲ್ಲೆಡೆ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next