Advertisement

ತೆಲಂಗಾಣ:ಎನ್ ಕೌಂಟರ್ ಹೇಳಿಕೆ ಬೆನ್ನಲ್ಲೇ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಶವ ಪತ್ತೆ

12:21 PM Sep 16, 2021 | Team Udayavani |

ಹೈದರಾಬಾದ್: ಆರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿದ್ದ ಆರೋಪಿಯನ್ನು ಬಂಧಿಸಿ, ಎನ್ ಕೌಂಟರ್ ಮಾಡುವುದಾಗಿ ತೆಲಂಗಾಣ ಸಚಿವ ಮಲ್ಲ ರೆಡ್ಡಿ ಬಹಿರಂಗವಾಗಿ ಭರವಸೆ ನೀಡಿದ್ದ ಎರಡು ದಿನಗಳ ನಂತರ ಆರೋಪಿಯ ಶವ ಹೈದರಾಬಾದ್ ನ ರೈಲ್ವೆ ಹಳಿ ಮೇಲೆ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಟೈಮ್ಸ್ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ತಾಲಿಬಾನ್ ಉಗ್ರ ಮುಲ್ಲಾ ಬರಾದಾರ್ ಹೆಸರು!

ಆರೋಪಿ ತಪ್ಪಿಸಿಕೊಂಡು ಹೋಗುವ ಸಂದರ್ಭದಲ್ಲಿ ರೈಲಿನ ಮುಂಭಾಗದಲ್ಲಿ ಹಾರಿದ ಪರಿಣಾಮ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆಯ ಫೋಟೋಗಳನ್ನು ತೆಲಂಗಾಣ ಪೊಲೀಸ್ ವರಿಷ್ಠಾಧಿಕಾರಿ ಬಿಡುಗಡೆಗೊಳಿಸಿದ್ದಾರೆ.

ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪಿಯನ್ನು ಸೆರೆಹಿಡಿದು ನಂತರ ಎನ್ ಕೌಂಟರ್ ಮಾಡುವುದಾಗಿ ಮಂಗಳವಾರ ಸಚಿವ ಮಲ್ಲ ರೆಡ್ಡಿ ಹೈದರಾಬಾದ್ ನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.

ಅತ್ಯಾಚಾರ ಎಸಗಿದ್ದ ಶಂಕಿತ ಆರೋಪಿ ಮಲ್ಲಕೊಂಡ ರಾಜು ಎಂಬಾತನ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿ, ಈತನ ಬಗ್ಗೆ ಸುಳಿವು ನೀಡಿದವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

Advertisement

ಸೆಪ್ಟೆಂಬರ್ 9ರಂದು ಹೈದರಾಬಾದ್ ನ ಸಿಂಗರೇನಿ ಕಾಲೋನಿಯ ನಿವಾಸಿ ಆರು ವರ್ಷದ ಹೆಣ್ಣು ಮಗು ನಾಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ರಾಜು ಮನೆಯಲ್ಲಿ ಬೆಡ್ ಶೀಟ್ ನಲ್ಲಿ ಸುತ್ತಿಟ್ಟಿದ್ದ ಮಗುವಿನ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವುದು ದೃಢಪಟ್ಟಿತ್ತು.

ಪ್ರಾಥಮಿಕ ವರದಿಯ ಪ್ರಕಾರ ಆರೋಪಿಯನ್ನು ಬಂಧಿಸಲಾಗಿತ್ತು ಎಂದು ತಿಳಿದು ಬಂದಿತ್ತು. ಆದರೆ ಇದೊಂದು ಸುಳ್ಳು ಸುದ್ದಿ ಎಂದು ನಂತರ ಪೊಲೀಸರು ತಿಳಿಸಿದ್ದರು. ಘಟನೆ ಬಗ್ಗೆ ತೀವ್ರ ಪ್ರತಿಭಟನೆ, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಮಗುವಿನ ಪೋಷಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದರು. ಅಲ್ಲದೇ ಕೆಲವರು ಆರೋಪಿಯನ್ನು ಎನ್ ಕೌಂಟರ್ ಮಾಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ವರದಿ ವಿವರಿಸಿದೆ.

ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಹಲಾರು ರಾಜಕೀಯ ಮುಖಂಡರು, ಕಾರ್ಯಕರ್ತರು, ಸಿನಿಮಾ ಸ್ಟಾರ್ ನಟರು ಕೂಡಾ ಆಕ್ರೋಶ ವ್ಯಕ್ತಪಡಿಸಿ, ಮಗುವಿನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next