Advertisement

ಹೈದರಾಬಾದ್‌ ನಿರ್ಗಮನ: ಆಡಳಿತ ಮಂಡಳಿ ಅಸಮಾಧಾನ

11:52 PM May 16, 2023 | Team Udayavani |

ಹೈದರಾಬಾದ್‌: ಸೋಮವಾರ ರಾತ್ರಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಕೈಯಲ್ಲಿ 34 ರನ್‌ ಸೋಲನುಭವಿಸುವ ಮೂಲಕ ಸನ್‌ರೈಸರ್ ಹೈದರಾಬಾದ್‌ 2023ರ ಐಪಿಎಲ್‌ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಕೂಟದಿಂದ ನಿರ್ಗಮಿಸಿ ಡೆಲ್ಲಿ ಕ್ಯಾಪಿಟಲ್ಸ್‌ ಸಾಲಿಗೆ ಸೇರಿದೆ.

Advertisement

12 ಪಂದ್ಯಗಳನ್ನಾಡಿರುವ ಹೈದರಾಬಾದ್‌ ಕೇವಲ 4 ಪಂದ್ಯಗಳಲ್ಲಿ ಜಯ ಕಂಡಿದೆ. ಗುಜರಾತ್‌ ವಿರುದ್ಧ ಜಯಿಸಿದ್ದೇ ಆದರೆ ಪ್ಲೇ ಆಫ್ ಪ್ರವೇಶದ ಕ್ಷೀಣ ಅವಕಾಶ ಇರುತ್ತಿತ್ತು.
ತಂಡದ ಈ ವೈಫ‌ಲ್ಯಕ್ಕೆ ಆಡಳಿತ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೆಲವು ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಕೋಚ್‌ ಬ್ರಿಯಾನ್‌ ಲಾರಾ ಅವರತ್ತ ಚಾಟಿ ಬೀಸಿದೆ. ವೇಗಿ ಉಮ್ರಾನ್‌ ಮಲಿಕ್‌ ಅವರ ಸೇವೆಯನ್ನು ಕಡೆಗಣಿಸಲಾಗಿದೆ ಎಂಬುದು ಮುಖ್ಯ ಆರೋಪ.

ಭಾರತದಲ್ಲೇ ಅತ್ಯಂತ ವೇಗದ ಎಸೆತಗಳನ್ನಿಕ್ಕಬಲ್ಲ ಸಾಮರ್ಥ್ಯ ಹೊಂದಿರುವ ಉಮ್ರಾನ್‌ ಮಲಿಕ್‌ ಈ ಋತುವಿನಲ್ಲಿ ಆಡಿದ್ದು 7 ಪಂದ್ಯಗಳನ್ನು ಮಾತ್ರ. ಗಳಿಸಿದ್ದು 5 ವಿಕೆಟ್‌. 35 ರನ್ನಿಗೆ 2 ವಿಕೆಟ್‌ ಕೆಡವಿದ್ದು ಉತ್ತಮ ಸಾಧನೆ. ಎ. 29ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆಡಿದ ಬಳಿಕ ಜಮ್ಮು ಕಾಶ್ಮೀರದ ಈ ವೇಗಿ ಮತ್ತೆ ಅಂಗಳಕ್ಕೆ ಇಳಿದಿಲ್ಲ.

ಭಾರತ ಪರ 8 ಏಕದಿನ ಹಾಗೂ 8 ಟಿ20 ಪಂದ್ಯಗಳನ್ನು ಆಡಿರುವ ಉಮ್ರಾನ್‌ ಮಲಿಕ್‌ ಅವರನ್ನು ಕಡೆಗಣಿಸಿದ ಕುರಿತು ಅವರ ಮೆಂಟರ್‌ ಇರ್ಫಾನ್‌ ಪಠಾಣ್‌ ಕೂಡ ಬೇಸರಿಸಿದ್ದಾರೆ. “ಲೀಗ್‌ನ ಫಾಸ್ಟೆಸ್ಟ್‌ ಬೌಲರ್‌ನನ್ನು ಹೊರಗೆ ಕೂರಿಸಿರುವುದು ನನ್ನನ್ನು ವಿಪರೀತ ಘಾಸಿಗೊಳಿಸಿದೆ” ಎಂದು ಬರೆದುಕೊಂಡಿದ್ದರು.

ಇದಕ್ಕೆ ಬ್ರಿಯಾನ್‌ ಲಾರಾ ಸ್ಪಷ್ಟನೆ ನೀಡಿದ್ದಾರೆ. “ನಾವು ಆಟಗಾರರ ಫಾರ್ಮ್ಗೆ ಮೊದಲ ಆದ್ಯತೆ ನೀಡುತ್ತೇವೆ. ಇದನ್ನು ಗಮನಿಸಿ ಆಡುವ ಬಳಗವನ್ನು ಅಂತಿಮಗೊಳಿಸಲಾಗುತ್ತದೆ. ಉಮ್ರಾನ್‌ ಮಲಿಕ್‌ ಮೇಲೆ ನಾವು ವಿಪರೀತ ನಿರೀಕ್ಷೆ ಇರಿಸಿದ್ದೆವು. ಡೇಲ್‌ ಸ್ಟೇನ್‌ ಮಾರ್ಗದರ್ಶನವನ್ನೂ ಅವರು ಪಡೆದಿದ್ದರು. ಆದರೆ ಮಲಿಕ್‌ ನಿರೀಕ್ಷಿತ ಮಟ್ಟ ತಲುಪಲಿಲ್ಲ” ಎಂದಿದ್ದಾರೆ.

Advertisement

“ನಮ್ಮ ಬಳಿ 25 ಆಟಗಾರರಿದ್ದಾರೆ. ವೇಗಿ ಕಾರ್ತಿಕ್‌ ತ್ಯಾಗಿ ಕೂಡ ಇವರಲ್ಲೊಬ್ಬರು. ಅವರು ಸ್ಪೆಷಲ್‌ ಟ್ಯಾಲೆಂಟ್‌ ಹೊಂದಿರುವ ಬೌಲರ್‌. ಅವರಿಗೆ ಸಿಕ್ಕಿದ್ದು ಒಂದು ಅವಕಾಶ ಮಾತ್ರ. ನನ್ನ ಪ್ರಕಾರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪು ಸಂಭವಿಸಿಲ್ಲ. ಆದರೆ ನಾವು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫ‌ಲರಾದೆವು” ಎಂಬುದಾಗಿ ಲಾರಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next