Advertisement

ಪತಿ, ಪತ್ನಿ ಔರ್‌ ಪೈಸಾ…

11:24 PM Aug 04, 2019 | mahesh |

ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬಳಸಿಕೊಂಡವದನೆ ನಾವು ಅದಕು ಇದಕು ಎದಕು…

Advertisement

ಎಂದು ಕವನ ಕಟ್ಟಿ ಹಾಡಲೇನೋ ಚೆಂದ. ವಾಸ್ತವದಲ್ಲಿ ಇಬ್ಬರೂ ಬಡವರಾದರೆ ಬದುಕೇ ದುರ್ಭರ. ಸಂಸಾರ ರಥವನ್ನು ಮುಂದಕ್ಕೆಳೆಯಬೇಕಾದರೆ ಸಂಪಾದನೆ ಬಹಳ ಮುಖ್ಯ.ಹಿಂದೆ ಗಂಡ ಹೊರಗೆ ದುಡಿದು ಸಂಪಾದಿಸುವುದು, ಹೆಂಡತಿ ಅಡುಗೆ, ಮಕ್ಕಳ ಲಾಲನೆಪೋಷಣೆ ಎಂದು ಮನೆವಾರ್ತೆಗಳನ್ನು ನೋಡಿಕೊಳ್ಳುವುದು ಎಂಬ ಸಿದ್ಧಸೂತ್ರದ ವ್ಯವಸ್ಥೆಯಿತ್ತು. ಆದರೆ ಆಧುನಿಕ ಸಮಾಜದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿದರೇನೆ ನೆಮ್ಮದಿಯ ಬದುಕು ಮತ್ತು ಮಕ್ಕಳ ಭವಿಷ್ಯ ಸುಗಮ. ಆದರೆ ಅನೇಕ ವೇಳೆ ಗಂಡ-ಹೆಂಡತಿ ನಡುವೆ ಹಣವೇ ಜಗಳಕ್ಕೆ ಕಾರಣವಾಗುತ್ತದೆ. The handling of finances is one of the major emotional battlegrounds of any marriage ಎಂದಿದ್ದಾರೆ ಓರ್ವ ಅನುಭವಿ ಸಂಸಾರಿ.

ದಂಪತಿಗಳ ನಡುವಿನ ಹೆಚ್ಚಿನ ಜಗಳಗಳಿಗೆ ಹಣಕಾಸಿನ ವಿಚಾರಗಳೇ ಮುಖ್ಯ ಹೇತುವಾಗಿರುತ್ತವೆೆ ಎಂಬ ಅಂಶ ಸಮೀಕ್ಷೆಯಿಂದಲೂ ದೃಢಪಟ್ಟಿದೆ. ಇಷ್ಟು ಮಾತ್ರವಲ್ಲ ಹಣಕಾಸಿಗೆ ಸಂಬಂಧಪಟ್ಟ ವಾದ -ಪ್ರತಿವಾದಗಳು ಹೆಚ್ಚು ತೀವ್ರವೂ ಭಾವನಾತ್ಮಕವೂ ಆಗಿರುತ್ತವೆಯಂತೆ. ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕವಾದರೂ ಹಣಕಾಸಿನ ವಿಚಾರವಾದರೆ ಇದು ಮತ್ತೂ ಮುಂದುವರಿಯುವ ಸಾಧ್ಯತೆಯಿದೆ. ಹಾಗೆಂದು ಹಣ ನಿಮ್ಮ ದಾಂಪತ್ಯದಲ್ಲೂ ವಿಲನ್‌ ಆಗಲೇ ಬೇಕೆಂದಿಲ್ಲ. ಆದರೆ ಇದಕ್ಕೆ ನೀವು ಸ್ವಲ್ಪ ಬುದ್ಧಿವಂತಿಕೆ ಮತ್ತು ಮುಂದಾಲೋಚನೆಯನ್ನು ಉಪಯೋಗಿಸಿಕೊಳ್ಳಬೇಕು. ಭವಿಷ್ಯದ ಸಾಂಸಾರಿಕ ತಾಪತ್ರಯಗಳನ್ನು ಗಮನ ದಲ್ಲಿಟ್ಟುಕೊಂಡು ಗಂಡ-ಹೆಂಡತಿ ಇಬ್ಬರೂ ಸೇರಿ ಒಂದು ಬಜೆಟ್ ಸಿದ್ಧಪಡಿಸಿ, ವಿವಿಧ ಖರ್ಚುವೆಚ್ಚಗಳಿಗೆ ಅಗತ್ಯವಿರುಷ್ಟೇ ಅನುದಾನಗಳನ್ನು ಒದಗಿಸಿ, ಉಳಿದ ಮೊತ್ತವನ್ನು ಸುರಕ್ಷಿತ ವಾಗಿ ಠೇವಣಿಯಿಡುವ ಅಥವಾ ಲಾಭದಾಯಕವಾದ ಯಾವುದಾದರೂ ಹೂಡಿಕೆ ಮಾಡುವ ಧನವಿನಿಯೋಗ ಮಸೂದೆಯನ್ನು ಮಂಡಿಸಿ ಸರ್ವಾನುಮತದಿಂದ ಮಂಜೂರು ಮಾಡಿಕೊಂಡರೆ ನಮ್ಮ ಸಂಸಾರ ಆನಂದ ಸಾಗರ…

·ಮದುವೆಗೆ ಮುಂಚೆ ನೀವು ಬಿಂದಾಸ್‌ ವ್ಯಕ್ತಿಯಾಗಿರಬಹುದು. ಆದರೆ ಮದುವೆ ಬಳಿಕ ಅದೆಲ್ಲ ನಡೆಯುವುದಿಲ್ಲ. ಏನೇ ಸಾಲಸೋಲ ಮಾಡಿದ್ದರೂ ಮದುವೆಯಾದ ಬಳಿಕ ಅದನ್ನು ತೀರಿಸುವ ಕೆಲಸವನ್ನು ಮೊದಲು ಮಾಡಿ.

·ಅನಿರೀಕ್ಷಿತವಾಗಿ ಎದುರಾಗಬಹುದಾದ ಹೆಚ್ಚುವರಿ ಖರ್ಚುಗಳನ್ನು ನಿಭಾಯಿಸಲು ಒಂದು ‘ಸಾದಿಲ್ವಾರು ನಿಧಿ’ ಇಟ್ಟುಕೊಳ್ಳುವುದು ಉತ್ತಮ. ಉದ್ಯೋಗ ಕಳೆದುಕೊಂಡರೆ, ಅಪಘಾತದಂಥ ದುರಂತಗಳು ಸಂಭವಿಸಿದರೆ, ಹೆಂಡತಿ, ಮಕ್ಕಳು ಕಾಯಿಲೆ ಕಸಾಲೆ ಬಿದ್ದರೆ ಇದು ನೆರವಿಗೆ ಬರುತ್ತದೆ.

Advertisement

·ಯಾರಾದರೊಬ್ಬರು ದುಡಿಯುವುದಾದರೆ ಅವರ ಹೆಸರಿನಲ್ಲಿ ವಿಮೆಯಿರಲಿ. ಇಬ್ಬರೂ ದುಡಿಯುವುದಾದರೆ ಇಬ್ಬರ ಹೆಸರಿನಲ್ಲೂ ಮಾಡಿಸಿಕೊಳ್ಳಬಹುದು. ಆದರೆ ಲೈಫ್ ಕಮ್‌ ಇನ್ವೆಸ್ಟ್‌ಮೆಂಟ್ ಪಾಲಿಸಿ ಬೇಡ.

·ಆರೋಗ್ಯ ವಿಮೆಯನ್ನೂ ಮಾಡಿಸಿಕೊಳ್ಳಿ. ಕಂಪೆನಿ ನಿಮಗೆ ಈ ಸೌಲಭ್ಯ ನೀಡುತ್ತಿದ್ದರೂ ಒಂದು ವೇಳೆ ಕೆಲಸ ಹೋದ ಮತ್ತು ಇನ್ನೊಂದು ಕೆಲಸ ಹುಡುಕುವ ನಡುವಿನ ಅವಧಿಯಲ್ಲಿ ಏನಾದರೂ ಆದರೆ ಇದು ನಿಮಗೆ ಸುರಕ್ಷೆಯ ಭಾವನೆ ನೀಡುತ್ತದೆ. ನಿಮ್ಮನ್ನು ಅವಲಂಬಿಸಿಕೊಂಡು ತಂದೆ ತಾಯಿ, ಅತ್ತೆ, ಮಾವ, ಮಕ್ಕಳು ಇದ್ದರೆ ಹೆಚ್ಚುವರಿ ಆರೋಗ್ಯ ವಿಮೆ ಅತ್ಯವಶ್ಯ.

·ಸ್ವಂತ ಮನೆ, ಸ್ವಂತ ಕಾರು ಇರಬೇಕೆನ್ನುವುದು ಎಲ್ಲ ದಂಪತಿಗಳ ಇಚ್ಛೆ. ಹಾಗೆಂದು ಇವುಗಳ ಕಂತಿಗೆ ನಿಮ್ಮ ಒಟ್ಟು ಗಳಿಕೆಯ ಶೇ.30ಕ್ಕಿಂತ ಹೆಚ್ಚು ಹಣ ಹೋದರೆ ದೈನಂದಿನ ಖರ್ಚುಗಳು, ಮಕ್ಕಳ ಶಾಲೆ-ಕಾಲೇಜು ಖರ್ಚುವೆಚ್ಚಗಳನ್ನು ನಿಭಾಯಿಸಲು ಕಷ್ಟವಾಗಬಹುದು.

·ಗಂಡ-ಹೆಂಡತಿ ಇಬ್ಬರೂ ಒಂದಷ್ಟು ಮೊತ್ತವನ್ನು ಹೂಡಿಕೆ ಮಾಡುವುದು ಅಗತ್ಯ. ಹೂಡಿಕೆಯನ್ನು ಕಿರು, ಮಧ್ಯಮ ಮತ್ತು ದೀರ್ಘಾವಧಿ ಎಂದು ವಿಭಾಗಿಸಿಕೊಳ್ಳಿ. ಮನೆ ಕಟ್ಟುವಾಗ, ಕಾರು ಖರೀದಿಸುವಾಗ ಅಥವಾ ಇನ್ಯಾವುದೇ ಆಸ್ತಿ ಖರೀದಿ ಸಂದರ್ಭದಲ್ಲಿ ಇಂಥ ಹೂಡಿಕೆಗಳು ಬಹಳ ನೆರವಿಗೆ ಬರುತ್ತವೆ.

•ಉಮೇಶ್‌ ಬಿ ಕೋಟ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next