Advertisement

ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

12:28 PM Jan 17, 2023 | Team Udayavani |

ಬೆಂಗಳೂರು: ಅಕ್ರಮ ಸಂಬಂಧ ಶಂಕಿಸಿ ಪತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದು, ಬಳಿಕ ಭಾಮೈದನಿಗೆ ಕೊಲೆ ಮಾಡಿರುವುದಾಗಿ ಸಂದೇಶ ಕಳುಹಿಸಿರುವ ಘಟನೆ ಸುದ್ದುಗುಂಟೆಪಾಳ್ಯ ಠಾಣೆ ವಾಪ್ತಿಯಲ್ಲಿ ನಡೆದಿದೆ.

Advertisement

ನಜ್ಮಾ ಖಾನ್‌(27) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಪತಿ ನಾಸೀರ್‌ ಹುಸೇನ್‌ (30) ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳ ಮೂಲದ ನಾಸೀರ್‌ ಹುಸೇನ್‌ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಸುಭಾಷ್‌ನಗರದಲ್ಲಿ ವಾಸವಾಗಿದ್ದ. ಖಾಸಗಿ ಕಂಪನಿಯಲ್ಲಿ ಲ್ಯಾಪ್‌ಟಾಪ್‌ ರಿಪೇರಿ ಕೆಲಸ ಮಾಡುತ್ತಿದ್ದ. ಜತೆಗೆ ಸುಭಾಷ್‌ನಗರದಲ್ಲಿ ಸಣ್ಣ ಕೊಠಡಿಯಲ್ಲಿಯೂ ಖಾಸಗಿಯಾಗಿ ಲ್ಯಾಪ್‌ ಟಾಪ್‌ ರಿಪೇರಿ ಮಾಡುತ್ತಿದ್ದ.

ಇದೇ ವೇಳೆ ಕೊಠಡಿಯ ಮನೆ ಮುಂದೆ ವಾಸವಾಗಿದ್ದ ನಜ್ಮಾ ಖಾನ್‌ರನ್ನು ಪ್ರೀತಿಸಿದ್ದು, ಆರು ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸುಭಾಷ್‌ ನಗರದಲ್ಲೇ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ನಾಲ್ಕು ತಿಂಗಳಿಂದ “ನಿನ್ನ ಸಹೋದರಿ ಪತಿ ಜತೆ ಅಕ್ರಮ ಸಂಬಂಧ ಹೊಂದಿದ್ದಿಯಾ?’ ಎಂದು ನಿತ್ಯ ಜಗಳ ನಡೆಸುತ್ತಿದ್ದ. ಹೀಗಾಗಿ ಒಂದು ತಿಂಗಳ ಹಿಂದಷ್ಟೇ ಸುದ್ದುಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಆದರೂ ಪತ್ನಿ ಮೇಲೆ ನಿತ್ಯ ಹಲ್ಲೆ ನಡೆಸುತ್ತಿದ್ದ. ಇತ್ತೀಚೆಗಷ್ಟೇ ಆಕೆ ಗರ್ಭಿಣಿಯಗಿದ್ದಳು ಎಂದು ಹೇಳಲಾಗಿದೆ. ಅದಕ್ಕೆ “ನಾನು ಕಾರಣನಲ್ಲ. ನೀನು ಬೇರೆಯೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿರುವೆ’ ಎಂದು ಆರೋಪಿ ಹಲ್ಲೆ ನಡೆಸಿದ್ದಾನೆ.  ಭಾನುವಾರ ರಾತ್ರಿಯೂ ಜಗಳ ತೆಗೆದು, ಅದು ವಿಕೋಪಕ್ಕೆ ಹೋದಾಗ, ಕುತ್ತಿಗೆ ಹಿಸುಕಿ ಮತ್ತು ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

ಭಾಮೈದನಿಗೆ ಸಂದೇಶ: ಸಂಜೆ ವೇಳೆಗೆ ಪತ್ನಿ ನಜ್ಮಾ ಖಾನ್‌ರನ್ನು ಕೊಲೆಗೈದಿದ್ದ ನಾಸೀರ್‌ ಹುಸೇನ್‌, ರಾತ್ರಿ 10 ಗಂಟೆ ಸುಮಾರಿಗೆ ವಾಟ್ಸ್‌ಆ್ಯಪ್‌ನಲ್ಲಿ ಭಾಮೈದನಿಗೆ “ನಿನ್ನ ಸಹೋದರಿಯನ್ನು ಫ್ಲ್ಯಾಟ್‌ನಲ್ಲಿ ಕೊಲೆಗೈದಿದ್ದೇನೆ. ಮೃತದೇಹ ಕೊಂಡೊಯ್ಯು’ ಎಂದು ಸಂದೇಶ ಕಳುಹಿಸಿದ್ದಾನೆ. ಅದರಿಂದ ಗಾಬರಿಗೊಂಡ ಭಾಮೈದ, ಕೂಡಲೇ ಭಾವ ನಾಸೀರ್‌ ಹುಸೇನ್‌ಗೆ ಕರೆ ಮಾಡಿದ್ದಾರೆ. ಆದರೆ, ಆತ ಸ್ವೀಕರಿಸಿಲ್ಲ. ನಂತರ ಫ್ಲ್ಯಾಟ್‌ ಗೆ ಬಂದಾಗ ಘಟನೆಗೆ ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ಸುದ್ದು ಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next