Advertisement

ಹುಣಸೂರು: ಉಡುವೆಪುರದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ

01:56 PM Oct 10, 2021 | Team Udayavani |

ಹುಣಸೂರು : ಒಂದೆಡೆ ಕಾಲುಬಾಯಿ ಜ್ವರ,ಮತೊಂದೆಡೆ ಗಂಟು ರೋಗದಿಂದಾಗಿ ರಾಸುಗಳು ಹೈರಾಣಾಗಿದ್ದರೆ, ಹಾಲಿನ ಕಡಿಮೆ ಉತ್ಪಾದನೆಯ ಭೀತಿಯಲ್ಲಿ ಹೈನುಗಾರರದ್ದಾಗಿದೆ.

Advertisement

ನಾಗರಹೊಳೆ ಉದ್ಯಾನವನದಂಚಿನ ತಾಲೂಕಿನ ಹನಗೋಡು, ಗಾವಡಗೆರೆ, ಕಸಬಾ ಹೋಬಳಿಯ ಹಳ್ಳಿಗಳಲ್ಲಿ ಕಾಲು-ಬಾಯಿ ಜ್ವರ ಕಾಣಿಸಿಕೊಂಡಿದ್ದು, ಹನಗೋಡು ಭಾಗದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇದರೊಟ್ಟಿಗೆ ನಿಧಾನವಾಗಿ ಗಂಟುರೋಗವೂ ಸೇರಿಕೊಂಡಿದೆ.

ಹನಗೋಡು ಹೋಬಳಿಯ ಕಡೇಮನುಗನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಉಡುವೆಪುರ ಒಂದೇ ಗ್ರಾಮದಲ್ಲಿ 50ಕ್ಕೂ ಹೆಚ್ಚು ರಾಸುಗಳಿಗೆ ರೋಗ ಕಾಣಿಸಿಕೊಂಡಿದೆ. ಅಲ್ಲದೇ ನೇರಳಕುಪ್ಪೆ, ಚಿಲ್ಕುಂದ, ನಾಗಮಂಗಲ, ರತ್ನಪುರಿ, ಹುಣಸೂರು ಟೌನ್‌ನ ಕಲ್ಕುಣಿಕೆ ಹಾಗೂ ಗಾವಡಗೆರೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದ್ದು, ನರಕಯಾತನೆ ಅನುಭವಿಸುತ್ತಿವೆ ಹೀಗಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಹೈನೋದ್ಯಕ್ಕೂ ಹೊಡೆತ-ಸಾಕಾಣಿಕೆದಾರಿಗೆ ಆರ್ಥಿಕ ಸಂಕಷ್ಟ:

ಈ ಕಾಯಿಲೆಯಿಂದ ಹೈನುಗಾರಿಕೆಗೆ ತೊಂದರೆ ಇಲ್ಲದಿದ್ದರೂ ರಾಸುಗಳಿಗೆ ಕಾಯಿಲೆ ಬಂದAದಿನಿAದ ಹಾಲು ಕರೆಯಲು ಆಗುತ್ತಿಲ್ಲ. ಕಾಯಿಲೆ ತಗುಲಿದ ರಾಸುಗಳ ಹಾಲನ್ನು ಯಾರು ಉಪಯೋಗಿಸುವುದೂ ಇಲ್ಲ. ಇದರಿಂದ ನಿತ್ಯ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ತೊಳಲಾಡುತ್ತಿವೆ.

Advertisement

ರೋಗ ಲಕ್ಷಣಗಳಿವು;

ಕಾಲುಬಾಯಿ ಜ್ವರ ರೋಗಕ್ಕೆ ತುತ್ತಾದ ರಾಸುಗಳ ಕಾಲಿನ ಗೊರಸಿನ ಹುಣ್ಣಾಗಿ ನಡೆಯಲಾಗದ ಸ್ಥಿತಿಗೆ ತಲುಪಲಿದೆ., ಬಾಯಿ ಹುಣ್ಣಾಗಿ ಜೊಲ್ಲು ಸುರಿಸುವುದಲ್ಲದೇ ಮೇವು ತಿನ್ನಲು, ನೀರನ್ನೂ ಸಹ ಕುಡಿಯಲಾಗದೆ ಪರಿತಪಿಸುತ್ತವೆ. ಹೀಗಾಗಿ ಜಾನುವಾರು ಕೊಟ್ಟಿಗೆಯಲ್ಲೇ ರೋಧಿಸುತ್ತಾ, ಮೂಕ ವೇದನೆ ಅನುಭವಿಸುತ್ತವೆ.

ಗಂಟುರೋಗವೂ ಕಾಣಸಿಕೊಂಡಿದೆ:

ರಾಸುಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಕಣ್ಣಲ್ಲಿ ನೀರು ಸೋರುತ್ತದೆ, ನಂತರ ಅಲ್ಲಲ್ಲಿ ಚರ್ಮದಲ್ಲಿ ಗಂಟು ಕಾಣಿಸಿಕೊಳ್ಳುತ್ತದೆ. ತುರಿಕೆ ಉಂಟಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತಿದೆ. ಗರ್ಭಧರಿಸಿದ ಹಸುಗಳನ್ನು ಗರ್ಭಪಾತವಾಗುವ ಸಂಭವವಿದ್ದು, ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದಲ್ಲಿ ಗಂಟುಗಳು ರಂದ್ರಗಳಾಗಿ ಕೊಳೆತು ಸಾವನ್ನಪ್ಪಲಿವೆ. ಈ ರೋಗ ಕಾಣಿಸಿಕೊಂಡಲ್ಲಿ ಪ್ರತ್ಯೇಕವಾಗಿ ಕಟ್ಟಬೇಕು. ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸೊಳ್ಳೆ-ನೊಣ ಮುತ್ತದಂತೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕೆನ್ನುತ್ತಾರೆ. ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿಗಳು.

ವರ್ಷಕ್ಕೆರಡು ಬಾರಿ ಲಸಿಕೆ ಕೊಡಬೇಕು: ಜಾನುವಾರುಗಳಿಗೆ ವರ್ಷಕ್ಕೆರಡು ಬಾರಿ ಪಶುವೈದ್ಯ ಇಲಾಖೆವತಿಯಿಂದ ಕಾಲು-ಬಾಯಿ ಜ್ವರಕ್ಕೆ ಮುನ್ನೆಚ್ಚರಿಕೆಯಾಗಿ ಉಚಿತ ಲಸಿಕೆ ಹಾಕಬೇಕು. ಆದರೆ ಸರಕಾರ ಕೋವಿಡ್ ಕಾರಣ ನೀಡಿ ಕಳೆದ ಒಂದೂವರೆ ವರ್ಷದಿಂದ ಹಸುಗಳಿಗೆ ಕಾಲುಬಾಯಿ ರೋಗದ ವ್ಯಾಕ್ಸಿನ್‌ಗೆ ಅನುದಾನ ನೀಡದ ಪರಿಣಾಮ ರೋಗ ಉಲ್ಬಣಿಸಲು ಕಾರಣವಾಗಿದೆ. ಇನ್ನು ರೋಗಕ್ಕೆ ತುತ್ತಾದ ಜಾನುವಾರಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲಾ, ಪಶು ಆಸ್ಪತ್ರೆಗಳಲ್ಲಿ ಔಷಧ ಸಾಕಷ್ಟು ಪ್ರಮಾಣದಲ್ಲಿ ಸಿಗದೇ ರೈತರು ಕಂಗಾಲಾಗಿದ್ದಾರೆ. ಈ ರೋಗದ ವೈರಾಣುಗಳು ಇತರೆ ರಾಸುಗಳಿಗೆ ಹರಡುತ್ತಿದ್ದು, ಗ್ರಾಮದಿಂದ ಗ್ರಾಮಗಳಿಗೆ ಹಬ್ಬುತ್ತಿದೆ. ಹನಗೋಡು ಹೋಬಳಿ ಅರಣ್ಯದಂಚಿನಲ್ಲೇ ಇದ್ದು, ಹಸುಗಳು ಮೇಯಲು ಅರಣ್ಯಕ್ಕೆ ತೆರಳುವ ವೇಳೆ ವನ್ಯಜೀವಿಗಳಿಗೂ ಹರಡುವ ಭೀತಿಇದೆ.

ತಾಲೂಕಿನಲ್ಲಿ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ಉಲ್ಬಣಿಸುತ್ತಿದ್ದರೂ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಪಶುವೈದ್ಯಕೀಯ ಇಲಾಖೆ ಉಚಿತವಾಗಿ ವರ್ಷಕ್ಕೆರಡು ಬಾರಿ ಲಸಿಕೆ ನೀಡುತ್ತಿದ್ದರು. ಈ ವರ್ಷ ರೋಗ ಇರುವ ಬಗ್ಗೆ ತಿಳಿಸಿದರೆ ಮಾತ್ರ ಬಂದು ಚಿಕಿತ್ಸೆ ನೀಡುತ್ತಿದ್ದಾರಷ್ಟೆ. ಇನ್ನಾದರೂ ಶಾಸಕ ಎಚ್.ಪಿ.ಮಂಜುನಾಥರು ಸರಕಾರದ ಮೇಲೆ ಒತ್ತಡ ಹಾಕಿ ಅಗತ್ಯ ಲಸಿಕೆ ಹಾಗೂ ಔಷಧವನ್ನು ಕೊಡಿಸಿಕೊಡುವ ಮೂಲಕ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕೆAದು ಹೈನುಗಾರರ ಮನವಿ.

ಲಸಿಕೆಗೆ ಮನವಿ: ತಾಲೂಕಿನಲ್ಲಿ ಸುಮಾರು 71 ಸಾವಿರ ರಾಸುಗಳಿದ್ದು, ಮೂರು ವರ್ಷದ ನಂತರದ ಜಾನುವಾರುಗಳಿಗೆ 69 ಸಾವಿರ ರಾಸುಗಳಿಗೆ ಲಸಿಕೆಯನ್ನು ಹಾಕಬೇಕಿದ್ದು, ತಾಲೂಕಿನಲ್ಲಿ ದಾಸ್ತಾನಿದ್ದ 2 ಸಾವಿರ ಲಸಿಕೆಗಳನ್ನು ಹಾಕಲಾಗಿದೆ. ಹಾಲಿನ ಡೇರಿಗಳ ಮೂಲಕ ಲಸಿಕೆ ತರಿಸಿ ಹಳ್ಳಿಗಳಲ್ಲಿ ಕೊಡಿಸಲಾಗುತ್ತಿದೆ. ಕೊರೊನಾದಿಂದಾಗಿ ಲಸಿಕೆ ಸರಬರಾಜಾಗಿಲ್ಲ. ಈ ಮಾಹೆಯ ಅಂತ್ಯದಲ್ಲಿ ಲಸಿಕೆ ಸರಬರಾಜಾಗುವ ವಿಶ್ವಾಸವಿದೆ. ಕಾಯಿಲೆ ಹೆಚ್ಚಿರುವ ಕಡೆ ಸ್ಥಳೀಯ ಪಶು ವೈದ್ಯರು ಹಾಗೂ ಸಿಬ್ಬಂದಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ರೋಗ ಬಂದ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟುವುದರಿಂದ ರೋಗ ಹರಡುವುದನ್ನು ನಿಯಂತ್ರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next