Advertisement

ಹುಣಸೂರು: ಹಲವು ಸಮಸ್ಯೆಗಳನ್ನು ತೆರೆದಿಟ್ಟ ಸದಸ್ಯರು; ಕಾಲಮಿತಿಯೊಳಗೆ ಅಭಿವೃದ್ದಿಗೆ ಕ್ರಮ

01:23 PM Aug 05, 2022 | Team Udayavani |

ಹುಣಸೂರು: ನಗರದ ಹಲವು ಜ್ವಲಂತ ಸಮಸ್ಯೆಗಳನ್ನು ಹೊತ್ತು ತಂದಿದ್ದ ನಗರಸಭೆ ಸದಸ್ಯರಿಗೆ ಅಧ್ಯಕ್ಷೆ ಸಮೀನಾ ಪರ್ವಿನ್ ಹಾಗೂ ಪೌರಾಯುಕ್ತ ರವಿಕುಮಾರ್ ಖಡಕ್ ಉತ್ತರ ನೀಡಿ ಕೆಲಸವಾಗುವ ಆಶಾ ಭಾವನೆ ಹೊತ್ತು ನಿರ್ಗಮಿಸಿದ ಘಟನೆ ನಡೆಯಿತು.

Advertisement

ಹುಣಸೂರು ನಗರಸಭೆ ಅಧ್ಯಕ್ಷೆ ಸಮಿನಾ ಪರ್ವಿನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ತೂರಿ ಬಂದ ಸಮಸ್ಯೆಗಳ ಸರಮಾಲೆ ಇಂತಿವೆ:

ಸಭೆಯ ಆರಂಭದಲ್ಲಿ ಸದಸ್ಯರಾದ ಕೃಷ್ಣರಾಜಗುಪ್ತ, ಶರವಣ ಮತ್ತಿತರರು ನಗರದ ಸ್ಮಶಾನ ಹಾಳು ಕೊಂಪೆಯಂತಾಗಿದೆ, 30 ಲಕ್ಷ ರೂ. ವೆಚ್ಚದಲ್ಲಿ ಮಾಡಿದ್ದ ಅಭಿವೃದ್ದಿ ಕಾಣುತ್ತಿಲ್ಲ. ಇನ್ನಾದರೂ ಮೂಲಭೂತ ಸೌಕರ್ಯ ಕಲ್ಪಿಸಿ ಶವಸಂಸ್ಕಾರ ನಡೆಸಲು ಕ್ರಮ ವಹಿಸಬೇಕು ಎಂದಿದ್ದಕ್ಕೆ ಸ್ಮಶಾನಕ್ಕೆ ಕಾವಲುಗಾರರನ್ನು ನೇಮಿಸಿ ಅಗತ್ಯ ಕ್ರಮವಹಿಸಲಾಗುವುದು ಇದರ ನಿರ್ವಹಣೆಗೆ ಸೇವಾ ಸಂಸ್ಥೆಯೊಂದು ಮುಂದೆ ಬಂದಿದೆ ಎಂದ ಅವರು, ಸಂತೆ ಮೈದಾನದಲ್ಲಿ ನೆನೆಗುದಿಗೆ ಬಿದ್ದಿರುವ ಅಪೂರ್ಣ ಕಟ್ಟಡದಿಂದ ಪರಿಸರ ಹಾಳಾಗಿದ್ದು ಈ ಬಗ್ಗೆಯೂ ಸೂಕ್ತ ಕ್ರಮವಹಿಸಬೇಕೆಂಬ ಒತ್ತಾಯಕ್ಕೆ ಸಂತೆ ಮೈದಾನದ ಕಟ್ಟಡವನ್ನು ಪೂರ್ಣಗೊಳಿಸಿ ಶಾಂಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದು ಪೌರಾಯುಕ್ತ ರವಿಕುಮಾರ್ ಹೇಳಿದರು.

ಚಿತ್ರಮಂದಿರ ಕಟ್ಟಡ ರಕ್ಷಿಸಿ: ನಗರಸಭೆಯ ಚಿತ್ರಮಂದಿರ ಗುತ್ತಿಗೆದಾರರಿಂದ ಬಾಕಿ 55 ಲಕ್ಷ ವಸೂಲಿ ಮಾಡಿಲ್ಲ. ಇದೀಗ ಇಡೀ ಕಟ್ಟಡ ಪಾಳುಬಿದ್ದು, ಅಗತ್ಯ ಕ್ರಮ ವಹಿಸಬೇಕೆಂದು ಸದಸ್ಯ ರಮೇಶ್‌ರ ಒತ್ತಾಯಕ್ಕೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಲೋಕ್‌ ಅದಾಲತ್‌ನಲ್ಲಿ ತೀರ್ಮಾನವಾಗುವ ಲಕ್ಷಣವಿದ್ದು, ಬಾಡಿಗೆ ಪಡೆಯಲು ಬೇಡಿಕೆ ಇದ್ದು ಕ್ರಮವಹಿಸಲಾಗುವುದೆಂದು ಪೌರಾಯುಕ್ತರು ಮಾಹಿತಿ ನೀಡಿದರು.

ನಗರಸಭೆ ಆಸ್ತಿ ರಕ್ಷಿಸಿ: ನಗರಸಭೆ ಆಸ್ತಿ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ. ಇದರಲ್ಲಿ ಅಧಿಕಾರಿಗಳ ಸಹಕಾರ ಇರುವಂತೆ ತೋರುತ್ತಿದೆ. ಹಲವಾರು ಬಾರಿ ಸಭೆಯಲ್ಲಿ ಪ್ರಸ್ತಾಪವಾಗಿದ್ದರೂ ಯಾವುದೇ ಕ್ರಮವಾಗಿಲ್ಲ, ತೆರಿಗೆ ಸಂಗ್ರಹಣೆಯಲ್ಲೂ ವಿಫಲವಾಗುತ್ತಿದ್ದು, ನಗರಸಭೆಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ ಎಂದು ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ ಈ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಮಳಿಗೆ ಹರಾಜು ಹಸ್ತಾಂತರವಾಗಿಲ್ಲವೇಕೆ: ನೂರು ಮಳಿಗೆಗಳ ಹರಾಜು ಹಾಕಿ ಆರು ತಿಂಗಳಾದರೂ ಇನ್ನೂ ಹಸ್ತಾಂತರಿಸದೆ ನಗರಸಭೆಗೆ ಲಕ್ಷಾಂತರ ರೂ. ನಷ್ಟವಾದ ಬಗ್ಗೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿರುವ ಬಗ್ಗೆ ಕೆಲ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇದಕ್ಕುತ್ತರವಾಗಿ ಕೆಲ ಪ್ರಕ್ರಿಯೆಯಿಂದ ತಡವಾಗಿದೆ. 12 ಮಳಿಗೆ ಬಾಡಿಗೆದಾರರು ನ್ಯಾಯಾಲಯಕ್ಕೆ ಹೋಗಿದ್ದಾರೆ. 38 ಮಂದಿ ಡಿ.ಡಿ. ಕಟ್ಟಿದ್ದಾರೆ. 7ಮಂದಿಗೆ ಅಗ್ರಿಮೆಂಟ್ ಆಗಿದೆ. ಉಳಿದ ಮಳಿಗೆಗಳನ್ನು ಶೀಘ್ರ ನೊಂದಾಯಿಸಲಾಗುವುದೆಂದು ಪೌರಾಯುಕ್ತರು ಭರವಸೆ ಇತ್ತರು.

ನಗರೋತ್ಥಾನ ವಿಳಂಬಕ್ಕೆ ಆಕ್ರೋಶ: ನಗರೋತ್ಥಾನ ಸೇರಿದಂತೆ ವಿವಿಧ ಯೋಜನೆ ಅನುದಾನ ಬಂದರೂ ಇನ್ನೂ ಟೆಂಡರ್ ಆಗಿಲ್ಲ. ಮಂಜುನಾಥ ಬಡಾವಣೆಯ ಅಭಿವೃದ್ದಿ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿ, ಸಾರ್ವಜನಿಕರಿಂದಾಗಿ ಅಸಮಾಧಾನವಾಗುತ್ತಿರುವ ಬಗ್ಗೆ ಹೇಳಿದರ ಸದಸ್ಯರಿಗೆ, ಕೇವಲ ಇಬ್ಬರು ಇಂಜಿನಿಯರ್‌ಗಳಿದ್ದು, ಕಷ್ಟ ಸಾಧ್ಯವಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿದೆ. ಮಂಜುನಾಥ ಬಡಾವಣೆಯ ರಾಜಕಾಲುವೆಗೆ ಸಂಬಂಧಿಸಿದಂತೆ ಡ್ರೋಣ್ ಸರ್ವೆ ಮಾಡಲಾಗಿದೆ.

ಇತರೆ ಸಮಸ್ಯೆಗಳು:

ಕಳೆದ ನಾಲ್ಕು ವರ್ಷಗಳಿಂದಲೂ ಬೀದಿ ದೀಪ ಸಮಸ್ಯೆ ರಾರಾಜಿಸುತ್ತಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪೌರಕಾರ್ಮಿಕರಿಗೆ ಸಂಬಳ ನೀಡಿಲ್ಲ, ಪೌರಕಾರ್ಮಿಕರ ಕಾಲೋನಿ, ಒಂಟೆ ಪಾಳ್ಯಬೋರೆ, ಶಿವಜ್ಯೋತಿ ನಗರ ಸೇರಿದಂತೆ ಹಲವು ವಾರ್ಡ್‌ಗಳಿಗೆ ಕಾವೇರಿ ನೀರು ಪೂರೈಸದೇ ಇರುವ ಬಗ್ಗೆ ಪ್ರಶ್ನಿಸಿದಕ್ಕೆ ಅಗತ್ಯ ಕ್ರಮ ವಹಿಸುವುದಾಗಿ ಅಧ್ಯಕೆ, ಉಪಾಧ್ಯಕ್ಷರು ತಿಳಿಸಿದರು.

ಸಿಬ್ಬಂದಿಗಳ ಕೊರತೆ ಸಾಕಷ್ಟಿದ್ದು, ಆಡಳಿತ ನಿರ್ವಹಣೆಗೆ ತೊಂದರೆಯಾಗಿದೆ. ಆದರೂ ನಗರೋತ್ಥಾನ ಯೋಜನೆ ಟೆಂಡರ್ ಹಂತದಲ್ಲಿದೆ. ಬೀದಿ ದೀಪ, ನೀರು ಮತ್ತಿತರ ಸಮಸ್ಯೆಗಳಿದ್ದಲ್ಲಿ ತ್ವರಿತವಾಗಿ ಬಗೆಹರಿಸಲಾಗುವುದು. ಸದಸ್ಯರು ಸಹಕಾರ ನೀಡಿದಲ್ಲಿ ತ್ವರಿತವಾಗಿ ಕೆಲಸವಾಗಲಿದೆ. ಈಗಾಗಲೆ ಖಾತೆ ಶಾಖೆಯ ಎಲ್ಲ ಕಡತಗಳ ವಿಲೇವಾರಿ ಮಾಡಿದ್ದೇನೆಂದು ಪೌರಾಯುಕ್ತರ ಭರವಸೆ ನೀಡಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್, ನಾಮಕರಣ ಸದಸ್ಯರು ಸೇರಿದಂತೆ ಬಹುತೇಕ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next