Advertisement

Hunsur; ಜೀಪ್- ಬೈಕ್ ಢಿಕ್ಕಿಯಾಗಿ ಇಬ್ಬರು ಮೃತ್ಯು: ಹೆದ್ದಾರಿ ಸಂಚಾರ ಅಸ್ತವ್ಯಸ್ತ

08:02 PM Nov 09, 2023 | Team Udayavani |

ಹುಣಸೂರು: ಜೀಪ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೆದ್ದಾರಿಯ ಹುಣಸೂರು ತಾಲೂಕಿನ ಕೊತ್ತೇಗಾಲ ಗೇಟ್ ಬಳಿ ಗುರುವಾರ ಸಂಜೆ ನಡೆದಿದೆ.

Advertisement

ಮೃತ ದುರ್ದೈವಿಗಳು ಅತ್ತಿಗುಪ್ಪೆ ಗ್ರಾಮದ ಹುಚ್ಚಯ್ಯರ ಪುತ್ರ ನಾಗರಾಜು(48) ಹಾಗೂ ಶಿವರಾಜು(45)ಎನ್ನುವವರಾಗಿದ್ದಾರೆ. ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ನಾಗರಾಜು ಅವಿವಾಹಿತರಾಗಿದ್ದರೆ, ಶಿವರಾಜುರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ.

ಶಿವರಾಜು ತನ್ನ ಬೈಕಿನಲ್ಲಿ ನಾಗರಾಜುವಿನೊಂದಿಗೆ ಗುರುವಾರ ಸಂಜೆ ಹುಣಸೂರು ಕಡೆಯಿಂದ ಸ್ವ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಚಿಲ್ಕುಂದದ ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಮುಗಿಸಿಕೊಂಡು ವಾಪಾಸಾಗುತ್ತಿದ್ದ ತಂಬಾಕು ಖರೀದಿ ಕಂಪನಿಯೊಂದಕ್ಕೆ ಸೇರಿದ ಜೀಪ್ ಮೈಸೂರು-ಬಂಟ್ವಾಳ ಹೆದ್ದಾರಿಯ ಕೊತ್ತೆಗಾಲ ಗೇಟ್ ಬಳಿಯಲ್ಲಿ ಢಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಇಬ್ಬರೂ ಮೃತಪಟ್ಟರು. ಬೈಕ್ ನಜ್ಜುಗುಜ್ಜಾಗಿದ್ದು, ಶವಗಳು ಸಹ ಗುರುತು ಹಿಡಿಯಲಾರದಷ್ಟು ಛಿದ್ರವಾಗಿದ್ದು, ಅಪಘಾತದ ಭೀಕರತೆಯನ್ನು ಸಾರಿ ಹೇಳಿತು.

ಘಟನೆಯಿಂದ ಕೆಲ ಹೊತ್ತು ಹೆದ್ದಾರಿ ಬಂದ್ ಆಗಿತ್ತು. ಮಾಹಿತಿ ಮೇರೆಗೆ ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಿ.ವಿ.ರವಿ ಹಾಗೂ ಪೊಲೀಸರು ದೌಡಾಯಿಸಿ ಅಪಘಾತಕ್ಕೀಡಾದ ವಾಹನ ಹಾಗೂ ಶವಗಳನ್ನು ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next