ಹುಣಸೂರು : ಅಪಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಹಾನಿಗೊಳಗಾಗಿದ್ದ ಹುಣಸೂರು ನಗರದ ಮಂಜುನಾಥ ಬಡಾವಣೆ, ಶಬ್ಬೀರ್ ನಗರ ಬಡಾವಣೆಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಜಯರಾಂ ಮಂಗಳವಾರ ಭೇಟಿ ಇತ್ತು ಪರಿಶೀಲನೆ ನಡೆಸಿ, ನಿವಾಸಿಗಳೊಂದಿಗೆ ಚರ್ಚಿಸಿದರು.
ನಗರದ ಮಂಜುನಾಥ ಬಡಾವಣೆಗೆ ಭೇಟಿ ನೀಡಿದ್ದ ವೇಳೆ ನಿವಾಸಿಗಳಾದ ಜವರೇಗೌಡ, ಕೃಷ್ಣ, ಕಿರಂಗೂರುಬಸವರಾಜು ಮತ್ತಿತರರು ನಗರಸಭೆಯ ಅಸಮರ್ಪಕ ನಿರ್ವಹಣೆ ಹಾಗೂ ಮಳೆ-ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ, ರಾಜ ಕಾಲುವೆ ನಿರ್ಮಿಸದೆ ಪ್ರತಿ ಮಳೆಗಾಲದಲ್ಲೂ ಈ ಬಡಾವಣೆಯ ಮನೆಗಳಿಗೆ ನೀರು ನುಗ್ಗುತ್ತಿದೆ. ಇಡೀ ಬಡಾವಣೆಯೇ ನೀರಿನಲ್ಲಿ ಮುಳುಗುತ್ತದೆ. ಇನ್ನಾದರೂ ಅಗತ್ಯವಿರುವೆಡೆ ಚರಂಡಿ ಹಾಗೂ ರಾಜಕಾಲುವೆ ನಿರ್ಮಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಈವೇಳೆ ಪೌರಾಯುಕ್ತ ರವಿಕುಮಾರ್ ಅಕ್ರಮ ಬಡಾವಣೆಯಾಗಿದ್ದು, ಯೋಜನೆಇಲ್ಲದೆ ನಿರ್ಮಿಸಿದ್ದರಿಂದ ಈ ಪರಿಸ್ಥಿತಿ ಉದ್ಭವವಾಗಿದೆ. ಆದರೂ ನಗರಸಭೆಯ ಎಸ್ಎಫ್ಸಿ ಯೋಜನೆಯಡಿ ಅಗತ್ಯ ಕಾಮಗಾರಿಕೈಗೊಳ್ಳಲಾಗುವುದೆಂದಾಗ ಇಂತಹ ಬಡಾವಣೆಗಳ ಸ್ಥಾಪನೆಗೆ ನಗರಸಭೆ ಯಾಕೆ ಒಪ್ಪಿಗೆ ನೀಡಿತೆಂದು ನಿವಾಸಿಗಳು ಪ್ರಶ್ನಿಸಿದಾಗ, ಮಧ್ಯಪ್ರವೇಶಿಸಿದ ಉಸ್ತುವಾರಿ ಕಾರ್ಯದರ್ಶಿಯವರು ಇಲ್ಲಿ ಬಡಾವಣೆ ನಿರ್ಮಿಸಿರುವವರು, ನಿವೇಶನ ಖರೀದಿಸಿರುವವರು, ನಗರಸಭೆಯವರದ್ದು ತಪ್ಪಿದೆ. ಇದೀಗ ೩.೫೫ ಕೋಟಿ ವೆಚ್ಚದಡಿ ರಾಜಕಾಲುವೆ, ಚರಂಡಿನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗಳ ಯೋಜನೆ ರೂಪಿಸಲಾಗಿದೆ. ಮುಂದಿನ ಬಾರಿಗೆ ಸಮಸ್ಯೆ ಇರಲ್ಲವೆಂದು ಭರವಸೆ ಇತ್ತರು. ಇದೇ ವೇಳೆ ಪಕ್ಕದ ಬಡಾವಣೆಯ ಮಹಿಳೆಯರು ಅಲ್ಲೂ ಅನಧಿಕೃತ ಬಡಾವಣೆ ಇದೆ, ನಗರಸಭೆಯಿಂದ ನಿವೇಶನ ಬಿಡುಗಡೆ ಮಾಡಬೇಡಿರೆಂದು ಒತ್ತಾಯಿಸಿದರು.
ಆಕ್ರೋಶ: ಮಂಜುನಾಥ ಬಡಾವಣೆಯ ಸಿಮೆಂಟ್ ರಸ್ತೆ ಇರುವ ಭಾಗಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಭೇಟಿ ನೀಡಿ ಹೋಗಿದ್ದಾರೆ. ನಿಜವಾಗಿ ನಿತ್ಯ ಸಮಸ್ಯೆಯಲ್ಲಿ ಮುಳುಗಿರುವ ಭಾಗಕ್ಕೆ ಭೇಟಿ ನೀಡಲಿಲ್ಲ ಎಂದು ನಿವಾಸಿ ಎಂ.ಎಲ್.ರವಿಶಂಕರ್, ರಾಜೇಶ್ ಜೈನ್, ಮನು, ಕಾರ್ತಿಕ್ ಮತ್ತು ವೆಂಕಟೇಶ್ ಆಕ್ರೋಶ ಹೊರ ಹಾಕಿದರು.
ವಳ್ಳಮ್ಮನ ಕಟ್ಟೆ ಕೆರೆ ನೀರು ಹರಿಯುತ್ತಿದ್ದಂತೆ ಮೊದಲು ಬಲಿಪಶುವಾಗುವ ಭಾಗಕ್ಕೆ ಸ್ಥಳಿಯ ಅಧಿಕಾರಿಗಳು ಉದ್ದೇಶಪೂರಕವಾಗಿ ಜಿಲ್ಲಾ ಕಾರ್ಯದರ್ಶಿಗಳನ್ನುಕರೆ ತರದೆ ಅಧಿಕಾರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ. ಇಂದಿಗೂ ಬಡಾವಣೆಯಲ್ಲಿ ಕೊಳಚೆ ನೀರು ತುಂಬಿದ್ದು, ತೆರವು ಕಾರ್ಯಾಚರಣೆ ಸಮರ್ಪಕವಾಗಿ ಮಾಡದೆ ಇರುವುದರಿಂದ ನಗರಸಭೆ ಅಧಿಕಾರಿ ತಮ್ಮ ಕರ್ತವ್ಯ ಲೋಪ ಮುಚ್ಚುವ ಕೆಲಸ ಮಾಡಿದ್ದಾರೆ ಎಂದರು.
ಅನಧಿಕೃತ : ಅನಧಿಕೃತ ಎಂಬ ಹಣೆಪಟ್ಟಿ ಅಂಟಿಸಿ ಬಡಾವಣೆಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ, ನಾವು ಕಂದಾಯ ಪಾವತಿಸುತ್ತಿಲ್ಲವೆ. ಅನಧಿಕೃತ ಎಂದು ಹೇಳುವುದಾದರೆ ಮನೆ ನಿರ್ಮಿಸಲು ಪರವಾನಿಗೆ ಏಕೆ ನೀಡಬೇಕು. ನಗರಸಭೆ ತಪ್ಪು ಮುಚ್ಚಿಕೊಳ್ಳಲು ಸಾರ್ವಜನಿಕರ ಹೆಗಲಿಗೆ ತಪ್ಪು ಹೊರಿಸುತ್ತಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವರ್ಣೀತ್ನೇಗಿ, ತಹಸೀಲ್ದಾರ್ ಡಾ.ಅಶೋಕ್, ತಾ.ಪಂ.ಆಡಳಿತಾಧಿಕಾರಿ ನಂದ, ಇಓ.ಗಿರೀಶ್, ಎಇಇಗಳಾದ ಭೋಜರಾಜ್, ಪ್ರಭಾಕರ್, ಸಿದ್ದಪ್ಪ, ಬಿಇಓ ನಾಗರಾಜ್, ಸಮಾಜಕಲ್ಯಾಣಾಧಿಕಾರಿ ಮೋಹನ್ಕುಮಾರ್,ಸಿಡಿಪಿಒ ರಶ್ಮಿ ಮತ್ತಿತರ ಅಧಿಕಾರಿಗಳಿದ್ದರು.