Advertisement

ಮಳೆಯ ರೌದ್ರಾವತಾರಕ್ಕೆ ನಲುಗಿದ ಹುಣಸೂರು : 50ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬಗಳು ಧರೆಗೆ

08:48 PM May 08, 2022 | Team Udayavani |

ಹುಣಸೂರು : ಶನಿವಾರ ರಾತ್ರಿಯ ಬಿರುಗಾಳಿ ಮಳೆಯ ರೌದ್ರಾವತಾರಕ್ಕೆ ಹುಣಸೂರು ನಗರವೇ ತಲ್ಲಣಿಸಿದ್ದರೆ, ಗ್ರಾಮಾಂತರ ಪ್ರದೇಶದಲ್ಲೂ ಸಾಕಷ್ಟು ಹಾನಿ ಉಂಟು ಮಾಡಿದೆ.

Advertisement

ನಗರದಲ್ಲಿ ರಾತ್ರಿ 9ರ ವೇಳೆ ಒಮ್ಮೆಲೆ ಬೀಸಿದ ಬಿರುಗಾಳಿಗೆ ೫೦ಕ್ಕೂ ಹೆಚ್ಚು ಬೃಹತ್ ಮರಗಳು ಬುಡಸಹಿತ ಧರೆಗುರುಳಿದೆ. ಹಲವೆಡೆ ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ, ಲಾರಿ, ಕಾರು, ಸ್ಕೂಟರ್‌ಗಳಿಗೆ ಹಾನಿಯಾಗಿದೆ, ಕೆಲ ರಸ್ತೆಗಳು ಬಂದ್ ಆಗಿವೆ, ನಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು ರಾತ್ರಿಯಿಂದಲೇ ಕಗ್ಗತ್ತಲಿನಲ್ಲಿ ಮುಳುಗಿದ್ದು, ನಾಗರೀಕರು ವಿದ್ಯುತ್ ಹಾಗೂ ನೀರಿಗಾಗಿ ಪರದಾಡುವಂತಾಗಿದೆ.

ನಗರಸಭೆ, ಕಂದಾಯ, ಅರಣ್ಯ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಮುಂಜಾನೆಯಿಂದಲೇ ಸಮರೋಪಾದಿಯಾಗಿ ಕಾರ್ಯಾಚರಣೆ ನಡೆಸಿ ಮರಗಳ ತೆರವುಗೊಳಿಸಿ, ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಶಾಸಕ ಎಚ್.ಪಿ.ಮಂಜುನಾಥ್ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ಇತ್ತು, ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಉರುಳಿ ಬಿದ್ದ ಬೃಹತ್ ಮರಗಳು: ಸುಮಾರು ನೂರು ವರ್ಷಕ್ಕೂ ಹಳೆಯದಾದ ಕೋಟೆ ಸರ್ಕಲ್ ಬಳಿಯ ಹಳೇ ತಾಲೂಕು ಕಚೇರಿ ವೃತ್ತದ ರಸ್ತೆ ಬದಿಯಲ್ಲಿದ್ದ ಎರಡು ಬೃಹತ್ ಅರಳಿ ಮರಗಳು ಬುಡಸಹಿತ ಉರುಳಿ ಬಿದ್ದಿದ್ದರೆ, ಬಾಲಕಿಯರ ಪಿಯು ಕಾಲೇಜಿನ(ಹಳೆ ತಾಲೂಕು ಕಚೇರಿ)ಕಟ್ಟಡಕ್ಕೆ ಎರಡು ಮರಗಳು ಬುಡ ಸಮೇತ ಬಿದ್ದು ಕಟ್ಟಡಕ್ಕೆ ಹಾನಿಯಾಗಿದೆ. ಪಕ್ಕದ ಮಹಿಳಾ ಕಾಲೇಜು ಎದುರಿನ ಮರಗಳು ವಿದ್ಯುತ್ ಲೈನ್ ಮೇಲೆ ಸಂಪೂರ್ಣ ರಸ್ತೆ ಬಂದ್ ಆಗಿದೆ.

ಮನೆಗಳ ಮೇಲೆ ಬಿದ್ದ ಮರಗಳು: ಪೋಸ್ಟ್ ಆಫೀಸ್ ರಸ್ತೆಯ ಸರಕಾರಿ ವಸತಿ ಗೃಹಗಳ ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಿ, ನಿವೃತ್ತ ಗ್ರಾಮಲೆಕ್ಕಿಗ ದಯಾನಂದ್ ಮನೆಗಳ ಮೇಲೆ ಒಂದು ದೊಡ್ಡ ಮರ ಹಾಗೂ ಕಾಂಪೌಂಡ್ ಒಳಗಿದ್ದ ತೆಂಗಿನ ಮರ ಉರುಳಿ ಬಿದ್ದು ಮನೆಗಳ ಮೇಲ್ವಾಚಣಿಗೆ ಹಾಗೂ ಸ್ಕೂಟರ್‌ಗಳಿಗೆ ಹಾನಿಯಾಗಿ ರಾತ್ರಿಯೇ ಮನೆಯೊಳಗಿದ್ದವರನ್ನು ಸ್ಥಳಾಂತರಿಸಲಾಗಿದೆ. ಅದೇ ರಸ್ತೆಯ ಸರಕಾರಿ ನೌಕರರ ಸಂಘಧ ತಾಲೂಕು ಅಧ್ಯಕ್ಷ ಗೋವಿಂದೇಗೌಡರ ಕಾರ್ ಶೆಡ್ ಮೇಲೆ ಬೃಹತ್ ಮರ ಬಿದ್ದು, ಕಾರು, ಕಾಂಪೌಂಡ್ ಹಾನಿಯಾಗಿದೆ.

Advertisement

ಹುಣಸೂರು-ಮೈಸೂರು ಹೆದ್ದಾರಿಯ ಕೋರ್ಟ್ ಸರ್ಕಲ್ ಬಳಿ ನಿಲ್ಲಿಸಿದ್ದ ಲಾರಿ ಮೇಲೆ ರಸ್ತೆ ಬದಿಯ ದೊಡ್ಡ ನೀಲಗಿರಿಮರಗಳು ಲಾರಿ ಮೇಲೆ ಉರುಳಿ ಹಾನಿಯಾಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅಮ್ಮನ ಕೈರುಚಿ ಫಾಸ್ಟ್ಫುಡ್ ವಾಹನದ ಮೇಲೆ ಮರದಕೊಂಬೆಗಳು ಬಿದ್ದಿದ್ದರೆ, ಮೈಸೂರು ಹೆದ್ದಾರಿಯ ಸೋಮನಹಳ್ಳಿವರೆಗಿನ ರಸ್ತೆ ಬದಿಯ ನೂರಾರು ಮರಗಳು ಉರುಳಿ ಬಿದ್ದಿದ್ದರಿಂದಾಗಿ ಹೆದ್ದಾರಿ ಸಂಚಾರ ಬಂದ್ ಆಗಿತ್ತು, ಅರಣ್ಯ-ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೋಟೆ ರಸ್ತೆಯ ಅಲ್ಲಲ್ಲಿ ಮರಗಳು ಬಿದ್ದಿವೆ.

ನಗರದ ಮಾರಿಗುಡಿ ಬೀದಿಯ ಮುತ್ತುಮಾರಮ್ಮ ದೇವಾಲಯದ ಆವರಣದಲ್ಲಿದ್ದ ಬೃಹತ್ ಬನ್ನಿ ಮರದ ಕೊಂಬೆಗಳು ಮುರಿದು ಬಿದ್ದಿದೆ. ಪಕ್ಕದ ರಸ್ತೆಯ ಲಕ್ಷ್ಮಿ ಹಾಗೂ ಪುಟ್ಟಸ್ವಾಮಿರಿಗೆ ಸೇರಿದ ಮನೆಗಳ ಮೇಲೆ ರಸ್ತೆ ಬದಿಯ ನೇರಳೆ, ನೀಲಗಿರಿ ಮರ ಉರುಳಿ ಬಿದ್ದಿದೆ. ಕಲ್ಕುಣಿಕೆ, ಚಿಕ್ಕಹುಣಸೂರು ಸೇರಿದಂತೆ ಅಲ್ಲಲ್ಲಿ ಮರದ ರೆಂಬೆಗಳು ಮುರಿದುಬಿದ್ದಿವೆ. ಬ್ರಾಹ್ಮಣರ ಬಡಾವಣೆಯ ಅಡಿಗೆ ಸುಬ್ಬಣ್ಣರ ಮನೆ ಮೇಲಿನ ಅಳವಡಿಸಿದ್ದ 17ಸೋಲಾರ್ ಪ್ಯಾನಲ್‌ಗಳು ಬಿರುಗಾಳಿಗೆ ಹಾರಿ ಹೋಗಿ ಪಕ್ಕದ ಮನೆ ಮೇಲೆ ಬಿದ್ದು, ಹೆಂಚು ಹಾನಿಯಾಗಿದೆ. ಮಾ ಸ್ಟುಡಿಯೋ ಮೇಲ್ಭಾಗದಲ್ಲಿ ಅಳವಡಿಸಿದ್ದ ಹೆಂಚುಗಳನ್ನು ಹೊತ್ತೊಯ್ದಿದೆ.

ಇದನ್ನೂ ಓದಿ : ಪ್ರತಿಪಕ್ಷಗಳ ವಿರುದ್ಧ ಭೈರಪ್ಪ ಗರಂ; ಋಣಾತ್ಮಕತೆ ತುಂಬುವುದೇ ವಿರೋಧ ಪಕ್ಷಗಳ ನಾಯಕರ ಕೆಲಸ

ಮುರಿದ 100 ವಿದ್ಯುತ್ ಕಂಬಗಳು: ಹುಣಸೂರು ನಗರದಲ್ಲಿ ಎರಡು ಟ್ರಾನ್ಸ್ಫರ‍್ಮರ್ ಸೇರಿದಂತೆ 20, ಬಿಳಿಕೆರೆ ಭಾಗದಲ್ಲಿ 21 ಹಾಗೂ ಗ್ರಾಮಾಂತರದಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ರಾತ್ರಿಯಿಂದ ನಗರ ಸೇರಿದಂತೆ ತಾಲೂಕಿನ ಬಹುಭಾಗ ಹಳ್ಳಿಗಳಲ್ಲಿ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದ್ದು, ನಾಲ್ಕು ತಂಡಗಳಲ್ಲಿ ದುರಸ್ತಿಕಾರ್ಯ ನಡೆದಿದ್ದು, ಸಾಧ್ಯವಾದಲ್ಲಿ ಸಂಜೆವೇಳೆಗೆ ವಿದ್ಯುತ್ ಪೂರೈಸಲಾಗುವುದೆಂದು ಎಇಇ ಸಿದ್ದಪ್ಪ ತಿಳಿಸಿದ್ದಾರೆ.

ಸಮರೋಪಾದಿಯಲ್ಲಿ ಕಾರ್ಯಾಚರಣೆ: ಮುಂಜಾನೆಯೇ ತಹಸೀಲ್ದಾರ್.ಡಾ.ಅಶೋಕ್, ಆರ್.ಐ.ನಂದೀಶ್, ನಗರಸಭೆ ಆರೋಗ್ಯ ಅಧಿಕಾರಿಗಳಾದ ಸತೀಶ್, ರಾಜೇಂದ್ರ, ಅರಣ್ಯ ಇಲಾಖೆಯ ಆರ್.ಎಫ್.ಓ.ನಂದಕುಮಾರ್, ಡಿಆರ್,ಎಫ್.ಓ.ಹರೀಶ್, ಚೆಸ್ಕಾಂ ಎಇಇ ಸಿದ್ದಪ್ಪ, ನಗರ ಎಇ ಸೋಮಶೇಖರ್ ನೇತೃತ್ವದಲ್ಲಿ ಸಿಬ್ಬಂದಿಗಳು ಸಮರೋಪಾದಿಯಾಗಿ ನಗರದಲ್ಲಿ ಬಿದ್ದಿದ್ದ ಮರಗಳ ರೆಂಬೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತಿದೆ. ಭಾನುವಾರ ಸಂಜೆಯಾದರೂ ಮರ ತೆರವು ಕಾರ್ಯಚರಣೆ ಮುಂದುವರಿದಿದ್ದು, ವಿದ್ಯುತ್ ಸರಬರಾಜು ಆಗಿರಲಿಲ್ಲ.

ಶಾಸಕ ಮಂಜುನಾಥ್ ಭೇಟಿ, ಪರಿಶೀಲನೆ : ಭಾನುವಾರ ಬೆಳಿಗ್ಗೆಯೇ ಅಧಿಕಾರಿಗಳೊಂದಿಗೆ ನಗರದ ಹಾನಿ ಪ್ರದೇಶಗಳಿಗೆ ಭೇಟಿಯಿತ್ತ ಶಾಸಕರು ಮನೆಹಾನಿಗೀಡಾದ ಸಂತ್ರಸ್ಥರಿಗೆ ವೈಯಕ್ತಿಕವಾಗಿ ನೆರವು ಕಲ್ಪಿಸಿದರಲ್ಲದೇ, ತಂಡಗಳಲ್ಲಿ ಕಾರ್ಯಚರಣೆ ನಡೆಸಿ, ವಿದ್ಯುತ್ ಸಂಪರ್ಕ ನೀಡಬೇಕೆಂದು ಹಾಗೂ ಮುಂಜಾಗ್ರತೆಯಾಗಿ ಹಾನಿ ಸಂಭವಿಸುವ ಮರಗಳನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸರಕಾರದ ವಿರುದ್ದ ಅಸಮಾಧಾನ : ತಾಲ್ಲೂಕಿನಾದ್ಯಂತ ಕಳೆದ ಒಂದುವಾರದಿಂದ ಬಿರುಗಾಳಿ ಮಳೆಗೆ ದಿನಗಳಿಂದ ಮಳೆಹಾನಿಯಾಗುತ್ತಿದ್ದು, ನೂರಾರು ಮನೆಗಳು ಹಾನಿಗೀಡಾಗಿವೆ. ಸರಕಾರದ ಬಳಿ ತಕ್ಷಣಕ್ಕೆ ಪರಿಹಾರ ನೀಡಲು ಹಣವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಮಂಜುನಾಥ್ ಇನ್ನಾದರೂ ತಕ್ಷಣ ಪರಿಹಾರದ ಅನುದಾನ ಬಿಡುಗಡೆಮಾಡಿ ನೊಂದವರ ನೆರವಿಗೆ ಬರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆಂದು ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next