ಹುಳಿಯಾರು: ಒಂದೇ ಮನೆಯಲ್ಲಿ ಮೂವರು ಸೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಬರಕನಹಾಲ್ ತಾಂಡ್ಯದ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಂಜಿತಾ (24), ಬಿಂದು (21), ಚಂದನಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿಯರು. ಇವರ ತಂದೆ ತಾಯಿ ದಶಕಗಳ ಹಿಂದೆಯೇ ನಿಧನರಾಗಿದ್ದರು. 3 ತಿಂಗಳ ಹಿಂದಷ್ಟೇ ಇವರನ್ನು ಸಾಕುತ್ತಿದ್ದ ಅಜ್ಜಿ ಸಾವನ್ನಪ್ಪಿದ್ದರು. ರಂಜಿತಾ ಹಾಗೂ ಬಿಂದು ಕೆ.ಬಿ.ಕ್ರಾಸ್ನ ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋಗುತ್ತಿದ್ದರೆ, ಚಂದನಾ ವಿದ್ಯಾಭಾಸ್ಯ ಮಾಡುತ್ತಿದ್ದರು. ಈ ಮೂವರೂ ಬಾಲದೇವರಹಟ್ಟಿಯಿಂದ ಬರಕನಹಾಲ್ ತಾಂಡ್ಯಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ಒಂಟಿ ಮನೆಯಲ್ಲಿ ಕಳೆದ 9 ದಿನಗಳ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇಹ ಕೊಳೆತು ವಾಸನೆ ಬಂದಿದ್ದರಿಂದ ಗುರುವಾರ ಸಂಜೆ ದಾರಿಹೋಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಹೆಂಚು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಮೃತದೇಹಗಳನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.