Advertisement

ನಾಳೆ ಕರಾವಳಿಯಲ್ಲಿ ಬೃಹತ್‌ ಲಸಿಕಾ ಮೇಳ

12:56 AM Sep 16, 2021 | Team Udayavani |

ಮಂಗಳೂರು/ಉಡುಪಿ: ಸರಕಾರದ ಸೂಚನೆಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ.17ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೃಹತ್‌ ಲಸಿಕಾಕರಣ ಅಭಿಯಾನ ನಡೆಯಲಿದೆ.

Advertisement

ದ.ಕ.ದಲ್ಲಿ 533  ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 300 ಕೇಂದ್ರಗಳಲ್ಲಿ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಭಯ ಜಿಲ್ಲಾಧಿಕಾರಿಗಳಾದ ಡಾ| ರಾಜೇಂದ್ರ ಕೆ.ವಿ.ಮತ್ತು ಕೂರ್ಮಾ ರಾವ್‌ ಎಂ. ಅವರು ಹೇಳಿದರು.

ಕೋವಿಡ್‌ ಲಸಿಕಾ ಮೇಳವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲು ಎಲ್ಲ ಗ್ರಾ. ಪಂ. ಅಧ್ಯಕ್ಷರು, ಪಿಡಿಒ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಗ್ರಾಮಲೆಕ್ಕಿಗರ ಜತೆ ನಡೆದ ವೀಡಿಯೋ ಸಂವಾದದಲ್ಲಿ ಡಾ| ರಾಜೇಂದ್ರ ಅವರು ಮಾತನಾಡಿದರು.

ನಗರ ಹಾಗೂ ಗ್ರಾಮೀಣ ಭಾಗದ ಪ್ರತಿ ಮನೆಗಳಿಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಲ್‌ ಕಲೆಕ್ಟರ್‌ ಮತ್ತು ಪಿಡಿಒ ಅವರು ಭೇಟಿ ನೀಡಿ ಲಸಿಕೆ ಪಡೆಯದಿರುವ 18 ವರ್ಷ ಮೆಲ್ಪಟ್ಟವರನ್ನು ಗುರುತಿಸಿ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುವಂತೆ ಸೂಚಿಸಿದರಲ್ಲದೇ, ವಿಶೇಷ ಚೇತನರು ಮತ್ತು ಅಶಕ್ತರನ್ನು ಗುರುತಿಸಿ ಅವರು ಇರುವ ಸ್ಥಳಕ್ಕೆ ಹೋಗಿ ಲಸಿಕೆ ನೀಡಬಹುದು ಅಥವಾ ಅವರನ್ನು ವಾಹನದ ಮೂಲಕ ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ನೀಡಬಹುದು ಎಂದರು.

1.5 ಲಕ್ಷ ಡೋಸ್‌ ಲಸಿಕೆ ಗುರಿ:

Advertisement

ಮೆಗಾ ಲಸಿಕೆ ಮೇಳದಲ್ಲಿ 1.5 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದು, ಗ್ರಾ. ಪಂ. ವ್ಯಾಪ್ತಿಯಲ್ಲಿ ಹೆಚ್ಚಿನ ಜನಜಾಗೃತಿ ಮೂಡಿಸಬೇಕು. ಲಸಿಕಾ ಕೇಂದ್ರಗಳಲ್ಲಿ ಹೆಚ್ಚಿನ ವೈದ್ಯಕೀಯ ಸಿಬಂದಿ ಆವಶ್ಯಕತೆ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರುಗಳೊಂದಿಗೆ ಚರ್ಚಿಸಿ ಅವರ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಸೂಚಿಸಿದರು.

ಜಿ. ಪಂ. ಸಿಇಒ ಡಾ| ಕುಮಾರ್‌, ಎಲ್ಲ ಗಾ. ಪಂ.ಅಧ್ಯಕ್ಷರು, ಸದಸ್ಯರು, ಪಿಡಿಒ, ಗ್ರಾಮ ಸಹಾಯಕರು ಹಾಗೂ ಇತರ ಅಧಿಕಾರಿಗಳು ಸಂವಾದದಲ್ಲಿ ಉಪಸ್ಥಿತರಿದ್ದರು.

ಯಶಸ್ಸಿಗೆ ಸಿಎಂ ಸೂಚನೆ :

ಬೃಹತ್‌ ಲಸಿಕಾ ಮೇಳ ಯಶಸ್ವಿಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಶೇ. 84.6 ಪ್ರಗತಿ:

ಉಡುಪಿ: ಜಿಲ್ಲೆಯಲ್ಲಿ ಇದು ವರೆಗೆ 1ನೇ ಡೋಸ್‌ ಲಸಿಕೆಯನ್ನು 8,47,940 (ಶೇ.84.6) ಜನರಿಗೆ ನೀಡಲಾಗಿದೆ. ಇವರಲ್ಲಿ ಈಗಾಗಲೇ 3,45,558 (ಶೇ.34.5) ಮಂದಿ ಎರಡನೇ ಡೋಸ್‌ ಪಡೆದು ಕೊಂಡಿದ್ದಾರೆ ಎಂದು ಜಿಲ್ಲಾಧಿ ಕಾರಿ ಕೂರ್ಮಾರಾವ್‌ ಎಂ. ತಿಳಿಸಿದರು.

ಸೆ. 17ರ ಮೆಗಾ ಲಸಿಕೆ ಮೇಳದಲ್ಲಿ ನೂರು ಪ್ರತಿಶತ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಅಂದು 80 ಸಾವಿರ ಡೋಸ್‌ ಲಸಿಕೆ ಲಭ್ಯವಿದ್ದು, ಗ್ರಾ.ಪಂ. ಮತ್ತು ನಗರ ವ್ಯಾಪ್ತಿಯಲ್ಲಿ 300 ಲಸಿಕಾ ಕೇಂದ್ರಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಕುಂದಾಪುರ ತಾಲೂಕಿನ ಕಾವ್ರಾಡಿ, ಬಳ್ಕೂರು, ಬ್ರಹ್ಮಾವರ ತಾಲೂಕಿನ ಕಾಡೂರಿನಲ್ಲಿ ಶೇ.100 ಲಸಿಕೆ ನಡೆದಿದೆ. ಜಿಲ್ಲೆಯ ಗಡಿ ಭಾಗ ಗಳಲ್ಲಿ ಹಾಗೂ ಕೋವಿಡ್‌ ಪಾಸಿಟಿವ್‌ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿರುವ ಗ್ರಾಮ ಗಳನ್ನು ಗುರುತಿಸಿ ಲಸಿಕೆ ನೀಡಲಾಗು ವುದು. 100ರಿಂದ 200 ಮನೆ ಗಳಿಗೆ ಒಬ್ಬರನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುವುದು ಎಂದು ಜಿ.ಪಂ.ಸಿಇಒ ಡಾ| ನವೀನ್‌ ಭಟ್‌ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಮೂಲಕ ಲಸಿಕೆ ಜಾಗೃತಿ:

ಈಗಾಗಲೇ 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ತರಗತಿ ಗಳಿಗೆ ತೆರಳುತ್ತಿದ್ದು, ಡಿಡಿಪಿಐ ಹಾಗೂ ಡಿಡಿಪಿಯು ಅವರ ಮೂಲಕ ಆಯಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆಯ ಬಗ್ಗೆ ತಿಳಿಸಲಾಗುತ್ತಿದೆ. ಅದರಂತೆ ಅವರು ತಮ್ಮ ಮನೆಯಲ್ಲಿರುವ ಪೋಷಕರು, ಸಂಬಂಧಿಕರು, ಲಸಿಕೆ ತೆಗೆದುಕೊಳ್ಳದಿರುವವರ ಮನವೊಲಿಸಿ ಲಸಿಕೆ ತೆಗೆದು ಕೊಳ್ಳುವಂತೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾಧಿ ಕಾರಿಗಳು ತಿಳಿಸಿದರು.

ಇಂದು ಫೋನ್‌ಇನ್‌:

ಲಸಿಕೆಗೆ ಸಂಬಂಧಿಸಿ ಸೆ.16ರಂದು ಬೆಳಗ್ಗೆ 10ರಿಂದ 11ರ ವರೆಗೆ ಫೋನ್‌ ಇನ್‌ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಲಸಿಕೆಗೆ ಸಂಬಂಧಿಸಿ ಪ್ರಶ್ನೆಮತ್ತು ಸಂದೇಹಗಳಿಗೆ ದೂರವಾಣಿ ಸಂಖ್ಯೆ-9663957222ಗೆ  ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next