Advertisement

ಹುಬ್ಬಳ್ಳಿ: ಕಸ ಎಸೆಯುವವರ ವಿರುದ್ಧ ದಂಡಾಸ್ತ್ರಕ್ಕೆ ವಿಕ್ರಂ ತಂಡ

06:23 PM Jun 07, 2023 | Team Udayavani |

ಹುಬ್ಬಳ್ಳಿ: ಮಹಾನಗರದ ಸ್ವಚ್ಛತೆ ಹಾಗೂ ಕಸ ನಿರ್ವಹಣೆಗೆ ಪಾಲಿಕೆ ಹಲವು ಕಸರತ್ತು ಮಾಡುತ್ತಿದೆ. ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಹಂತದಿಂದ ಒಂದು ಹೆಜ್ಜೆ ಮುಂದೆ ಹೋಗಿ ದಂಡ ವಸೂಲಿಗೆ ಕಾಲಿಟ್ಟಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಎರಡು ತಂಡಗಳನ್ನು ರಚಿಸಿದ್ದು, ಎಲ್ಲೆಂದರಲ್ಲಿ ಕಸ ಬೀಸಾಡಿದರೆ ಆ ಸ್ಥಳಕ್ಕೆ “ವಿಕ್ರಂ’ ಬರಲಿದೆ.

Advertisement

ಸ್ವಚ್ಛ ನಗರಕ್ಕಾಗಿ ಪಾಲಿಕೆ ಹಲವು ಯೋಜನೆ ಜಾರಿಗೆ ತಂದು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದೆ. ಕಸ ಚೆಲ್ಲುವ ಸ್ಥಳಗಳನ್ನು ಸ್ವಚ್ಛ ಗೊಳಿಸಿ ಅಲ್ಲಿ ರಂಗೋಲಿ ಹಾಕಿ ಕಸ ಹಾಕದಂತೆ ಮನವಿ ಮಾಡಲಾಯಿತು. ಕೆಲವೊಂದು ಕಡೆ ರಂಗೋಲಿ ಹಾಕಿದರೂ ಪೌರ ಕಾರ್ಮಿಕರ ಕಾವಲು ಹಾಕಲಾಯಿತು. ಪುನರಾವರ್ತನೆಯಾಗುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ದಂಡ ಹಾಕಲಾಯಿತು. ಕಸ ಹಾಕಿದವರಿಂದಲೇ ಆ ಕಸ ಎತ್ತಿಸುವ ಪ್ರಯೋಗವೂ ನಡೆಯಿತು. ಇಂತಹ ಹಲವು ಕಸರತ್ತು ಮಾಡಿದರೂ ಪಾಲಿಕೆ ಅಧಿಕಾರಿಗಳು ನಿರೀಕ್ಷಿಸಿದ ಮಟ್ಟಿಗೆ ಫಲ ನೀಡಿಲ್ಲ. ಹೀಗಾಗಿ ಅನಿವಾರ್ಯವಾಗಿ ದಂಡವೇ ಅಂತಿಮ ಮದ್ದು ಎನ್ನುವ ಕಾರಣಕ್ಕೆ ತಂಡಗಳನ್ನು ರಚಿಸಲಾಗಿದೆ. ಪೊಲೀಸ್‌ ಗಸ್ತು ವಾಹನದಂತೆ ಈ ವಾಹನ ಕೆಲ ಪ್ರದೇಶಗಳಲ್ಲಿ ಸಂಚರಿಸಲಿದ್ದು, ಕಸ ಹಾಕುವವರ ಮೇಲೆ ನಿಗಾ ವಹಿಸಲಿದೆ. ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ.

ಸ್ಥಳಕ್ಕೆ ವಿಕ್ರಂ ತಂಡ: ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಿಗೆ ಹೊಸದಾಗಿ ಎರಡು ಬೊಲೆರೊ ವಾಹನಗಳನ್ನು ಖರೀದಿಸಿದ್ದು, ಇಷ್ಟರಲ್ಲೇ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ತಂಡಗಳು
ಮೊದಲೇ ಗುರುತಿಸಿದ ಪ್ರದೇಶಗಳಲ್ಲಿ ಗಸ್ತು ತಿರುಗಲಿದೆ. ವಾಹನಕ್ಕೆ ಜಿಪಿಎಸ್‌, ವಾಕಿಟಾಕಿ ಸೇರಿದಂತೆ ಪ್ರತಿಯೊಂದು ಸೌಲಭ್ಯ ಕಲ್ಪಿಸಲಾಗಿದೆ.

ಪ್ರತಿಯೊಂದು ತಂಡದಲ್ಲಿ ಓರ್ವ ಆರೋಗ್ಯ ನಿರೀಕ್ಷಕರು ಹಾಗೂ ಅವರೊಂದಿಗೆ ಒಂದಿಷ್ಟು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಆಟೋ ಟಿಪ್ಪರ್‌ಗಳಿಗೆ ಕಸ ನೀಡದೆ ರಸ್ತೆ ಸೇರಿದಂತೆ ಬೇಕಾಬಿಟ್ಟಿಯಾಗಿ ಕಸ ಹಾಕುವವರನ್ನು ಗುರುತಿಸಿ ದಂಡ ವಿಧಿಸುವ ಕೆಲಸ ಈ ತಂಡ ಮಾಡಲಿದೆ. ಈಗಾಗಲೇ ಕೆಲವೊಂದು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಹಾಕಲಾಗಿದೆ. ಅಂತಹ ಕಡೆಗಳಲ್ಲಿ ದೃಶ್ಯಗಳ ಆಧಾರದ ಮೇಲೆ ಕಸ ಹಾಕುವವರನ್ನು ಗುರುತಿಸಿ ದಂಡ ವಸೂಲಿ ಮಾಡಲಿದೆ. ಈಗಾಗಲೇ ಜಾಗೃತಿ, ಮನವಿ, ದಂಡ ಹಾಕಿದರೂ ಇಂದಿಗೂ ಕಸ ಚೆಲ್ಲುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅಂತಹ ಸ್ಥಳಗಳ ಮೇಲೆ ಹೆಚ್ಚಿನ ನಿಗಾ ವಹಿಸಲಿದೆ. ಮೊದಲ ಹಂತವಾಗಿ ಮಾರುಕಟ್ಟೆ ಪ್ರದೇಶಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಇಲ್ಲಿನ ಸಾಧಕ-ಬಾಧಕ ಅಧ್ಯಯನ ನಡೆಸಿ ಪ್ರತಿಯೊಂದು ವಲಯಕ್ಕೂ ಈ ವಿಕ್ರಂ ವಿಸ್ತರಿಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ.

ಆರಂಭ ಶೂರತ್ವ ಆಗದಿರಲಿ ಪಾಲಿಕೆಯ ಯೋಜನೆಗಳು ಆರಂಭಕ್ಕೆ ಸೀಮಿತ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಯೋಜನೆ ರೂಪಿಸುವುದು, ಅನುಷ್ಠಾನ, ಖರೀದಿಗೆ ತೋರಿದ ಆಸಕ್ತಿ ದೀರ್ಘಾವಧಿಗೆ ಇರುವುದಿಲ್ಲ. 60 ಕೋಟಿ ರೂ. ಖರ್ಚು ಮಾಡಿ ಕಸ ನಿರ್ವಹಣೆಗೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಪ್ರಾಥಮಿಕ ಹಂತದಲ್ಲಿ ಕಸ ವಿಂಗಡಣೆಯಾಗುತ್ತಿಲ್ಲ. ಒಣ ಹಾಗೂ
ಹಸಿ ಕಸ ವಿಂಗಡಿಸಿ ನೀಡಿದರೆ ಪೌರ ಕಾರ್ಮಿಕರು ಒಂದೇ ಕಂಟೇನರ್‌ಗೆ ಮಿಶ್ರ ಮಾಡುತ್ತಿದ್ದು, ಕೆಲವೆಡೆ ಮೊದಲೇ ಮಿಶ್ರಣ ಮಾಡಿ ಕೊಡುತ್ತಿದ್ದಾರೆ. ಇದರ ಬಗ್ಗೆ ಪಾಲಿಕೆಯ ಆರಂಭದ ಶೂರತ್ವ ಈಗಿಲ್ಲ. ಇನ್ನೂ ಬ್ಲಾಕ್‌ಸ್ಪಾಟ್‌ಗಳ ಬಗ್ಗೆ ತೋರಿದ ಆಸಕ್ತಿ ಇಂದು ಕಾಣುತ್ತಿಲ್ಲ. ನಿರಂತರವಾಗಿ ಕೇವಲ ಆಟೋ ಟಿಪ್ಪರ್‌ಗಳ ಮೂಲಕ ಜಾಗೃತಿ ಸಂದೇಶಗಳು ಬಿತ್ತರವಾಗುತ್ತಿವೆ ಬಿಟ್ಟರೆ ನಿಯಮ ಉಲ್ಲಂಘಿಸುವವರ ಮೇಲೆ ಯಾವುದೇ ಕ್ರಮವಿಲ್ಲ. ಒಣ ಹಾಗೂ ಹಸಿ ಕಸ ಮಿಶ್ರಣ ಮಾಡಿಕೊಂಡು ಬರುವ ಪೌರ ಕಾರ್ಮಿಕರ ಮೇಲೂ ನಿಗಾ ಇಲ್ಲದಂತಾಗಿದೆ. ಕೇವಲ ಪ್ರಯೋಗಗಳಿಗೆ ಜನರ ತೆರಿಗೆ ಹಣ ಬಳಸದೆ ನಿರಂತರ ಮುಂದುವರಿಸಿಕೊಂಡು ಹೋಗುವಂತಾಗಬೇಕು ಎನ್ನುವುದು ಜನತೆಗೆ ಆಗ್ರಹವಾಗಿದೆ.

Advertisement

ಬಹುಪಯೋಗಿ ವಿಕ್ರಂ
ಘನತ್ಯಾಜ್ಯ ವಿಲೇವಾರಿ ವಿಭಾಗದಡಿ ಈ ತಂಡಗಳು ಕಾರ್ಯನಿರ್ವಹಿಸಲಿವೆ. ಮಾರುಕಟ್ಟೆ ಪ್ರದೇಶಗಳಲ್ಲಿ ಸ್ವತ್ಛತೆಗೆ ಹಾಗೂ
ಪಾಲಿಕೆ ನಿಯಮಗಳ ಉಲ್ಲಂಘನೆ ತಡೆಗೆ ತಂಡ ಬಳಕೆಯಾಗಲಿದೆ. ಜತೆಗೆ ತುರ್ತು ಸಂದರ್ಭದಲ್ಲೂ ಬಳಕೆಯಾಗಲಿದೆ. ಮಳೆಗಾಲದ ಸಂದರ್ಭದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ಈ ವಾಹನದ ಮೂಲಕ ಕಾರ್ಮಿಕರು ಹಾಗೂ ಅಗತ್ಯ ಸಾಮಗ್ರಿಗಳನ್ನು ಸಾಗಿಸಲು ಬಳಕೆಯಾಗಲಿದೆ. ವಾಹನಕ್ಕೆ ಮೈಕ್‌ ಅಳವಡಿಸಿದ್ದು, ಪಾಲಿಕೆಯ ಪ್ರತಿಯೊಂದು ಸೂಚನೆ, ಜಾಗೃತಿ ಸಂದೇಶಗಳನ್ನು ಇದರ ಮೂಲಕ ನೀಡಲಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕರ ಬಾಕಿ ಉಳಿಸಿಕೊಂಡರೆ ವಸೂಲಿಗೆ ಅಂಥಹವರ ಮನೆ ಮುಂದೆಯೂ “ವಿಕ್ರಂ’ ನಿಲ್ಲಲಿ¨.

ಇದು ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಮಹಾನಗರದ ಸ್ವತ್ಛತೆ ಕಾಪಾಡುವ ಉದ್ದೇಶದಿಂದ ವಿಕ್ರಂ ತಂಡ ಕಾರ್ಯನಿರ್ವಹಿಸಲಿದೆ. ಇದೊಂದು ಬಹುಪಯೋಗಿ ವಾಹನವಾಗಿದೆ. ಪಾಲಿಕೆಯ ಪ್ರತಿಯೊಂದು ಕಾರ್ಯಕ್ಕೆ ಮಹಾನಗರ ಜನತೆಯ ಸಹಕಾರ-ಸಹಭಾಗಿತ್ವ ಅಗತ್ಯ. ಸ್ವಯಂ ಪ್ರೇರಿತವಾಗಿ ಸ್ವಚ್ಛ ನಗರ ನಿರ್ಮಾಣದ ಮನಸ್ಸು ಮಾಡಬೇಕು. ಅದಕ್ಕೆ ಪೂರಕವಾಗಿ ಪಾಲಿಕೆ ಅಗತ್ಯ ಸಹಕಾರ ನೀಡಲಿದೆ. ಸಾಕಷ್ಟು ಜಾಗೃತಿ ನಂತರವೂ ನಿಯಮ ಪಾಲನೆ ಮಾಡದಿದ್ದರೆ ದಂಡ
ಅನಿವಾರ್ಯವಾಗಲಿದೆ.
*ಡಾ| ಬಿ.ಗೋಪಾಲಕೃಷ್ಣ, ಪಾಲಿಕೆ ಆಯುಕ್ತ

ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next