Advertisement

ಹುಬ್ಬಳ್ಳಿ: ಮಗನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಚಿನ್ನದ ಅಂಗಡಿ ಮಾಲೀಕ

03:02 PM Dec 05, 2022 | Team Udayavani |

ಹುಬ್ಬಳ್ಳಿ: ಜಗಳ, ಮನಸ್ತಾಪದಿಂದಾಗಿ ತಂದೆಯೇ ತನ್ನ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ನಡೆದಿದೆ.

Advertisement

ಅಖಿಲ್ ಭರತ ಮಹಾಜನ ಶೇಠ್ (26) ಎಂಬಾತ ಕೊಲೆಯಾಗಿದ್ದು, ಇಲ್ಲಿನ ಕೇಶ್ವಾಪುರ ಅರಿಹಂತ ನಗರದಲ್ಲಿ ಜುವೆಲರಿ ಅಂಗಡಿ ಮಾಲೀಕ ಭರತ್ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿದ್ದಾನೆ.

ಕಟ್ಟಡ ಸಾಮಗ್ರಿಗಳ ವ್ಯವಹಾರ ಮಾಡಿಕೊಂಡಿದ್ದ ಅಖಿಲ ಮತ್ತು ಕೊಪ್ಪಿಕರ ರಸ್ತೆಯಲ್ಲಿ ಜುವೆಲರಿ ವ್ಯಾಪಾರ ಮಾಡಿಕೊಂಡಿದ್ದ ತಂದೆ ಭರತ ನಡುವೆ ಆಗಾಗ ಕೆಲವೊಂದು ವಿಷಯಗಳಿಗೆ ವಾಗ್ವಾದ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಭರತ್ ಅವರು ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲು ಮುಂದಾಗಿದ್ದಾರೆ. ಅದಕ್ಕಾಗಿ ತನ್ನ ಅಂಗಡಿಯಲ್ಲೇ ಕೆಲಸ ಮಾಡಿಕೊಂಡಿದ್ದ ವೀರಾಪುರ ರಸ್ತೆಯ ಮಹಾದೇವನಿಗೆ ಯಾರನ್ನಾದರೂ ಇದಕ್ಕೆ ಹುಡುಕಿಕೊಡುವಂತೆ ಹೇಳಿದಾಗ, ಆತ ಹಳೇಹುಬ್ಬಳ್ಳಿಯ ತನ್ನ ಸ್ನೇಹಿತ ಸೊಹೆಲ್ ಗೆ ಈ ವಿಷಯ ತಿಳಿಸಿದ್ದಾನೆ. ಅವನು ಈ ಕೃತ್ಯಕ್ಕಾಗಿ ಇಬ್ಬರನ್ನು ಸುಪಾರಿಗೆ ಹೊಂದಿಸಿ ಮುಂದಿನ ಯೋಜನೆ ಹಾಕಿಕೊಂಡಿದ್ದಾರೆ.

ಅದರಂತೆ ಜುವೆಲರಿ ಮಾಲಿಕನೊಂದಿಗೆ ಅವರ ಕಾರಿನಲ್ಲೆ ಅಖಿಲ್ ಜೊತೆ ಡಿ. 1ರಂದು ಕಲಘಟಗಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅಖಿಲ್ ನನ್ನು ಭರತ ಅವರೊಂದಿಗೆ ಬಿಟ್ಟು ಬಂದಿದ್ದಾರೆ ಎಂದು ತಿಳಿದುಬಂದಿದೆ.

ಡಿ. 3ರಂದು ಕೇಶ್ವಾಪುರ ಠಾಣೆಯಲ್ಲಿ ಅಖಿಲ ಕಾಣೆಯಾದ ಬಗ್ಗೆ ಹಾಗೂ ತಂದೆಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಅವನನ್ನು ಪತ್ತೆ ಮಾಡಿಕೊಡಿ ಎಂದು ಅಖಿಲ್ ಚಿಕ್ಕಪ್ಪ ಮನೋಜ ಅವರು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ದೂರಿನನ್ವಯ ಬೆನ್ನು ಹತ್ತಿದ ಪೊಲೀಸರಿಗೆ ಅಖಿಲ್ ತಂದೆ ಭರತ ಮೇಲೆ ಸಂಶಯ ಬಂದು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಕುರಿತು ನಿಜಾಂಶ ಏನೆಂಬುವುದನ್ನು ಹಾಗೂ ಕೊಲೆಗೆ ಸುಪಾರಿ ಕೊಟ್ಟಿದ್ದಾಗಿ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಅಖಿಲ್ ನ ಶವವು ಭರತ ಅವರ ದೇವರ ಗುಡಿಹಾಳ ರಸ್ತೆಯಲ್ಲಿರುವ  ತೋಟದ ಮನೆಯಲ್ಲಿ ಪತ್ತೆಯಾಗಿದ್ದು, ಈ ಕೊಲೆಗೆ ಸಂಬಂಧಿಸಿ ಕೇಶ್ವಾಪುರ ಪೊಲೀಸರು ಭರತ ಮತ್ತು ಮಧ್ಯವರ್ತಿಗಳಾದ ಮಹಾದೇವ ಮತ್ತು ಸೊಹೆಲ್ ಎಂಬುವರನ್ನು ವಶಕ್ಕೆ ಪಡೆದಿದ್ದು, ಕೊಲೆ ಮಾಡಿದವರ ಪತ್ತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next