Advertisement

ತಂದೆಯೇ ಸುಪಾರಿ ಕೊಟ್ಟು ಮಗನ ಕೊಲೆ ಪ್ರಕರಣ; ನಾಲ್ವರ ಬಂಧನ

03:41 PM Dec 06, 2022 | Team Udayavani |

ಹುಬ್ಬಳ್ಳಿ: ಮಗನ ವಿಪರೀತ ದುಶ್ಚಟ ಮತ್ತು ಕಿರುಕುಳಕ್ಕೆ ಬೇಸತ್ತು ತಂದೆಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಶ್ವಾಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕೊಲೆಯಾದವನ ಶವ ಇದುವರೆಗೆ ಪತ್ತೆಯಾಗಿಲ್ಲ. ಜೊತೆಗೆ ಹಂತಕರು ತಲೆಮರೆಸಿಕೊಂಡಿದ್ದಾರೆ.

Advertisement

ಸುಪಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೊಲೆಯಾದ ಕೇಶ್ವಾಪುರ ಕುಸುಗಲ್ಲ ರಸ್ತೆ ಅರಿಹಂತನಗರದ ಅಖಿಲ ಮಹಾಜನಶೇಠ (26) ಈತನ ತಂದೆ, ಕಟ್ಟಡ ಸಲಕರಣೆಗಳ ವ್ಯಾಪಾರಿ ಭರತ ಮಹಾಜನಶೇಠ, ಮಧ್ಯವರ್ತಿಗಳಾದ ವೀರಾಪುರ ಓಣಿಯ ಮಹಾದೇವ ನಾಲವಾಡ, ಹಳೇಹುಬ್ಬಳ್ಳಿ ನೂರಾನಿ ಪ್ಲಾಟ್ ನ ಸಲೀಂ ಸಲಾವುದ್ದೀನ್ ಮೌಲ್ವಿ, ರೆಹಮಾನ್ ಅವರನ್ನು ಬಂಧಿಸಿದ್ದಾರೆ.

ತಂದೆಗೆ ಕೊಲೆ ಬೆದರಿಕೆ ಹಾಕ್ತಿದ್ದ ಅಖಿಲ:

ಮಾದಕ ಮತ್ತು ಮದ್ಯದಂತಹ ದುಶ್ಚಟಗಳ ದಾಸನಾಗಿದ್ದ ಅಖಿಲ ಪ್ರತಿದಿನ ತಡರಾತ್ರಿ ಮನೆಗೆ ಬಂದು ತಂದೆ ಮತ್ತು ತಾಯಿಯೊಂದಿಗೆ ಜಗಳವಾಡಿ ಹಲ್ಲೆ ಮಾಡುತ್ತಿದ್ದ. ಜೊತೆಗೆ ಕೊಲೆ ಮಾಡುವುದಾಗಿ ತಂದೆಗೆ ಬೆದರಿಕೆ ಹಾಕುತ್ತಿದ್ದ. ಮಗನ ಈ ವರ್ತನೆಯಿಂದ ಬೇಸತ್ತಿದ್ದ ಭರತ ಅವರು ಮಗನನ್ನು ಹೇಗಾದರೂ ಮಾಡಿ ಕೊನೆಗಾಣಿಸಬೇಕೆಂದು ನಿರ್ಧರಿಸಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

ಕೊಲೆಗೆ 10 ಲಕ್ಷ ರೂ. ಸುಪಾರಿ:

Advertisement

ಮಗನನ್ನು ಮುಗಿಸಲು ಭರತ ಅವರು ಸಂಚು ರೂಪಿಸಿ ಮಹಾದೇವ ಮುಖಾಂತರ ಸಲೀಂ ನನ್ನು ಪರಿಚಯಿಸಿಕೊಂಡು 10ಲಕ್ಷ ರೂ. ಸುಪಾರಿ ಕೊಟ್ಟಿದ್ದಾರೆ. ಡಿ. 1ರಂದು ಅರಿಹಂತ ನಗರದ ಮನೆಯಿಂದಲೇ ಎಲ್ಲರೂ ಸೇರಿ ಅಖಿಲನನ್ನು ಅವನ‌ ಕಾರಿನಲ್ಲಿ ಅಪಹರಿಸಿಕೊಂಡು ಕಲಘಟಗಿಯಿಂದ 2-3ಕಿ.ಮೀ ದೂರ ಕರೆದೊಯ್ದು ಶೆಡ್ ವೊಂದರಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಅದನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸುಪಾರಿ ಕೊಟ್ಟು ಮಗನ ಕೊಲೆ ಮಾಡಿಸಿದ್ದ ಭರತ ಅವರು ಮನೆಯಲ್ಲಿ ಅಖಿಲ ಸ್ನೇಹಿತರೊಂದಿಗೆ ಉಳಿದುಕೊಂಡಿದ್ದಾನೆ ಎಂದು ಸುಳ್ಳು ಹೇಳಿದ್ದಾರೆ. ಘಟನೆಯಾದ ಮೂರು ದಿನಗಳ ಬಳಿಕ ಡಿ. 3ರಂದು ಸಂಜೆ ಅಖಿಲ ತನಗೆ ವಿಡಿಯೋ ಕರೆ ಮಾಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಈ ವೇಳೆ ಆತ ಎತ್ತರವಾದ ಜಾಗದಿಂದ ಜಿಗಿಯುವಂತೆ ಕಂಡುಬಂದಿತ್ತೆಂದು ಆತ್ಮಹತ್ಯೆಯ ಬಣ್ಣ ಕಟ್ಟಲು ಯತ್ನಿಸಿದ್ದಾರೆ. ಮಗ ಕಾಣೆಯಾಗಿದ್ದಾನೆ ಎಂದು ಸಹೋದರನ ಮೂಲಕ ಕೇಶ್ವಾಪುರ ಠಾಣೆಯಲ್ಲಿ ದೂರು ಕೊಡಿಸಿದ್ದಾರೆ. ಅಲ್ಲದೆ ಮಗನನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದುಂಬಾಲು ಬಿದ್ದು ನಾಟಕವಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಪತ್ತೆಯಾಗದ ಅಖಿಲ ಶವ:

ಅಖಿಲ ನಾಪತ್ತೆಯಾದ ಪ್ರಕರಣ ದಾಖಲಾದ ಬಳಿಕ ಪೊಲೀಸರು ಆತನ ತಂದೆಯ ಮೇಲೆ ಅನುಮಾನಗೊಂಡು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದಾಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಅವರು ನೀಡಿದ ಮಾಹಿತಿ ಮೇರೆಗೆ ಮೂವರು ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.‌ ಅವರ ಹೇಳಿಕೆ ಆಧರಿಸಿ ಪೊಲೀಸರ ಐದು ತಂಡಗಳು ಅಖಿಲನ ಶವಕ್ಕಾಗಿ ಕಲಘಟಗಿ, ದೇವರ ಗುಡಿಹಾಳದ‌ ತೋಟದ ಮನೆ ಸೇರಿದಂತೆ ವಿವಿಧೆಡೆ ಹುಡುಕಾಟ ನಡಸಿದ್ದಾರೆ. ಆದರೆ ಇದುವರೆಗೂ ಅಖಿಲನ ಶವವಾಗಲಿ. ಹಂತಕರಾಗಲಿ ಪೊಲೀಸರಿಗೆ ಸಿಕ್ಕಿಲ್ಲ.

ಒಂದು ಮೂಲದ ಪ್ರಕಾರ ಹಂತಕರು ಕೊಲೆಯಾದ ಸ್ಥಳದಿಂದ ಶವವನ್ನು ಬೇರೆಡೆ ಸ್ಥಳಾಂತರಿಸಿರಬಹುದು ಇಲ್ಲವೇ ನದಿಯಲ್ಲಿ ಬಿಸಾಕಿರಬಹುದು ಎಂದು ಶಂಕೆ ವ್ಯಕ್ತಪಡಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next