Advertisement

ಬೈಪಾಸ್‌ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಟೋಲ್‌ಗೇಟ್‌ಗೆ ಮುತ್ತಿಗೆ, ಪೊಲೀಸರ ಜತೆ ಚಕಮಕಿ

04:52 PM Jan 19, 2021 | Team Udayavani |

ಹುಬ್ಬಳ್ಳಿ: ಹು-ಧಾ ಬೈಪಾಸ್‌ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಗಬ್ಬೂರು ಬೈಪಾಸ್‌ನಲ್ಲಿನ ಟೋಲ್‌ಗೇಟ್‌ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಮಹಾನಗರ ಪೊಲೀಸ್‌ ಆಯುಕ್ತರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Advertisement

ಹು-ಧಾ ಬೈಪಾಸ್‌ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಟೋಲ್‌ ಗೇಟ್‌ ಹಾಗೂ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲು ಮುಂದಾದರು. ಈ ಸಮಯದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಇದಾದ ಸ್ವಲ್ಪ ಸಮಯದ ನಂತರ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದನ್ನು ಖಂಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಮತ್ತೆ ರಸ್ತೆ ಬಂದ್‌ ಮಾಡಿ, ವಾಹನಗಳನ್ನು ತಡೆದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಪರಿಸ್ಥಿತಿ ಬಿಗಡಾಯಿಸಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಪೊಲೀಸರು
ಕಾಂಗ್ರೆಸ್‌ ಕಾರ್ಯಕರ್ತ ಪ್ರಕಾಶ ಬುರಬುರೆ ಅವರನ್ನು ಪೊಲೀಸ್‌ ವಾಹನ ಹತ್ತಿಸಲು ಮುಂದಾದಾಗ ತಡೆದ ಪ್ರತಿಭಟನಾಕಾರರು, ಕಾರ್ಯಕರ್ತರನ್ನು ಮರಳಿ ಕರೆತಂದರು.

ಕೆಲವೇ ನಿಮಿಷಗಳಲ್ಲಿ ಸದಾನಂದ ಕುಲಕರ್ಣಿ ಎನ್ನುವ ಕಾರ್ಯಕರ್ತರನ್ನು ಬಲಪ್ರಯೋಗದಿಂದ ವಾಹನದಲ್ಲಿ ಹಾಕಲು ಮುಂದಾದಾಗ ಪೊಲೀಸರು ಹಾಗೂ ಕಾರ್ಯಕರ್ತರು ಕೈ ಕೈ ಮಿಲಾಯಿಸಿದರು. ಹಿರಿಯ ಕಾಂಗ್ರೆಸ್‌ ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಮಹಾನಗರ ಪೊಲೀಸ್‌ ಆಯುಕ್ತ ಲಾಭೂ ರಾಮ ಅವರು ಆಗಮಿಸಿ ಪರಿಸ್ಥಿತಿ
ತಿಳಿಗೊಳಿಸಿದರು.

ಇದನ್ನೂ ಓದಿ:ಜನರ ಮಧ್ಯೆ ತೆರಳಿ ಕಾಂಗ್ರೆಸ್‌ ಹೋರಾಟ; ವಿಭಾಗ ಮಟ್ಟದ ಸಂಕಲ್ಪ ಸಮಾವೇಶ

Advertisement

ಮುಖಂಡರಾದ ಅನ್ವರ್‌ ಮುಧೋಳ, ಮೋಹನ ಅಸುಂಡಿ, ಬಾಬಾಜಾನ್‌ ಮುಧೋಳ, ಮಂಜುನಾಥ ಚಿತಗಿಂಜಲ, ಮಹೇಂದ್ರ ಸಿಂಘಿ, ದೀಪಾ ಗೌರಿ, ಕಿರಣ ಮೂಗಬಸ್ತ, ಇಮ್ರಾನ್‌ ಎಲಿಗಾರ, ಶಾಕೀರ ಸನದಿ ಮಾತನಾಡಿ, ಹೆದ್ದಾರಿ ಅಗಲೀಕರಣವಾಗದಿದ್ದರೆ
ಬೆಂಗಳೂರಿಗೆ ತೆರಳಿ ನಂದಿ ಹೈವೇ ಕಂಪೆನಿ ಕಚೇರಿಗೆ ಮುತ್ತಿಗೆ ಹಾಕೋಣ ಎಂದರು.

ಸ್ಥಳಕ್ಕೆ ಆಗಮಿಸಿದ ಅಪರ ತಹಶೀಲ್ದಾರ್‌ ವಿಜಯಕುಮಾರ ಕಡಕೋಳ ಹಾಗೂ ಮಹಾನಗರ ಪೊಲೀಸ್‌ ಆಯುಕ್ತ ಲಾಭೂರಾಮ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಯಮನೂರ ಜಾಧವ, ಮಂಜುನಾಥ ಉಪ್ಪಾರ, ಮಹಮೂದ್‌ ಕೊಳೂರ,
ಅಬ್ದುಲ್‌ ಗನಿ ವಲಿಅಹ್ಮದ, ಸಾಗರ ಹಿರೇಮನಿ, ನವೀದ್‌ ಮುಲ್ಲಾ, ಹಾಜಿಅಲಿ ಹಿಂಡಸಗೇರಿ, ಡಿ.ಎಂ. ದೊಡ್ಡಮನಿ, ದಶರಥ ವಾಲಿ, ದುರ್ಗಪ್ಪ ಪೂಜಾರ, ಶಾರೂಖ್‌ ಮುಲ್ಲಾ, ಸಂತೋಷ ಜಕ್ಕಪ್ಪನವರ, ತಾರಾದೇವಿ ವಾಲಿ, ಪುಷ್ಪಾ ಅರಳಿಕಟ್ಟಿ, ಅಕ್ಕಮ್ಮ ಕಂಬಳಿ, ರಾಜೇಶ್ವರಿ ಬಿಲಾನಾ, ಕಾಂಚನಾ ಘಾಟಗೆ, ಬಾಳಮ್ಮ ಜಂಗನವರ, ಭಾರತಿ ಬದ್ದಿ, ಶಾಂತಾ ಇರಕಲ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next