Advertisement

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

03:30 PM Aug 10, 2022 | Team Udayavani |

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್‌ ಘರ್‌ ತಿರಂಗಾ(ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ) ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರಧಾನಿ ಮೋದಿ ಅವರು ಜುಲೈ 22ರಂದು ಕರೆ ನೀಡಿದ್ದಾರೆ.

Advertisement

ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳಿದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಶೋಭೆ ತರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅದಕ್ಕೆ ಕಾರಣವಾದ ಎಲ್ಲರನ್ನು ಸದಾ ಸ್ಮರಿಸುವುದು ಹಾಗೂ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ದೇಶಾದ್ಯಂತ ಭಾರತ ಸ್ವಾತಂತ್ರದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಭಾರತ ಸರಕಾರವು ಹರ್‌ ಘರ್‌ ತಿರಂಗಾ ಎಂಬ ಘೋಷವಾಕ್ಯದೊಂದಿಗೆ 2022ರ ಆಗಸ್ಟ್ 13ರಿಂದ 15ರ ವರೆಗೆ ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿ ಅಭಿಯಾನ ಹಮ್ಮಿಕೊಂಡಿದೆ. ಜನರ ಹೃದಯದಲ್ಲಿ ದೇಶಭಕ್ತಿಯನ್ನು ಪ್ರಚೋದಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಹಿಂದಿನ ಆಲೋಚನೆಯಾಗಿದೆ.

ವಿವಿಧೆಡೆ ಹರ್‌ ಘರ್‌ ತಿರಂಗಾ ಅಭಿಯಾನ
ಜನರ ಹೃದಯದಲ್ಲಿ ದೇಶಭಕ್ತಿಯನ್ನು ಪ್ರೇರೇಪಿಸುವ ಸಲುವಾಗಿ ಮತ್ತು ಆಜಾದಿ ಕಾ ಅಮೃತ ಮಹೋತ್ಸವದ ಪರಿಕಲ್ಪನೆಯನ್ನು, ಉತ್ಸಾಹದಲ್ಲಿ ಸ್ಮರಿಸುವ ಸಲುವಾಗಿ ಪ್ರಚಾರ ಮಾಡಲಾಗುತ್ತಿದೆ.

*ಹೆಚ್ಚಿನ ಸಂಖ್ಯೆಯ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಚಿವಾಲಯಗಳು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

Advertisement

*ಈಗಾಗಲೇ ಭಾರತೀಯ ಕೋಸ್ಟ್ ಗಾರ್ಡ್‌ ಸಮುದ್ರದೊಳಗೆ ಧ್ವಜದ ಡೆಮೊವನ್ನು(ಪೂರ್ವ ಸಿದ್ಧತಾ ಕಾರ್ಯ ಚಟುವಟಿಕೆ)ಪ್ರದರ್ಶಿಸಿದೆ.

*ಕರ್ನಾಟಕದಲ್ಲಿ ಒಂದು ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅನೇಕ ಕಾರ್ಯಕ್ರಮಗಳನ್ನು ಗ್ರಾ. ಪಂ. ಮೂಲಕ, ಶಾಲಾ ಕಾಲೇಜುಗಳ ಮೂಲಕ ಹಮ್ಮಿಕೊಳ್ಳಲಾಗಿದೆ.

* ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಆಯ್ದ ಗ್ರಾಮಗಳ ಸುಮಾರು 500 ಕೆರೆಗಳ ಬಳಿ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಾಡಲಿದೆ. ಈ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಕಿಕೊಂಡಿದೆ.

*ಇತ್ತೀಚೆಗೆ ಬಂಗಾಲ ಕೊಲ್ಲಿಯಲ್ಲಿ ಭಾರತೀಯ ನೌಕಾಪಡೆಯು, ಪಶ್ಚಿಮ ಬಂಗಾಲದ ಮೀನುಗಾರರೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದೆ.

ಧ್ವಜ ಸಾಗಾಣಿಕೆಗೆ ಪಾಲುದಾರಿಕೆ
ಧ್ವಜ ಪೂರೈಕೆಯನ್ನು ತ್ವರಿತಗೊಳಿಸಲು ಇ-ಕಾಮರ್ಸ್‌ ಸಂಸ್ಥೆಗಳು ಮತ್ತು ಸ್ವ-ಸಹಾಯ ಸಂಸ್ಥೆಗಳು ಕೂಡ ಸರಕಾರದೊಂದಿಗೆ ಪಾಲುದಾರಿಕೆ ಹೊಂದಿವೆ.ಗ್ರಾ. ಪಂ.ಗಳು ಮತ್ತು ಸ್ವಸಹಾಯ ಗುಂಪುಗಳು ಆಸಕ್ತಿಯಿಂದ ಸಕ್ರೀಯವಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ.

ಎಲ್ಲೆಲ್ಲಿ ಧ್ವಜ ಹಾರಾಟ
ಪಂ. ವ್ಯಾಪ್ತಿಯ ರಾಜ್ಯ ಸರಕಾರದ ಎಲ್ಲ ಕಚೇರಿಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಹಕಾರ ಸಂಘ ಗಳು, ಅಂಚೆ ಕಚೇರಿ, ಶಾಲೆಗಳು, ವಸತಿ ಶಾಲೆ/ಹಾಸ್ಟೆಲ್‌ಗ‌ಳು, ಗ್ರಾ. ಪಂ. ಗ್ರಂಥಾಲಯಗಳು, ಅರೆ ಸರಕಾರಿ ಕಚೇರಿಗಳು, ನಿಗಮ-ಮಂಡಳಿಗಳು, ಸಾರ್ವಜನಿಕ ಉದ್ಯಮಗಳು, ಪಶು ಪಾಲನಾ ಕೇಂದ್ರ ಸೇರಿದಂತೆ ಇತರ ಸರಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಾಡಲಿದೆ. ಇದರ ಜತೆಗೆ ಸ್ವಸಹಾಯ ಗುಂಪುಗಳು, ಸಾರ್ವಜನಿಕರು, ಶಾಲಾ, ಕಾಲೇಜು ಮಕ್ಕಳು, ಇತರ ಎಲ್ಲ ಸಿಬಂದಿ ಹಾಗೂ ಅವರ ಕುಟುಂಬ ವರ್ಗದವರು ಸೇರಿ ಸ್ವತಃ ತಾವೇ ಕ್ರಿಯಾಶೀಲವಾಗಿ ಭಾಗವಹಿಸುವಂತೆ ಕೋರಲಾಗಿದೆ.

ಧ್ವಜ ತಯಾರಿಕೆ ಹೇಗೆ
ಪಿಂಗಲಿ ವೆಂಕಯ್ಯ ಅವರ ರಾಷ್ಟ್ರಧ್ವಜದ ವಿನ್ಯಾಸ ಮತ್ತು 1931ರ ಸ್ವರಾಜ್‌ ಧ್ವಜದಂತೆ, ಕೇಂದ್ರ ಸರಕಾರ ನಿಗದಿಪಡಿಸಿದ 3:2ರಂತೆ ‘3×2’ ‘6×4′ ಮತ್ತು ’21×14’ ಅಳತೆಗಳಲ್ಲಿ ಕೈಮಗ್ಗ ಅಥವಾ ವಿದ್ಯುತ್‌ ಮಗ್ಗದಿಂದ ನೇಯ್ದ ಪಾಲಿಸ್ಟರ್‌ ಬಟ್ಟೆಯಲ್ಲಿ ಧ್ವಜಗಳನ್ನು ತಯಾರಿಸಲಾಗುತ್ತದೆ.
ಧ್ವಜಾರೋಹಣಕ್ಕೆ ಪ್ಲಾಸ್ಟಿಕ್‌ ಹೊರತುಪಡಿಸಿ ಖಾದಿ, ನೂಲು, ಪಾಲಿಸ್ಟರ್‌, ಉಣ್ಣೆ, ರೇಷ್ಮೆ ಹತ್ತಿಯಿಂದ ತಯಾರಿಸಿದ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ತಯಾರಿಸಿದ ಸುಸ್ಥಿತಿಯಲ್ಲಿರುವ ಧ್ವಜವನ್ನು ಹಾರಿಸಬಹುದು.

ಪ್ರತಿಧ್ವಜಕ್ಕೆ 22 ರೂ. ನಿಗದಿ
ಕೇಂದ್ರ ಸರಕಾರ ಪೂರೈಸುತ್ತಿರುವ ರಾಷ್ಟ್ರಧ್ವಜಕ್ಕೆ ಬದಲಾಗಿ ರಾಜ್ಯ ಸರಕಾರ ಹಣ ಪಾವತಿಸುತ್ತಿರುವ ಕಾರಣ ಜಿಲ್ಲಾ ಮಟ್ಟದಲ್ಲಿ ರಾಷ್ಟ್ರಧ್ವಜವನ್ನು ಪಡೆಯುವ ಸಾರ್ವಜನಿಕರು ಹಣ ಪಾವತಿಸಬೇಕಿದೆ. ಆ ಪ್ರಕಾರ ಪ್ರತಿ ರಾಷ್ಟ್ರಧ್ವಜಕ್ಕೆ 22 ರೂ. ನಿಗದಿಪಡಿಸಲಾಗಿದೆ. ರಾಷ್ಟ್ರದಾದ್ಯಂತ ಎಲ್ಲ ಅಂಚೆ ಕಚೇರಿಗಳಲ್ಲಿ ಆಗಸ್ಟ್ 01ರಿಂದ ಧ್ವಜಗಳ ಮಾರಾಟ ಪ್ರಾರಂಭವಾಗಿದೆ.

ಯಾರಿಂದ ಪೂರೈಕೆ
ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆ (ಎನ್‌ಆರ್‌ಎಲ…ಎಂ)ಯ ಸಹಯೋಗದೊಂದಿಗೆ ಧ್ವಜಗಳನ್ನು ಸ್ಥಳೀಯವಾಗಿ ತಯಾರಿಸುವ ಮೂಲಕ ದೇಸಿತನಕ್ಕೆ ಉತ್ತೇಜನ ನೀಡುವ ಉದ್ದೇಶವೂ ಇದರ ಹಿಂದಿದೆ. ಹೀಗಾಗಿ ಸ್ವಸಹಾಯ ಗುಂಪುಗಳು ತಯಾರಿಸಿದ ಧ್ವಜವನ್ನು ಖರೀದಿಸಿ ಗ್ರಾಮ ಪಂಚಾಯತ್‌ಗಳು ಉಚಿತವಾಗಿ ಹಂಚಿಕೆ ಮಾಡಲಿದೆ. ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಇದರ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಈ ಅಭಿಯಾನ ಯಶಸ್ವಿಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಭಾರತ ಸ್ವಾತ್ರಂತ್ರ್ಯ ಅಮೃತ ಮಹೋತ್ಸವದ ಸಂಸ್ಮರಣೆಯ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೇ ಮೂರು ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ‘ಹರ್‌ ಘರ್‌ ತಿರಂಗಾ’ ಅಭಿಯಾನ ನಡೆಸಲು ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ ಈ ಅಭಿಯಾನಕ್ಕೆ ಕರ್ನಾಟದಲ್ಲೂ ಪೂರ್ಣ ಪ್ರಮಾಣದ ಸ್ಪಂದನೆ ದೊರೆಯಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದೆ. ತ್ರಿವರ್ಣ ಧ್ವಜವು ನಮ್ಮಲ್ಲಿ ಆಳವಾದ ಬೇರೂರಿರುವ ರಾಷ್ಟ್ರೀಯ ಸಿದ್ಧಾಂತವನ್ನು ನೆನಪಿಸುತ್ತದೆ. ಪ್ರತಿಯೊಬ್ಬ ಭಾರತೀಯನ ಮನೆಯ ಮನದಲ್ಲಿ ತ್ರಿವರ್ಣಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸುವ ಮಹದಾಶಯವಾಗಬೇಕಾಗಿದೆ.

ಅಭಿಯಾನ ಯಶಸ್ವಿಗೊಳಿಸುವ ಘೋಷಣೆಗಳು
1)ಮನೆ ಮನೆ ಮೇಲೆ ತಿರಂಗಾ ಹಾರಿಸಿ ದೇಶಪ್ರೇಮ ಮೆರೆಯಿರಿ.
2)ರಾಷ್ಟ್ರಧ್ವಜದ ಮುಂದೆ ನಿಂತು ಸೆಲ್ಫಿ ತೆಗೆದು ಸಂಭ್ರಮಿಸಿ.
3)ಮನೆಯ ಮನಗಳಲ್ಲಿ ಹರ್‌ ಘರ್‌ ತಿರಂಗಾ ಧ್ವಜ ಹಾರಿಸಿ; ಜಯಘೋಷ ಮೊಳಗಿಸಿ.
4)ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕನ್ನಡದಾರತಿ.
5)ಹೆಸರಾಯಿತು ಭಾರತ; ಉಸಿರಾಗಲಿ ದೇಶಪ್ರೇಮದ ದೇಶಭಕ್ತಿ.
6)ಬನ್ನಿ ಸ್ವಾತಂತ್ರ್ಯ ಸಮರದ ಅಮರ ವೀರರನ್ನು ಸ್ಮರಿಸೋಣ.

ಬಸವರಾಜ ಎಮ್‌ ಯರಗುಪ್ಪಿ
ಬಿ ಆರ್‌ ಪಿ ಶಿರಹಟ್ಟಿ
ಸಾ.ಪೊ ರಾಮಗೇರಿ

Advertisement

Udayavani is now on Telegram. Click here to join our channel and stay updated with the latest news.

Next