Advertisement

Election: ಚುನಾವಣ ಬಾಂಡ್‌ ಏಕಿಷ್ಟು ವಿರೋಧ?

11:54 PM Nov 03, 2023 | Team Udayavani |

ಚುನಾವಣ ಬಾಂಡ್‌ ವಿಚಾರದಲ್ಲಿ ಈಗ ದೇಶದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಬಾಂಡ್‌ ಮತ್ತು ಇಡೀ ವ್ಯವಸ್ಥೆಯನ್ನೇ ಪಾರದರ್ಶಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಈಗ ವಾದ-ಪ್ರತಿವಾದವೂ ಮುಗಿದು, ತೀರ್ಪು ಕಾಯ್ದಿರಿಸಲಾಗಿದೆ.  ಪಾರದರ್ಶಕವಿಲ್ಲದ ಈ ವ್ಯವಸ್ಥೆಯಿಂದ ಭ್ರಷ್ಟಾಚಾರ ಹೆಚ್ಚಾಗಬಹುದು ಎಂಬ ವಾದ ಅರ್ಜಿದಾರರದ್ದು.

Advertisement

ಏನಿದು ಚುನಾವಣ ಬಾಂಡ್‌?

ದೇಶದಲ್ಲಿನ ರಾಜಕೀಯ ಪಕ್ಷಗಳಿಗೆ ನೀಡಬಹುದಾದ ಬಾಂಡ್‌ ರೂಪದ ಹಣವೇ ಚುನಾವಣ ಬಾಂಡ್‌. ಭಾರತೀಯ ಸ್ಟೇಟ್‌ ಬ್ಯಾಂಕ್‌ ಈ ಬಾಂಡ್‌ಗಳನ್ನು 1,000, 10,000, 1 ಲಕ್ಷ ರೂ. 10 ಲಕ್ಷ ರೂ. ಮತ್ತು 1 ಕೋಟಿ ರೂ. ಮುಖಬೆಲೆಯಲ್ಲಿ ಮಾರಾಟ ಮಾಡುತ್ತದೆ. ಇದನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು ಖರೀದಿಸಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡಬಹುದು. ವಿಶೇಷವೆಂದರೆ ಈ ಬಾಂಡ್‌ಗಳು ಬಡ್ಡಿರಹಿತವಾಗಿವೆ. ಆದರೆ ಈ ಬಾಂಡ್‌ಗಳನ್ನು ಖರೀದಿ ಮಾಡುವವರು ಕೆವೈಸಿ ಮಾಡಿಸಲೇಬೇಕು. ಅಲ್ಲದೆ ರಾಜಕೀಯ ಪಕ್ಷಗಳು ನಿಗದಿತ ಸಮಯದಲ್ಲಿ ಇವುಗಳನ್ನು ನಗದಾಗಿ ಪರಿವರ್ತಿಸಿಕೊಳ್ಳಬೇಕು.

ವಿವಾದಗಳೇನು?

ಈ ಬಾಂಡ್‌ಗಳಲ್ಲಿ ದಾನಿಗಳ ಹೆಸರು ಮತ್ತು ಇತರ ಮಾಹಿತಿಯನ್ನು ನಮೂದಿಸಲಾಗಿಲ್ಲ. ಹೀಗಾಗಿ ಇವುಗಳನ್ನು ಅನಾಮಧೇಯ ಎಂದೂ ಕರೆಯಲಾಗುತ್ತದೆ. ಜತೆಗೆ ಒಬ್ಬ ವ್ಯಕ್ತಿ ಅಥವಾ ಕಂಪೆನಿ ಖರೀದಿಸಬಹುದಾದ ಚುನಾವಣ ಬಾಂಡ್‌ಗಳ ಸಂಖ್ಯೆಗೆ ಯಾವುದೇ ಮಿತಿ ಇಲ್ಲ.

Advertisement

ಯಾವಾಗಿನಿಂದ ಜಾರಿ?: 2016 ಮತ್ತು 2017ರಲ್ಲಿ ಹಣಕಾಸು ಕಾಯ್ದೆಯ ಮೂಲಕ ಈ ಬಾಂಡ್‌ಗಳನ್ನು ಜಾರಿಗೆ ತಂದಿದ್ದು, ನಾಲ್ಕು ಕಾಯ್ದೆಗಳಿಗೆ ತಿದ್ದುಪಡಿ ತರಲಾಯಿತು. ಅಂದರೆ  ಜನಪ್ರಾತಿನಿಧ್ಯ ಕಾಯ್ದೆ, 1951,(ಆರ್‌ಪಿಎ), ಕಂಪೆನಿಗಳ ಕಾಯ್ದೆ, 2013, ಆದಾಯ ತೆರಿಗೆ ಕಾಯ್ದೆ, 1961 ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010 (ಎಫ್ಸಿಆರ್‌ಎ) ಕಾಯ್ದೆಗಳಿಗೆ ತಿದ್ದುಪಡಿ ತರಲಾಯಿತು.

ಮೊದಲು ಏನಿತ್ತು?: ಈ ಯೋಜನೆಯನ್ನು ಪರಿಚಯಿಸುವ ಮೊದಲು ರಾಜಕೀಯ ಪಕ್ಷಗಳು 20,000 ರೂ.ಗಿಂತ ಹೆಚ್ಚಿನ ಎಲ್ಲ ದೇಣಿಗೆಗಳನ್ನು ಬಹಿರಂಗಗೊಳಿಸಬೇಕಾಗಿತ್ತು. ಅಲ್ಲದೆ ಯಾವುದೇ ಕಾರ್ಪೊರೇಟ್‌ ಕಂಪೆನಿಯು ತಮ್ಮ ಒಟ್ಟು ಲಾಭದ ಶೇ.7.5 ಅಥವಾ ಆದಾಯದ ಶೇ.10ಕ್ಕಿಂತ ಹೆಚ್ಚಿನ ದೇಣಿಗೆ ನೀಡಲು ಅನುಮತಿ ಇರಲಿಲ್ಲ.

ಯಾವ ಪಕ್ಷಗಳಿಗೆ ಹಣ?

ಇತ್ತೀಚಿನ ಲೋಕಸಭಾ ಅಥವಾ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಚಲಾವಣೆಯಾದ ಮತಗಳ ಪೈಕಿ ಕನಿಷ್ಠ ಶೇ.1 ಮತಗಳನ್ನು ಪಡೆದ ಮತ್ತು ಆರ್‌ಪಿಎ ಅಡಿಯಲ್ಲಿ ನೋಂದಾಯಿಸಲ್ಪಟ್ಟ ರಾಜಕೀಯ ಪಕ್ಷಗಳು ಬಾಂಡ್‌ಗಳ ಮೂಲಕ ಹಣ ಪಡೆಯಬಹುದಾಗಿತ್ತು. ಬಾಂಡ್‌ ಮೊತ್ತವನ್ನು ಖರೀದಿಸಿದ 15 ದಿನಗಳಲ್ಲಿ ಈ ಖಾತೆಯಲ್ಲಿ ಹಣವನ್ನು ಜಮಾ ಮಾಡಲಾಗುತ್ತದೆ. ಈ ಬಾಂಡ್‌ಗಳು ಜನವರಿ, ಎಪ್ರಿಲ್‌, ಜುಲೈ ಮತ್ತು ಅಕ್ಟೋಬರ್‌ನಲ್ಲಿ ಮಾತ್ರ ಸಿಗುತ್ತವೆ. ಲೋಕಸಭೆ ಚುನಾವಣೆ ವರ್ಷದಲ್ಲಿ 30 ದಿನಗಳ ವರೆಗೆ ಓಪನ್‌ ಇರುತ್ತವೆ.

ಸುಪ್ರೀಂನಲ್ಲಿ ವಿಚಾರಣೆ 

ಈ ಬಾಂಡ್‌ಗಳ ಕುರಿತಾಗಿ ಆಕ್ಷೇಪ ಸಲ್ಲಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿ ಅ.31ರಿಂದ ಸಂವಿಧಾನ ಪೀಠವು ವಿಚಾರಣೆ ನಡೆಸಿತು. ಹಿರಿಯ ವಕೀಲರಾದ ಪ್ರಶಾಂತ್‌ ಭೂಷಣ್‌, ನಿಜಾಮ್‌ ಪಾಷಾ, ಕಪಿಲ್‌ ಸಿಬಲ್‌, ವಿಜಯ್‌ ಹನ್ಸಾರಿಯಾ, ಸಂಜಯ್‌ ಹೆಗ್ಡೆ ಮತ್ತು ಶಾದನ್‌ ಫರಾಸತ್‌ ಅರ್ಜಿದಾರರ ಪರ ವಾದ ಮಂಡಿಸಿದ್ದಾರೆ.

ಅರ್ಜಿದಾರರ ವಾದಗಳೇನು?

ಮಾಹಿತಿ ಹಕ್ಕು ಉಲ್ಲಂಘನೆ

ಈ ಯೋಜನೆಯು ರಾಜ ಕೀಯ ಪಕ್ಷಗಳ ಬಗ್ಗೆ ಸಂವಿಧಾನದ ಪರಿಚ್ಛೇದ 19 (1) ಎ ಅಡಿಯಲ್ಲಿ ನಾಗರಿಕರ ಮೂಲಭೂತ ಮಾಹಿತಿ ಹಕ್ಕನ್ನು ಉಲ್ಲಂ ಸುತ್ತದೆ. ಜನರಿಗೆ ಅಭ್ಯರ್ಥಿಗಳ ಬಗ್ಗೆ ಸಂಪೂರ್ಣ ವಿವರ ಪಡೆಯುವ ಹಕ್ಕು ಇರುವಂತೆಯೇ, ಇವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬಂದಿತು ಎಂದು ತಿಳಿದುಕೊಳ್ಳುವ ಹಕ್ಕು ಇದೆ.

ಹಿಂಬಾಗಿಲ ಲಾಬಿ

ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಂಪೆನಿಗಳು ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತವೆ. ಅಂದರೆ ಇದು ಒಂದು ರೀತಿಯಲ್ಲಿ ಪರೋಕ್ಷ ಕಿಕ್‌ಬ್ಯಾಕ್‌ ಇದ್ದ ಹಾಗೆ.

ಶೆಲ್‌ ಕಂಪೆನಿಗಳ ಜನನ

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಕಂಪೆನಿಗಳಿಗೆ ವಾರ್ಷಿಕ ಲಾಭದ ಶೇ.7.5ರ ಮಿತಿಯನ್ನು ಸರಕಾರ ತೆಗೆದುಹಾಕಿದ್ದರಿಂದ ಮತ್ತು ವಿದೇಶಿ ಕಂಪೆನಿಗಳ ಭಾರತೀಯ ಅಂಗಸಂಸ್ಥೆಗಳಿಗೆ ದೇಣಿಗೆ ನೀಡಲು ಅವಕಾಶ ನೀಡಿದ್ದರಿಂದ ಶೆಲ್‌ ಕಂಪೆನಿಗಳೂ ದೇಣಿಗೆ ನೀಡಬಹುದು. ಕೆಲವೊಂದು ನಷ್ಟಕ್ಕೀಡಾಗಿರುವ, ವಹಿವಾಟು ನಡೆಸದೇ ಇರುವ ಕಂಪೆನಿಗಳಿಂದಲೂ ದೇಣಿಗೆ ನೀಡಲಾಗಿದೆ.

ಅಪಾರದರ್ಶಕ ವ್ಯವಸ್ಥೆ

ಚುನಾವಣ ಬಾಂಡ್‌ಗಳು ಸಂಪೂರ್ಣವಾಗಿ ಅನಾಮಧೇಯ ಮತ್ತು ಅಪಾರದರ್ಶಕವಾಗಿವೆ. ಯಾರು ಯಾರಿಗೆ ಕೊಡುಗೆ ನೀಡಿದ್ದಾರೆ ಎಂಬುದನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿಯಲು ಸಾಧ್ಯವಿಲ್ಲ. ಜತೆಗೆ ಈ ಅನಾಮಧೇಯತೆಯಿಂದಾಗಿ ಭ್ರಷ್ಟಾಚಾರದ ಅನುಮಾನಗಳೂ ಹುಟ್ಟಿವೆ.

ಚುನಾವಣೆಗಳಿಗಷ್ಟೇ ಬಳಕೆಯಾಗುತ್ತಿಲ್ಲ

ಚುನಾವಣ ಬಾಂಡ್‌ ಎಂದು ನೀಡಲಾಗಿರುವ ಹೆಸರೇ ತಪ್ಪು. ಈ ಬಾಂಡ್‌ಗಳನ್ನು ಚುನಾವಣೆಗಲ್ಲದೇ ಬೇರೆ ಕಾರಣಗಳಿಗೂ ಬಳಕೆ ಮಾಡಬಹುದು. ಪಕ್ಷಗಳು ಏತಕ್ಕಾಗಿ ವೆಚ್ಚ ಮಾಡಿವೆ ಎಂಬುದನ್ನು ಯಾರೂ ತಿಳಿಯಲು ಸಾಧ್ಯವಾಗುತ್ತಿಲ್ಲ.

ಭ್ರಷ್ಟಾಚಾರಕ್ಕೆ ಉತ್ತೇಜನ

ಈ ಬಾಂಡ್‌ಗಳ ಮೂಲಕ ಹಣ ನೀಡಿ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಿದಂತಾಗಿದೆ. ರಾಜಕೀಯ ಪಕ್ಷಗಳು ಯಾವುದೇ ಸಮಯ ದಲ್ಲಿ ಬೇಕಾದರೂ ಖಾತೆಗಳನ್ನು ಮುಚ್ಚಬಹುದು. ಈ ಬಗ್ಗೆ ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿಎ) ಮತ್ತು ಮನಿ ಲಾಂಡ್ರಿಂಗ್‌ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಿಚಾರಣೆ ನಡೆಸಲೂ ಸಾಧ್ಯವಿಲ್ಲ.

ವಿಪಕ್ಷಗಳಿಗೆ ಸಿಗುತ್ತಿಲ್ಲ

ಶೇ.50ಕ್ಕಿಂತ ಹೆಚ್ಚು ಹಣವನ್ನು ಆಡಳಿತ ಪಕ್ಷಗಳು ಮಾತ್ರ ಸ್ವೀಕರಿಸುತ್ತಿವೆ. ಇದು ಕೇಂದ್ರ ಮತ್ತು ರಾಜ್ಯಗಳಿಗೆ ಅನ್ವಯವಾಗುತ್ತದೆ. ರಾಜ್ಯಗಳಲ್ಲಿನ ವಿಪಕ್ಷಗಳಿಗೆ ಶೇ.1ರಷ್ಟೂ ದೇಣಿಗೆ ಸಿಕ್ಕಿಲ್ಲ.

ಕಪ್ಪುಹಣ ಕಡಿಮೆಯಾಗಲ್ಲ

ಚುನಾವಣ ಬಾಂಡ್‌ ಯೋಜನೆಯು ಮುಖ್ಯವಾಗಿ ಕಪ್ಪು ಹಣವನ್ನು ಕಡಿಮೆ ಮಾಡುವ ಗುರಿ ಹೊಂದಿಲ್ಲ, ಬದಲಿಗೆ ಈ ವ್ಯವಸ್ಥೆಯು ಇನ್ನಷ್ಟು ಕಪ್ಪುಹಣಕ್ಕೆ ಉತ್ತೇಜನ ನೀಡುತ್ತದೆ.

 

 

Advertisement

Udayavani is now on Telegram. Click here to join our channel and stay updated with the latest news.

Next