Advertisement

ಕುಡಿಯುವ ನೀರಿಗೆ ಇನ್ನೆಷ್ಟು ಕೋಟಿ ಬೇಕು?

11:13 AM May 31, 2019 | Suhan S |

ಬಾಗಲಕೋಟೆ: ಮುಳುಗಡೆ ನಗರಿ ಬಾಗಲಕೋಟೆಯ ಜನರ ನೀರಿನ ದಾಹ ಇಂಗಿಸಲು ಇನ್ನೆಷ್ಟು ಕೋಟಿ ಅನುದಾನ ಕೊಡಬೇಕು ಎಂಬ ಪ್ರಶ್ನೆ ಇಲ್ಲಿನ ಜನರಿಡುತ್ತಿದ್ದಾರೆ.

Advertisement

ಹೌದು, ಬಾಗಲಕೋಟೆ ನಗರದ ಜನರಿಗೆ ನಿರಂತರ ನೀರು (ದಿನದ 24 ಗಂಟೆ) ಪೂರೈಕೆಗಾಗಿ ಈವರೆಗೆ ಒಟ್ಟು 166.14 ಕೋಟಿ ಅನುದಾನ ನೀಡಲಾಗಿದೆ. ಆದರೂ, ಈವರೆಗೆ ನಗರದ ಜನತೆಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯಾಗಿಲ್ಲ ಅಂದರೆ ಇಲ್ಲಿನ ಅಧಿಕಾರಿಗಳ ಜವಾಬ್ದಾರಿ, ಜನಪ್ರತಿನಿಧಿಗಳ ಕಾಳಜಿ ಪ್ರಶ್ನಿಸಲೇಬೇಕು.

ಯಾವ ಯಾವ ಯೋಜನೆ: ಬಾಗಲಕೋಟೆ ನಗರ, ನವನಗರ ಹಾಗೂ ವಿದ್ಯಾಗಿರಿ ಒಳಗೊಂಡ ಇಡೀ ಬಾಗಲಕೋಟೆಗೆ ಕುಡಿಯುವ ನೀರು ಪೂರೈಕೆಗೆ ಒಟ್ಟು ಮೂರು ಯೋಜನೆ ಅನುಷ್ಠಾನಗೊಳಿಸಲಾಗಿದೆ. ನವನಗರಕ್ಕೆ ಆನದಿನ್ನಿ ಬ್ಯಾರೇಜ್‌ನಿಂದ ಕುಡಿಯುವ ನೀರು ಪೂರೈಕೆ ಯೋಜನೆ ಈಗಾಗಲೆ ಚಾಲ್ತಿಯಲ್ಲಿದ್ದು, ಕೊಳವೆ ಬಾವಿಯಿಂದ ನಿತ್ಯ ಕುಡಿಯುವ ನೀರು ಕೊಡುವ ಹಳೆಯ ನಗರ ಹಾಗೂ ವಿದ್ಯಾಗಿರಿ, ನವನಗರದ ಆಶ್ರಯ ಕಾಲೋನಿ, ವಾಂಬೆ ಕಾಲೋನಿ ಜನರಿಗಾಗಿ ಯೋಜನೆ ಮಂಜೂರು ಮಾಡಲಾಗಿದೆ.

ನಗರದ ಸಿಮೆಂಟ್ ಕ್ವಾರಿಯಿಂದ ಹಳೆಯ ನಗರದ ಜನತೆಗೆ ಕುಡಿಯುವ ನೀರು ಕೊಡಲು 11.8 ಕೋಟಿ (ಸಿಮೆಂಟ್ ಕ್ವಾರಿ ಯೋಜನೆ), ಮುಖ್ಯವಾಗಿ ಹೆರಕಲ್ದಿಂದ ನಗರಕ್ಕೆ ಕುಡಿಯುವ ನೀರು ಕೊಡಲು 72 ಕೋಟಿ ಹಾಗೂ ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ 83.06 ಕೋಟಿ ಅನುದಾನವನ್ನು ನಗರದ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿಯೇ ನೀಡಲಾಗಿದೆ.

Advertisement

ದಶಕ ಕಾಣಲು ಒಂದೇ ವರ್ಷ ಬಾಕಿ: ಒಂದು ಕುಡಿಯುವ ನೀರು ಪೂರೈಕೆಯ ಯೋಜನೆ ಪೂರ್ಣಗೊಳ್ಳಲು ಸರ್ಕಾರ ಗರಿಷ್ಠ 18ರಿಂದ 24 ತಿಂಗಳು ಕಾಲಮಿತಿ ನೀಡುತ್ತದೆ. ಆದರೆ, ಬಾಗಲಕೋಟೆಯ ಕುಡಿಯುವ ನೀರು ಪೂರೈಕೆ ಯೋಜನೆಗಳು 9 ವರ್ಷ ಮುಗಿದು, ಒಂದು ದಶಕ ಕಾಣುತ್ತಿದ್ದರೂ ಪೂರ್ಣಗೊಂಡಿಲ್ಲ ಎಂದರೆ ನಂಬಲೇಬೇಕು.

ಹಳೆಯ ನಗರದ ಜನರಿಗೆ ಸದ್ಯ ಕೊಳವೆ ಬಾವಿಗಳಿಂದ ಕುಡಿಯುವ ನೀರು ಕೊಡಲಾಗುತ್ತಿದೆ. ಇದಕ್ಕಾಗಿಯೇ ನಗರದಲ್ಲಿ ಸುಮಾರು 153 ಕೊಳವೆ ಬಾವಿಗಳಿದ್ದು, ಈ ನೀರಿನ ಮೂಲಗಳು ಬಿಟ್ಟರೆ, ಪರ್ಯಾಯ ವ್ಯವಸ್ಥೆ ಇಲ್ಲ. ಆದ್ದರಿಂದ ಹಳೆಯ ನಗರದ ಸುಮಾರು 8ಸಾವಿರಕ್ಕೂ ಹೆಚ್ಚು ಮನೆಗಳ, ತಲಾ ಒಬ್ಬ ಮನುಷ್ಯನಿಗೆ ನಿತ್ಯ 133 ಲೀಟರ್‌ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 10 ಕೋಟಿ ವೆಚ್ಚದ ಸಿಮೆಂಟ್ ಕ್ವಾರಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ರಾಜ್ಯ ಸರ್ಕಾರ ನೀಡಿದ ಈ ವಿಶೇಷ ಅನುದಾನದ ಕಾಮಗಾರಿಯನ್ನು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ವಹಿಸಲಾಗಿತ್ತು. ಮಂಡಳಿ, ಸಿಮೆಂಟ್ ಕ್ವಾರಿಯಲ್ಲಿ ಜಾಕವೆಲ್ ನಿರ್ಮಿಸಿ, ಅಲ್ಲಿಂದ ನಾಡಗೌಡ ಬಡಾವಣೆಯ ಜಲ ಶುದ್ದೀಕರಣ ಘಟಕದವರೆಗೆ ಪೈಪ್‌ಲೈನ್‌ ಅಳವಡಿಸಬೇಕು. ಅಲ್ಲಿಂದ ನಗರದ ನೀರು ಪೂರೈಕೆಯ ಮುಖ್ಯ ಪೈಲ್ಲೈನ್‌ ಅಳವಡಿಕೆಗೆ ಸಂಪರ್ಕ ಕಲ್ಪಿಸಬೇಕು. ಆದರೆ, ದಡ್ಡೇನವರ ಕ್ರಾಸ್‌ ಬಳಿ ರೈತನ ಹೊಲದಲ್ಲಿ ಪೈಪ್‌ಲೈನ್‌ ಹಾದು ಹೋಗುತ್ತಿದ್ದು, ಆ ರೈತನ ತಕರಾರಿನಿಂದ ಪೈಪ್‌ಲೈನ್‌ ಪೂರ್ಣಗೊಂಡಿಲ್ಲ. ಆತನಿಗೆ ಪರಿಹಾರ ನೀಡಿ ಅಥವಾ ಮನವೋಲಿಸಿ, ಕಾಮಗಾರಿ ಪೂರ್ಣಗೊಳಿಸುವ ವ್ಯವಧಾನ ಯಾರೂ ತೋರಿಲ್ಲ. ಆದರೂ ಸಿಮೆಂಟ್ ಕ್ವಾರಿ ಯೋಜನೆಯನ್ನು 2015ರಲ್ಲಿ ಉದ್ಘಾಟನೆಯೂ ಮಾಡಲಾಗಿದೆ. ಆದರೆ, ಅದರಿಂದ ನಗರದ ಜನರ ಬಾಯಿಗೆ ನೀರು ಬೀಳುತ್ತಿಲ್ಲ.

ಯೋಜನೆಯ ಎಸ್‌ಆರ್‌ ದರ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ 1.8 ಕೋಟಿ ಅನುದಾನ ಪುನಃ ಇದೇ ಯೋಜನೆಗೆ ಕಲ್ಪಿಸಲಾಗಿದೆ. ಆದರೂ, 9 ವರ್ಷ ಕಳೆಯುತ್ತ ಬಂದರೂ ಯೋಜನೆ ಮುಗಿದಿಲ್ಲ.

ಅಮೃತದಡಿ 83.06 ಕೋಟಿ: ಹೆರಕಲ್ ಮತ್ತು ಸಿಮೆಂಟ್ ಕ್ವಾರಿ ಯೋಜನೆ ಹೊರತುಪಡಿಸಿ, ಅಮೃತ ಯೋಜನೆಯಡಿ ಬಾಗಲಕೋಟೆ ನಗರಸಭೆಗೆ ಒಟ್ಟು 114.43 ಕೋಟಿ ಅನುದಾನ ಕೇಂದ್ರ ಸರ್ಕಾರದಿಂದ ಬಂದಿದ್ದು, ಅದರಲ್ಲಿ 83.06 ಕೋಟಿ ಹಣವನ್ನು ನಗರದ ಜನರಿಗೆ ನಿರಂತರ ಕುಡಿಯುವ ನೀರು ಪೂರೈಕೆಗಾಗಿಯೇ ಬಳಸಲಾಗುತ್ತಿದೆ.

ಈ ಯೋಜನೆಯಡಿ ನಗರದ 8111 ಮನೆಗಳಿಗೂ ಪ್ರತ್ಯೇಕ ಪೈಪ್‌ಲೈನ್‌, ಮೀಟರ್‌ ಅಳವಡಿಸಿ, ಕುಡಿಯುವ ನೀರು ಒದಗಿಸಬೇಕು. ಈ ಯೋಜನೆಯನ್ನು 17.10.2016ರಲ್ಲಿ ಕಾಮಗಾರಿ ಕೈಗೊಳ್ಳಲು, ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಆದೇಶ ನೀಡಿದ್ದು, 2018ರ ಅಕ್ಟೋಬರ್‌ 16ರೊಳಗಾಗಿ ಈ ಕಾಮಗಾರಿ ಪೂರ್ಣಗೊಳಿಸಲು ಗಡವು ನೀಡಲಾಗಿತ್ತು.

ಆದರೆ, ವಾಟರ್‌ ಬೋಡ್‌‌ರ್ (ಮಂಡಳಿ), ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿಲ್ಲ. ಹೀಗಾಗಿ 2019ರ ಸೆಪ್ಟೆಂಬರ್‌ 30ರ ವರೆಗೆ ಗಡುವು ವಿಸ್ತರಿಸಲಾಗಿದೆ.

ಒಟ್ಟಾರೆ, ನಗರದ ಜನರಿಗೆ ಕುಡಿಯುವ ನೀರು ಕೊಡಲು ಈ ವರೆಗೆ ಒಟ್ಟು 166.14 ಕೋಟಿ ಅನುದಾನ ಬಂದಿದೆಯಾದರೂ, ಜನರು ಮಾತ್ರ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಬದಲಾಗಿಲ್ಲ.

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next