Advertisement

ನೋವಿನ ನಡುವೆ ರಾಜಕೀಯ

06:00 AM Aug 23, 2018 | |

ತಿರುವನಂತಪುರ: ಕೇರಳದಲ್ಲಿ ಪ್ರವಾಹದ ಅಬ್ಬರ ಇಳಿಯುತ್ತಲೇ ರಾಜಕೀಯ ಮೇಲಾಟದ ಆರ್ಭಟ ಆವರಿಸಿದೆ. ಕೆಲವೆಡೆ ನಿರಾಶ್ರಿತರು ತಮ್ಮ ಮನೆಗಳತ್ತ ಹೆಜ್ಜೆಯಿಡುತ್ತಿದ್ದು ಆ ಪ್ರಾಂತ್ಯಗಳಲ್ಲಿ ಮನೆ, ಆಸ್ತಿ ಪಾಸ್ತಿ ಪುನರ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.  ಎಲ್ಲೆಲ್ಲೂ ದಿಗ್ಮೋಢತೆ, ಶೋಕ ಮಡುಗಟ್ಟಿದೆ. ಇದೆಲ್ಲದರ ನಡುವೆಯೇ ಕೇರಳ ಸರ್ಕಾರದ ನಿರ್ಲಕ್ಷ್ಯದಿಂದಲೇ ಪ್ರವಾಹ ಉಂಟಾಗಿದ್ದು ಎಂದು ಮಂಗಳವಾರ ಕೇರಳದ ವಿಪಕ್ಷಗಳು ಆರೋಪಿಸಿವೆ. ಆದರೆ ಈ ಅಂಶವನ್ನು ಸರಕಾರ ತಿರಸ್ಕರಿಸಿದೆ.

Advertisement

ಶತಮಾನದ ಮಳೆಯಿಂದಾಗಿ ಅಣೆಕಟ್ಟುಗಳು ತುಂಬಿದ್ದಾಗ ನದಿ ಪಾತ್ರಗಳಲ್ಲಿ ಜೀವಿಸುತ್ತಿರುವ ಜನರಿಗೆ ಯಾವುದೇ ಮುನ್ಸೂಚನೆ ನೀಡದಂತೆ  ಅಣೆಕಟ್ಟುಗಳ ಕ್ರೆಸ್ಟ್‌ಗೇಟ್‌ಗಳನ್ನು ತೆಗೆದಿದ್ದೇ ಪ್ರವಾಹ, ಜೀವ ಹಾನಿ, ಕಾರಣ ಎಂದು ಪ್ರತಿಪಕ್ಷ ಎಲ್‌ಡಿಎಫ್ ನಾಯಕ ರಮೇಶ್‌ ಚೆನ್ನಿತ್ತಲ ಆರೋಪಿಸಿದ್ದಾರೆ. ವಯನಾಡ್‌ ಅಣೆಕಟ್ಟಿನ ಗೇಟ್‌ಗಳನ್ನು ತೆರೆಯುವುದು ಜಿಲ್ಲಾಧಿಕಾರಿಗೂ ತಿಳಿದಿರಲಿಲ್ಲ ಎಂದಿದ್ದಾರೆ. “ಕೇರಳದಲ್ಲಿ ಉಂಟಾಗಿದ್ದು ನೈಸರ್ಗಿಕ ವಿಕೋಪವಲ್ಲ, ಅದು ಮಾನವ ನಿರ್ಮಿತ ವಿಕೋಪ. ಇಡುಕ್ಕಿ ಅಣೆಕಟ್ಟುಗಳ ಕ್ರೆಸ್ಟ್‌ ಗೇಟ್‌ಗಳನ್ನು ಪೂರ್ವ ಮಾಹಿತಿ ನೀಡದೇ ತೆರೆಯಲಾಗಿದೆ’ ಎಂದಿದ್ದಾರೆ. ಮಧ್ಯ ರಾತ್ರಿ ಏಕಾಏಕಿ ಗೇಟ್‌ಗಳನ್ನು ತೆರೆದಿದ್ದರಿಂದಾಗಿ ನದಿ ಪಾತ್ರಗಳಲ್ಲಿನ ಜನತೆ ಇನ್ನೂ ನಿದ್ರೆ ಯಲ್ಲಿದ್ದಾಗಲೇ ನೀರು ಮನೆ ಹೊಕ್ಕುವಂತಾಯಿತು” ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಕೂಡ ಅದಕ್ಕೆ ದನಿಗೂಡಿಸಿದೆ.

ಆರೋಪ ನಿರಾಕರಣೆ: ಕೇರಳ ರಾಜ್ಯ ಅಣೆಕಟ್ಟು ಭದ್ರತಾ ಮಂಡಳಿಯ ಮುಖ್ಯಸ್ಥ ಸಿ.ಎನ್‌. ರಾಮಚಂದ್ರನ್‌ ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಣೆಕಟ್ಟುಗಳು ತುಂಬುತ್ತಿವೆ ಎಂಬುದು ಎಲ್ಲರಿಗೂ  ಗೊತ್ತಿತ್ತು ಎಂದು ಹೇಳಿದ್ದಾರೆ.

ಕೊತ್ತಾಡ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ: ಕೊಚ್ಚಿ ಜಿಲ್ಲೆಯ ಕೊತ್ತಾಡ್‌ ಎಂಬಲ್ಲಿ, ಪ್ರವಾಹದಿಂದಾಗಿ ತೀವ್ರ ಹಾನಿಗೀಡಾಗಿದ್ದ ತನ್ನ ಮನೆಯ ಪರಿಸ್ಥಿತಿಯನ್ನು ನೋಡಿ ಮನನೊಂದ ಕುಂಜು ಪ್ಪನ್‌ (65) ಎಂಬ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. 

ಯುಎಇ ಇತರ ದೇಶಗಳಂತೆ ಅಲ್ಲ
“ಯುಎಇ ದೇಶವನ್ನು ಅನ್ಯರೆಂದು ಭಾವಿಸಕೂಡದು. ಆ ದೇಶವನ್ನು ಕಟ್ಟಲು ಕೇರಳಿಗರು ಬೆವರು ಸುರಿಸಿದ್ದಾರೆ. ಅದಕ್ಕಾಗಿಯೇ ಆ ದೇಶ ಕೇರಳಕ್ಕೆ ನೆರವಿನ ಹಸ್ತ ಚಾಚಿದೆ. ಸಹಾಯ ಮಾಡಲು ಮುಂದೆ ಬಂದವರನ್ನು ಅನ್ಯರೆಂದು ಭಾವಿಸುವುದು ಸಲ್ಲದು’ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಪ್ರತಿ ಪಾದಿಸಿದ್ದಾರೆ. “ಇಂಡಿಯನ್‌ ಎಕ್ಸ್‌ ಪ್ರಸ್‌’ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು,  700 ಕೋಟಿ ರೂ. ದೇಣಿಗೆ ನೀಡಲು ಮುಂದೆ ಬಂದಿರುವ ಯುಎಇ ಸಹಾಯವನ್ನು ಸ್ವೀಕರಿಸಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿರುವ ಬಗ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಥಾಮಸ್‌ ಅಭಿಮತ: ಪಿಣರಾಯ್‌ ಮಾತಿಗೆ ದನಿ ಗೂಡಿಸಿರುವ ಕೇರಳದ ಹಣಕಾಸು ಸಚಿವ ಥಾಮಸ್‌ ಐಸಾಕ್‌, ಕೇರಳ ರಾಜ್ಯವನ್ನು ಪುನಃ ಕಟ್ಟಲು ಬೇಕಾಗಿರುವ ಅಗಾಧ ಮೊತ್ತದ ಹಣಕ್ಕೆ ಹೋಲಿಸಿದರೆ ಕೇಂದ್ರ ಸರಕಾರ ನೀಡುವ ಆರ್ಥಿಕ ಪರಿಹಾರಗಳು ಸಾಕಾಗುವುದಿಲ್ಲ. ಹಾಗಿದ್ದ ಮೇಲೆ ನಮಗೆ ಅವಶ್ಯಕತೆಯಿರುವ ನೆರವನ್ನು ನೀಡುವವರಾದರೂ ಯಾರು? ಈ ದೃಷ್ಟಿಯಿಂದಾದರೂ ಇತರೆಡೆಗಳಿಂದ ಕೇರಳಕ್ಕೆ ಬರುವ ಆರ್ಥಿಕ ನೆರವನ್ನು ಕೇಂದ್ರ ತಡೆ ಹಿಡಿಯಬಾರದು ಎಂದು ಆಗ್ರಹಿಸಿದ್ದಾರೆ. 

ತಾಂತ್ರಿಕ ಸಮಸ್ಯೆ ಇದೆ: ಯುಎಇ ನೆರವು ನೀಡಿಕೆ ಸ್ವಾಗತಾರ್ಹವಾದರೂ, ಅದನ್ನು ಪಡೆಯುವಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ ಎಂದು ಮಾಜಿ ರಾಯಭಾರಿ ತಾಲ್ಮೀಜ್‌ ಅಹ್ಮದ್‌ ಹೇಳಿದ್ದಾರೆ. ಹಿಂ ದಿನ ಸಂದರ್ಭಗಳಲ್ಲಿ ಇಂಥ ನೆರವು ಸಲ್ಲಿಕೆಯಾಗಿರಲಿಲ್ಲ ಎಂದಿದ್ದಾರೆ. ಭುಜ್‌ನಲ್ಲಿ 2001ರಲ್ಲಿ ಭೂಕಂಪವಾಗಿದ್ದಾಗ ವಸ್ತುಗಳ ರೂಪದಲ್ಲಿ ಸೌದಿ ಅರೇಬಿಯಾ ನೆರವು ನೀಡಿತ್ತು ಎಂದು ಹೇಳಿದ್ದಾರೆ.

ಥಾಯ್ಲೆಂಡ್‌ ರಾಯಭಾರಿ ಟ್ವೀಟ್‌: ಅನ್ಯ ದೇಶಗಳಿಂದ ಆರ್ಥಿಕ ನೆರವು ಪಡೆಯಲು ಭಾರತೀಯ ಸರಕಾರ ನಿರಾಕರಿಸುತ್ತಿದೆ ಎಂದು ಭಾರತದಲ್ಲಿರುವ ಭಾರತೀಯ ರಾಯಭಾರಿ ಚುಟಿನ್‌ ಟಾರ್ನ್ ಸ್ಯಾಮ್‌ ಗೊಂಗ್‌ ಸಕಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಸಂಕಷ್ಟದಲ್ಲಿರುವ ಕೇರಳಕ್ಕೆ ಥಾಯ್ಲೆಂಡ್‌ ಸರಕಾರ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದರೂ, ಕೇಂದ್ರ ಅದನ್ನು ಒಪ್ಪಿಲ್ಲ ಎಂದು ಬರೆದುಕೊಂಡಿದ್ದಾರೆ.

ಮಂಗಳೂರಲ್ಲಿ ಕೇಂದ್ರ
ಕರ್ನಾಟಕದ ಮಂಗಳೂರಿನಲ್ಲಿ ಭಾರಿ ಹವಾಮಾನ ವೈಪರೀತ್ಯವನ್ನು ಮೊದಲೇ ಗ್ರಹಿಸುವ ಸಿ-ಬ್ಯಾಂಡ್‌ ಡೋಪ್ಲರ್‌ ರಾಡರ್‌ ಕೇಂದ್ರ ಸ್ಥಾಪನೆಯಾಗಲಿದೆ. ಕೊಡಗು ಜಿಲ್ಲೆ ಮತ್ತು ಕೇರಳದಲ್ಲಿ ಮಳೆಯಿಂದ ಧಾರಾಕಾರ ಮಳೆಯಿಂದ ಉಂಟಾಗಿರುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದೆ. 2019ರ ಅಂತ್ಯದ ಒಳಗಾಗಿ ಈ ಕೇಂದ್ರ ಶುರು ವಾಗಲಿದೆ. ಪಶ್ಚಿಮ ಘಟ್ಟ ಪ್ರದೇಶ ದಲ್ಲಿನ ಇತ್ತೀಚಿನ ಪ್ರಾಕೃತಿಕ ವಿಕೋಪ ಮತ್ತು ಚಂಡಮಾರುತ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳಕ್ಕೆ ಅನು ಕೂಲವಾಗುವ ರೀತಿಯಲ್ಲಿ ತಿರುವನಂತ ಪುರದಲ್ಲಿ ಚಂಡಮಾರುತ ನಿರ್ವಹಣಾ ಕೇಂದ್ರವನ್ನು ಇನ್ನು ಒಂದು ತಿಂಗಳ ಒಳಗಾಗಿ ಆರಂಭಿಸಲಾಗುತ್ತದೆ.

ಮತ್ತಷ್ಟು ನೆರವು
ತ್ರಿಶೂರ್‌ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿರುವ ಜನರ ಹಾಗೂ ಪ್ರಾಣಿಗಳ ಮೃತ ದೇಹಗಳನ್ನು ತೆರವುಗೊಳಿಸಿ, ಆ ಪ್ರಾಂತ್ಯಗಳನ್ನು ಸ್ವಚ್ಛಗೊಳಿಸಲು ಗಡಿ ಭದ್ರತಾ ಪಡೆಯ 40 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕೇರಳ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಸ್ವಾಗತ ಕೋರಿದ ಮೊಸಳೆ!
ತ್ರಿಶೂರ್‌ ಜಿಲ್ಲೆಯ ಚಾಲ ಕುಡಿಯಲ್ಲಿ ಪ್ರವಾಹ ಇಳಿಮುಖವಾದ್ದರಿಂದ ಸೋಮವಾರ ರಾತ್ರಿ ತನ್ನ ಮನೆಗೆ ಆಗಮಿಸಿದ ಸಂತ್ರಸ್ತರೊಬ್ಬರ‌ನ್ನು ಮೊಸಳೆಯೊಂದು ಸ್ವಾಗತಿಸಿದೆ! ಮನೆಯೊಳಗೆ ಪ್ರವೇಶಿಸಿದ ಕೂಡಲೇ ಹಾಲ್‌ನಲ್ಲೇ ಮಲಗಿದ್ದ ಮೊಸಳೆಯನ್ನು ನೋಡಿ ಹೌಹಾರಿದ ಮುಸ್ತಾಫಾ, ಹೊರಗೋಡಿ ಬಂದು ನೆರೆ ಹೊರೆಯವ‌ರನ್ನು ಸೇರಿಕೊಂಡಿದ್ದಾನೆ. 

ಗೋಮಾಂಸ ಕಾರಣ!
ಕೇರಳದಲ್ಲಿ ಅಗಾಧವಾಗಿ ಗೋ ಮಾಂಸ ಭಕ್ಷಣೆಯಾಗುತ್ತಿದ್ದರಿಂದಲೇ ಪ್ರವಾಹ ಉಂಟಾಗಿದ್ದೆಂದು ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರ ಪಾಣಿ ಎಂಬುವರು ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಇವರಿಗೆ ಪರಿಹಾರ ಸಾಮಗ್ರಿ ವಿತರಿಸಕೂಡದು ಹೇಳಿದ್ದಾರೆ.

ಬದುಕಿಗಾಗಿ ಬಂಗಾರದ ಅಡ?
ನೈಸರ್ಗಿಕ ವಿಕೋಪದ ಹೊಡೆತಕ್ಕೆ ಸಿಕ್ಕಿ ನಲುಗಿರುವ ಕೇರಳದ ಜನತೆ ತಮ್ಮ ಬದಕನ್ನು ಪುನಃ ಕಟ್ಟಿಕೊಳ್ಳಲು ಹಣದ ಕೊರತೆ ಎದುರಿಸುತ್ತಿದ್ದು, ಇದಕ್ಕಾಗಿ ತಮ್ಮಲ್ಲಿರುವ ಚಿನ್ನವನ್ನು ಅಡವಿಡಲು ಮುಂದಾಗಲಿದ್ದಾರೆಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಪ್ರವಾಹ ಪೀಡಿತ ಕೇರಳದಲ್ಲೀಗ ಸಂಪನ್ಮೂಲಗಳು, ಮೂಲ ಸೌಕರ್ಯಗಳು ನಾಶವಾಗಿವೆ. ಜನತೆ ಸದ್ಯದ ಮಟ್ಟಿಗೆ ನಿರುದ್ಯೋಗಿಗಳಾಗಿದ್ದು, ಆದಾಯಗಳು ಕೈ ತಪ್ಪಿವೆ. ಇಂಥ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಜನರು ತಮ್ಮ ವಾಸಸ್ಥಳಗಳ ಪುನರ್‌ ನಿರ್ಮಾಣ ಮಾಡುವುದು ಅನಿವಾರ್ಯವಾಗಿರುವುದರಿಂದ ಅವರಿಗೆ ಹಣ ಬೇಕಿದೆ. 

29ರಿಂದ ಏರ್‌ಪೋರ್ಟ್‌ ಶುರು: ಮಳೆ ನೀರಿನಿಂದ ಜಲಾವೃತಗೊಂಡಿದ್ದರಿಂದಾಗಿ ಮುಚ್ಚಿರುವ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 29ರಿಂದ ಪುನಃ ಕಾರ್ಯಾರಂಭ ಮಾಡಲಿದೆ. ಸದ್ಯ ಅದು 26ರಿಂದ ವಿಮಾನ ಹಾರಾಟ ನಡೆಸಲಿದೆ ಎಂದು ಹೇಳಲಾಗಿತ್ತು.

ಹತಾಶ ಭಾವದಲ್ಲಿ ಬಕ್ರೀದ್‌
ಸಂಬಂಧಿಕರು, ಸ್ನೇಹಿತರು, ಆಶ್ರಯಗಳನ್ನು ಕಳೆದುಕೊಂಡ ದುಃಖದಲ್ಲಿರುವ ಕೇರಳದ ಮುಸ್ಲಿಂ ಸಮುದಾಯ ಯಾವುದೇ ಆಡಂಬರವಿಲ್ಲದೆ ಬುಧವಾರ ಬಕ್ರೀದ್‌ ಆಚರಿಸಿದರು. ಮಸೀದಿಗಳಲ್ಲಿ ಕೇರಳದ ಸಂತ್ರಸ್ಥರಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ನೆರೆ ಹಾವಳಿ ಇನ್ನೂ ಇರುವ ಪ್ರದೇಶಗಳಲ್ಲಿ, ಪ್ರಾರ್ಥನೆಗಾಗಿ ಬಂದವರ ಸಂಖ್ಯೆ  ಗಣನೀಯವಾಗಿ ಕುಸಿದಿತ್ತು. ಕೆಲ ಮಸೀದಿಗಳಲ್ಲಿ ಸಂತ್ರಸ್ಥರಿಗಾಗಿ ದೇಣಿಗೆ ಹಾಗೂ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಇಸ್ಲಾಂ ಧರ್ಮ ಗುರುಗಳು, ಎಲ್ಲಾ ಸಂತ್ರಸ್ಥರಿಗೆ ಕೈಲಾದ ಸಹಾಯ ಅಥವಾ ಸೇವೆ ಮಾಡಬೇಕೆಂದು ಕರೆ ನೀಡಿದರು.

ದೇಗುಲ ತೊಳೆದ ಮುಸ್ಲಿಮರು
ನೆರೆ ಇಳಿದಿರುವ ಪ್ರದೇಶಗಳಲ್ಲಿನ ಮನೆಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೇರಳ ಸರಕಾರ ಭಾನುವಾರದಿಂದ ಚಾಲನೆ ನೀಡಿದೆ. ಮಲಪ್ಪುರಂ, ವಯನಾಡ್‌ ಜಿಲ್ಲೆಗಳಲ್ಲಿ ಮುಸ್ಲಿಂ ಯುವಕರ ತಂಡವೊಂದು ದೇಗುಲಗಳನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲದೆ, ಮಲಪ್ಪುರಂನ ಮಸೀದಿಯೊಂದರಲ್ಲಿ ಹಿಂದೂ ನಿರಾಶ್ರಿತರಿಗೆ ವಾಸ್ತವ್ಯ ಕಲ್ಪಿಸಿಕೊಡಲಾಗಿದೆ. ಈ ಸ್ವಚ್ಛತಾ ಸೇವೆಗಳಿಗಾಗಿ 12,000 ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗಿದ್ದು, ಮೊದಲ ದಿನವೇ 12,000 ಮನೆಗಳನ್ನು ಶುಭ್ರಗೊಳಿಸಿರುವುದಾಗಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next