Advertisement

ಹುಡುಗರನ್ನು ಆಟವಾಡಿಸಿ ಗೆದ್ದ ನಿತಿನ್‌ ಕೃಷ್ಣಮೂರ್ತಿ

12:01 PM Aug 04, 2023 | Team Udayavani |

“ಒಂದೇ ಒಂದು ಹಿಟ್‌ ಕೊಡುವವರು ಯಾರೂ ಇಲ್ವ… ಇನ್ನೆಷ್ಟು ತಿಂಗಳು ಈ “ಬರಗಾಲ’ವನ್ನು ಸಹಿಸಿಕೊಳ್ಳಬೇಕು….’ ಎಂದು ಕನ್ನಡ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳು ತಲೆಮೇಲೆ ಕೈ ಇಟ್ಟುಕೊಂಡಾಗ ಧುತ್ತನೇ ಬಂದು “ತಗೊಳಿ, ಇನ್ನುಂದೆ ಈ ಹುಡುಗರ ಹಾವಳಿ ನಿಮಗಿರಲಿ… ಗೆಲುವು ನಮ್ಮದಾಗಿರಲಿ’ ಎಂದು ಹುಡುಗರನ್ನು ಅಖಾಡಕ್ಕೆ ಬಿಟ್ಟು, ಅವರೊಂದಿಗೆ ಆಟವಾಡಿದ ವ್ಯಕ್ತಿಯ ಹೆಸರು ನಿತಿನ್‌ ಕೃಷ್ಣಮೂರ್ತಿ. ಯಾರು ಈ ನಿತಿನ್‌ ಎಂದು ನೀವು ಕೇಳಿದರೆ ಸದ್ಯಕ್ಕೆ “ಹಾಸ್ಟೆಲ್‌ ಹುಡುಗರತ್ತ’ ಬೆರಳು ತೋರಿಸಬೇಕು.

Advertisement

ಹೌದು, ಸದ್ಯ ಭರ್ಜರಿ ಹಿಟ್‌ ಆಗಿ, ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರದ ನಿರ್ದೇಶಕ ಕಂ ನಟ. ಆರು ತಿಂಗಳಿನಿಂದ ಒಂದೇ ಒಂದು ಗೆಲುವಿಗಾಗಿ ಎದುರು ನೋಡುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಗೆಲುವು ತಂದುಕೊಟ್ಟ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು, ನಟಿಸಿ ನಿರ್ದೇಶಿಸಿರುವ ನಿತಿನ್‌ಗೆ ಎರಡೂ ಹೊಸದು. ಈ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ಕೆಲಸ ಮಾಡಿದ ಹಾಗೂ “ಲೂಸಿಯಾ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ನಿತಿನ್‌ಗಿತ್ತು. ಆ ಅನುಭವದೊಂದಿಗೆ ಒಂದೊಳ್ಳೆಯ ಕಥೆ ಹಾಗೂ ತಂಡವನ್ನು ಕಟ್ಟಿಕೊಂಡು ಅಖಾಡಕ್ಕಿಳಿದ ನಿತಿನ್‌, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದಾರೆ. ಅದರ ಪರಿಣಾಮ ಈಗ ಇಡೀ ಚಿತ್ರರಂಗದ ಮೇಲಾಗಿದೆ.

ಸಿನಿಮಾ ಎಂದರೆ ಗ್ಲಾಮರ್‌ ಬೇಕು, ಕಲರ್‌ಫ‌ುಲ್‌ ಸಾಂಗ್ಸ್‌ ಇರಬೇಕು, ಯಾರಾದರೂ ಒಬ್ಬ ಹೀರೋ ಇರಲೇ ಬೇಕು, ಸೆಂಟಿಮೆಂಟ್‌ ಅಲ್ಲಲ್ಲಿ “ಜಿನುಗು’ತ್ತಿರ ಬೇಕು ಎಂಬ ಸಿದ್ಧಸೂತ್ರಗಳನ್ನು ಸಾರಸಗಟಾಗಿ ಬದಿಗೊತ್ತಿ, “ನಗುವೊಂದೇ ಶಾಶ್ವತ’ ಎಂಬ ಫಾರ್ಮುಲಾದೊಂದಿಗೆ ಮಾಡಿದ ಸಿನಿಮಾ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’. ನಿತಿನ್‌ ಅವರ ಈ ಫಾರ್ಮುಲಾ ವರ್ಕ್‌ ಆಗಿದೆ. “ಒಂದು ಸಿನಿಮಾ ಹಿಟ್‌ ಆದ ಕೂಡಲೇ ಮುಂದಿನ ಸಿನಿಮಾದ ಗೆಲುವು ಸುಲಭ ಎನ್ನುವಂತಿಲ್ಲ. ಆ ಸಿನಿಮಾಕ್ಕೆ ಮತ್ತೆ ಹೊಸದಾಗಿ ಅಷ್ಟೇ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು’ ಎನ್ನುವ ಸಿದ್ಧಾಂತ ನಿತಿನ್‌ ಅವರದು.

ನಟನೆಗಿಂತ ನಿರ್ದೇಶನದ ಒಲವಿರುವ ನಿತಿನ್‌ ಸದ್ಯ “ಹಾಸ್ಟೆಲ್‌ ಹುಡುಗರು’ ಗೆಲುವನ್ನು ಎಂಜಾಯ್‌ ಮಾಡುತ್ತಿದ್ದು, ನಿತಿನ್‌ ಮತ್ತೆ ಹೊಸ ಸಿನಿಮಾಕ್ಕೆ ಅಣಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next