Advertisement

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

12:40 AM Apr 19, 2024 | Team Udayavani |

ಬೆಂಗಳೂರು: ರಾಜ್ಯ ದಲ್ಲಿ ಪ್ರಾಣಿಜನ್ಯ ಗ್ಲ್ಯಾಂಡರ್ಸ್‌ ಸಾಂಕ್ರಾಮಿಕ ರೋಗ ಕುದುರೆ ಗಳಲ್ಲಿ ಪತ್ತೆಯಾಗಿದೆ. ಈ ಬ್ಯಾಕ್ಟೀರಿಯಾ ಸೋಂಕು ತೀವ್ರ ಅಪಾಯಕಾರಿ ಎಂಬುದು ಖಚಿತ
ವಾಗಿದ್ದು, ಮನುಷ್ಯರಿಗೂ ಹರಡಬಲ್ಲ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮದುವೆ ಸಮಾರಂಭಗಳಲ್ಲಿ ಹಾಗೂ ಪ್ರವಾಸಿ ತಾಣಗಳಲ್ಲಿ ಕುದುರೆ ಸವಾರಿ ನಡೆಸುವ ಮುನ್ನ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಈ ಸೋಂಕನ್ನು ಆರಂಭಿಕ ಹಂತದಲ್ಲೇ ತಡೆಗಟ್ಟಲು ಸರಕಾರವೂ ಮುಂದಾಗಬೇಕಿದೆ.

Advertisement

ಮಹಾರಾಷ್ಟ್ರದಿಂದ ಬೆಂಗಳೂರಿಗೆ ತಂದಿರುವ ಕುದುರೆಯೊಂದರಲ್ಲಿ ಗ್ಲ್ಯಾಂಡರ್ಸ್‌ ಸೋಂಕು ಪತ್ತೆಯಾಗಿದೆ. ಇದಕ್ಕೆ ಔಷಧವಿಲ್ಲವಾದ್ದರಿಂದ ಒಂದು ಕುದುರೆ ಈಗಾಗಲೇ ಸಾವನ್ನಪ್ಪಿದೆ. ಇನ್ನೊಂದು ಕುದುರೆಗೆ ದಯಾಮರಣ ಕಲ್ಪಿಸಲಾಗಿದೆ.

ಬೆಂಗಳೂರಿಗೆ ಕಾಲಿಟ್ಟದ್ದು ಹೇಗೆ?
ಈ ಬೇಸಗೆಯಲ್ಲಿ ಕುದುರೆಯನ್ನು ಬಳಸಿ ಪ್ರವಾಸಿತಾಣಗಳಲ್ಲಿ ಒಂದಷ್ಟು ಹಣ ಸಂಪಾದಿಸಲು ಬೆಂಗಳೂರಿನ ವ್ಯಕ್ತಿಯೊಬ್ಬರು ಮಹಾರಾಷ್ಟ್ರದಿಂದ ಕುದುರೆ ಖರೀದಿಸಿದ್ದರು. ಉತ್ತರ ತಾಲೂಕಿನ ದೇವರಜೀವನಹಳ್ಳಿಗೆ ತಂದಿರುವ ಈ ಕುದುರೆಯಲ್ಲಿ ದುರದೃಷ್ಟವಶಾತ್‌ ಗ್ಲ್ಯಾಂಡರ್ಸ್‌ ಸೋಂಕು ಪತ್ತೆಯಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಹಲವು ಭಾಗಗಳಿಗೆ ಸೋಂಕುಪೀಡಿತ ಕುದುರೆಗಳು ಬಂದಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸರಕಾರವು ಸೋಂಕುಪೀಡಿತ ಪ್ರದೇಶದಿಂದ ಬಂದಿರುವ ಕುದುರೆಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕುದುರೆ ತಂದಿರುವ ವ್ಯಕ್ತಿಗೆ ಸೋಂಕು ತಗಲಿಲ್ಲ!
ಸೋಂಕುಪೀಡಿತ ಕುದುರೆಯನ್ನು ಮಹಾರಾಷ್ಟ್ರದಿಂದ ಬೆಂಗಳೂರಿಗೆ ತಂದಿರುವ 60 ವರ್ಷದ ವ್ಯಕ್ತಿಯು ಕೋಲಾರದ ಮಾಲೂರಿನಲ್ಲಿದ್ದಾರೆ. ನಿರಂತರ ಪ್ರಯತ್ನದ ಬಳಿಕ ಅವರ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದು, ಅವರು ಶುಕ್ರವಾರ ಬೆಂಗಳೂರಿಗೆ ಬರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವ್ಯಕ್ತಿಯಲ್ಲಿ ಗ್ಲ್ಯಾಂಡರ್ಸ್‌ ಸೋಂಕಿನ ಲಕ್ಷಣಗಳಿಲ್ಲ. ವ್ಯಕ್ತಿಯು ಡಯಾಬಿಟಿಸ್‌ನಿಂದ ಬಳಲುತ್ತಿದ್ದು, ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಡಲು ಸಿದ್ಧವಿಲ್ಲ ಎನ್ನುವುದಾಗಿ ಮೂಲಗಳು ದೃಢಪಡಿಸಿದೆ.

ಈಗಾಗಲೇ ಸೋಂಕಿನಿಂದ ಸತ್ತಿರುವ ಕುದುರೆಯ ಮೇಲ್ವಿಚಾರಕನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಯೋಗಾಲಯದಿಂದ ಹೊರಬರುವ ವರದಿಯ ನಿರೀಕ್ಷೆಯಲ್ಲಿದ್ದೇವೆ. ಅನಂತರ ಮುಂದಿನ ಕ್ರಮದ ಬಗ್ಗೆ ಯೋಜನೆ ಮಾಡಲಾಗುತ್ತದೆ. -ಡಾ| ರಂದೀಪ್‌, ಆಯುಕ್ತರು ಆರೋಗ್ಯ ಇಲಾಖೆ.

Advertisement

ಏನಿದು ಗ್ಲ್ಯಾಂಡರ್ಸ್‌?

ಗ್ಲ್ಯಾಂಡರ್ಸ್‌ ಒಂದು ಸಾಂಕ್ರಾಮಿಕ ರೋಗ. ಇದರಲ್ಲಿ ಶರೀರದ ಗ್ರಂಥಿಗಳು ಅಥವಾ ಗ್ಲ್ಯಾಂಡ್‌ಗಳು ವಿಪರೀತ ಹಾನಿಗೊಳಗಾಗುತ್ತವೆ. ಮುಖ್ಯವಾಗಿ ಕುದುರೆ, ಹೇಸರಗತ್ತೆ ಹಾಗೂ ಕತ್ತೆಗಳಲ್ಲಿ ಪರಿಣಾಮ ತೀವ್ರವಾಗಿರುತ್ತದೆ. ಬುರ್ಕೋಲೆxàರಿಯಾ ಮ್ಯಾಲಿಗ್ರಾಂ ನೆಗೆಟಿವ್‌ ಎಂಬ ಹೆಸರಿನ ಬ್ಯಾಕ್ಟೀರಿಯಾ ಗ್ಲ್ಯಾಂಡರ್ಸ್‌ ಸೋಂಕಿಗೆ ಕಾರಣವಾಗುತ್ತದೆ. ಪ್ರಾಣಿಗಳು ಕಲುಷಿತ ಆಹಾರ, ನೀರು ಸೇವಿಸುವುದರಿಂದ, ರೋಗಪೀಡಿತ ಪ್ರಾಣಿಗಳ ನೇರಸಂಪರ್ಕದಿಂದ ಸೋಂಕು ಹರಡುತ್ತದೆ.

ಲಕ್ಷಣಗಳೇನು?
1 ಬ್ಯಾಕ್ಟೀರಿಯಾ ಪ್ರಾಣಿಗಳ ದೇಹ ಪ್ರವೇಶಿಸಿದ 3 ದಿನಗಳಿಂದ 2 ವಾರಗಳಲ್ಲಿ ರೋಗ ತೀವ್ರಗೊಳ್ಳುತ್ತದೆ.
2ಅನಂತರ ಸೆಪಿಸೀಮಿಯಾ, ಅಧಿಕ ಜ್ವರ (106 ಡಿಗ್ರಿ ಸೆ.), ತೂಕ ಇಳಿಕೆ, ದಪ್ಪ ಹಾಗೂ ಹಳದಿ ಮಿಶ್ರಿತ ಲೋಳೆ ಮೂಗಿನಿಂದ ಹರಿಯುತ್ತದೆ. ಉಸಿರಾಟ ಕಷ್ಟವಾಗಿ ಕೆಲವೇ ದಿನಗಳಲ್ಲಿ ಸಾವು ಸಂಭವಿಸುತ್ತದೆ.
3 ನರಗಳಲ್ಲಿ ಗಂಟುಗಳು ಉಂಟಾಗುತ್ತವೆ, ಹುಣ್ಣಾಗಿ ಕುದುರೆ ನಿಶ್ಶಕ್ತವಾಗುತ್ತದೆ. ಸಿಎಫ್ಟಿ, ಎಲಿಸಾ ಹಾಗೂ ಪಿಸಿಆರ್‌ ಪರೀಕ್ಷೆಯ ಮೂಲಕ ಸೋಂಕು ಪತ್ತೆ ಸಾಧ್ಯ.
4ಸೋಂಕಿತ ಕುದುರೆಯ ಚರ್ಮದಲ್ಲಿ ಗಂಟುಗಳಾಗು ತ್ತವೆ. ಸೋಂಕು ಪ್ರಸಾರ ದೀರ್ಘ‌ಕಾಲ ಆಗುತ್ತದೆ.

ಎಷ್ಟು ಅಪಾಯಕಾರಿ?

ಪ್ರಸ್ತುತ ಕುದುರೆಯಲ್ಲಿ ಕಾಣಿಸಿಕೊಳ್ಳುವ ಗ್ಲ್ಯಾಂಡರ್ಸ್‌ಗೆ ಔಷಧವಿಲ್ಲ. ರೋಗ ದೃಢಪಟ್ಟ ಪ್ರಾಣಿಗಳನ್ನು ಗುರುತಿಸಿ, ಅವಕ್ಕೆ ದಯಾಮರಣ ನೀಡುವುದರಿಂದ ಮಾತ್ರ ರೋಗ ತಡೆಗಟ್ಟಬಹುದು. ಇದು ಮನುಷ್ಯನಿಗೂ ಬರುವ ಸಾಧ್ಯತೆಗಳಿವೆ. ಮನುಷ್ಯನಲ್ಲಿ ಸಾಮಾನ್ಯವಾಗಿ ನರಗಳಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಆದರೆ ದೇಶದಲ್ಲಿ ಇದುವರೆಗೆ ಮನುಷ್ಯನಲ್ಲಿ ಈ ಸೋಂಕು ಪತ್ತೆಯಾಗಿಲ್ಲ. ಪತ್ತೆಯಾದರೆ ಸಾವು ಖಚಿತ. ಕೇಂದ್ರದ ಮಾರ್ಗಸೂಚಿಯ ಅನ್ವಯ ಗ್ಲ್ಯಾಂಡರ್ಸ್‌ ಸೋಂಕುಪೀಡಿತ ಕುದುರೆಗಳ ಸಂಪರ್ಕಕ್ಕೆ ಬಂದ ಮನುಷ್ಯರಲ್ಲಿ ಲಕ್ಷಣಗಳಿದ್ದರೆ ಮಾತ್ರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next