Advertisement

ಭಾರತಕ್ಕೆ ಮತ್ತೆ ವಿಶ್ವಕಪ್‌ ಗೆಲ್ಲುವ ಭರವಸೆ

11:31 PM Jan 25, 2023 | Team Udayavani |

ಭಾರತ ತಂಡ ಈಗ ಟಿ20, ಏಕದಿನದಲ್ಲಿ ವಿಶ್ವದ ನಂ.1 ತಂಡ, ಟೆಸ್ಟ್‌ನಲ್ಲಿ ವಿಶ್ವ ನಂ.2 ತಂಡ. ಕೆಲವು ತಿಂಗಳ ಹಿಂದೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. 2019ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಸೋಲು, 2021ರ ಟಿ20 ವಿಶ್ವಕಪ್‌ನಲ್ಲಿ ಲೀಗ್‌ನಲ್ಲೇ ಸೋಲು, 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಸೋಲು, ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೋಲು, ದ್ವಿಪಕ್ಷೀಯ ಸರಣಿಗಳಲ್ಲಿ ಅತ್ಯುತ್ತಮವಾಗಿ ಆಡುವ ಭಾರತ ತಂಡ ವಿಶ್ವಕೂಟಗಳಲ್ಲಿ ಹೀಗೇಕೆ ಸಾಲುಸಾಲು ಸೋಲುಗಳನ್ನು ಕಾಣುತ್ತಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಬಹುಶಃ ಕೊಹ್ಲಿ ನಾಯಕತ್ವದಲ್ಲಿ ದೋಷವಿರಬಹುದೆಂದು ರೋಹಿತ್‌ ಶರ್ಮರನ್ನು ಆ ಸ್ಥಾನಕ್ಕೆ ತರಲಾಯಿತು. ಅದರಿಂದಲೂ ಯಾವುದೇ ಪ್ರಯೋಜನವಾಗಲಿಲ್ಲ.

Advertisement

ಇಂತಹ ಹೊತ್ತಿನಲ್ಲಿ ಬಿಸಿಸಿಐ ಟಿ20 ನಾಯಕತ್ವವನ್ನು ಹಾರ್ದಿಕ್‌ ಪಾಂಡ್ಯಗೆ ಪೂರ್ಣಾವಧಿ ಬಿಟ್ಟುಕೊಟ್ಟು, ಹಳೆಮುಖಗಳನ್ನು ತಂಡದಿಂದ ಹೊರಹಾಕುವ ಪರೋಕ್ಷ ಸುಳಿವು ನೀಡಿದೆ. ಈ ದಿಕ್ಕಿನಲ್ಲಿ ಹಾರ್ದಿಕ್‌ ಪಾಂಡ್ಯ ಬಳಗ ಯಶಸ್ಸನ್ನೂ ಕಂಡಿದೆ. ಈ ವರ್ಷಾಂತ್ಯದಲ್ಲಿ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್‌, ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸುವುದು ಬಿಸಿಸಿಐನ ಸದ್ಯದ ಗುರಿ.

ಈಗ ಸಂತೋಷದ ಸುದ್ದಿಯೆಂದರೆ ತಂಡದಲ್ಲಿ ಕಾಣಿಸಿಕೊಂಡಿರುವ ಹೊಸಮುಖ ಗಳು ಪೂರ್ಣ ಭರವಸೆಯನ್ನುಂಟು ಮಾಡಿರುವುದು. ಟಿ20ಯಲ್ಲಿ ಸೂರ್ಯಕುಮಾರ್‌ ಯಾದವ್‌ ಅಬ್ಬರಿಸಿ ವಿಶ್ವದ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಏಕದಿನದಲ್ಲಿ ಶುಭಮನ್‌ ಗಿಲ್‌, ಇಶಾನ್‌ ಕಿಶನ್‌, ಶ್ರೇಯಸ್‌ ಐಯ್ಯರ್‌ ಬ್ಯಾಟಿಂಗ್‌ನಲ್ಲಿ, ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಸಂಚಲನ ಮೂಡಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತೆ ತಮ್ಮ ಶ್ರೇಷ್ಠ ಬ್ಯಾಟಿಂಗ್‌ ಲಯಕ್ಕೆ ಮರಳಿದ್ದಾರೆ. ಅವರು ಸದ್ಯದಲ್ಲೇ ಏಕದಿನದಲ್ಲಿ 50ನೇ ಶತಕ ಬಾರಿಸುವ ದಿನಗಳಿಗೆ ಸನಿಹವಾಗಿದ್ದಾರೆ. ರೋಹಿತ್‌ ಶರ್ಮ ಕೂಡ ನ್ಯೂಜಿಲೆಂಡ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿ ಮೂರು ವರ್ಷಗಳ ತಮ್ಮ ರನ್‌ ಬರಗಾಲಕ್ಕೆ ಮುಕ್ತಾಯ ಹಾಡಿದ್ದಾರೆ.

ವೇಗಿ ಬುಮ್ರಾ ತಂಡಕ್ಕೆ ಮರಳಿದರೆ, ಗಾಯದಿಂದ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ ಹಳೆಯ ಲಯವನ್ನು ಕಂಡುಕೊಂಡರೆ ಸದ್ಯದ ಮಟ್ಟಿಗೆ ಭಾರತ ತಂಡದ ಚಿಂತೆ ಮುಗಿಯಿತು. ಈಗಿನ ಲೆಕ್ಕಾಚಾರದಲ್ಲಿ 23 ವರ್ಷದ ಶುಭಮನ್‌ ಗಿಲ್‌, 24 ವರ್ಷದ ಇಶಾನ್‌ ಕಿಶನ್‌ ಭಾರತ ತಂಡಕ್ಕೆ ಭಾರೀ ಭರವಸೆ ಮೂಡಿಸಿದ್ದಾರೆ. ಇಬ್ಬರೂ ಏಕದಿನದಲ್ಲಿ ದ್ವಿಶತಕ ಬಾರಿಸಿ, ದ್ವಿಶತಕವನ್ನೂ ಶತಕದಂತೆ ನಿತ್ಯದ ವಿದ್ಯಮಾನವನ್ನಾಗಿ ಪರಿವರ್ತಿಸಿದ್ದಾರೆ!
ಈಗಿನ ಪ್ರಶ್ನೆ ಒಂದೇ. ದ್ವಿಪಕ್ಷೀಯ ಸರಣಿಗಳಲ್ಲಿ ಅಷ್ಟು ಅದ್ಭುತವಾಗಿ ಆಡಿ ಎಂತೆಂತಹ ತಂಡಗಳನ್ನು ಮಣಿಸುವ ಭಾರತ ವಿಶ್ವಕೂಟಗಳಲ್ಲಿ ಎಡವುದೇಕೆ? ಇದು ಇವತ್ತಿನ ಸಮಸ್ಯೆಯಲ್ಲ, ಸೌರವ್‌ ಗಂಗೂಲಿ ನಾಯಕರಾಗಿದ್ದಾಗ ಫೈನಲ್‌ನಲ್ಲಿ ಸೋಲುವ ಚಾಳಿಯಿತ್ತು. ಧೋನಿ ಬಂದಾಗ ಅದು ಬಗೆಹರಿಯಿತು. ಕೊಹ್ಲಿ ನಾಯಕರಾಗಿದ್ದಾಗಂತೂ ಸೆಮಿಫೈನಲ್‌, ಫೈನಲ್‌ನಲ್ಲಿ ಸೋತಿದ್ದೇ. ಹೊಸ ಹುಡುಗರು ತಮ್ಮ ಆಟದ ಮೂಲಕ ಈ ಸಮಸ್ಯೆಗೆ ಪರಿಹಾರ ನೀಡಬೇಕಿದೆ. ಆಗ 2011ರ ಅನಂತರ ವಿಶ್ವಕಪ್‌ ಗೆದ್ದಿಲ್ಲವೆಂಬ ಕೊರಗು ಇಲ್ಲವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next