Advertisement

ಅಧಿಕಾರಿಗಳ ಕಾರ್ಯವೈಖರಿಗೆ ಕಿಡಿ

05:02 PM Jan 17, 2020 | |

ಹೊಳಲ್ಕೆರೆ: ಶಾಲೆಯಲ್ಲಿ ಕಳಪೆ ಬಿಸಿಯೂಟ, ಹಾಸ್ಟೆಲ್‌ನಲ್ಲಿ ಅಪೌಷ್ಟಿಕ ಆಹಾರ ನೀಡುವುದು, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಜನಸೇಹಿಯಾಗದೆ ಅಸಮರ್ಪಕ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷೆ ಸುಜಾತಾ ಧನಂಜಯ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳ
ಬೇಜವಾಬ್ದಾರಿತನದಿಂದ ತಾಲೂಕು ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿ ಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಸಮಾಜಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ ನಿರ್ವಹಣೆ ಸಮರ್ಪಕವಾಗಿಲ್ಲ. ಸರ್ಕಾರಿ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡುತ್ತಿಲ್ಲ. ಅಡುಗೆ ಮನೆಗಳು ಅನೈರ್ಮಲ್ಯದ ತಾಣವಾಗಿವೆ. ಕೊಳಚೆನೀರು ಎಲ್ಲಂದರಲ್ಲಿ ನಿಂತಿದೆ.

ಶೌಚಾಲಯಗಳು ಗಬ್ಬು ನಾರುತ್ತಿವೆ. ಕೊಠಡಿಗಳಲ್ಲಿ ಶುದ್ಧತೆ ಇಲ್ಲ ಎಂಬಿತ್ಯಾದಿ ಆರೋಪಗಳು ಕೇಳಿ ಬರುತ್ತಿವೆ ಎಂದು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಇದಕ್ಕೆ ಧ್ವನಿಗೂಡಿಸಿದ ತಾಪಂ ಇಒ ಎಚ್‌.ಕೆ. ತಾರಾನಾಥ, 80 ವಿದ್ಯಾರ್ಥಿಗಳಿಗೆ 1.5 ಕೆಜಿ ತರಕಾರಿ ಬಳಸಿ ಸಾಂಬಾರು ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ನಿಲಯಪಾಲಕರು ಹಾಸ್ಟೆಲ್‌ ಗಳಿಗೆ ಹೋಗುತ್ತಿಲ್ಲ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಎಲ್ಲಾ ಕೆಲಸವನ್ನು ಅಡುಗೆಯವರು ನೋಡಿಕೊಳ್ಳುತ್ತಿದ್ದಾರೆ. ರಾತ್ರಿ ಕಾವಲುಗಾರ ಕೆಲಸ ಮಾಡುತ್ತಿಲ್ಲ. ಶುದ್ಧ ನೀರಿನ ಘಟಕವಿದ್ದರೂ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬ ದೂರು ಬಂದಿದೆ. ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.

ತಾಪಂ ಸದಸ್ಯರಾದ ಪರಮೇಶ್ವರಪ್ಪ, ಸುನೀಲ್‌, ಶಿವಕುಮಾರ್‌ ಮಾತನಾಡಿ, ವಿದ್ಯಾರ್ಥಿಗಳ ಬದುಕಿನ ಜತೆ ವಾರ್ಡನ್‌ಗಳು ಅಟವಾಡುವುದು ಸರಿಯಲ್ಲ. ತಕ್ಷಣ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಬೇಕು. ವಾರ್ಡನ್‌ಗಳು ಕಡ್ಡಾಯವಾಗಿ ಹಾಸ್ಟೆಲ್‌ಗ‌ಳಲ್ಲಿದ್ದು ಸೂಕ್ತ ನಿರ್ವಹಣೆ ಮಾಡಿ ಸರ್ಕಾರಿ ಸೌಲಭ್ಯ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.

Advertisement

ಹಾಸ್ಟೆಲ್‌ಗ‌ಳಲ್ಲಿ ಆಹಾರ ವಸ್ತುಗಳ ಖರೀದಿಯಲ್ಲಿ ಅಕ್ರಮ ನಡೆಯುತ್ತಿದೆ. ಮೊಟ್ಟೆ, ಹಾಲು, ಹಣ್ಣು ನೀಡುತ್ತಿಲ್ಲ. ದರ ಪಟ್ಟಿ ಸೇರಿದಂತೆ ದಾಸ್ತಾನು ಪರಿಶೀಲನೆ ಮಾಡಲು ಸಮಗ್ರ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.

ಸದಸ್ಯ ಸುನೀಲ್‌ ಮಾತನಾಡಿ, ಸಣ್ಣ ನೀರಾವರಿ ಇಲಾಖೆ ಕೆರೆ ಅಭಿವೃದ್ಧಿಗೆ ಒತ್ತು ನೀಡಬೇಕು. ಮಳೆಗಾಲದಲ್ಲಿ ನೀರು ತುಂಬಿಕೊಂಡಿರುವ ತಾಳ್ಯ ಮತ್ತು ಟಿ.ಎಮ್ಮಿಗನೂರು ಕೆರೆ ಏರಿಗಳು ಸಂಪೂರ್ಣ ಶಿಥಿಲಗೊಂಡಿವೆ. ಅವುಗಳ ದುರಸ್ತಿಗೆ ಮುಂದಾಗಬೇಕು. ಯಾವುದೇ ಸಮಯದಲ್ಲಿ ಒಡೆದು ಹೋಗುವ ಆತಂಕ ಜನರನ್ನು ಕಾಡುತ್ತಿದೆ ಎಂದರು. ಸದಸ್ಯ ಶಿವಕುಮಾರ್‌ ಮಾತನಾಡಿ, ಕೆರೆಗಳಿಗೆ ಕೊಳಚೆ ನೀರು ಹರಿಯದಂತೆ ನೀರು ಇಂಗಿಸುವ ಹಾಗೂ ಚೆಕ್‌ ಡ್ಯಾಮ್‌ಗಳಲ್ಲಿ ನೀರು ಇಂಗಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೆರೆ ಅಭಿವೃದ್ಧಿ ಜತೆಗೆ ನೀರು ಇಂಗಿಸುವ ಕೆಲಸ ಆಗಬೇಕೆಂದರು.

ಇಒ ತಾರಾನಾಥ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆಗಳು ಭರ್ತಿಯಾಗಿವೆ. ಮೀನುಗಾರಿಕೆ ಇಲಾಖೆ ಎಲ್ಲಾ ಕೆರೆಗಳಲ್ಲಿ ಮೀನುಗಳನ್ನು ಸಾಕುವಂತೆ ಪ್ರೋತ್ಸಾಹ ನೀಡಬೇಕು. ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಲು ಕೃಷಿಕರಿಗೆ ಉತ್ತೇಜನ ನೀಡಬೇಕು. ತಾಪಂ ವಾಣೀಜ್ಯ ಸಂಕೀರ್ಣಗಳಲ್ಲಿರುವ ಬಾಡಿಗೆದಾರರು ಸರಿಯಾಗಿ ಬಾಡಿಗೆ ಸಂದಾಯ ಮಾಡುತ್ತಿಲ್ಲ. ಅವರ ವಿರುದ್ದ ಕಾನೂನು ಕ್ರಮಕ್ಕೆ ಸದಸ್ಯರು ಒಪ್ಪಿಗೆ ನೀಡಬೇಕೆಂದು ತಿಳಿಸಿದರು.

ಸರ್ವ ಸದಸ್ಯರು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಹಾಯಕ ಕೃಷಿ ನಿದೇರ್ಶಕ ಶ್ರೀನಿವಾಸುಲು ಮಾತನಾಡಿ, ಧಾರವಾಡದಲ್ಲಿ ನಡೆಯುವ ಕೃಷಿ ಮೇಳಕ್ಕೆ ರೈತರನ್ನು ಕರೆದೊಯ್ಯಲು ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಸದಸ್ಯರು ರೈತರ ಪಟ್ಟಿ ನೀಡಬೇಕೆಂದರು.

ಸಭೆಯಲ್ಲಿ ತಾಪಂ ಸದಸ್ಯರಾದ ಜಿ.ಎಚ್‌. ಜಗದೀಶ್‌, ಎಚ್‌. ಜಯಪ್ಪ, ಸರೋಜಾ, ಶಶಿಕಲಾ, ರಾಮಚಂದ್ರಪ್ಪ, ಗೀತಾಬಾಯಿ,
ಗಿರಿಜಮ್ಮ, ಸುಮಾ ಹಳ್ಳಪ್ಪ, ಆರ್‌.ಗಿರಿಜಾ, ಮೂಡಲಗಿರಿಯಪ್ಪ, ರುಕಿಷ್ಮಿಣಿ ಗಿರಿಯಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next