ಬೆಳ್ತಂಗಡಿ: ರಾಜ್ಯಾದ್ಯಂತ ಶಾಲಾ ಶಿಕ್ಷಕರ ಕೊರತೆಯನ್ನು ಗಮನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸೂಚನೆಯಂತೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ 730 ಶಾಲೆಗಳಿಗೆ ಗೌರವ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಡಾ| ಹೆಗ್ಗಡೆಯವರು ಸರಕಾರಿ ಶಾಲೆಗಳ ಮೂಲ ಸೌಕರ್ಯಗಳ ಸುಧಾರಣೆಗಾಗಿಯೇ ಕಳೆದ 30 ವರ್ಷಗಳ ಹಿಂದೆ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ.
41 ಕೋ.ರೂ. ಸಹಾಯಧನ
ಜ್ಞಾನದೀಪ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮಟ್ಟ ಸುಧಾರಣೆ ಹಾಗೂ ಕಲಿಕಾ ವಾತಾವರಣ ಸುಧಾರಣೆಗಾಗಿ ಕೊಠಡಿ, ಶೌಚಾ ಲಯ, ಆಟದ ಮೈದಾನ, ಆವರಣ, ವಿದ್ಯುದೀಕರಣ, ಕುಡಿಯುವ ನೀರು, ರಂಗಮಂದಿರ, ಶಾಲಾ ಕಟ್ಟಡ ದುರಸ್ತಿ, ಡೆಸ್ಕ್- ಬೆಂಚ್ಗಳ ಒದಗಣೆ ಮೊದಲಾದವುಗಳಿಗೆ ಸಹಾಯಧನ ನೀಡಲಾಗುತ್ತಿದೆ. ಇದುವರೆಗೆ ಒಟ್ಟು 41 ಕೋಟಿ ರೂ. ಸಹಾಯಧನ ನೀಡಲಾಗಿದೆ. ಮುಂದುವರಿದ ಭಾಗವಾಗಿ ಶಿಕ್ಷಕರ ಕೊರತೆ ಇರುವ ಸರಕಾರಿ ಹಾಗೂ ಆಯ್ದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರನ್ನು ಒದಗಿಸಲಾಗಿದೆ. ಈ ಪೈಕಿ 178 ಶಾಲೆಗಳು ಏಕೋಪಾಧ್ಯಾಯ ಶಾಲೆ ಗಳಾಗಿರುವುದು ಉಲ್ಲೇಖನೀಯ.
9.50 ಕೋಟಿ ರೂ. ಗೌರವಧನ ವಿನಿಯೋಗ
ಗ್ರಾಮೀಣ ಶಾಲಾ ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗುವುದನ್ನು ತಡೆಗಟ್ಟಲು ಸಂಸ್ಥೆಯ ವತಿಯಿಂದ ತಾತ್ಕಾಲಿಕ ವ್ಯವಸ್ಥೆಯಾಗಿ ಜ್ಞಾನದೀಪ ಶಿಕ್ಷಕರ ನಿಯೋಜನೆ ಮಾಡಲಾಗುತ್ತಿದೆ. ಈ ಶಿಕ್ಷಕರಿಗೆ ಮಾಸಿಕ ಗೌರವಧನ ವನ್ನು ಸಂಸ್ಥೆಯ ವತಿ ಯಿಂದ ಪಾವತಿಸಲಾಗುತ್ತಿದ್ದು, ಇದಕ್ಕಾಗಿಯೇ ಸಂಸ್ಥೆಯಿಂದ ಇದುವರೆಗೆ ಒಟ್ಟು 9.50 ಕೋಟಿ ರೂ. ಮೊತ್ತ ವಿನಿಯೋಗಿಸಲಾಗಿದೆ.
Related Articles
ಈ ಶಿಕ್ಷಕರ ಮೂಲಕ ಶಾಲೆ ಬಿಟ್ಟ 6ರಿಂದ 14 ವರ್ಷ ಪ್ರಾಯದ ಮಕ್ಕಳ ಮನೆಗೆ ಭೇಟಿ ನೀಡಿ ಕಾರಣ ತಿಳಿಯುವುದು ಹಾಗೂ ಕುಟುಂಬದ ಸಂಪರ್ಕ ಬೆಳೆಸಿ ಅವರನ್ನು ಮತ್ತೆ ಶಾಲೆಗೆ ಸೇರ್ಪಡೆಗೊಳಿಸುವುದು. ಅಲ್ಲದೆ ಬಾಲ
ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಶ್ರಮಿಸಲಾಗುವುದು. 4ನೇ ತರಗತಿ ಮುಗಿದ ಬಳಿಕ ಶಾಲೆ ಬಿಡುವವರ ಮನವೊಲಿಸಿ ಹಿ. ಪ್ರಾ. ಶಾಲೆಗೆ ಸೇರ್ಪಡೆ ಮಾಡುವಲ್ಲಿಯೂ ಪ್ರಯತ್ನಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಪ್ರತೀ ವಿದ್ಯಾರ್ಥಿಯೂ 10ನೇ ತರಗತಿ ತನಕವಾದರೂ ಪೂರ್ಣ ವಿದ್ಯಾಭ್ಯಾಸ ಪಡೆಯಲು ಪ್ರೇರಣೆ ನೀಡುವಂತೆ ಹೆತ್ತವರ ಮನವೊಲಿಸುವ ಜತೆಗೆ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಒಟ್ಟು ಹಾಜರಾತಿ ವೃದ್ಧಿಸುವಂತಹ ಕಾರ್ಯಕ್ರಮ ಇದು ಎಂದು ಡಾ| ಮಂಜುನಾಥ್ ತಿಳಿಸಿದ್ದಾರೆ.