Advertisement

35 ವರ್ಷಗಳ ಸಾಧನೆಗೆ ಸಂದ ಗೌರವ

03:45 PM Aug 29, 2019 | Naveen |

ಜೀಯು, ಹೊನ್ನಾವರ
ಹೊನ್ನಾವರ:
ಸಂಸ್ಕೃತ, ಯಕ್ಷಗಾನಗಳಿಗೆ ಪ್ರಸಿದ್ಧವಾಗಿದ್ದ ಉತ್ತರ ಕನ್ನಡದಲ್ಲಿ ಹಿಂದುಸ್ಥಾನಿ ಸಂಗೀತ ನೆಲೆಗೊಳಿಸಲು ಕಡತೋಕಾ ಎಸ್‌. ಶಂಭು ಭಟ್ ನೇತೃತ್ವದಲ್ಲಿ ಪಿ.ಡಿ. ಶಾನಭಾಗ, ವಿ.ವಿ. ಪೈ, ಜಿ.ಕೆ. ಚಂದಾವರಕರ, ದಿ| ಎಸ್‌.ಆರ್‌. ಉದ್ಯಾವರ, ಆರ್‌.ಡಿ. ಕಲ್ಯಾಣಪುರ, ದಿ| ವಿ.ಆರ್‌. ಪೈ, ಆರ್‌.ಎಂ. ಶಾನಭಾಗ, ಎಡ್ವೋಕೇಟ್ ವಿ.ಎಂ. ಭಂಡಾರಿ, ಬಾಳೇಗದ್ದೆ ಜಿ.ಆರ್‌. ಭಟ್ಟ, ಕರ್ಕಿಯ ರಾಜು ಹೆಬ್ಟಾರ, ಕವಲಕ್ಕಿ ಎಸ್‌.ಜಿ. ಭಟ್ಟ ಮೊದಲಾದವರು ಸೇರಿ ಆರಂಭಿಸಿದ ಕಲಾ ಸಂಗಮ ಸಂಸ್ಥೆ 35 ವರ್ಷಗಳಿಂದ ಸತತ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತ, ಸಂಗೀತ ಶಾಲೆ ತೆರೆಯುತ್ತ, ಪ್ರಸಿದ್ಧ ಕಲಾವಿದರನ್ನು ಗುರುಗಳಾಗಿ ಕರೆಸಿಕೊಂಡು ನಡೆಸಿದ ಸಂಗೀತ ಅಭಿಯಾನದಿಂದಾಗಿ ಇಂದು ಸಂಗೀತ ಶಾಲೆಗಳನ್ನು, ನೂರಾರು ಸಂಗೀತಗಾರರು, ಸಾವಿರಾರು ಶ್ರೋತೃಗಳನ್ನು ಎಲ್ಲ ತಾಲೂಕಿನಲ್ಲಿ ಕಾಣಬಹುದಾಗಿದೆ.

Advertisement

ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸೂತ್ರಧಾರರಾಗಿ ಕಲಾಸಂಗಮಕ್ಕೆ ಕೋಳುಗಂಬವಾಗಿ ಬೆಳೆಸಿದ ಪ್ರೊ| ಎಸ್‌. ಶಂಭು ಭಟ್ಟರಿಗೆ ಈಗ 84ವರ್ಷ. ಅವರು ಬಾನ್ಸೂರಿ ಕಲಾವಿದರು, ವೇದ ವಿದ್ವಾಂಸರು, ನಿವೃತ್ತ ಪ್ರಾಂಶುಪಾಲರು, ಮಾದರಿ ಕೃಷಿಕರು. ಈಗಲೂ ಸಂಗೀತ ಕಾರ್ಯಕ್ರಮಗಳಿಗೆ ಓಡಾಡುತ್ತ, ಮಾರ್ಗದರ್ಶನ ಮಾಡುತ್ತ, ಪ್ರೋತ್ಸಾಹಿಸುತ್ತಿದ್ದಾರೆ. ಪ್ರಸಿದ್ಧ ಸಿತಾರ ವಾದಕ ಉಸ್ತಾದ್‌ ಬಾಲೇಖಾನ್‌, ಖ್ಯಾತ ಗಾಯಕ ಪಂ| ಬಸವರಾಜ ರಾಜಗುರು ಕಾರ್ಯಕ್ರಮಗಳನ್ನಿಟ್ಟು 1985ರಲ್ಲೇ ಕಲಾಸಂಗಮ ಉದ್ಘಾಟಿಸಲಾಯಿತು. ಪಂ.ಷಡಕ್ಷರೀ ಗವಾಯಿಗಳನ್ನು ಕರೆಸಿಕೊಂಡು 1986ರಲ್ಲಿ ಕಲಾಸಂಗಮ ಸಂಗೀತ ಶಾಲೆ ಆರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯಲು ವ್ಯವಸ್ಥೆ ಮಾಡಲಾಯಿತು.

ಕಲಾ ಸಂಗಮ ಹೊನ್ನಾವರಕ್ಕೆ ಮಾತ್ರ ಸೀಮಿತವಾಗದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತನ್ನ ಕಾರ್ಯಕ್ರಮ ವಿಸ್ತರಿಸಿತು. ಪಂ| ಮಲ್ಲಿಕಾರ್ಜುನ ಮನಸೂರ, ಪಂ| ಬಸವರಾಜ ರಾಜಗುರು, ಪಂ| ಉಲ್ಲಾಸ ಕಶಾಳಕರ, ಪಂ| ಭೀಮಸೇನ ಜೋಶಿ, ವಿದುಷಿ ಗಂಗೂಬಾಯಿ ಹಾನಗಲ್, ಪಂ| ಹರಿಪ್ರಸಾದ ಚೌರಾಸಿಯಾ, ಪಂ| ನಿತ್ಯಾನಂದ ಹಳದೀಪುರ, ಪಂ| ಗೋಡಖೀಂಡಿ, ವಿದ್ವಾನ್‌ ದಿನಕರ ಕಾಯಕಿಣಿ, ಪಂ| ಗಣಪತಿ ಭಟ್ಟ ಹಾಸಣಗಿ, ಪಂ| ಪರಮೇಶ್ವರ ಹೆಗಡೆ ಕಲಬಾಗ ಮೊದಲಾದ ಅನೇಕ ಸಂಗೀತ ದಿಗ್ಗಜರನ್ನು ಕರೆಸಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರಣಿ ಸಂಗೀತ ಕಾರ್ಯಕ್ರಮ ಕಲಾಸಂಗಮ ಏರ್ಪಡಿಸಿತ್ತು. ಇದಲ್ಲದೇ ಜಿಲ್ಲೆಯಾದ್ಯಂತ ಆರಂಭವಾದ ಸಂಗೀತ ಸಂಸ್ಥೆಗಳಿಗೆ ಬೆಂಬಲವಾಗಿ ನಿಂತ ಕಲಾಸಂಗಮ ಸರಣಿ ಕಾರ್ಯಕ್ರಮಗಳನ್ನು ಅಯೋಜಿಸುತ್ತಿತ್ತು. ಉ.ಕ. ಜಿಲ್ಲೆ ಧಾರವಾಡದಂತೆ ಹಿಂದುಸ್ಥಾನಿ ಸಂಗೀತದ ನೆಲೆಯಾಗಲು ಕಲಾಸಂಗಮದ ಕೊಡುಗೆ ಮಹತ್ವದ್ದಾಗಿದೆ.

ಕಲಾ ಸಂಗಮ ಹೊನ್ನಾವರ ಇದರ 35 ವರ್ಷಗಳ ಸಾಧನೆ ಮೆಚ್ಚಿ, ರಾಷ್ಟ್ರಮಟ್ಟದಲ್ಲಿ ಸಂಗೀತ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿದ ಬೆಂಗಳೂರು ಪಿಟೀಲು ಚೌಡಯ್ಯ ಸಂಸ್ಥೆಯ ಕೆ.ಕೆ. ಮೂರ್ತಿ ಮೆಮೋರಿಯಲ್ ಮ್ಯೂಸಿಕ್‌ ವಿಭಾಗವು ಕಲಾಸಂಗಮಕ್ಕೆ ಅಕಾಡೆಮಿ ಆಫ್‌ ಮ್ಯೂಸಿಕ್‌ ಇನ್‌ಸ್ಟಿಟ್ಯೂಶನ್‌ ಅವಾರ್ಡ್‌ ಎಂಬ ಬಿರುದನ್ನು 50 ಸಾವಿರ ರೂ. ಪ್ರೋತ್ಸಾಹ ಧನದೊಂದಿಗೆ ಪ್ರದಾನ ಮಾಡಲು ನಿಶ್ಚಯಿಸಿದೆ. ನ.10 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲಿನಲ್ಲಿ ಮುಕ್ತಾಯಗೊಳ್ಳುವ ಮ್ಯೂಸಿಕ್‌ ಫೆಸ್ಟಿವಲ್ನಲ್ಲಿ ಹೊನ್ನಾವರ ಕಲಾ ಸಂಗಮವು ಈ ಪ್ರಶಸ್ತಿ ಸ್ವೀಕರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next