ಹೊನ್ನಾಳಿ: ಅರ್ಹ ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಇಲ್ಲಿನ ಟಿಬಿ ವೃತ್ತದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಬಿ.ವೇದಮೂರ್ತಿ ಹೇಳಿದರು.
ಇಲ್ಲಿನ ಟಿಬಿ ವೃತ್ತದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು-ಉಪನ್ಯಾಸಕರು ಕಾಲೇಜಿನ ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ನೋಂದಣಿ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ದಾಖಲಿಸಲು ಯುವಕ-ಯುವತಿಯರನ್ನು ಪ್ರೇರೇಪಿಸುವ ಉದ್ದೇಶದಿಂದ ಮತದಾನ ನೋಂದಣಿ ಜಾಗೃತಿ ಜಾಥಾವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಎನ್ನೆಸ್ಸೆಸ್ ಯೋಜನಾ ಕಾರಿ ಎಚ್. ಬಸವರಾಜ್, ಉಪನ್ಯಾಸಕ ಸುರೇಶ್ ಲಮಾಣಿ ಮಾತನಾಡಿದರು. ಉಪನ್ಯಾಸಕ ಬಿ.ಇ.ಪ್ರಕಾಶ್ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಮತದಾನ ನೋಂದಣಿ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನ ನೋಂದಣಿ ಕುರಿತಂತೆ ವಿದ್ಯಾರ್ಥಿಗಳು ಜಾಥಾದ ಉದ್ದಕ್ಕೂ ವಿವಿಧ ಘೊಷಣೆಗಳನ್ನು ಕೂಗಿ, ಟಿಬಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು.
ಶಿಕ್ಷಕ-ಬಿಎಲ್ಒ ಎಚ್.ಎಸ್. ಮಂಜಪ್ಪ, ಅಂಗನವಾಡಿ ಕಾರ್ಯಕರ್ತೆಯರು-ಬಿಎಲ್ ಒಗಳಾದ ಎಸ್. ರತ್ನಮ್ಮ, ಎಚ್.ಎಂ. ಗೀತಾ, ಉಪನ್ಯಾಸಕರಾದ ನಾರಾಯಣ್ ನಾಯ್ಕರ್, ಬಿ.ಜೆ. ಸುಪ್ರಿಯಾ, ಸುಮತಿ ಗಿರಿಧರ್, ಸಲ್ಮಾ ಬಾನು, ಡಾ|ಅರುಣ್ ಸಿಂಧೆ, ಅನಿಲ್ ಕುಮಾರ್, ಉಮ್ಮೇಹಾನಿ, ಬಿ. ಶಾಲಿನಿ, ಡಿ. ಪ್ರತಿಮಾ, ಕೆ.ಸಿ. ಯುವರಾಜ್, ಎಸ್. ತನುಜಾ, ಸಿಬ್ಬಂದಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.