Advertisement

ಸೊರಗುತ್ತಿದೆ ವಸತಿ ರಹಿತರ ಆಶ್ರಯ ಕೇಂದ್ರ

05:14 PM Nov 29, 2021 | Team Udayavani |

ಉಡುಪಿ: ನಗರದ ಬೀಡಿನಗುಡ್ಡೆಯಲ್ಲಿ 33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಸತಿರಹಿತರ ಆಶ್ರಯ ಕೇಂದ್ರ ನಿರ್ವಹಣೆ, ಸೌಕರ್ಯವಿಲ್ಲದೆ ಸೊರಗುವಂತಾಗಿದೆ.

Advertisement

2015-16ರಲ್ಲಿ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯಾಗಿ ವರ್ಷ ಕಳೆದರೂ ಕೇಂದ್ರವು ವಸತಿ ರಹಿತರಿಗೆ ಸೂರಾಗಿರಲಿಲ್ಲ. ಅನಂತರ 2017ರಿಂದ ಕೇಂದ್ರವು ವಸತಿರಹಿತರಿಗೆ ಕಾರ್ಯಾರಂಭಗೊಂಡು ಉತ್ತಮವಾಗಿ ಸಾಗುತ್ತಿತ್ತು. ಸರಕಾರ ಕಳೆದೊಂದು ವರ್ಷದಿಂದ ನಿರ್ವಹಣೆ ಮಾಡುವ ಸಂಸ್ಥೆಗೆ ಬಿಲ್‌ ಬಾಕಿ ಇಟ್ಟ ಪರಿಣಾಮ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಂತಾಗಿದೆ.

ನಗರಕ್ಕೆ ಉದ್ಯೋಗ ಅರಸಿ ಅಥವಾ ಇನ್ನೂ ಯಾವುದೋ ಕಾರಣಗಳಿಂದ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕಗಳಿಂದ ಇಲ್ಲಿಗೆ ಕಾರ್ಮಿಕರು ವಲಸೆ ಬರುತಿದ್ದಾರೆ. ಹೀಗೆ ಬಂದ ಹಲವರಲ್ಲಿ ನಿರ್ಗತಿಕರು ಹೆಚ್ಚಾಗಿರುತ್ತಾರೆ. ತಂಗಲು ಜಾಗವಿಲ್ಲದೆ ಬಸ್‌, ನಿಲ್ದಾಣ, ಖಾಲಿ ಕಟ್ಟಡ, ಅಂಗಡಿ ಮುಂಗಟ್ಟುಗಳ ಎದುರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇವರಿಗೆ ಸೂರು ಕಲ್ಪಿಸಿ, ಜೀವನ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ನಗರದ ಬೀಡಿನಗುಡ್ಡೆಯಲ್ಲಿ ನಗರ ವಸತಿರಹಿತರಿಗೆ ಆಶ್ರಯ ಕಟ್ಟಡ ನಿರ್ಮಿಸಲಾಗಿದೆ.

33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
ರಾಷ್ಟ್ರೀಯ ನಗರ ಜೀವನೋಪಾಯ ಅಭಿ ಯಾನ, ದೀನ ದಯಾಳ್‌ ಅಂತ್ಯೋದಯ ಯೋಜನೆ ಯಡಿಯಲ್ಲಿ ನಗರಸಭೆ ವತಿಯಿಂದ 33 ಲಕ್ಷ ರೂ. ವೆಚ್ಚದಲ್ಲಿ ವಸತಿರಹಿತರಿಗೆ ಈ ಆಶ್ರಯ ಕೇಂದ್ರ ನಿರ್ಮಿಸಲಾಗಿದೆ. ಬಿಸಿನೀರಿಗೆ ಸೋಲಾರ್‌, ವಿದ್ಯುತ್‌ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ, ಅಡುಗೆ ಕೋಣೆ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಈ ಕಟ್ಟಡಕ್ಕೆ ಒದಗಿಸಲಾಗಿದೆ. ಹಾಸಿಗೆ, ಮಂಚ, ಟಿವಿ, ಬೆಡ್‌ಶೀಟ್‌ ಸೌಲಭ್ಯಗಳನ್ನು ನಿರ್ವಹಣೆ ವಹಿಸಿಕೊಂಡ ಸಂಸ್ಥೆ ನಿರಾಶ್ರಿತರಿಗೆ ಒದಗಿಸುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೋಣೆ ಇಲ್ಲಿದೆ. ಇದರಲ್ಲಿ 20ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಬಹುದು. ಪ್ರಸ್ತುತ ಒಬ್ಬರು ಮಹಿಳೆ, ಐವರು ಪುರುಷರು ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ವರ್ಷದಿಂದ ಬಿಲ್‌ ಪಾವತಿ
ನಿಯಮ ಪ್ರಕಾರ ಕಟ್ಟಡದ ನಿರ್ವಹಣೆ ನಗರಸಭೆ ವಹಿಸಿಕೊಳ್ಳುವಂತಿಲ್ಲ. ಕೇಂದ್ರದ ನಿರ್ವಹಣೆಯನ್ನು ಸನ್ನಿಧಿ ಎಂಬ ಮಹಿಳಾ ಸ್ವಸಹಾಯ ಸಂಘಕ್ಕೆ ನೀಡಲಾಗಿದೆ. ಸಂಘವು ಒಬ್ಬ ಮ್ಯಾನೇಜರ್‌ ಮತ್ತು ಇಬ್ಬರು ಕೇರ್‌ಟೇಕರ್‌ಗಳನ್ನು ನೇಮಿಸಿ ಕೇಂದ್ರದಲ್ಲಿರುವ ನಿರಾಶ್ರಿತರನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತಿದ್ದಾರೆ. ವಾರ್ಷಿಕ 4 ಲಕ್ಷ ರೂ., ಬಿಲ್‌ ಪಾವತಿ ಮಾಡಲಾಗುತ್ತದೆ. ಆದರೆ ಸರಕಾರ ಒಂದು ವರ್ಷದಿಂದ ಬಿಲ್‌ ಬಾಕಿ ಇರಿಸಿದ ಕಾರಣ ನಿರಾಶ್ರಿತರ ಊಟ, ತಿಂಡಿ, ಸ್ವತ್ಛತೆ ಕಾರ್ಯಕ್ಕೆ ಸಂಘವು ಆರ್ಥಿಕ ಸಂಕಷ್ಟದ ನಡುವೆಯೂ ಸ್ವಂತ ಖರ್ಚಿನಿಂದ ಹಣ ಭರಿಸುತ್ತಿದೆ.

Advertisement

ಕಟ್ಟಡಕ್ಕೆ ಕಾಯಕಲ್ಪ ಹೇಗೆ ?
ಕಟ್ಟಡದ ಮುಂಭಾಗದಲ್ಲಿ ಕಾಂಪೌಂಡ್‌ ವಾಲ್‌ ಸಹಿತ ಗೇಟ್‌ ವ್ಯವಸ್ಥೆ ಇಲ್ಲದಿರುವುದು ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿ. ಕೂಡಲೇ ಕೇಂದ್ರಕ್ಕೆ ಕಾಂಪೌಂಡ್‌ ವಾಲ್‌, ಗೇಟ್‌ ವ್ಯವಸ್ಥೆ ಆಗಬೇಕು. ಕಟ್ಟಡ ನಿರ್ಮಿಸುವಾಗ ನಿರ್ಲಕ್ಷ್ಯ ವಹಿಸಿ ತಾರಸಿ ಮೇಲೆ ಹೋಗಲು ಮೆಟ್ಟಿಲನ್ನು ನಿರ್ಮಿಸದೆ ಹಾಗೇ ಬಿಟ್ಟಿರುತ್ತಾರೆ. ಪರಿಣಾಮ ಹಲವು ವರ್ಷಗಳಿಂದ ತಾರಸಿಯನ್ನು ಮತ್ತು ನೀರಿನ ಟ್ಯಾಂಕ್‌ ಅನ್ನು ಸ್ವತ್ಛ ಮಾಡಲು ಸಾಧ್ಯವಾಗಿಲ್ಲ. ಮಳೆ ದಿನಗಳಲ್ಲಿ ಹಲವು ದಿನಗಳು ನೀರು ನಿಂತು ಸೊಳ್ಳೆ ಉತ್ಪಾದನೆಗೆ ಕಾರಣವಾಗುತ್ತಿದೆ. ತಾರಸಿ ಮೇಲೆ ಹೋಗಲು ಕಟ್ಟಡಕ್ಕೆ ಮೆಟ್ಟಿಲು ನಿರ್ಮಾಣದ ಅಗತ್ಯವಿದೆ. ಕಟ್ಟಡದ ಗೋಡೆಗಳ ಬಣ್ಣ ಮಾಸಿದ್ದು, ಪೈಂಟಿಂಗ್‌ ಆಗಬೇಕಿದೆ, ಕಟ್ಟಡದ ಒಳಗೆ ಪಾತ್ರೆ ತೊಳೆಯುವ ಸಿಂಕ್‌ ವ್ಯವಸ್ಥೆ ಮಾಡಿಲ್ಲ.

ಪರಿಶೀಲಿಸಿ ಸೂಕ್ತ ಕ್ರಮ
ವಸತಿ ರಹಿತರ ಆಶ್ರಯಕ್ಕೆ ಕೇಂದ್ರದ ನಿರ್ವಹಣೆ ವಹಿಸಿಕೊಂಡ ಸಂಸ್ಥೆಗೆ ಕಳೆದ ಮಾರ್ಚ್‌ನಲ್ಲಿ ಸರಕಾರದಿಂದ ಬಿಲ್‌ ಪಾವತಿಯಾಗಬೇಕಿತ್ತು, ಕಾರಣಾಂತರದಿಂದ ತಡವಾಗಿದೆ. ಇದೀಗ ಸರಕಾರದ ಹಂತದಲ್ಲಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಬಿಲ್‌ ಪಾವತಿ ಆಗಲಿದೆ. ಕಟ್ಟಡದ ಕಾಯಕಲ್ಪಕ್ಕೆ ತಾರಸಿಗೆ ಹೋಗುವ ಮೆಟ್ಟಿಲು, ಕಟ್ಟಡಕ್ಕೆ ಪೈಂಟಿಂಗ್‌ ಸಹಿತ ಇನ್ನಿತರ ಸೌಕರ್ಯಗಳ ಅಗತ್ಯತೆ ಬಗ್ಗೆ ಪರಿಶೀಲಿಸಿ ನಗರಸಭೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ನಾರಾಯಣ ಎಸ್‌.ಎಸ್‌. , ಸಮುದಾಯ ಅಭಿವೃದ್ಧಿ ಅಧಿಕಾರಿ, ನಗರಸಭೆ

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next