ನಾಗ್ಪುರ: ಇಬ್ಬರು ಮಹಿಳೆಯರು ಧೂಮಪಾನ ಮಾಡುತ್ತಿದ್ದಾಗ ಅವರನ್ನು ದಿಟ್ಟಿಸಿದ ಆರೋಪದ ಮೇಲೆ 28 ವರ್ಷದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ಇರಿದು ಕೊಂದಿರುವ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗ್ಪುರದ ಮಹಾಲಕ್ಷ್ಮಿ ನಗರ ಪ್ರದೇಶದಿಂದ ಶನಿವಾರ ತಡರಾತ್ರಿ ಜಯಶ್ರೀ ಪಂಜಾಡೆ ತನ್ನ ಸ್ನೇಹಿತೆ ಸವಿತಾ ಸಾಯರ್ ಅವರೊಂದಿಗೆ ಪಾನ್ ಶಾಪ್ ನ ಹೊರಗೆ ಧೂಮಪಾನ ಮಾಡುತ್ತಿದ್ದಾಗ ಘಟನೆ ವರದಿಯಾಗಿದೆ.
ಸಿಗರೇಟ್ ಖರೀದಿಸಲು ಅಂಗಡಿಗೆ ಬಂದಿದ್ದ ರಂಜಿತ್ ರಾಥೋಡ್ ಮಹಿಳೆಯರನ್ನು ದಿಟ್ಟಿಸಿ ನೋಡಲಾರಂಭಿಸಿದಾಗ ಆಕ್ರೋಶಗೊಂಡ ಮಹಿಳೆಯರು ತೀವ್ರ ವಾಗ್ವಾದಕ್ಕೆ ಮುಂದಾದರು. ಜಯಶ್ರೀ ತನ್ನನ್ನು ನಿಂದಿಸುತ್ತಿರುವುದನ್ನು ಮತ್ತು ತನ್ನ ಕಡೆಗೆ ಹೊಗೆ ಊದುತ್ತಿರುವುದನ್ನು ರಂಜಿತ್ ರಾಥೋಡ್ ಅವರು ವೀಡಿಯೊವನ್ನು ಚಿತ್ರೀಕರಿಸಿದ್ದು, ಬಳಿಕ ವಾದವು ದೊಡ್ಡ ಜಗಳಕ್ಕೆ ಕಾರಣವಾಯಿತು.
ನಂತರ ಜಯಶ್ರೀ ತನ್ನ ಸ್ನೇಹಿತ ಆಕಾಶ್ ರಾವುತ್ಗೆ ಕರೆ ಮಾಡಿ ಅಲ್ಲಿಗೆ ಬರುವಂತೆ ಹೇಳಿದ್ದಾರೆ. ತನ್ನ ಸ್ನೇಹಿತರೊಂದಿಗೆ ಘಟನಾ ಸ್ಥಳಕ್ಕೆ ಬಂದ ಆಕಾಶ್ ರಾವುತ್ ನಂತರ ರಂಜಿತ್ ಗೆ ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಭದ್ರತಾ ಕ್ಯಾಮೆರಾದಲ್ಲಿ ದಾಖಲಾಗಿದೆ.
ಜಯಶ್ರೀ ತನ್ನ ಸ್ನೇಹಿತರನ್ನು ಕರೆದ ನಂತರ ತಾನು ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ್ದಾಗಿ ಅಂಗಡಿ ಮಾಲೀಕ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿ ಲಕ್ಷ್ಮಣ ತಾವಡೆ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ರಂಜಿತ್ ರಾಥೋಡ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪೊಲೀಸರು ಭದ್ರತಾ ಕ್ಯಾಮೆರಾದ ದೃಶ್ಯಾವಳಿಗಳನ್ನು ಪಡೆದುಕೊಂಡು ಜಯಶ್ರೀ, ಸವಿತಾ ಮತ್ತು ಆಕಾಶ್ ಅವರನ್ನು ಬಂಧಿಸಿದ್ದಾರೆ.