Advertisement

ಆ.15 ರಿಂದ ರಬಕವಿ ಮಲ್ಲಿಕಾರ್ಜುನ ದೇವರ ಐತಿಹಾಸಿಕ ಜಾತ್ರೆ

10:29 AM Aug 14, 2022 | Team Udayavani |

ಬನಹಟ್ಟಿ: 350ಕ್ಕೂ ವರ್ಷದ ಇತಿಹಾಸ ಹೊಂದಿದ ರಬಕವಿ ನಗರದ ಶ್ರೀ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಅಡಿಯಲ್ಲಿ ಪ್ರತಿವರ್ಷ ಜರುಗುವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ಶ್ರಾವಣ ಮಾಸದ 3ನೇ ಸೋಮವಾರ ಆ.15 ರಂದು ಮುಂಜಾನೆ ಮಲ್ಲಿಕಾರ್ಜುನ ದೇವರ ಮತ್ತು ಶ್ರೀ ಭ್ರಮರಾಂಭಾ ದೇವಿಯ ಪೂಜೆ ಮತ್ತು ಸಂಜೆ 4 ಗಂಟೆಗೆ ಕರಡಿ ಮಜಲಿನೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ.

Advertisement

ಅಂದು ಸಂಜೆ 6 ರಿಂದ 8 ಗಂಟೆ ವರೆಗೆ ನೂತನ ರಥದಲ್ಲಿ ಅದ್ದೂರಿ ರಥೋತ್ಸವ ಜರುಗುವುದು. ಮರುದಿನ ಮಂಗಳವಾರ ಆ. 16 ರಂದು ಮಧ್ಯಾಹ್ನ 3ಕ್ಕೆ ಹೆಸರಾಂತ ಕುಸ್ತಿ ಪಟುಗಳಿಂದ ಜಂಗೀ ನಿಕಾಲಿ ಕುಸ್ತಿಗಳು ಜರುಗುವವು. ಆ. 17 ಬುಧವಾರ ಸಂಜೆ 6‌ ಕ್ಕೆ ಕಳಸ ಇಳಿಸುವ ಮತ್ತು ಕರಡಿ ಮಜಲು ಜರುಗುವುದು.

ಈ ಭಾಗದಲ್ಲಿ ಶ್ರಾವಣ ತಿಂಗಳಲ್ಲಿ ಜರುಗುವ ಅತಿ ದೊಡ್ಡ ಜಾತ್ರೆಗಳಲ್ಲಿ ಇದು ಮೊದಲ ಜಾತ್ರೆ ಇದಾಗಿರುವುದರಿಂದ ಲಕ್ಷಾಂತರ ಭಕ್ತರು ಜಾತ್ರೆ ವಿಕ್ಷೀಸಲು ಬರುತ್ತಾರೆ. ಪ್ರತಿ ವರ್ಷ ಶ್ರಾವಣ ಮಾಸದ ಮೂರನೆಯ ಸೋಮವಾರ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆಯು 8 ದಿನಗಳ ಕಾಲ ನಡೆಯುತ್ತದೆ.

ಮಹಾಲಿಂಗಪೂರದ ಮಹಾಲಿಂಗೇಶ್ವರರ ಪಲ್ಲಕ್ಕಿ ಆಗಮಿಸಿದ ಬಳಿಕ ರಥೋತ್ಸವ ಜರುಗುವುದು ಜಾತ್ರೆಯ ವಿಶೇಷವಾಗಿದ್ದು, ಜಾತ್ರೆ ಮಲ್ಲಿಕಾರ್ಜುನ ದೇವರದಾದರೂ ರಥದಲ್ಲಿ ಮಾತ್ರ ಮಹಾಲಿಂಗೇಶ್ವರ ಕುಳಿತು ಕೊಳ್ಳುವುದು ಮತ್ತೊಂದು ವಿಶೇಷ. ಅಲ್ಲದೇ ಅತಿ ಹೆಚ್ಚು ಶೃಂಗರಿಸಲ್ಪಡುವುದು ಇಲ್ಲಿಯ ಮಹಾದೇವ ದೇವಸ್ಥಾನ. ಒಟ್ಟಿನಲ್ಲಿ ನಾಡಿನ ಅನೇಕ ಸಾಂಸ್ಕೃತಿಕ, ಜನಪದ ಹಾಡುಗಳು, ಗ್ರಾಮೀಣ ಕ್ರೀಡೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗುವ ಈ ಜಾತ್ರೆ ಹಲವಾರು ವಿಶೇಷತೆಗಳನ್ನು ಹೊಂದಿದೆ. ಅಲ್ಲದೇ ಈ ವರ್ಷ 75ನೇ ಸ್ವಾತಂತ್ರ್ಯ ಮಹೋತ್ಸವದಂದು ಜಾತ್ರೆ ಜರುಗುತ್ತಿರುವುದು ಮತ್ತೋಂದು ವಿಶೇಷವಾಗಿದೆ.

ಪಲ್ಲಕ್ಕಿಗಳ ಜಾತ್ರೆ: ಜಾತ್ರೆಗೆ ಬೆಳಗಾವಿ, ಬಿಜಾಪುರ ಬಾಗಲಕೋಟ ಜಿಲ್ಲೆ ಹಾಗೂ ಮಹಾರಾಷ್ಷ್ಟದ ಗಡಿ ಭಾಗ ಸೇರಿದಂತೆ ಅನೇಕ ಗ್ರಾಮಗಳಿಂದ ೫೦೦ಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುತ್ತವೆ. ಅಂದು ಮುಂಜಾನೆ ಪಕ್ಕದ ಕೃಷ್ಣಾ ನದಿಗೆ ತೆರಳಿ ಪುಣ್ಯ ಸ್ನಾನ ಮಾಡಿ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ.

Advertisement

ಸಾಂಗ್ಲಿ ಸಂಸ್ಥಾಪಕರ ಭೇಟಿ: ಸಾಂಗ್ಲಿ ಸಂಸ್ಥಾನದ ಅಡಿಯಲ್ಲಿದ್ದ ರಬಕವಿ ಗ್ರಾಮಕ್ಕೆ ರಾಜ ಮನೆತನದ ಸಂಬಂಧವಿತ್ತು. ಆಗ ಗ್ರಾಮದ ಉಮದಿ ಅಣ್ಣನವರೆಂದೇ ಹೆಸರು ಮಾಡಿದ ಮಲ್ಲೇಶಪ್ಪಣ್ಣಾ ಉಮದಿ ಯವರು ರಬಕವಿ ಊರು ಕಟ್ಟಿದವರಾಗಿದ್ದು, ಅವರು ಊರಲ್ಲಿ ತಿರುಗಾಡಲು ಬಂದರೆ ಮಹಿಳೆಯರು ಯುವಕರು ಮರ್ಯಾದೆ ಕೊಟ್ಟು ಬೀದಿಯಲ್ಲಿ ನಿಲ್ಲತ್ತಿರಲಿಲ್ಲ. ಆಗಿನ ಕಾಲದಲ್ಲಿ ಹಿರಿಯರಿಗೆ ಅಷ್ಟೊಂದು ಮರ್ಯಾದೆ ಇತ್ತೆಂದು ಟ್ರಸ್ಟನ ಹಿರಿಯರು ಹೇಳುತ್ತಾರೆ. 1944 ರಲ್ಲಿ ಸಾಂಗ್ಲಿ ಸಂಸ್ಥಾನ ಸಂಸ್ಥಾಪಕರು ಮತ್ತು ಮಂತ್ರಿಮಂಡಲ ಜಾತ್ರೆಗೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಹೋಗಿದ್ದರು ಎಂದು ಹೇಳಲಾಗುತ್ತದೆ. ಉಮದಿ ಅಣ್ಣನವರಿಗೊಂದು ಸಾಂಗ್ಲಿ ಸಂಸ್ಥಾನದಲ್ಲಿ ಜರುಗುವ ಮಂತ್ರಿಮಂಡಲ ಸಭೆಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕೂಡ ಮಾಡಿದ್ದರು ಎನ್ನಲಾಗುತ್ತದೆ.

ನೆಹರು ಮತ್ತು ಇಂದಿರಾ ಭೇಟಿ: ಬಣ್ಣ ಹಾಗೂ ಜವಳಿ ಉದ್ಯೋಗದಲ್ಲಿ ತನ್ನದೇ ಆದ ಕಾರ್ಯವೈಕರಿ ಹೊಂದಿದ ರಬಕವಿ ನಗರ ಛೋಟಾ ಮುಂಬೈ ಎಂದು ಹೆಸರು ಮಾಡಿತ್ತು. 1956 ಏ. 8 ರಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರು ಹಾಗೂ ಇಂದಿರಾ ಗಾಂದಿಯವರು ಶಂಕರಲಿಂಗ ಟ್ರಸ್ಟ್ ಗೆ ಬೇಟಿ ನೀಡಿ ಇಲ್ಲಿಯ ನೇಕಾರಿಕೆಯ ಕುರಿತು ಮಾತನಾಡಿದ್ದನ್ನು ಕೆಲ ಹಿರಿಯರು ಹೇಳುತ್ತಾರೆ. ನಂತರ ದೇವರ ದರ್ಶನ ಪಡೆದು ಹೋದರು ಎಂದರು ಹೇಳಲಾಗುತ್ತದೆ.

ಕಳೆದೆರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಜಾತ್ರೆ ಪೂರ್ಣ ಪ್ರಮಾಣದಲ್ಲಿ ನಡೆದಿರಲಿಲ್ಲ. ಈ ವರ್ಷ ಸಂಭ್ರಮದಿಂದ ಜಾತ್ರೆಯನ್ನು ಕೈಗೊಳ್ಳಲಾಗುವುದು.  –ಬಾಲಚಂದ್ರ ಉಮದಿ (ಅಣ್ಣನವರು) ಅಧ್ಯಕ್ಷರು ಶಂಕರಲಿಂಗ ದೇವಸ್ಥಾನ ಟ್ರಸ್ಟ್           

 -ಕಿರಣ ಶ್ರೀಶೈಲ ಆಳಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next