Advertisement

ಹಿಂದೂ ರಾಜಪ್ರ ಭುತ್ವವೇ ನೇಪಾಳಕ್ಕೆ ಸೂಕ್ತ

12:30 AM Aug 22, 2018 | |

ನೇಪಾಳದ ನೂತನ ನಾಗರಿಕ- ಕ್ರಿಮಿನಲ್‌ ಸಂಹಿತೆಯಲ್ಲಿ ಸದ್ದು ಮಾಡುತ್ತಿರುವ ಅಂಶವೆಂದರೆ ಮತಾಂತರ  ತಡೆ ಕಾನೂನು. ಹೊಸ ಕಾನೂನಿನ ಪ್ರಕಾರ, ಮತಾಂತರಕ್ಕೆ ಯಾವುದೇ ರೀತಿಯಲ್ಲಿ ಪ್ರೋತ್ಸಾಹಿಸುವವರು ಅಥವಾ ಭಾಗಿಯಾಗುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೇ 50 ಸಾವಿರ ರೂಪಾಯಿ ದಂಡ ಮತ್ತು 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇನ್ನು ಮುಂದೆ ವಿದೇಶಿಯೊಬ್ಬ ನೇಪಾಳದಲ್ಲಿ ಮತಾಂತರ ಮಾಡುವುದು ಕಂಡುಬಂದರೆ ಒಂದು ವಾರದಲ್ಲೇ ಆತನನ್ನು ದೇಶದಿಂದ ಹೊರಹಾಕಲಾಗುತ್ತದೆ. 

Advertisement

ನೆರೆ ರಾಷ್ಟ್ರ ನೇಪಾಳದಲ್ಲಿ ಆಗಸ್ಟ್‌ 17ರಿಂದ ಜಾರಿಯಾಗಿರುವ ನೂತನ “ನಾಗರಿಕ ಮತ್ತು ಕ್ರಿಮಿನಲ್‌ ಸಂಹಿತೆ’ಯು ಆ ರಾಷ್ಟ್ರದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. 165 ವರ್ಷಗಳ ಹಿಂದೆ ರಾಜಾ ಜಂಗ್‌ ಬಹಾದ್ದೂರ್‌ ಅನುಷ್ಠಾನಕ್ಕೆ ತಂದಿದ್ದ “ಮುಲುಕಿ ಐನ್‌’ ನಾಗರಿಕ ಸಂಹಿತೆಯ ಜಾಗದಲ್ಲಿ ಬಂದಿರುವ ಈ ನೂತನ ಸಂಹಿತೆಗಳು ಕೆಲವು ಕಟ್ಟುನಿಟ್ಟಿನ ಕಾನೂನಿನಿಂದಾಗಿ ನಾಗರಿಕರಿಂದ ಮೆಚ್ಚುಗೆ ಗಳಿಸುತ್ತಿವೆಯಾದರೂ, ಅವುಗಳಲ್ಲಿನ ಕೆಲವು ನಿಯಮಗಳು ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗುವ ರೀತಿಯಲ್ಲಿವೆ ಎನ್ನುವ ಆರೋಪಗಳೂ ಕೇಳಿಬರುತ್ತಿವೆ. ಯಾರಾದರೂ ಇಬ್ಬರ ವ್ಯಕ್ತಿಗಳ ನಡುವಿನ ಸಂಭಾಷಣೆಯನ್ನು ಕದ್ದಾಲಿಸುವುದು ಅಥವಾ ರೆಕಾರ್ಡಿಂಗ್‌ ಮಾಡಿಕೊಳ್ಳುವುದು, ಇಲ್ಲವೇ ಅನುಮತಿಯಿಲ್ಲದೇ ಜನರ ಫೋಟೋ ತೆಗೆಯುವುದನ್ನು ಕ್ರಿಮಿನಲ್‌ ಅಫೆನ್ಸ್‌ನಡಿ ತರಲಾಗಿದ್ದು, ಈ ನಿಯಮವನ್ನು ಉಲ್ಲಂ ಸುವವರು 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿಯವರೆಗೆ ದಂಡ ತೆರಬೇಕಾಗುತ್ತದೆ. ಸಹಜವಾಗಿಯೇ ನೇಪಾಳದ ಮಾಧ್ಯಮ ವಲಯ ಈ ನಿಯಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪತ್ರಕರ್ತರನ್ನು ಟಾರ್ಗೆಟ್‌ ಮಾಡುವುದಕ್ಕಾಗಿಯೇ ಈ ಕಾನೂನನ್ನು ಜಾರಿ ಮಾಡಲಾಗಿದೆ ಎನ್ನುವುದು ಅವುಗಳ ವಾದ. ಆದರೆ ಒಂದು ವಲಯ ಮಾತ್ರ ಜನರ ಖಾಸಗಿತನದ ರಕ್ಷಣೆಯಲ್ಲಿ ಇದೊಂದು ಮೈಲಿಗಲ್ಲು ಎಂದು ಬಣ್ಣಿಸುತ್ತಿದೆ. 

ಇದಷ್ಟೇ ಅಲ್ಲದೆ… 
ಜೀವಾವಧಿ ಶಿಕ್ಷೆಯ ಅವಧಿಯನ್ನು 20 ವರ್ಷದಿಂದ 25 ವರ್ಷಕ್ಕೇರಿಸಲಾಗಿದೆ.

ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು 18ರಿಂದ 20ಕ್ಕೆ ಏರಿಸಲಾಗಿದೆ. 

ಋತುಸ್ರಾವದ ವೇಳೆಯಲ್ಲಿ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗಿಡುವ “ಚೌಪದಿ’ ಎನ್ನುವ ಹಿಂದೂ ಪದ್ಧತಿಯನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಯಾರಾದರೂ ಹೆಣ್ಣು ಮಕ್ಕಳಿಗೆ/ಮಹಿಳೆಯರಿಗೆ ಚೌಪದಿ ಪಾಲಿಸಲು ಒತ್ತಾಯಪಡಿಸಿದರೆ 3 ತಿಂಗಳು ಜೈಲು ಶಿಕ್ಷೆ ಅಥವಾ 3 ಸಾವಿರ ರೂಪಾಯಿ ದಂಡ(ಇಲ್ಲವೇ ಎರಡನ್ನೂ) ವಿಧಿಸಲಾಗುತ್ತದೆ. 

Advertisement

ರೈತರು ಅಥವಾ ಮಾಲೀಕರು ತಮ್ಮ ಜಾನುವಾರುಗಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು, ನಿಷ್ಕಾಳಜಿಯಿಂದ ಜಾನುವಾರುಗಳನ್ನು ಹೊರಗೆಬಿಟ್ಟರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. 

ನೂತನ ನಾಗರಿಕ/ ಕ್ರಿಮಿನಲ್‌ ಸಂಹಿತೆಯಲ್ಲಿ ಎಲ್ಲಕ್ಕಿಂತಲೂ ಸದ್ದು ಮಾಡುತ್ತಿರುವ ಅಂಶವೆಂದರೆ ಮತಾಂತರವನ್ನು ತಡೆ
ಯಲು ಕಟ್ಟುನಿಟ್ಟಿನ ಕಾನೂನನ್ನು ರೂಪಿಸಿರುವುದು. ಹೊಸ ಕಾನೂನಿನ ಪ್ರಕಾರ, ಮತಾಂತರಕ್ಕೆ ಯಾವುದಾದರೂ ರೀತಿಯಲ್ಲಿ ಪ್ರೋತ್ಸಾಹಿಸುವವರು ಅಥವಾ ಭಾಗಿಯಾಗುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೇ 50 ಸಾವಿರ ರೂಪಾಯಿ ದಂಡ ಮತ್ತು 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಯಾವುದೇ ವಿದೇಶಿಯೊಬ್ಬ ನೇಪಾಳದಲ್ಲಿ ಮತಾಂತರ ಮಾಡುವುದು ಕಂಡುಬಂದರೆ ಒಂದು ವಾರದಲ್ಲೇ ಆತನನ್ನು ದೇಶದಿಂದ ಹೊರಹಾಕುವ ಅಂಶವೂ ಹೊಸ ಕಾನೂನಿನಲ್ಲಿದೆ. ಈ ಕಾನೂನಿನಿಂದ ಜಾತ್ಯತೀತ ತತ್ವಕ್ಕೆ ಹಾನಿ ಯಾಗುತ್ತದೆ ಎಂಬ ಚರ್ಚೆಯೂ ಆರಂಭವಾಗಿದೆ. ಅಚ್ಚರಿಯ ಸಂಗತಿಯೆಂದರೆ, ನೇಪಾಳವು ಸೆಕ್ಯುಲರ್‌ ರಾಷ್ಟ್ರವಾಗುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಪ್ರಮುಖ ಕ್ರಿಶ್ಚಿಯನ್‌ ನಾಯಕ, ನೇಪಾಳ ಮಾನವಹಕ್ಕು ಆಯೋಗದ ಸದಸ್ಯ ಕೆ.ಬಿ. ರೊಕಾಯ ಈಗ ತಮ್ಮ ದೇಶಕ್ಕೆ ಜಾತ್ಯತೀತತೆ ಸರಿಹೊಂದುವುದಿಲ್ಲ ಎನ್ನುತ್ತಿದ್ದಾರೆ. ನೇಪಾಳದಲ್ಲಿ ಮತ್ತೆ ಹಿಂದೂ ರಾಜಪ್ರಭುತ್ವ ಬರಬೇಕು ಎನ್ನುವುದು ಅವರ ನಿಲುವು. ಈ ಬಗ್ಗೆ ಅವರು “ಬಿಬಿಸಿ ನೇಪಾಳ’ಕ್ಕೆ ನೀಡಿದ ಸಂದರ್ಶನ ಇಲ್ಲಿದೆ…

ಹೊಸ ನಾಗರಿಕ ಸಂಹಿತೆಯು ಮತಾಂತರವನ್ನು ನಿಷೇಧಿಸುತ್ತಿದೆ. ನಿಮ್ಮ ಅಭಿಪ್ರಾಯ?
ಸೆಕ್ಯುಲರಿಸಂ ಅಂದರೆ ನಿಜಕ್ಕೂ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳದೆಯೇ ನಾವು ಅದನ್ನು ಒಪ್ಪಿಕೊಂಡುಬಿಟ್ಟೆವು. ಆದರೆ ಹೊಸ ಸರ್ಕಾರ ಬಂದು, ಹೊಸ ಸಂವಿಧಾನವನ್ನು ರಚಿಸುವ ವೇಳೆಯಲ್ಲಿ ಇದೊಂದು ತಪ್ಪು ಎನ್ನುವುದು ನನಗರ್ಥವಾಯಿತು. ಸೆಕ್ಯುಲರಿಸಂನ ಪರಿಣಾಮಗಳನ್ನು ಅರ್ಥಮಾಡಿಕೊಳ್ಳದೆಯೇ ನಾವು ಕುರುಡಾಗಿ ಅದನ್ನು ಬೆಂಬಲಿಸಿಬಿಟ್ಟೆವು. ಸಂವಿಧಾನದಿಂದ ಜಾತ್ಯತೀತತೆಯನ್ನು ಕಿತ್ತುಹಾಕಬೇಕು… ಅಂದರೆ ದೇಶ ಮತ್ತೂಮ್ಮೆ ಹಿಂದೂ ರಾಜಪ್ರಭುತ್ವದತ್ತ ಸಾಗಬೇಕು.

ನೀವು ನೇಪಾಳದ ಕ್ರಿಶ್ಚಿಯನ್ನರ ಮುಂಚೂಣಿ ನಾಯಕ, ಹೀಗಿದ್ದರೂ ದೇಶ ಹಿಂದೂ ಕಿಂಗ್ಡಮ್‌ಗೆ ಹಿಂದಿರುಗಬೇಕು ಎಂದು ಬಯಸುತ್ತೀರಾ?
ನಾನು ಎಲ್ಲಾ ಧರ್ಮಗಳ ಪರವಾಗಿದ್ದೇನೆ. ಹೊಸ ಕಾನೂನು ಕೇವಲ ಕ್ರಿಶ್ಚಿಯನ್ನರಿಗೆ ಅಷ್ಟೇ ಅಲ್ಲ, ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ. ಹಾಗಾಗಿ ಇದು ಎಲ್ಲರಿಗೂ ಸಮಾನ ಹಕ್ಕನ್ನೇ ದಯಪಾಲಿಸುತ್ತದೆ. ಹೊಸ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿ ಇನ್ನೊಬ್ಬರ ನಂಬಿಕೆಯನ್ನು ಯಾವುದೇ ರೀತಿಯಲ್ಲೂ (ಮಾತು, ಕೃತಿ ಅಥವಾ ಸನ್ನೆ) ನೋಯಿಸುವಂತಿಲ್ಲ. 

ನಮ್ಮ ರಾಷ್ಟ್ರ ಸೆಕ್ಯುಲರಿಸಂ ಅನ್ನು ಅಪ್ಪಿಕೊಂಡ ತಕ್ಷಣ ಸರಕಾರ ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿಸಿ ಬಿಟ್ಟಿದೆ. ಧಾರ್ಮಿಕ ಸಮುದಾಯಗಳಿಗೆ ಧ್ವನಿಯೇ ಇಲ್ಲ ವಾಗಿದೆ. ಯಾವುದೇ ಧರ್ಮದ ಮುಖಂಡರಿಗೂ ಮಾತ ನಾಡಲು ಅವಕಾಶ ಸಿಗುತ್ತಿಲ್ಲ. 

ನೀವು ಶಾಲಾ ದಿನಗಳಲ್ಲಿ ಕ್ರಿಶ್ಚಿಯನ್ನರಾದವರು. ಆದರೆ ನೀವೇ ಈಗ ಹಿಂದೂ ಧರ್ಮೀಯನಂತೆ ಮಾತನಾಡುತ್ತಿದ್ದೀರಿ. ವಯಸ್ಸು ಹೀಗೆ ಮಾತನಾಡಿಸುತ್ತಿದೆಯೇ? 
ನಾನು ಈಗಲೂ ಕ್ರಿಶ್ಚಿಯನ್‌. ನನ್ನ ಏಕೈಕ ನಂಬಿಕೆಯೆಂದರೆ ಏಸು ಕ್ರಿಸ್ತ ಮಾತ್ರ. ನಾನು ನಮ್ಮ ರಾಷ್ಟ್ರದ ಬಗ್ಗೆ ಗಂಭೀರವಾಗಿ ಯೋಚಿಸಲಾರಂಭಿಸಿದಾಗ ನನಗರ್ಥವಾಯಿತು. ಕೇವಲ ಮೂರು ಅಂಶಗಳು ಮಾತ್ರ ನೇಪಾಳಕ್ಕೆ ಒಂದು ಗುರುತು(ಐಡೆಂಟಿಟಿ) ಕೊಡಬಲ್ಲವೆಂದು. ಮೊದಲನೆಯದು ದೇಶದ ಸಂಸ್ಥಾಪಕ ಶಾಹ್‌ ರಾಜವಂಶ, ಎರಡನೆಯದು ನೇಪಾಳದ ಸೇನೆ ಮತ್ತು ಮೂರನೆಯದು ಹಿಂದೂಧರ್ಮ.  ನಾವು ಈ ದೇಶವನ್ನು ಉಳಿಸಬೇಕಾದರೆ ಮುಂದಿನ ತಲೆಮಾರಿನ ಜನರು ನೇಪಾಳದಲ್ಲಿ ನೇಪಾಳಿಗರಾಗೇ ಉಳಿಯಬೇಕಾದರೆ ನಾವು ಮತ್ತೂಮ್ಮೆ ರಾಜಪ್ರಭುತ್ವವನ್ನು ತರಬೇಕು ಮತ್ತು ಸೆಕ್ಯುಲರಿಸಂ ಅನ್ನು ಕೈಬಿಡಬೇಕು. ಇದನ್ನು ಸಾಧಿಸಲು ನೇಪಾಳದ ಸೈನ್ಯ ಸಹಕರಿಸಬೇಕು. 

ನೀವು ಮಾವೋವಾದಿಯಾಗಿದ್ದವರು, ಆದರೀಗ ರಾಜಾಡಳಿತ ಬರಬೇಕು ಎಂದು ಬಯಸುತ್ತಿದ್ದೀರಲ್ಲ? 
ಹೌದು. ಈ ಸೆಕ್ಯುಲರಿಸಂ ಅಜೆಂಡಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಹೇರಿಬಿಟ್ಟವು. ಹಿಂದೆ ನಾನೂ ಅವುಗಳ ಏಜೆಂಟ್‌ ಆಗಿ ಕೆಲಸ ಮಾಡಿದೆ. ಆದರೆ ನಾನೀಗ ಒಪ್ಪಿಕೊಳ್ಳುತ್ತಿದ್ದೇನೆ, ಆಗ ನನಗೆ ಇದೆಲ್ಲ ಗೊತ್ತಿರಲಿಲ್ಲ. ಈಗ ಮತ್ತೆ ನೇಪಾಳದಲ್ಲಿ ಹಿಂದೂ ರಾಜಪ್ರಭುತ್ವವನ್ನು ತರುವುದು ಅಸಾಧ್ಯವೇನಲ್ಲ. ಇಲ್ಲಿ ಯಾವುದೂ ಅಸಾಧ್ಯವಲ್ಲ, ಅದರಲ್ಲೂ ನಮ್ಮಂತೆ ನಂಬಿಕೆಯಿರುವವರು ಇರುವಾಗ.

ಹಾಗಿದ್ದರೆ ನೇಪಾಳದಲ್ಲಿ ಜನಾಭಿಪ್ರಾಯ ಸಂಗ್ರಹವಾಗಬೇಕು ಎನ್ನುತ್ತೀರಾ? 
ಇಲ್ಲ, ನಾವು ಜನಾಭಿಪ್ರಾಯ ಸಂಗ್ರಹಿಸಬಾರದು. ನೇಪಾಳದ ಮೂಲ ಐಡೆಂಟಿಟಿಯನ್ನು ಮತಗಳ ಮೂಲಕ ಅಳೆಯುವುದು ಸರಿಯೇ? ಸುಶಿಲ್‌ ಕೊಯಿರಾಲಾ ಮತ್ತು ಗಿರಿಜಾ ಕೊಯಿರಾಲಾ ಕೂಡ “ಅದ್ಹೇಗೆ ಸಂವಿಧಾನದಲ್ಲಿ ಸೆಕ್ಯುಲರಿಸಂ ಸೇರಿಕೊಂಡುಬಿಟ್ಟಿತೋ ತಮಗೂ ಗೊತ್ತಿಲ್ಲ’ ಎಂದು ನನ್ನ ಮುಂದೆ ಒಪ್ಪಿಕೊಂಡರು. ಸೆಕ್ಯುಲರಿಸಂ, ರಿಪಬ್ಲಿಕನಿಸಂ ಮತ್ತು ಫೆಡರಲಿಸಂಗಳು ನೇಪಾಳದ ಹಿತಾಸಕ್ತಿಯ ಪರವಾಗಿಲ್ಲ. ಈಗ ನಾವು ಅವುಗಳ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ.

ಕೆ.ಬಿ. ರೊಕಾಯ, ಕ್ರಿಶ್ಚಿಯನ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next