ಶಿವಮೊಗ್ಗ : ”ಹಿಂದೂ-ಹಿಂದುತ್ವ ಅನ್ನೋದು ಒಂದೇ ನಾಣ್ಯದ ಎರಡು ಮುಖ.ಸನಾತನ ಧರ್ಮ ಬೇರೆ ಅಲ್ಲ. ಹಿಂದೂ, ಹಿಂದುತ್ವ ಬೇರೆ ಅಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ನೀಡಿದ್ದಾರೆ.
ಹಿಂದುತ್ವದ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸೊರಬದಲ್ಲಿ ಪ್ರತಿಕ್ರಿಯಿಸಿ , ಹಿಂದುತ್ವ ಎಲ್ಲವನ್ನೂ ಒಪ್ಪಿಕೊಳ್ಳುವಂತದ್ದು.ದೇವನೊಬ್ಬ ನಾಮ ಹಲವು ಎಂಬ ತತ್ವ ಹಿಂದುತ್ವದಲ್ಲಿದೆ. ಹಿಂದೂ ಎಲ್ಲಾರಲ್ಲೂ ಕೂಡ ಸಮಾನತೆ ಬಯಸುತ್ತಾನೆ. ಇವರು ಸಮಾನತೆಯನ್ನು ಬಯಸಲ್ಲ. ಜಾತಿ ಸಮಾನತೆ ಬಯಸಲ್ಲ. ಸಿದ್ದರಾಮಯ್ಯ ಹಿಂದುತ್ವ ಒಪ್ಪಲ್ಲ ಅಂದರೆ ಸಮಾನತೆ ಬೇಕಾಗಿಲ್ಲ ಎಂದು ಅರ್ಥ.ಅವರಿಗೆ ಜಾತೀಯತೆ, ಅಸ್ಪೃಶ್ಯತೆ ಬೇಕು.ಅದಕ್ಕಾಗಿಯೇ ಅವರು ಪರಮೇಶ್ವರ್ ಸೋಲಿಸುವ ಕೆಲಸ ಮಾಡಿದರು ಎಂದು ಕಿಡಿ ಕಾರಿದರು.
ಸಮಾನತೆ ಬಯಸದ ಅವರು ಹಿಂದುತ್ವ ಒಪ್ಪಿಕೊಳ್ಳದಿರುವುದು ಸರಿ ಇದೆ.ಜಾತಿ ಬೇಳೆ ಬೇಯಿಸುವ ರಾಜಕೀಯ ಮಾ ಡುತ್ತಿರುವುದು ಅವರ ಹೇಳಿಕೆಯಿಂದ ಸ್ಪಷ್ಟ ಎಂದರು.
ಸೊರಬದಲ್ಲಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣಾ ಸಮಯದಲ್ಲಿ ಇದು ಸಾಮಾನ್ಯ, ಎಲ್ಲವನ್ನು ಮೀರಿ, ಬಿಜೆಪಿ ಇಲ್ಲಿ ಗೆಲ್ಲುತ್ತದೆ. ರಾಜ್ಯ ಸಮಿತಿ ಚುನಾವಣೆಗೆ ಅಭ್ಯರ್ಥಿ ಪಟ್ಟಿ ಕಳುಹಿಸುತ್ತದೆ. ಟಿಕೆಟ್ ನೀಡುವ ಬಗ್ಗೆ ಪಾರ್ಲಿಮೆಂಟ್ರಿ ಬೋರ್ಡ್ ನಿರ್ಧಾರ ಮಾಡುತ್ತದೆ. ನಮ್ಮದು ಜೆಡಿಎಸ್ ರೀತಿ ಫ್ಯಾಮಿಲಿ ಶೋ ಅಲ್ಲ ಎಂದರು.
Related Articles
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬ್ರಾಹ್ಮಣ ಸಮುದಾಯದ ಕುರಿತು ಮಾಜಿ ಸಿಎಂ ಹೆಚ್ ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಬೆಂಬಲ ನೋಡಿ ಕುಮಾರಸ್ವಾಮಿಗೆ ಹತಾಶೆ ಆಗಿದೆ. ಕಳೆದ ಬಾರಿ ಹಾಸನದಲ್ಲಿ ಗೆದ್ದಿದ್ದೇ ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲ.ಈ ಬಾರಿ ಇನ್ನೂ ನಾಲ್ಕು ಸ್ಥಾನ ಗೆಲ್ಲುತ್ತೇ ಅನ್ನುವ ವರದಿ ಅವರಿಗೆ ಸಿಕ್ಕಿದೆ. ಹಾಸನದಲ್ಲೂ ಈ ಬಾರಿ 7 ರಲ್ಲಿ 5 ಕ್ಷೇತ್ರ ಗೆಲ್ಲುತ್ತೇವೆ. ಹೀಗಾಗಿ ನಿರಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.
ಸಾಮಾನ್ಯ ಕಾರ್ಯಕರ್ತನಿಗೂ ಸಿಎಂ, ಪಿಎಂ ಆಗುವ ಯೋಗ್ಯತೆ ಇದೆ. ಚಹಾ ಮಾರುವ ಮೋದಿ ಪ್ರಧಾನಿ, ರೈತನ ಮಗ ಯಡಿಯೂರಪ್ಪ ಸಿಎಂ ಆದರು. ಆದರೆ ಅವರ ಪಕ್ಷದಲ್ಲಿ ಹಾಗೇ ಇಲ್ಲ.ಹಾಸನ ಅಂದರೇ ಭವಾನಿ ರೇವಣ್ಣ ಕ್ಯಾಂಡಿಡೇಟ್ ಆಗಬೇಕು. ಎಂಎಲ್ಸಿ ಟಿಕೆಟ್ ಸೂರಜ್, ಎಂಪಿ ಟಿಕೆಟ್ ಬೇಕು ಅಂದರೆ ಪ್ರಜ್ವಲ್ ರೇವಣ್ಣರಿಗೆ ಕೊಡಬೇಕು. ರಾಮನಗರ ಬಿಟ್ಟು ಕೊಡಲು ಅನಿತಾ ಕುಮಾರಸ್ವಾಮಿ ಅವರಿಗೆ ಯೋಗ್ಯತೆ ಇರೋದು, ಬಿಟ್ಟು ಕೊಟ್ಟರೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾತ್ರ.ಮತ್ತೆ ಅದನ್ನೆಲ್ಲಾ ಕರಿಯೋದು ತ್ಯಾಗ ಎಂದು. ಅವರ ಪಕ್ಷದಲ್ಲಿ ದೊಡ್ಡಗೌಡ್ರು, ಸಣ್ಣಗೌಡ್ರು, ಮರೀಗೌಡ್ರಿಗೆ ಮಾತ್ರ ಅವಕಾಶ ಇರುವುದು ಎಂದು ಕಿಡಿ ಕಾರಿದರು.