Advertisement

ಸಂಪ್ರದಾಯ ಮುರಿಯಲು ಸಜ್ಜಾಗಿದೆಯೇ ದೇವಭೂಮಿ?

11:53 PM Nov 13, 2022 | Team Udayavani |

1971ರ ಬಳಿಕ ಹಿಮಾಚಲ ಪ್ರದೇಶದಲ್ಲಿ (1985 ಹೊರತುಪಡಿಸಿ) ಯಾವತ್ತೂ ಒಂದು ಬಾರಿ ಆಯ್ಕೆಯಾದ ಸರಕಾರ ಮತ್ತೊಂದು ಬಾರಿ ಗೆದ್ದಿದ್ದಿಲ್ಲ. ಹಲವು ದಶಕಗಳಿಂದಲೂ ಹಿಮಾಚಲದ ಜನರು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ “ಅದಲು-ಬದಲು’ ಆಟವನ್ನು ಆಡುತ್ತಾ ಬಂದಿದ್ದಾರೆ. ಈ ಬಾರಿಯೂ ಇದೇ ಸಂಪ್ರದಾಯವನ್ನು ಮುಂದುವರಿಸುತ್ತಾರೋ ಅಥವಾ ಬಿಜೆಪಿಯನ್ನೇ ಆಯ್ಕೆ ಮಾಡಿ ಹೊಸ ಇತಿಹಾಸ ನಿರ್ಮಿಸುತ್ತಾರೋ ಕಾದು ನೋಡಬೇಕು.

Advertisement

ಹಿಮಾಚಲ ಪ್ರದೇಶ… ಹಿಮಾಲಯದ ತಪ್ಪಲಲ್ಲಿರುವ ಪುಟ್ಟ ರಾಜ್ಯ. ಮೈಕೊರೆಯುವ ಚಳಿಯನ್ನೇ ಸೀಳಿ, ಇಡೀ ರಾಜ್ಯವನ್ನು ಬೆಚ್ಚಗಿರಿಸಿದ್ದ ರಾಜಕೀಯದ ಕಾವು ಶನಿವಾರ(ನ.12)ವಷ್ಟೇ ತಣ್ಣಗಾಗಿದೆ. ಕಳೆದ 5 ದಶಕಗಳಿಂದಲೂ ಇಲ್ಲಿ ಕಾಂಗ್ರೆಸ್‌ ಬಿಟ್ಟರೆ ಬಿಜೆಪಿ, ಬಿಜೆಪಿ ಬಿಟ್ಟರೆ ಕಾಂಗ್ರೆಸ್‌. ಮೂರನೆಯವರ ಕಡೆ ತಲೆ ಎತ್ತಿಯೂ ನೋಡದ ಜನ. ಈ ಟ್ರೆಂಡ್‌ ಬದಲಿಸಬೇಕೆಂದು ಪಣತೊಟ್ಟು ಹಲವು ಬಾರಿ ಹೊಸ ಪಕ್ಷಗಳು ಹುಟ್ಟಿದ್ದೂ ಆಗಿವೆ, ಅದೇ ವೇಗದಲ್ಲಿ ಕಣ್ಮರೆಯೂ ಆಗಿವೆ.

ಹಿಮಾಚಲ ಪ್ರದೇಶದ ಈ ಸಾಂಪ್ರದಾಯಿಕ ಟ್ರೆಂಡ್‌ಗೆ ಅಂತ್ಯ ಹಾಡಬೇಕೆಂಬುದು ಬಿಜೆಪಿಯ ಮಹದಾಸೆ. ರಾಜ್ಯವು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಂದರೆ 1971ರಿಂದಲೂ ಇಲ್ಲಿ ಆವರ್ತನ ಪದ್ಧತಿಯಲ್ಲೇ ಸರಕಾರಗಳ ಆಯ್ಕೆ ನಡೆದಿದೆ. ಇದಕ್ಕೆ ಈ ಬಾರಿ ಬಿಜೆಪಿ ಪೂರ್ಣವಿರಾಮ ಹಾಕಲಿದೆಯೇ ಅಥವಾ ಹಳೆಯ ಪದ್ಧತಿಯೇ ಮುಂದುವರಿದು, ಹೊಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರಥ್ಯದಲ್ಲಿ ಕಾಂಗ್ರೆಸ್‌ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿಯಲಿದೆಯೇ? ಈ ಪ್ರಶ್ನೆಯೊಂದಿಗೇ ಹಿಮಾಚಲ ಪ್ರದೇಶದ ಚುನಾವಣ ಹಬ್ಬಕ್ಕೆ ತೆರೆಬಿದ್ದಿದೆ. ಶೇ.74ರಷ್ಟು ಮಂದಿ ಹಕ್ಕು ಚಲಾಯಿಸಿ ರಾಜ್ಯದ ಭವಿಷ್ಯವನ್ನು ಭದ್ರವಾಗಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಬಿಜೆಪಿಯ ಎಲ್ಲ ನಾಯಕರೂ “ಡಬಲ್‌ ಎಂಜಿನ್‌’ ಸರಕಾರದ ಪ್ರಯೋ­ಜನಗಳನ್ನೇ ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ. ವಿಪಕ್ಷ ಕಾಂಗ್ರೆಸ್‌ ರಾಜ್ಯದಲ್ಲಿ ಬೆಲೆಯೇರಿಕೆ, ನಿರುದ್ಯೋಗ, ಪಿಂಚಣಿ ಯೋಜನೆಯ ಅಸ್ತ್ರವನ್ನು ಪ್ರಯೋಗಿಸಿ, ಆಡಳಿತವಿರೋಧಿ ಅಲೆಯ ಲಾಭ ಪಡೆಯಲು ಪ್ರಯತ್ನ ನಡೆಸಿದೆ.

ಪ್ರಧಾನಿ ಮೋದಿಯವರ ವರ್ಚಸ್ಸು, ಜೈರಾಂ ಠಾಕೂರ್‌ ಅವರ ಅಭಿವೃದ್ಧಿ ಕೆಲಸಗಳು, ಕೇಂದ್ರ ಸಚಿವರ ದಂಡು, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಬಿಜೆಪಿಯ ಚಾಣಕ್ಯ ಅಮಿತ್‌ ಶಾ, ಹಿಮಾಚಲದವರೇ ಆದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತಿತರ ಘಟಾನುಘಟಿಗಳ ಪ್ರಚಾರ, ರ್ಯಾಲಿಗಳು ಹಿಮಾಚಲದಲ್ಲಿ ಹೊಸ ಇತಿಹಾಸ ಸೃಷ್ಟಿಗೆ ಮುನ್ನುಡಿ ಬರೆಯಲೂಬಹುದು. ಇದಕ್ಕೆ ಪೂರಕವೆಂಬಂತೆ ಬಹುತೇಕ ಎಲ್ಲ ಚುನಾವಣ ಪೂರ್ವ ಸಮೀಕ್ಷೆಗಳೂ ಹಿಮಾಚಲ ಮತ್ತೆ ಬಿಜೆಪಿ ತೆಕ್ಕೆಗೆ ಬೀಳಲಿದೆ ಎಂದು ಭವಿಷ್ಯ ನುಡಿದಿವೆ.

Advertisement

ಇನ್ನೊಂದೆಡೆ ಈ ಬಾರಿ ಆಮ್‌ ಆದ್ಮಿ ಪಕ್ಷವೂ ಹಿಮಾಚಲ ಪ್ರದೇಶದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಪಂಜಾಬ್‌ನಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಆಪ್‌ ನಾಯಕ ಅರವಿಂದ ಕೇಜ್ರಿವಾಲ್, ದಿಲ್ಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಹಿಮಾಚಲದತ್ತ ಮುಖ ಮಾಡಿದ್ದರು. ಆರಂಭದಲ್ಲಿ ದೊಡ್ಡ ಮಟ್ಟದ ರ್‍ಯಾಲಿಗಳನ್ನೂ ನಡೆಸಿದ್ದರು. ಅನಂತರದಲ್ಲಿ ಅಲ್ಲಿನ ಜನರ ರಾಜಕೀಯ ಲೆಕ್ಕಾಚಾರ ಬೇರೆಯೇ ಇದೆ ಎಂಬುದನ್ನು ಮನಗಂಡೋ ಏನೋ ಹಿಮಾಚಲದಲ್ಲಿ ಪ್ರಚಾರದ ವೇಗಕ್ಕೆ ಬ್ರೇಕ್‌ ಹಾಕಿ, ಗುಜರಾತ್‌ ಕಡೆ ಸಂಪೂರ್ಣವಾಗಿ ಗಮನ ನೆಟ್ಟರು. ಕಾಂಗ್ರೆಸ್‌ನ ಗೆಲ್ಲುವ ಕುದುರೆಯಾಗಿದ್ದ ದಿ| ವೀರಭದ್ರ ಸಿಂಗ್‌ ಅವರ ಅನುಪಸ್ಥಿತಿಯಿಂದ ಮಂಕಾಗಿದ್ದ ಕಾಂಗ್ರೆಸ್‌ಗೆ, ಆಪ್‌ನ ಈ ನಡೆ ಹೊಸ ಹುಮ್ಮಸ್ಸು ಮೂಡಿಸಿತು. ವೀರಭದ್ರ ಸಿಂಗ್‌ ಅವರ ಪತ್ನಿ ಪ್ರತಿಭಾ ಸಿಂಗ್‌, ಪುತ್ರ ವಿಕ್ರಮಾದಿತ್ಯ ಸಿಂಗ್‌ ಆದಿಯಾಗಿ ಹಲವು ನಾಯಕರು ಪ್ರಚಾರದ ಅಖಾಡಕ್ಕೆ ಧುಮುಕಿದರು.

ಸಂಕೀರ್ಣ ರಾಜಕೀಯ ಸಮೀಕರಣದ ಹೊರತಾ­ಗಿಯೂ “ದೇವಭೂಮಿ’ಯು “ಆಡಳಿತ ವಿರೋಧಿ’ ರಿವಾಜನ್ನು ಅನುಸರಿ­ಸುತ್ತಾ ಬಂದಿದೆ. 1985ರಲ್ಲಿ ಕಾಂಗ್ರೆಸ್‌ನ ವೀರಭದ್ರ ಸಿಂಗ್‌ ಅವಧಿಪೂರ್ವವಾಗಿ ಮಧ್ಯಾಂತರ ಚುನಾವಣೆಗೆ ಹೋದಾಗ ಸತತವಾಗಿ ಕಾಂಗ್ರೆಸ್‌ 2 ಬಾರಿ ಅಧಿಕಾರ ಹಿಡಿದಿದ್ದು ಹೊರತು­ಪಡಿಸಿದರೆ, 1971ರ ಬಳಿಕ ಇಲ್ಲಿ ಯಾವತ್ತೂ ಒಂದು ಬಾರಿ ಆಯ್ಕೆಯಾದ ಸರಕಾರ ಮತ್ತೂಂದು ಬಾರಿ ಗೆದ್ದಿದ್ದಿಲ್ಲ. ಹಲವು ದಶಕಗಳಿಂದಲೂ ಹಿಮಾಚಲದ ಜನರು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ “ಅದಲು-ಬದಲು’ ಆಟವನ್ನು ಆಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, ಮತ ಹಂಚಿಕೆಯ ವಿಚಾರದಲ್ಲೂ ಫ‌ಲಿತಾಂಶದಲ್ಲೂ ಪ್ರತೀ ಬಾರಿಯೂ ಹೆಗಲೆಣೆಯ ಪೈಪೋಟಿಗೇ ರಾಜ್ಯ ಸಾಕ್ಷಿಯಾಗಿದೆ. ಹೀಗಾಗಿ ಈ ಬಾರಿಯೂ ಇಲ್ಲಿ ನೇರ ಕದನ ನಡೆದಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ. ಇದು ಆಮ್‌ ಆದ್ಮಿ ಪಕ್ಷದ ಗಮನಕ್ಕೂ ಬಂದಿರಬಹುದು.

ಬಂಡಾಯದ ಬೇಗೆ: ಪ್ರಸಕ್ತ ಚುನಾವಣೆಯಲ್ಲಿ ಎರಡೂ ಪಕ್ಷಗಳು ಬಂಡಾಯದ ಬಿಸಿಯನ್ನು ಎದುರಿಸಿವೆ. ಆಡಳಿತಾ­ರೂಢ ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಕಾರಣ ಬಂಡಾಯವೆದ್ದ 20 ಅಭ್ಯರ್ಥಿಗಳು, ಪಕ್ಷಕ್ಷೆ ದೊಡ್ಡ ತಲೆನೋವಾಗಿ ಪರಿಣಮಿ­ಸಿದ್ದಾರೆ. ಈ ಬಂಡಾಯವು 6ರಿಂದ 7 ಅಸೆಂಬ್ಲಿ ಕ್ಷೇತ್ರಗಳ ಫ‌ಲಿತಾಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸ್ವತಃ ಸಿಎಂ ಜೈರಾಂ ಠಾಕೂರ್‌ ಅವರೇ ಹೇಳಿಕೊಂಡಿ­ದ್ದರು. ಮತ್ತೊಂದು ಕಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಧರ್ಮಪಾಲ್‌ ಠಾಕೂರ್‌ ಖಂಡ್‌ರಂತಹ ಪ್ರಭಾವಿ ಮುಖಂಡ ಸೇರಿದಂತೆ ಕಾಂಗ್ರೆಸ್‌ನ 26 ನಾಯಕರು ಬಿಜೆಪಿಗೆ ಸೇರ್ಪಡೆ­ಯಾಗಿದ್ದರು. ಇವರ ದಿಢೀರ್‌ ನಿಷ್ಠೆ ಬದಲಾವಣೆಯು ಕಾಂಗ್ರೆಸ್‌ಗೆ ದೊಡ್ಡ ಮಟ್ಟಿನ ಆಘಾತವನ್ನೇ ಉಂಟುಮಾಡಿತ್ತು.

ಪಿಂಚಣಿ ಅಸ್ತ್ರ: 2004ಕ್ಕೂ ಹಿಂದೆ ಜಾರಿಯಲ್ಲಿದ್ದ ಪಿಂಚಣಿ ವ್ಯವಸ್ಥೆ ಮರು ಜಾರಿಯೇ ಕಾಂಗ್ರೆಸ್‌ ಪ್ರಚಾರದ ಪ್ರಮುಖ ಸರಕಾಗಿತ್ತು. ಹಿಮಾಚಲ ಪ್ರದೇಶದಲ್ಲಿ ಸುಮಾರು 2 ಲಕ್ಷದಷ್ಟು ಸರಕಾರಿ ನೌಕರರಿದ್ದಾರೆ. ಇವರ ಮತಗಳು ನಿರ್ಣಾಯಕ­ವಾಗಿರುವ ಕಾರಣ ಪ್ರಿಯಾಂಕಾ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ನಾಯಕರೂ ಪ್ರಚಾರದ ವೇಳೆ ಪಿಂಚಣಿ ಅಸ್ತ್ರವನ್ನೇ ಹೆಚ್ಚಾಗಿ ಬಳಸಿದ್ದನ್ನು ಗಮನಿಸಬಹುದು. ಹಳೆಯ ಪಿಂಚಣಿ ಪ್ರಕಾರ, ಒಬ್ಬ ವ್ಯಕ್ತಿಗೆ ಮಾಸಿಕ ವೇತನ 35 ಸಾವಿರ ರೂ.ಗಳಾಗಿದ್ದರೆ ಆತನಿಗೆ ನಿವೃತ್ತಿ ಅನಂತರ ವೇತನದ ಅರ್ಧದಷ್ಟು ಅಂದರೆ 17,500 ರೂ. ಪಿಂಚಣಿ ಸಿಗುತ್ತಿತ್ತು. ಆದರೆ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಆತನಿಗೆ ಸಿಗುತ್ತಿರುವುದು ಕೇವಲ 1,658 ರೂ. ಇದು ಸಹಜವಾಗಿಯೇ ನೌಕರರಲ್ಲಿ ಆಕ್ರೋಶ ಹುಟ್ಟಿಸಿದೆ. ಹೀಗಾಗಿ ಸರಕಾರಿ ನೌಕರರೇನಾದರೂ ಮನಸ್ಸು ಮಾಡಿದರೆ ವಿಜಯಲಕ್ಷಿ ಕಾಂಗ್ರೆಸ್‌ನತ್ತ ವಾಲಬಹುದು. ಜತೆಗೆ ಕಳೆದ ವರ್ಷ ಇಲ್ಲಿ 3 ವಿಧಾನಸಭಾ ಕ್ಷೇತ್ರಗಳು, ಒಂದು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನಾಲ್ಕೂ ಸೀಟುಗಳು ಕಾಂಗ್ರೆಸ್‌ ಪಾಲಾಗಿವೆ. ಪಕ್ಷದಲ್ಲಿ ಭರವಸೆ ಚಿಗುರಲು ಇದು ಕೂಡ ಒಂದು ಕಾರಣ.

ಬಿಜೆಪಿ ಪರ ಸ್ತ್ರೀಯರ ಒಲವು: ಬಿಜೆಪಿಯು “ಪಿಂಚಣಿ ಯೋಜನೆ’ ಬಗ್ಗೆ ಚಕಾರವೆತ್ತದೇ ಬೇರೆ ವಿಚಾರಗಳತ್ತಲೇ ಮತದಾರರ ಗಮನ ಸೆಳೆಯಲು ಯತ್ನಿಸಿತ್ತು. ಸಮಾನ ನಾಗರಿಕ ಸಂಹಿತೆ, 8 ಲಕ್ಷ ಉದ್ಯೋಗ ಸೃಷ್ಟಿ, ಸರಕಾರಿ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ, ಪದವೀಧರ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ, ಶಾಲಾ ವಿದ್ಯಾರ್ಥಿನಿ­ಯರಿಗೆ ಸೈಕಲ್‌ ಮುಂತಾದ ಆಶ್ವಾಸನೆಗಳನ್ನು ನೀಡಿತ್ತು. “ಮಹಿಳಾ ಸಶಕ್ತೀಕರಣ’ ಎಂಬ ಲೇಬಲ್‌ ಹಾಕಿಯೇ ಪ್ರಣಾಳಿಕೆ­ಯನ್ನು ಪ್ಯಾಕ್‌ ಮಾಡಿತ್ತು. ಇನ್ನು ಕಾಂಗ್ರೆಸ್‌ ಪ್ರತೀ ತಿಂಗಳೂ ಮಹಿಳೆ­ಯರಿಗೆಲ್ಲರಿಗೂ 1,500 ರೂ. ನೀಡುವುದಾಗಿ ಘೋಷಿ­ಸಿತ್ತು.

ಕಾಂಗ್ರೆಸ್‌ನ ಭರಪೂರ ಭರವಸೆಗಳ ಹೊರತಾಗಿಯೂ ಬಿಜೆಪಿಯು ಮಹಿಳಾ ಮತದಾರರ ಬೆಂಬಲವನ್ನು ನೆಚ್ಚಿ­ಕೊಂಡಿದೆ. ಹಿಮಾಚಲದ ಮಹಿಳೆ­ಯರೂ ಕಮಲ ಪಕ್ಷದ ಬಗ್ಗೆ ಸ್ವಲ್ಪ ಹೆಚ್ಚೇ ಒಲವು ಹೊಂದಿದ್ದಾರೆ.
ಈಗಾಗಲೇ ಕಾಂಗ್ರೆಸ್‌ ದೇಶಾದ್ಯಂತ ಸರಣಿ ಸೋಲು­ಗಳನ್ನು ಎದುರಿಸಿ ಹೈರಾಣಾಗಿದೆ. ಕಳೆದ 2 ವರ್ಷಗಳಲ್ಲಿ 9 ರಾಜ್ಯಗಳನ್ನು ಕಳೆದುಕೊಂಡಿದೆ. ಭಾರತ್‌ ಜೋಡೋ ಯಾತ್ರೆಯಲ್ಲಿ ತಲ್ಲೀನರಾಗಿರುವ ರಾಹುಲ್‌ ಗಾಂಧಿಯ­ವರಂತೂ ಹಿಮಾಚಲ­ದಲ್ಲಿ ಈ ಬಾರಿ ಪ್ರಚಾರವನ್ನೇ ನಡೆಸಿಲ್ಲ. ಕಾಂಗ್ರೆಸ್‌ ಅಧ್ಯಕ್ಷ ಹು¨ªೆಗೆ ಏರಿದ ಬಳಿಕ ಮಲ್ಲಿ­ಕಾರ್ಜುನ ಖರ್ಗೆ ಅವರು ಎದುರಿಸುತ್ತಿರುವ ಮೊದಲ ಚುನಾವಣೆಯಿದು. ಅವರಿಗೆ ಇದು ಒಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯೂ ಹೌದು. ಆದರೆ ಅವರು ಈ ಪರೀಕ್ಷೆಯಲ್ಲಿ ಗೆಲ್ಲುತ್ತಾರಾ ಎಂಬುದೇ ಈಗಿರುವ ಪ್ರಶ್ನೆ.

ಸಮೀಕ್ಷೆಗಳು ಹೇಳಿರುವಂತೆ ದೇವಭೂಮಿಯಲ್ಲಿ ವಿಜಯ­ಮಾಲೆ ಧರಿಸುವುದು ತಾನೇ ಎಂಬ ವಿಶ್ವಾಸದಲ್ಲಿದೆ ಬಿಜೆಪಿ. ಹಿಮಾಚಲವು ಹಿಂದಿನಿಂದಲೂ ಅನುಸರಿಸಿ­ಕೊಂಡು ಬಂದಿರುವ ಸಂಪ್ರದಾಯವನ್ನೇ ಈ ಬಾರಿಯೂ ಪಾಲಿಸಲಿದೆ ಎಂಬ ಭರವಸೆಯನ್ನು ಎದೆಯಲ್ಲಿ ಅದುಮಿಟ್ಟು ಕಾಯುತ್ತಿದೆ ಕಾಂಗ್ರೆಸ್‌. ಯಾರ ನಂಬಿಕೆ ಏನೇ ಆಗಿದ್ದರೂ ಮತದಾರನ ಲೆಕ್ಕಾಚಾರ ಏನಿತ್ತು ಎಂದು ತಿಳಿಯಲು ಡಿ.8ರ ವರೆಗೆ ಕಾಯಲೇಬೇಕು.

-ಹಲೀಮತ್‌ ಸಅದಿಯಾ

Advertisement

Udayavani is now on Telegram. Click here to join our channel and stay updated with the latest news.

Next