Advertisement

ಹಿಜಾಬ್‌ ತೀರ್ಪು ಬೆನ್ನಲ್ಲೇ ಖಾಕಿ ಕಟ್ಟೆಚ್ಚರ

02:23 PM Mar 16, 2022 | Team Udayavani |

ಬೆಳಗಾವಿ: ಹಿಜಾಬ್‌ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪು ಪ್ರಕಟವಾಗುತ್ತಿದ್ದಂತೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

Advertisement

ಜಿಲ್ಲೆಯ ಶಾಲಾ-ಕಾಲೇಜುಗಳ ಎದುರು ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜಿಲ್ಲೆಯಾದ್ಯಂತ 144 ಕಲಂ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಜನರು ಗುಂಪುಗೂಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

ಹಿಜಾಬ್‌ ಸಂಬಂಧಿಸಿದಂತೆ ಪ್ರತಿಭಟನೆ, ಸಂಭ್ರಮಾಚರಣೆ ಆಗದಂತೆ ಪೊಲೀಸರು ನಿಗಾ ಇಟ್ಟಿದ್ದರು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಕಾಲೇಜುಗಳ ಎದುರು ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾವುದೇ ಶಾಲಾ-ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್‌ಗ ಪರ-ವಿರೋಧ ವ್ಯಕ್ತಪಡಿಸಿದ್ದು ಕಂಡು ಬಂದಿಲ್ಲ.

ಪೊಲೀಸ್‌ ಕಮೀಷನರ್‌ ಡಾ. ಬೋರಲಿಂಗಯ್ಯ, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ನಗರದೆಲ್ಲೆಡೆ ಸುತ್ತು ಹಾಕಿದರು.

 

Advertisement

ತೀರ್ಪಿನ ನಂತರವಾದರೂ ಕಾಂಗ್ರೆಸ್‌ಗೆ ಬುದ್ಧಿ ಬರಲಿ: ಅಭಯ

ಹಿಜಾಬ್‌ ಕುರಿತು ಬಂದಿರುವ ಹೈಕೋರ್ಟ್‌ ತೀರ್ಪಿನ ನಂತರವಾದರೂ ಹಿಜಾಬ್‌ ಪರ ಮಾತನಾಡುವುದನ್ನು ಕಾಂಗ್ರೆಸ್‌ನವರು ನಿಲ್ಲಿಸಲಿ. ಆ ಪಕ್ಷದವರಿಗೆ ಇನ್ನಾದರೂ ಬುದ್ಧಿ ಬರಲಿ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಮಾಧ್ಯಮದವರೊದಿಗೆ ಮಾತನಾಡಿದ ಅವರು, ಕಾನೂನು ಗೊತ್ತಿದ್ದರೂ ಹಿಬಾಜ್‌ ಪರವಾಗಿ ನಿಂತು ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನ ಎಸ್‌ಎಫ್‌ಐ ಸೇರಿದಂತೆ ಇತರೆ ವಿದ್ಯಾರ್ಥಿ ಸಂಘಟನೆಗಳ ಮೂಲಕ ಕಾಂಗ್ರೆಸ್‌ನವರು ನಡೆಸಿದ್ದರು. ರಾಜ್ಯದಲ್ಲಿ ಶಾಂತಿ ಭಂಗವನ್ನುಂಟು ಮಾಡಿದ್ದರು. ಈಗಲಾದರೂ ಅ ಪಕ್ಷದವರಿಗೆ ಬುದ್ಧಿ ಬರಲಿ ಎಂದರು. ಹಿಜಾಬ್‌ ವಿವಾದ ಪ್ರಾರಂಭವಾದ್ದರಿಂದ ಹಿಂದೂಗಳು ಮತ್ತು ಹಿಂದೂ ಸಂಘಟನೆಗಳ ಬಗ್ಗೆ ಅಪಪ್ರಚಾರವನ್ನು ಕಾಂಗ್ರೆಸ್‌ನವರು ನಡೆಸಿದ್ದರು. ಅದಕ್ಕೆ ಹೈಕೋರ್ಟ್‌ ಉತ್ತರ ಕೊಟ್ಟಿದೆ. ಒಂದು ಸಮಾಜವನ್ನು ಕಾನೂನಿಗೆ ವಿರುದ್ಧವಾಗಿ ಎತ್ತಿ ಕಟ್ಟಿ, ಅವರ ತಲೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದವರಿಗೆ ನ್ಯಾಯಾಲಯ ತಡೆ ನೀಡಿದೆ. ಹೈಕೋರ್ಟ್‌ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದರು. ಹಿಜಾಬ್‌ ಧರಿಸಿ ಬರುವುದು ಸರಿಯಲ್ಲ ಎಂದು ಸರ್ಕಾರವೂ ಹೇಳಿತ್ತು. ಹೈಕೋರ್ಟ್‌ ತೀರ್ಪನ್ನು, ಹಿಜಾಬ್‌ ಪರ ಇರುವವರೊಂದಿಗೆ ಕಾಂಗ್ರೆಸ್‌ನವರೂ ಪಾಲಿಸಬೇಕು ಎಂದು ಹೇಳಿದರು.

ಕ್ಷೇತ್ರದ ಜನರಿಗೆ ಕಾಶ್ಮೀರಿ ಫೈಲ್ಸ್‌ ಉಚಿತ ಪ್ರದರ್ಶನ ಕಾಶ್ಮೀರದಲ್ಲಿ ನಡೆದಿರುವ ನರಮೇಧ, ಕ್ರೌರ್ಯ ನೋಡಿದರೆ ಹಿಂದೂಗಳ ರಕ್ತ ಕುದಿಯುತ್ತದೆ. ಶೇ. 5ರಷ್ಟನ್ನು ಮಾತ್ರ ದಿ ಕಾಶ್ಮೀರ್‌ ಫೆ„ಲ್ಸ್‌ ಚಲನಚಿತ್ರದಲ್ಲಿ ತೋರಿಸಲಾಗಿದೆ. ಬಹುಸಂಖ್ಯಾತರಾದರೂ ನಮ್ಮ ಜನರಿಗೆ ಸ್ಥಾನವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಿಸುವುದನ್ನು ಜಿಹಾದಿಗಳು ಮಾಡಿದ್ದಾರೆ. ಹೀಗಾಗಿ ಪ್ರತಿ ಹಿಂದೂ ಆ ಸಿನಿಮಾ ನೋಡಬೇಕು ಎಂದು ಶಾಸಕ ಅಭಯ ಪಾಟೀಲ ನುಡಿದರು. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜನರಿಗಾಗಿ ದಿ ಕಾಶ್ಮೀರ್‌ ಫೈಲ್ಸ್‌ ಚಲನಚಿತ್ರದ 25 ಪ್ರದರ್ಶನಗಳನ್ನು ವ್ಯವಸ್ಥೆ ಮಾಡಲಿದ್ದೇನೆ. ಪ್ರತಿ ವಾರ್ಡ್‌ನಲ್ಲಿ 500-1000 ಮಂದಿಗೆ ಉಚಿತ ಪಾಸ್‌ಗಳನ್ನು ನೀಡಲಾಗುವುದು. ಯುವಕ, ಮಹಿಳಾ ಮಂಡಳಗಳು, ಸಾಮಾಜಿಕ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ಆ ಭಾಗದ ಪಾಲಿಕೆ ಸದಸ್ಯರು, ಶಕ್ತಿಕೇಂದ್ರದ ಪ್ರಮುಖರಿಗೆ ಪಾಸ್‌ ಹಂಚಿಕೆ ಜವಾಬ್ದಾರಿ ನೀಡಲಾಗುವುದು. ಪ್ರಕಾಶ್‌ ಚಿತ್ರಮಂದಿರದಲ್ಲಿ ಮಾ. 18ರಿಂದ ರಾತ್ರಿ 9ರ ನಂತರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದರು.

 

ಎಲ್ಲರೂ ಹೈಕೋರ್ಟ್‌ ತೀರ್ಪು ಪಾಲಿಸಬೇಕು: ಸತೀಶ

ಭಾರತದಲ್ಲಿ ನ್ಯಾಯಾಲಯದ ತೀರ್ಪು ಅಂತಿಮ. ಹಿಜಾಬ್‌ ಕುರಿತಂತೆ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ರೀತಿಯ ಬಣ್ಣ ಹಾಗೂ ವಸ್ತ್ರಕ್ಕೆ ಅವಕಾಶ ಕೊಟ್ಟಿಲ್ಲ. ತೀರ್ಪನ್ನು ಒಂದೇ ಧರ್ಮದ ಪರವಾಗಿ ನೀಡಿಲ್ಲ. ಹೀಗಾಗಿ ಈ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಹಿಜಾಬ್‌ ಮೊದಲಿನಿಂದಲೂ ವಿವಾದವೇನೂ ಆಗಿರಲಿಲ್ಲ ಎಂದರು. ಹಿಬಾಜ್‌ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಶಾಂತಿ ಭಂಗವನ್ನುಂಟು ಮಾಡಿದವರು ನಾವು ಅಲ್ಲ. ಅಶಾಂತಿ ಉಂಟು ಮಾಡಿದವರು ಅವರು(ಬಿಜೆಪಿಯವರು). ಕೆಲವು ಎ ಟೀಂ, ಬಿ ಟೀಂಗಳನ್ನು ಸಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅಸಾದುದ್ದೀನ್‌ ಒವೈಸಿ ಅಂಥವರನ್ನು ಬಿಜೆಪಿಯವರು ಸಾಕಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಸಮಾಜವಾದಿ ಪಕ್ಷದ 12 ಅಭ್ಯರ್ಥಿಗಳನ್ನು ಒವೈಸಿ ಸೋಲಿಸಿದ್ದಾರೆ. ತಮ್ಮ ಅನುಕೂಲಕ್ಕಾಗಿ ಅವರನ್ನು ಬಿಜೆಪಿಯವರು ಬಳಸಿಕೊಳ್ಳುತ್ತಾರೆ. ಒವೈಸಿಯನ್ನು ಕರ್ನಾಟಕದಲ್ಲಿ ಎದುರಿಸುವಂತೆ ನಾವು ಸಂಘಟನೆ ಮಾಡಿಕೊಳ್ಳುತ್ತೇವೆ ಎಂದರು. ರಾಜ್ಯದ ಜನತೆಗೆ ನೀರು, ಉತ್ತಮ ರಸ್ತೆ, ಉದ್ಯೋಗ ನೀಡದೇ ಕೇವಲ 10 ರೂ. ಶಾಲು ಹಾಕಿಕೊಂಡು ದಂಗೆ ಮಾಡುವುದೇ ಬಿಜೆಪಿಯ ಮುಖ್ಯ ಕೆಲಸವಾಗಿದೆ ಎಂದು ಗಂಭೀರ ಆರೋಪ ಮಾಡಿದ ಸತೀಶ ಜಾರಕಿಹೊಳಿ, ದಿ ಕಾಶ್ಮಿರ್‌ ಫೈಲ್ಸ್‌ ಚಲನಚಿತ್ರದ ಮೂಲಕ ಬಿಜೆಪಿಯವರು ಹೊಸ ಅಪಪ್ರಚಾರ ನಡೆಸಿದ್ದಾರೆ. ದಲಿತರ ಮೇಲೆ ಆಗಿರುವ-ಆಗುತ್ತಿರುವ ದೌರ್ಜನ್ಯದ ಬಗ್ಗೆ ಚಲನಚಿತ್ರ ತೆಗೆಯಬೇಕಲ್ಲವೇ. ಬಿಜೆಪಿಯವರ ಆಡಳಿತದಲ್ಲಿ ಯಾರೂ ಸತ್ತಿಲ್ಲವೇ ಎಂದು ಪ್ರಶ್ನಿಸಿದರು. ಕಾಶ್ಮೀರಿ ಪಂಡಿತರ ಮೇಲೆ ಅನ್ಯಾಯ ಆಗಿರಬಹುದು. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಬೇರೆಯವರ ಮೇಲೆ ಆಗಿರುವುದೂ ಬೆಳಕಿಗೆ ಬರಬೇಕಲ್ಲವೇ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಘಟನೆಗಳನ್ನು ಹೈಲೈಟ್‌ ಮಾಡುವುದಿಲ್ಲ ಏಕೆ. ಅವರೂ ಹಿಂದೂಗಳಲ್ಲವೇ. ಬಿಜೆಪಿ ಕಾರ್ಯಕರ್ತನಾಗಿದ್ದರೆ ಮಾತ್ರ ಹಿಂದೂ ಎಂದು ಹೈಲೈಟ್‌ ಮಾಡುತ್ತಾರೆ. ಇಲ್ಲವಾದಲ್ಲಿ ಜಾತಿ ಬಣ್ಣ ಕಟ್ಟುತ್ತಾರೆ. ಈಗ ಬಂದಿರುವುದು ಸಿನಿಮಾ ಟ್ರೇಲರ್‌ ಅಷ್ಟೇ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತಷ್ಟು ಅಂತಹ ಸಿನಿಮಾಗಳನ್ನು ಬಿಜೆಪಿಯವರು ಬಿಡುಗಡೆ ಮಾಡಿಸುತ್ತಾರೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next